ಮೋದಿ ಮುಂಬೈ ಉದ್ಯಮಿಗಳಿಗೆ ಸಾಥ್ ನೀಡುತ್ತಿದ್ದಾರೆ; ಕಾಗೋಡು
ಶಿವಮೊಗ್ಗ, ಫೆಬ್ರವರಿ 11: ಕೇಂದ್ರ ಸರ್ಕಾರ ಕೃಷಿ ಮಸೂದೆ ವಾಪಸ್ ಪಡೆಯಬೇಕು, ಕಸ್ತೂರಿ ರಂಗನ್ ವರದಿ ಜಾರಿ ಸಂಬಂಧ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವೈಫಲ್ಯ, ಬೆಲೆ ಏರಿಕೆ ಖಂಡಿಸಿ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ವತಿಯಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು.
ನಗರದ ಶಿವಪ್ಪನಾಯಕ ಪ್ರತಿಮೆ ಬಳಿಯಿಂದ ನೆಹರೂ ರಸ್ತೆಯ ಗೋಪಿ ಸರ್ಕಲ್ ತನಕ ಪ್ರತಿಭಟನಾ ಮೆರವಣಿಗೆ ನಡೆಯಿತು. ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ನಾಯಕರು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದರು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಕಾಗೋಡು ತಿಮ್ಮಪ್ಪ, "ಪ್ರಧಾನಿ ನರೇಂದ್ರ ಮೋದಿ ಸಬ್ ಕಾ ಸಾಥ್ ಅನ್ನುತ್ತಾರೆ. ಆದರೆ, ಮುಂಬೈ, ದೆಹಲಿ, ಕೋಲ್ಕತ್ತಾದ ಉದ್ಯಮಿಗಳಿಗೆ ಸಾಥ್ ನೀಡುತ್ತಿದ್ದಾರೆ. ಮೋದಿ ಅವರು ಹೇಳುವ ಸಬ್ ಕಾ ಸಾಥ್ ಯಾವ ಊರಿನಲ್ಲಿದೆ?" ಎಂದು ಪ್ರಶ್ನಿಸಿದರು.

"ಬಗರ್ ಹುಕುಂ ಸಮಿತಿ ಸಭೆ ಮಾಡಬೇಕು, ಹಕ್ಕುಪತ್ರ ನೀಡಬೇಕು, ಖಾತೆ ಮಾಡಿಸಬೇಕು. ಆದರೆ, ಇದೆ ಊರಿನಿಂದ ಸಿಎಂ ಆಗಿರುವ ಯಡಿಯೂರಪ್ಪ ಅವರು ಒಬ್ಬರಿಗಾದರೂ ಸಾಗುವಳಿ ಪತ್ರ ಕೊಟ್ಟಿದ್ದಾರಾ?" ಎಂದು ಕಾಗೋಡು ತಿಮ್ಮಪ್ಪ ಕೇಳಿದರು.
ಕಾಳಧನಿಕರು ಮೋದಿ ಊರಿನವರು; ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮಾತನಾಡಿ, "ಅಧಿಕಾರಕ್ಕೆ ಬಂದ 90 ದಿನದಲ್ಲಿ ಕಳ್ಳ ಹಣ ತರುತ್ತೇವೆ ಅಂದರು. ಆದರೆ, ಕಳ್ಳ ಹಣ ಮಾಡಿದ್ದ 27 ಮಂದಿ ದೇಶ ಬಿಟ್ಟರು. ಇದರಲ್ಲಿ 26 ಮಂದಿ ಮೋದಿಯ ಊರು ಗುಜರಾತಿನವರು. ಒಬ್ಬರು ಕರ್ನಾಟಕದವರು" ಎಂದರು.
"ದೇಶದಲ್ಲಿ 25 ರಿಂದ 30 ಕೋಟಿ ಯುವಕರು ನಿರುದ್ಯೋಗಿಗಳಾಗಿದ್ದಾರೆ. ಸಣ್ಣ ಕೈಗಾರಿಕೆಗಳು ಸಂಕಷ್ಟದಲ್ಲಿವೆ. ಆದರೆ ಮೋದಿ ಕಣ್ಣಿಗೆ ಬರಿ ಬೃಹತ್ ಕೈಗಾರಿಕೆಗಳಷ್ಟೆ ಕಾಣಿಸುತ್ತಿವೆ. ದೇಶದ ಜನರು ಬಡವಾಗುತ್ತಿದ್ದಾರೆ. ಆದರೆ, ಅಮಿತ್ ಷಾ ಮಗ ಮಾತ್ರ ಶೇ.700ರಷ್ಟು ಶ್ರೀಮಂತನಾಗಿದ್ದಾರೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.

"ತೀರ್ಥಹಳ್ಳಿಯಲ್ಲಿ ನಡೆದ ಆತ್ಮಹತ್ಯೆ ಪ್ರಕರಣವೊಂದನ್ನು ಅತ್ಯಾಚಾರ ಮತ್ತು ಕೊಲೆ ಎಂದು ಬಿಂಬಿಸಿದರು. ಆದರೆ ಶೃಂಗೇರಿಯಲ್ಲಿ ಭಜರಂಗದಳ ಕಾರ್ಯಕರ್ತರಿಂದ ಸಾಮೂಹಿಕ ಅತ್ಯಾಚಾರವಾಗಿದೆ. ಬಿಜೆಪಿಯಲ್ಲಿರುವ ಮಹಿಳೆಯರೇಕೆ ಮಾತಾಡುತ್ತಿಲ್ಲ" ಎಂದು ಪ್ರಶ್ನಿಸಿದರು.
ಕಣ್ಣೀರಿನ ನಾಟಕ ಶೋಭೆ ತರುವುದಿಲ್ಲ; "ಕೇಂದ್ರ ಮತ್ತು ರಾಜ್ಯ ಸರ್ಕಾರ ದೊಡ್ಡ ಉದ್ಯಮಿಗಳ ದಾಳಕ್ಕೆ ತಕ್ಕಂತೆ ಕುಣಿಯುತ್ತಿವೆ. ಮೊನ್ನೆ ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್ತಿನಲ್ಲಿ ಕಣ್ಣೀರು ಹಾಕಿದ್ದಾರೆ. ಇಂತಹ ನಾಟಕಗಳು ಪ್ರಧಾನಿ ಆದವರಿಗೆ ಶೋಭೆ ತರುವುದಿಲ್ಲ" ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಎಸ್.ಸುಂದರೇಶ್ ಆರೋಪಿಸಿದರು.
ಪ್ರತಿಭಟನೆಯಲ್ಲಿ ವಿಧಾನ ಪರಿಷತ್ ಸದಸ್ಯ ಆರ್. ಪ್ರಸನ್ನ ಕುಮಾರ್, ಮಾಜಿ ಶಾಸಕ ಕೆ. ಬಿ. ಪ್ರಸನ್ನ ಕುಮಾರ್, ಕಾಂಗ್ರೆಸ್ ಪಕ್ಷದ ವಿವಿಧ ಘಟಕಗಳ ಪ್ರಮುಖರು, ಕಾರ್ಯಕರ್ತರು ಪಾಲ್ಗೊಂಡಿದ್ದರು.












Click it and Unblock the Notifications