ಗೃಹ ಸಚಿವರ ವೈಫಲ್ಯ; ಪಾದಯಾತ್ರೆ ಆರಂಭಿಸಿದ ಕಿಮ್ಮನೆ ರತ್ನಾಕರ್
ಶಿವಮೊಗ್ಗ, ಮೇ 06; ಕೇಂದ್ರ ಮತ್ತು ರಾಜ್ಯ ಸರ್ಕಾರದ ದುರಾಡಳಿತ, ಪಿಎಸ್ಐ ನೇಮಕಾತಿ ಹಗರಣ, ಗೃಹ ಸಚಿವರ ವೈಫಲ್ಯ ಖಂಡಿಸಿ ಕಾಂಗ್ರೆಸ್ ಪಕ್ಷದ ವತಿಯಿಂದ ತೀರ್ಥಹಳ್ಳಿಯಲ್ಲಿ ಪಾದಯಾತ್ರೆ ಆರಂಭಿಸಲಾಗಿದೆ. ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಪುತ್ರಿ ಡಾ. ರಾಜನಂದಿನಿ ಅವರು ಪಾದಯಾತ್ರೆಗೆ ಚಾಲನೆ ನೀಡಿದರು.
ಗೃಹ ಸಚಿವ ಆರಗ ಜ್ಞಾನೇಂದ್ರ ತವರೂರು ಗುಡ್ಡೆಕೊಪ್ಪದಿಂದ ಪಾದಯಾತ್ರೆ ಆರಂಭವಾಗಿದೆ. 5 ದಿನಗಳ ಕಾಲ ನಿರಂತರ ಪಾದಯಾತ್ರೆ ನಡೆಯಲಿದೆ. ಮೇ 10ರಂದು ಪಾದಯಾತ್ರೆ ಶಿವಮೊಗ್ಗ ನಗರ ತಲುಪಲಿದೆ.
ಮಾಜಿ ಸಚಿವ ಕಿಮ್ಮನೆ ರತ್ನಾಕರ್ ನೇತೃತ್ವದಲ್ಲಿ ಪಾದಯಾತ್ರೆ ನಡೆಯುತ್ತಿದೆ. ಪಾದಯಾತ್ರೆ ಹಾದಿಯುದ್ದಕ್ಕೂ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ನೇತೃತ್ವದ ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಿದ್ದಾರೆ. ಬಿಜೆಪಿ ಸರ್ಕಾರದ ದುರಾಡಳಿತದ ವಿರುದ್ಧ ಜನ ಜಾಗೃತಿ ಮೂಡಿಸುತ್ತಿದ್ದಾರೆ.

ಕಿಮ್ಮನೆ ರತ್ನಾಕರ್ ಹೇಳಿದ್ದೇನು?; ಪಾದಯಾತ್ರೆಗೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಿಮ್ಮನೆ ರತ್ನಾಕರ್, "ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಆರಂಭದಿಂದಲೂ ದುರ್ಬಲರಾಗಿದ್ದಾರೆ. ಅವರು ನೀಡುತ್ತಿರುವ ಹೇಳಿಕೆಯೆ ಅದಕ್ಕೆ ಸಾಕ್ಷಿ" ಎಂದು ದೂರಿದರು.
"ಪಿಎಸ್ಐ ಹಗರಣದಲ್ಲಿ ತೀರ್ಥಹಳ್ಳಿಯ ಮೂವರು ವ್ಯವಹಾರ ಮಾಡಿದ್ದಾರೆ ಎಂಬ ಆಪಾದನೆ ಇದೆ. ಕಮ್ಮರಡಿ ಮತ್ತು ಮಂಡಗದ್ದೆ ಕಡೆಯ ಇಬ್ಬರು ವ್ಯವಹಾರದಲ್ಲಿ ಭಾಗಿದಾರರು ಎಂಬ ಆಪಾದನೆ ಇದೆ. ಇನ್ನೂ ಒಬ್ಬರಿದ್ದಾರೆ. ಈ ಕುರಿತು ವಾಟ್ಸಪ್ ಮೂಲಕ ಮಾಹಿತಿ ಹರಿದಾಡುತ್ತಿದೆ. ಪೊಲೀಸರು ಈ ಕುರಿತು ತನಿಖೆ ನಡೆಸಲಿ" ಎಂದು ಆಗ್ರಹಿಸಿದರು.
"ಬಿಜೆಪಿಯವರು 24 ಗಂಟೆಯು ಮರಳು ಹೊಡೆಯಬಹುದು, ಬಂಡೆ ಒಡೆಯಬಹುದು, ಕಾಡಿನಲ್ಲಿ ಮನೆ ಕಟ್ಟಿಕೊಳ್ಳಬಹುದು. ಬೇರೆಯವರು ಮಾಡಿದರೆ ಕೇಸ್ ದಾಖಲಾಗುತ್ತದೆ. ತಾಲೂಕು ಕಚೇರಿ, ಅರಣ್ಯ ಇಲಾಖೆ ರೇಂಜರ್ ಆಫೀಸು, ಪೊಲೀಸರು ಠಾಣೆಗಳೆಲ್ಲವು ಬಿಜೆಪಿ ಕಚೇರಿಯಾಗಿವೆ" ಎಂದು ಆರೋಪಿಸಿದರು

