ಶಿವಮೊಗ್ಗದಲ್ಲಿ ಗೋಪೂಜೆ ಬೆನ್ನಲ್ಲೇ ಸಾಲು ಸಾಲು ಹಸುಗಳ ಸಾವು!
ಶಿವಮೊಗ್ಗ, ನವೆಂಬರ್ 5: ಬಲಿಪಾಡ್ಯಮಿ ಗೋ ಪೂಜೆ ಸಂದರ್ಭ ಪೂಜೆ ಮಾಡಿಸಿಕೊಂಡ ಗೋವುಗಳು ಕೆಲವೇ ಹೊತ್ತಿನಲ್ಲಿ ಮೃತಪಟ್ಟಿರುವ ಧಾರುಣ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಈ ಘಟನೆಗೆ ಘನತ್ಯಾಜ್ಯ ವಿಲೇವಾರಿ ನಿರ್ಲಕ್ಷ್ಯವೇ ಕಾರಣ ಎಂದು ಜನರು ಆರೋಪಿಸಿದ್ದಾರೆ.
ಶಿವಮೊಗ್ಗದ ಅನುಪಿನಕಟ್ಟೆ ಗ್ರಾಮದಲ್ಲಿ ಶನಿವಾರ ಐದಕ್ಕೂ ಹೆಚ್ಚು ಹಸುಗಳು ಸಾವನ್ನಪ್ಪಿವೆ. ಇನ್ನಷ್ಟು ಗೋವುಗಳು ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿವೆ. ಪಶುವೈದ್ಯರು ಮತ್ತು ಸಿಬ್ಬಂದಿ ಮನೆಗೆ ಮೆನೆಗೆ ತೆರಳಿ ಚಿಕಿತ್ಸೆ ನೀಡುತ್ತಿದ್ದಾರೆ. ಗೋವುಗಳ ಮೂಕರೋಧನೆ ಕಂಡು ಅವುಗಳನ್ನು ಸಾಕಿದವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ
ಶಿವಮೊಗ್ಗದ ಅನುಪಿನಕಟ್ಟೆಯಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕವಿದೆ. ಶಿವಮೊಗ್ಗ ನಗರದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯದ ವಿಲೇವಾರಿ ಪ್ರಕ್ರಿಯೆ ಇಲ್ಲಿಯೇ ನಡೆಯಲಿದೆ. ತ್ಯಾಜ್ಯ ತುಂಬಿಕೊಂಡು ಬರುವ ವಾಹನಗಳು ಘಟಕದಲ್ಲಿ ತ್ಯಾಜ್ಯ ಸುರಿಯುವ ಬದಲು, ತುಂಗಾ ಎಡದಂಡೆ ಕಾಲುವೆ ಮೇಲೆ ಸುರಿದು ಹೋಗುತ್ತಿರುವ ಆರೋಪವಿದೆ. ಹೀಗೆ ಸುರಿದ ಕಸದ ರಾಶಿ ಮಧ್ಯೆ ಇದ್ದ ಆಹಾರ ಪದಾರ್ಥ ಸೇವಿಸಿ ಹಸುಗಳು ಸಾವನ್ನಪ್ಪಿವೆ ಎಂದು ಆರೋಪಿಸಲಾಗುತ್ತಿದೆ.

