ಶಿವಮೊಗ್ಗ ಜಿಲ್ಲೆಗೆ ಎಫ್ಎಂ ರೇಡಿಯೋ ಮಂಜೂರು
ಶಿವಮೊಗ್ಗ, ಸೆಪ್ಟೆಂಬರ್ 2: "ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯ ಬಹುಜನರ ಬೇಡಿಕೆಗೆ ಸ್ಪಂದಿಸಿರುವ ಕೇಂದ್ರ ಸರಕಾರ ಎಫ್ಎಂ ರೇಡಿಯೋ ಮಂಜೂರು ಮಾಡಿದ್ದು, ಈ ಕೇಂದ್ರ ಆರು ತಿಂಗಳಲ್ಲಿ ಕಾರ್ಯಾರಂಭ ಮಾಡಲಿದೆ," ಎಂದು ಪರಿಸರ ಅಧ್ಯಯನ ಕೇಂದ್ರದ ಜಿ.ಎಲ್. ಜನಾರ್ಧನ ತಿಳಿಸಿದರು.
ಗುರುವಾರ ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, "ಕಳೆದ 20 ವರ್ಷಗಳಿಂದ ಶಿಕ್ಷಣ ಮತ್ತು ಪರಿಸರ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಕೊಡಚಾದ್ರಿ ಇಂಟಿಗ್ರೇಟೆಡ್ ಡೆವೆಲಪ್ ಮೆಂಟ್ ಸೊಸೈಟಿ ನೋಂದಾಯಿತ ಸಂಸ್ಥೆಗೆ ಎಫ್ಎಂ ಸಮುದಾಯ ರೇಡಿಯೋ ಕೇಂದ್ರ ಸ್ಥಾಪನೆಗೆ ಅನುಮತಿ ನೀಡಿದೆ," ಎಂದು ಹೇಳಿದರು.
"ರೇಡಿಯೋ ಶಿವಮೊಗ್ಗ ಎಂದು ಹೆಸರಿಸಲಾಗಿದ್ದು, 90.8 ಕಂಪನಾಂಕವನ್ನು ನೀಡಲಾಗಿದೆ. ಜಿಲ್ಲೆಯಲ್ಲಿನ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಅವಕಾಶ ನೀಡುವುದು, ಧ್ವನಿ ಇಲ್ಲದವರ ಧ್ವನಿಯಾಗಿ ಕೆಲಸ ಮಾಡುವುದು ಕೇಂದ್ರದ ಮುಖ್ಯ ಉದ್ದೇಶವಾಗಿದೆ," ಎಂದು ಮಾಹಿತಿ ನೀಡಿದರು.

"ಶಿವಮೊಗ್ಗ ಜಿಲ್ಲೆಯಲ್ಲಿರುವ ಶಿಕ್ಷಣ ಸಂಸ್ಥೆಗಳು, ಸಾಂಸ್ಕೃತಿಕ ಕೇಂದ್ರಗಳು ಸೇರಿದಂತೆ ಸಮಾಜ ಪರವಾದ ಸಂಘ- ಸಂಸ್ಥೆಗಳ ಬಗ್ಗೆ ಮಾಹಿತಿ ನೀಡುವುದು, ಅಗತ್ಯ ಸೇವೆಗಳ ಬಗ್ಗೆ ತಿಳಿಸುವುದು ಪ್ರಮುಖ ಕಾರ್ಯಕ್ರಮವಾಗಲಿವೆ," ಎಂದರು.
ಶಿವಮೊಗ್ಗದಲ್ಲಿ ಅಲಂಕಾರಿಕ ದೀಪಗಳಿಗೆ ಚಾಲನೆ
ಶಿವಮೊಗ್ಗದ ಎಲ್ಬಿಎಸ್ ನಗರದಿಂದ ಒಂದು ಕಿ.ಮೀ ದೂರದ 59 ಲಕ್ಷ ರೂ. ವೆಚ್ಚದಲ್ಲಿ ರಸ್ತೆಯ ಮಧ್ಯ ಭಾಗದಲ್ಲಿ ಅಲಂಕಾರಿಕ ದೀಪಗಳನ್ನು ಅಳವಡಿಸಲಾಗಿದ್ದು, ಇವುಗಳನ್ನು ಸಂಸದ ಬಿ.ವೈ. ರಾಘವೇಂದ್ರ ಗುರುವಾರ ಸಂಜೆ ಚಾಲನೆಗೊಳಿಸಿದರು.
ಬಳಿಕ ಸಂಸದ ರಾಘವೇಂದ್ರ ಮಾತನಾಡಿ, "ಶಿವಮೊಗ್ಗ ಜಿಲ್ಲೆಯ ವಿವಿಧ ಪಟ್ಟಣಗಳಿಗೆ ಅಲಂಕಾರಿಕ ಬೀದಿ ದೀಪವನ್ನು ಅಳವಡಿಸುವ ಕಾಮಗಾರಿಯನ್ನು ಕೆಶಿಪ್ ವತಿಯಿಂದ ನಿರ್ವಹಿಸಲು ಒಟ್ಟು 7.12 ಕೋಟಿ ರೂ. ಬಿಡುಗಡೆ ಆಗಿದೆ," ಎಂದರು.
"ಶಿಕಾರಿಪುರ, ಶಿರಾಳಕೊಪ್ಪ ಮತ್ತು ಸೊರಬ ತಾಲೂಕಿನ ಆನವಟ್ಟಿಯಲ್ಲಿ ಕೂಡ ಇದೇ ಮಾದರಿಯಲ್ಲಿ ಅಲಂಕಾರಿಕ ದೀಪಗಳನ್ನು ಅಳವಡಿಸಲಾಗಿದೆ. 80 ಕಿ.ಮೀ ಉದ್ದದ ರಸ್ತೆಗೆ 10 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಟ್ರಾಫಿಕ್ ಕಂಟ್ರೋಲ್ ಇರುವ ಕಾಮಗಾರಿ ಪ್ರಾರಂಭವಾಗಲಿದೆ," ಎಂದು ಹೇಳಿದರು.
"ಅದರಲ್ಲಿ ಸಿಸಿಟಿವಿ ವ್ಯವಸ್ಥೆ ಮತ್ತು ವಿದೇಶದ ಮಾದರಿಯಲ್ಲಿ ಈ ರಸ್ತೆ ಹಾಗೂ ಶಿವಮೊಗ್ಗವನ್ನು ಅಭಿವೃದ್ಧಿ ಮಾಡಲಾಗುವುದು," ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದರು.
ಈ ವೇಳೆ ಜಿ.ಪಂ ಮಾಜಿ ಸದಸ್ಯ ಕಾಂತೇಶ್ ಈಶ್ವರಪ್ಪ, ಮಹಾಪೌರರಾದ ಸುನಿತಾ ಅಣ್ಣಪ್ಪ, ಸೂಡ ಅಧ್ಯಕ್ಷ ಜ್ಯೋತಿ ಪ್ರಕಾಶ್, ಚನ್ನಪಸಪ್ಪ, ಬಳ್ಳಿಕೆರೆ ಸಂತೋಷ್, ಮಹಾನಗರ ಪಾಲಿಕೆಯ ಸದಸ್ಯರು ಹಾಗೂ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.












Click it and Unblock the Notifications