300 ಕೋಟಿಯ ಹಗರಣ; ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಕಾಂಗ್ರೆಸ್ ನಾಯಕಿ ಡಾ. ರಾಜನಂದಿನಿ, "ಪಿಎಸ್ಐ ನೇಮಕಾತಿಯದ್ದು 50 ಕೋಟಿಯ ಹಗರಣ ಎಂದುಕೊಂಡಿದ್ದೆವು. ಆದರೆ ಇದು 300 ಕೋಟಿ ರೂ. ನಷ್ಟು ದೊಡ್ಡ ಹಗರಣವಾಗಿದೆ ಎಂದು ನಮ್ಮ ನಾಯಕರಾದ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಪ್ರತಿ ಅಭ್ಯರ್ಥಿಯಿಂದ 40 ಲಕ್ಷದಿಂದ 1 ಕೋಟಿ ರೂ. ವರೆಗೂ ವಸೂಲಿ ಮಾಡಿದ್ದಾರೆ. ಪ್ರಾಮಾಣಿಕ ಅಭ್ಯರ್ಥಿಗಳಿಗೆ ಸಮಸ್ಯೆ ಉಂಟಾಗಿದೆ. ಈಗ ಮರು ಪರೀಕ್ಷೆ ಮಾಡಿದರೆ ತೀವ್ರ ಸಮಸ್ಯೆ ಆಗುತ್ತದೆ ಎಂದು ಬಡ ಮಕ್ಕಳು ನೋವು ತೋಡಿಕೊಳ್ಳುತ್ತಿದ್ದಾರೆ. ಇದಕ್ಕೆಲ್ಲ ಗೃಹ ಸಚಿವರೆ ಹೊಣೆ" ಎಂದು ಆಪಾದಿಸಿದರು.
"ಐದು ದಿನದ ಪಾದಯಾತ್ರೆಯಲ್ಲಿ ಜನ ಜಾತ್ರೆ ಕಾಣುತ್ತಿದೆ. ಅಕ್ರಮಗಳು, ಬಿಜೆಪಿ ಸರ್ಕಾರದ ದುರಾಡಳಿತದ ಕುರಿತು ಜನರಿಗೆ ತಿಳಿಸುತ್ತಾ ಹೋಗುತ್ತೇವೆ. ಕಿಮ್ಮನೆ ರತ್ನಾಕರ್ ಅವರು ಪಾದಯಾತ್ರೆಯ ರೂವಾರಿಯಾಗಿದ್ದಾರೆ" ಎಂದರು.
ಕಿಮ್ಮನೆ ಗರಂ; ಪಾದಯಾತ್ರೆಗೆ ಚಾಲನೆ ನೀಡಿದ ಸ್ಥಳದಿಂದ ಕೊಂಚ ದೂರದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಮನೆ ಇದೆ. ಮನೆ ಮುಂದೆ ಯಾರೂ ಘೋಷಣೆ ಕೂಗುವಂತಿಲ್ಲ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರು ಈ ಮೊದಲೇ ಮುಖಂಡರು ಮತ್ತು ಕಾರ್ಯಕರ್ತರಿಗೆ ಸೂಚಿಸಿದ್ದರು. ಹೀಗಿದ್ದೂ ಇವತ್ತು ಪಾದಯಾತ್ರೆ ತೆರಳುವ ಸಂದರ್ಭ ಡ್ರಮ್ ಬಾರಿಸುವವರು ಆರಗ ಜ್ಞಾನೇಂದ್ರ ಅವರ ಮನೆ ಮುಂದೆ ಡ್ರಮ್ ಸೆಟ್ ಬಾರಿಸಿದರು. ಇದರಿಂದ ಕಿಮ್ಮನೆ ರತ್ನಾಕರ್ ಅವರು ಗರಂ ಆದರು. ಹಾಗಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಮನೆ ದಾಟುವವರೆಗೆ ಕಾರ್ಯಕರ್ತರು ಮೌನವಾಗಿ ಪಾದಯಾತ್ರೆ ಮಾಡಿದರು.
ಗೃಹ ಸಚಿವರ ಮನೆ ಮುಂದೆ ಅವರ ವಿರುದ್ಧ ಘೋಷಣೆ ಕೂಗಿದರೆ ಅವರ ಕುಟುಂಬದವರ ಭಾವನೆಗಳಿಗೆ ಧಕ್ಕೆ ಉಂಟಾಗಲಿದೆ, ಮುಜುಗರ ಅನುಭವಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಆರಗ ಜ್ಞಾನೇಂದ್ರ ಅವರ ಮನೆ ಬಳಿ ಘೋಷಣೆ ಕೂಗುವಂತಿಲ್ಲ ಎಂದು ಕಿಮ್ಮನೆ ರತ್ನಾಕರ್ ಅವರು ತಿಳಿಸಿದ್ದರು. ಇದಕ್ಕೆ ಸಾರ್ವಜನಿಕ ವಲಯದಲ್ಲಿಯು ಮೆಚ್ಚುಗೆ ವ್ಯಕ್ತವಾಗಿತ್ತು.
5 ದಿನದ ಪಾದಯಾತ್ರೆ; ಶುಕ್ರವಾರ ಗುಡ್ಡೆಕೊಪ್ಪದಿಂದ ಪಾದಯಾತ್ರೆ ಆರಂಭವಾಗಿದೆ. ತೀರ್ಥಹಳ್ಳಿಯ ಹೊದಲ ಮಾರ್ಗವಾಗಿ ಬೆಜ್ಜವಳ್ಳಿಗೆ ತಲುಪಲಿದೆ. ಅಲ್ಲಿಂದ ಮಂಡಗದ್ದೆ ಮೂಲಕ ಮೇ 10ರಂದು ಶಿವಮೊಗ್ಗ ತಲುಪಲಿದೆ. ಶಿವಮೊಗ್ಗದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಕೆಪಿಸಿಸಿ ಡಿ. ಕೆ. ಶಿವಕುಮಾರ್ ಸೇರಿದಂತೆ ಹಿರಿಯ ನಾಯಕರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ.












Click it and Unblock the Notifications