ಭ್ರಷ್ಟಾಚಾರ ಮುಕ್ತ ಆಡಳಿತವೇ ಕೆಪಿಜೆಪಿ ಗುರಿ : ಉಪೇಂದ್ರ
ಶಿವಮೊಗ್ಗ, ಡಿಸೆಂಬರ್ 07 : 'ಭ್ರಷ್ಟಾಚಾರ ಮುಕ್ತ ಆಡಳಿತವೇ ಕೆಪಿಜೆಪಿಯ ಗುರಿ. ಸಂವಿಧಾನದ ತತ್ವಗಳನ್ನು ಎತ್ತಿ ಹಿಡಿಯುವುದೇ ಪ್ರಜಾಕೀಯ' ಎಂದು ಕೆಪಿಜೆಪಿಯ ಸಂಸ್ಥಾಪಕ ಹಾಗೂ ನಟ ಉಪೇಂದ್ರ ಹೇಳಿದರು.
ಶಿವಮೊಗ್ಗದಲ್ಲಿ ಗುರುವಾರ ಮಾತನಾಡಿದ ಅವರು, 'ರಾಜ್ಯದಲ್ಲಿ ಭ್ರಷ್ಟಾಚಾರ ಮುಕ್ತ, ಪಾರದರ್ಶಕ ಆಡಳಿತ ನೀಡುವುದೇ ಕೆಪಿಜೆಪಿಯ ಮೂಲ ಸಂಕಲ್ಪ. ಇದು ರಾಜಕೀಯದಲ್ಲಿ ಒಂದು ಪ್ರಯತ್ನ' ಎಂದರು.

'ಇಂದಿನ ರಾಜಕಾರಣದಲ್ಲಿ ಚುನಾವಣೆ ಗೆಲ್ಲಲು ಬಂಡವಾಳ ಹೂಡಬೇಕಿದೆ. ಬಂಡವಾಳ ಹೂಡಲು ಹಣ ತರಬೇಕು. ಹಣ ತರಲು ದುರ್ಮಾರ್ಗ ಹುಡಕಬೇಕಿದೆ. ಈ ದುರ್ಮಾರ್ಗ ನಮ್ಮಲ್ಲಿ ಇಲ್ಲ. ತಂತ್ರಜ್ಞಾನ ಬಳಸಿ ಜನರನ್ನ ಸಂಪರ್ಕಿಸುವುದು ನಮ್ಮ ಉದ್ದೇಶ' ಎಂದು ಹೇಳಿದರು.
'ರಾಜಕೀಯ ವ್ಯವಸ್ಥೆ ಹೇಗಿದೆ ಎಂದರೆ ಹೊಲಸು, ಕಾಲೆಳೆಯುವುದು, ಭ್ರಷ್ಠಾಚಾರ ನಡೆಯಿಸಿಯೇ ನಾಯಕರಾಗಬೇಕು ಎಂಬ ಭ್ರಮೆ ಇದೆ. ಸರಳವಾಗಿ ಸನ್ಮಾರ್ಗದಿಂದ ಜನರೊಂದಿಗೆ ಬೆರತು ತಳಮಟ್ಟದಲ್ಲಿ ಕೆಲಸ ಮಾಡಿದಾಗ ಪ್ರಜಾಕೀಯ ಯಶಸ್ವಿಯಾಗುತ್ತದೆ' ಎಂದು ವಿಶ್ವಾಸ ವ್ಯಕ್ತಪಡಿಸಿದರು.
'ಜನರಿಗೆ ಪ್ರತಿಯೊಂದು ಲೆಕ್ಕ ಕೊಡುವ ಕೆಲಸ ಪ್ರಾರಂಭಿಸಬೇಕಿದೆ. ಇದು ಜನರ ಧ್ವನಿ, ನಿಮ್ಮ ಧ್ವನಿ ಕುಗ್ಗದಂತೆ ನಡೆದುಕೊಳ್ಳುವುದೆ ಕೆಪಿಜೆಪಿ ಗುರಿಯಾಗಿದೆ. ಚುನಾವಣೆಯಲ್ಲಿ ಗೆಲುವು ಸೋಲು ನಮಗೆ ನಗಣ್ಯ. ಆದರೆ, ಜನರಲ್ಲೇ ನಾಯಕರನ್ನು ಬೆಳೆಸುವುದೇ ನಮ್ಮ ಪಕ್ಷದ ಗುರಿ' ಎಂದು ತಿಳಿಸಿದರು.
'ಚುನಾವಣೆ ಸಮಯದಲ್ಲಿ ಹಣ ಪಡೆದುಕೊಂಡು ಮತ ಹಾಕುವಂತಹ ಜನ ಸಮಾಜದಲ್ಲಿ ಶೇ. 20ರಷ್ಟಿದ್ದಾರೆ. ಹಣ ಪಡೆಯುವರ ಹಾಗೂ ಹಣ ಕೊಡುವ ಜನ ನಮಗೆ ಬೇಡವೇ ಬೇಡ. ಜನರಲ್ಲಿ ಜನರನ್ನೇ ಆಯ್ಕೆ ಮಾಡುವ ಗುರಿ ನಮ್ಮದು. ಇದನ್ನ ಬೇರೆ ಪಕ್ಷದವರು ಅಳವಡಿಸಿಕೊಂಡರೆ ಅದೂ ಸಂತೋಷ' ಎಂದರು.











Click it and Unblock the Notifications