ಮೇಯಲು ಹೋಗಿದ್ದ ಹಸುಗಳು ಮೇಲೆ ಏಳಲಿಲ್ಲ
ಅನುಪಿನಕಟ್ಟೆ ಗ್ರಾಮಸ್ಥರು ನಿತ್ಯ ಹಸುಗಳನ್ನು ಮೇಯಲು ಬಿಡುತ್ತಾರೆ. ಚಾನಲ್ ಸುತ್ತಮುತ್ತಲ ಪ್ರದೇಶದಲ್ಲಿ ಮೇಯಲು ಹೋಗಿ, ಹಿಂತಿರುಗಿದ್ದ ಹಸುಗಳು ಕೊಟ್ಟಿಗೆಯಲ್ಲಿ ಮಲಗಿದ್ದವು. ಈಗ ಮೇಲೇಳದ ಸ್ಥಿತಿಗೆ ತಲುಪಿವೆ. ಸುಮಾರು ಐದು ಗೋವುಗಳು ಕೊಟ್ಟಿಗೆಯಲ್ಲೇ ಪ್ರಾಣ ಕಳೆದುಕೊಂಡಿವೆ. ಇನ್ನಷ್ಟು ಹಸುಗಳು ಕುಳಿತಲ್ಲೆ ನರಳಾಡುತ್ತಿವೆ. ಕೆಲವು ದನಗಳು ಬಾಯಲ್ಲಿ ಹುಲ್ಲನ್ನು ಗಟ್ಟಿಯಾಗಿ ಕಚ್ಚಿಕೊಂಡು ನುಂಗಲಾಗದೆ, ಉಗುಳಲಾರದೆ ಒದ್ದಾಡುತ್ತಿವೆ. ಕೆಲವು ದನಗಳ ಪಕ್ಕದಲ್ಲಿ ಕೆಲವು ದಿನದ ಹಿಂದಷ್ಟೆ ಜನ್ಮತಾಳಿದ ಕರುಗಳು ಏನೂ ಅರಿಯದೆ ಗೊಂದಲದಲ್ಲಿ ನಿಂತಿವೆ.

ಆಹಾರ ಪದಾರ್ಥಗಳ ಜೊತೆಗೆ ಹಳಸಿದ ಅನ್ನ
ಕಸ ಸಂಗ್ರಹಿಸಿದ ವಾಹನಗಳು ಬೆಳಗ್ಗೆ ಮತ್ತು ರಾತ್ರಿ ವೇಳೆ ವಿಲೇವಾರಿ ಘಟಕಕ್ಕೆ ಬರುತ್ತವೆ. ಪಾಲಿಕೆ ವಾಹನಗಳು ತ್ಯಾಜ್ಯ ವಿಲೇವಾರಿ ಮಾಡಲು ಬರುತ್ತವೆ. ಕೆಲವರು ಕಲ್ಯಾಣ ಮಂಟಪ, ಕಾರ್ಯಕ್ರಮದಲ್ಲಿ ಉಳಿದ ಆಹಾರವನ್ನು ತಂದು ಚಾನಲ್ ಪಕ್ಕದಲ್ಲಿ ಸುರಿದು ಹೋಗುತ್ತಾರೆ. ನಾವು ಎಷ್ಟೆ ನಿಗಾ ವಹಿಸಿದರು ತಡೆಯಲು ಆಗುತ್ತಿಲ್ಲ. ದನಗಳನ್ನು ಮೇಯಲು ಬಿಟ್ಟಾಗ, ಅವು ಈ ಆಹಾರವನ್ನು ಸೇವಿಸುತ್ತವೆ' ಎಂದು ಸ್ಥಳೀಯರಾದ ಸುರೇಶ್ ಆರೋಪಿಸುತ್ತಿದ್ದಾರೆ.

ಹಸುಗಳ ಜೀವ, ರೈತರ ಜೀವನ ಎರಡಕ್ಕೂ ಕುತ್ತು
ಅನುಪಿನಕಟ್ಟೆಯಲ್ಲಿ ಬಹುತೇಕರು ಬ್ಯಾಂಕು, ಸ್ವ ಸಹಾಯ ಸಂಘಗಳಲ್ಲಿ ಸಾಲ ಮಾಡಿ ಗೋವುಗಳನ್ನು ಖರೀದಿಸಿದ್ದರು. ರೈತರು ಇದೇ ಹಸುಗಳ ಹಾಲು ಕರೆದು ಜೀವನ ನಡೆಸುತ್ತಿದ್ದರು. ಈಗ ಅದೇ ಗೋವುಗಳನ್ನು ಕಳೆದುಕೊಂಡು ಜನರು ಕಣ್ಣೀರು ಹಾಕುತ್ತಿದ್ದಾರೆ. ‘ಸಂಘದಿಂದ 50 ಸಾವಿರ ಸಾಲ ತಗೆದುಕೊಂಡು ಹಸು ಖರೀದಿ ಮಾಡಿದ್ದೆವು. ಆದರೆ ಈಗ ಹೀಗಾಗಿದೆ. ನಾವು ನಿನ್ನೆ ಹಬ್ಬ ಮಾಡಿಲ್ಲ. ಹಸುವಿನ ಆರೈಕೆ ಮಾಡಿಕೊಂಡಿದ್ದೇವೆ. ಹಸುವಿನಿಂದಲೇ ನಮ್ಮ ಜೀವನ ನಡೆಯುತ್ತಿತ್ತು. ಈಗ ಅದಿಲ್ಲ' ಎಂದು ದಾನಮ್ಮ ಗದ್ಗದಿತರಾಗುತ್ತಾರೆ.

ಘಟನಾ ಸ್ಥಳಕ್ಕೆ ಉಪ ಮೇಯರ್, ಪೊಲೀಸ್ ಭೇಟಿ
ಸಾಲು ಸಾಲು ಗೋವುಗಳು ಸಾವನ್ನಪ್ಪುತ್ತಿದ್ದಂತೆ ಅನುಪಿನಕಟ್ಟೆ ಗ್ರಾಮಸ್ಥರು ಆಕ್ರೋಶಗೊಂಡಿದ್ದು, ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಕಸ ಸಾಗಣೆ ಮಾಡುತ್ತಿದ್ದ ವಾಹನಗಳನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದರು. ವಿಚಾರ ತಿಳಿಯುತ್ತಿದ್ದಂತೆ ತುಂಗಾ ನಗರ ಠಾಣೆ ಇನ್ಸ್'ಪೆಕ್ಟರ್ ದೀಪಕ್ ಸ್ಥಳಕ್ಕೆ ಭೇಟಿ ನೀರಿ ಪರಿಶೀಲಿಸಿದರು. ಇನ್ನು, ಉಪ ಮೇಯರ್ ಶಂಕರ್ ಗನ್ನಿ ಅವರು ಸ್ಥಳಕ್ಕೆ ಭೇಟಿ ನೀಡಿ ಅಹವಾಲು ಆಲಿಸಿದರು. ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಉಪ ಮೇಯರ್ ಶಂಕರ್ ಗನ್ನಿ, ‘ಮಹಾನಗರ ಪಾಲಿಕೆಯಿಂದ ಜನರಿಗೆ ನ್ಯಾಯ ಕೊಡಿಸುತ್ತೇವೆ. ಸಂಬಂಧಿಸಿದ ಅಧಿಕಾರಿಗಳು ಕೂಡ ಇಲ್ಲಿಗೆ ಬಂದಿದ್ದಾರೆ. ಯಾರಿಗೆಲ್ಲ ಸಮಸ್ಯೆಯಾಗಿದೆ ಅನ್ನುವ ಕುರಿತು ಪಟ್ಟಿ ಸಿದ್ಧಪಡಿಸಲಾಗುತ್ತಿದೆ. ಪಾಲಿಕೆಯಿಂದ ಜವಾಬ್ದಾರಿಯಿಂದ ನಿಭಾಯಿಸುತ್ತೇವೆ' ಎಂದು ಹೇಳಿದರು.
ವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿ ಮಾಡದ ಬಗ್ಗೆ ಈ ಹಿಂದೆ ಹಲವು ಬಾರಿ ಪ್ರತಿಭಟನೆಗಳು ನಡೆದಿವೆ. ಈಗ ಹಸುಗಳು ಸಾವನ್ನಪ್ಪಿರುವುದು ಅನುಪಿನಕಟ್ಟೆ ಗ್ರಾಮದ ಹಲವು ನಿವಾಸಿಗಳಿಗೆ ಸಂಕಷ್ಟ ತಂದೊಡ್ಡಿದೆ. ಇನ್ನಾದರೂ ಮಹಾನಗರ ಪಾಲಿಕೆ ಈ ಕುರಿತು ಸೂಕ್ತ ಗಮನ ಹರಿಸಬೇಕಿದೆ.












Click it and Unblock the Notifications