ಶಿವಮೊಗ್ಗ: ತೀರ್ಥಹಳ್ಳಿಯ ರಂಜದಕಟ್ಟೆ ಸೇತುವೆ ಕುಸಿತ; ಸಂಚಾರ ಸ್ಥಗಿತ
ಶಿವಮೊಗ್ಗ, ಸೆಪ್ಟೆಂಬರ್ 24: ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ರಂಜದಕಟ್ಟೆ ಸಮೀಪದ ಸೇತುವೆ ಕುಸಿದಿದ್ದು, ಇದರಿಂದ ತೀರ್ಥಹಳ್ಳಿ ತಾಲೂಕಿನ ಮುಳುಬಾಗಿಲು ಗ್ರಾಮ ಪಂಚಾಯತಿ ಸಮೀಪದ ರಾಷ್ಟ್ರೀಯ ಹೆದ್ದಾರಿ ಸಂಚಾರ ಸ್ಥಗಿತಗೊಂಡಿದೆ.
ಇತ್ತೀಚೆಗೆ ಭಾರೀ ಮಳೆಯಾಗಿ, ಆಗುಂಬೆಯ ಬಳಿ ಸೇತುವೆ ಕುಸಿದಿತ್ತು. ಇದೀಗ ರಂಜದಕಟ್ಟೆ ಸೇತುವೆ ಕುಸಿಯುವ ಭೀತಿ ಹಿನ್ನೆಲೆ ಭಾರೀ ವಾಹನ ಸಂಚಾರವನ್ನು ನಿಷೇಧಿಸುವ ಸಾಧ್ಯತೆ ಇದೆ. ಸದ್ಯಕ್ಕೆ ಪೊಲೀಸರು ಬ್ಯಾರಿಕೇಡ್ ಹಾಕಿ ಭಾರಿ ವಾಹನಗಳ ಸಂಚಾರವನ್ನು ನಿಲ್ಲಿಸಿದ್ದಾರೆ. ಹೆದ್ದಾರಿಯಲ್ಲಿ ನೂರಾರು ವಾಹನಗಳು, ಪ್ರಯಾಣಿಕರು ಪರದಾಡುತ್ತಿದ್ದಾರೆ.

ಅಪಾಯದಲ್ಲಿದ್ದರೂ ರಿಪೇರಿಯಾಗಿರಲಿಲ್ಲ
ತಿರುವಿನಲ್ಲಿರುವ ಈ ಸೇತುವೆ ಅಪಾಯದಲ್ಲಿದ್ದರೂ ಇದರ ರಿಪೇರಿ ಕೆಲಸ ನಡೆದಿರಲಿಲ್ಲ. ಸೇತುವೆಯ ತಡೆಗೋಡೆಗೆ ಇತ್ತೀಚೆಗೆ ವಾಹನವೊಂದು ಗುದ್ದಿ ಜಖಂಗೊಂಡ ಹಿನ್ನೆಲೆಯಲ್ಲಿ ಮತ್ತಷ್ಟು ಶಿಥಿಲಗೊಂಡಿತ್ತು. ಇದರ ಪಕ್ಕದಲ್ಲಿಯೇ ನೂತನ ಸೇತುವೆ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿತ್ತಾದರೂ ಖಾಸಗಿ ವ್ಯಾಜ್ಯದಿಂದಾಗಿ ಹಲವಾರು ವರ್ಷಗಳಿಂದ ಸೇತುವೆ ನಿರ್ಮಾಣ ಕಾಮಗಾರಿ ಸ್ಥಗಿತಗೊಂಡಿದೆ.

ವಾಹನ ಸಂಚಾರಕ್ಕೆ ಭಾರೀ ಸಮಸ್ಯೆ
ಮಣಿಪಾಲ್, ಮಂಗಳೂರಿಗೆ ತೆರಳುವ ರೋಗಿಗಳು, ಪ್ರಯಾಣಿಕರು, ಎಲ್ಲಾ ವಾಹನಗಳು ಇದೇ ರಸ್ತೆಯಲ್ಲಿ ಸಂಚರಿಸಬೇಕು. ಆದರೆ ಸೇತುವೆ ಕುಸಿತದಿಂದ ಇದೀಗ ಸಮಸ್ಯೆ ಎದುರಾಗಿದೆ. ಶಾಸಕರು, ಅಧಿಕಾರಿಗಳು ಈ ಕುರಿತು ಗಮನಿಸಬೇಕಾಗಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಪರ್ಯಾಯ ಮಾರ್ಗ ಯಾವುದು?
1. ಉಡುಪಿ, ಆಗುಂಬೆ, ಸಾಗರ, ಶಿವಮೊಗ್ಗ ಹೋಗುವವರು ತೀರ್ಥಹಳ್ಳಿ ಮಾರ್ಗದಲ್ಲಿ ಕಲ್ಮನೆ, ಉಂಟೂರುಕಟ್ಟೆ ಕೈಮರ ನಂತರ ಸಿಗುವ ಬಿಳುಕೊಪ್ಪ ಇಲ್ಲಿ ಶಾಲಾ ಸಮೀಪ ಇರುವ ರಸ್ತೆಯಲ್ಲಿ ಸಾತ್ಗೋಡು (7 ಕಿ.ಮೀ) ಸಂಚರಿಸಿ ಅಲ್ಲಿಂದ ಬಲಭಾಗದಿಂದ ಮುಕ್ತಿಹರಿಹರಪುರ, ಬೊಬ್ಬಿ ಮಾರ್ಗವಾಗಿ ತೀರ್ಥಹಳ್ಳಿ ಮಾರ್ಗ ಸಂಪರ್ಕಿಸಬಹುದು.
2. ಆಗುಂಬೆ, ಕಮ್ಮರಡಿ, ರಾಮಕೃಷ್ಣಪುರ, ದೇವಂಗಿ, ತೀರ್ಥಹಳ್ಳಿ ಮಾರ್ಗವಾಗಿ ಸಂಚರಿಸಬಹುದು.
3. ಆಗುಂಬೆ ಕೊಪ್ಪ, ಶಿವಮೊಗ್ಗ ಮಾರ್ಗವಾಗಿ ಸಂಚರಿಸಬಹುದು.
4. ಉಡುಪಿ, ಹುಲಿಕಲ್, ಮಾಸ್ತಿಕಟ್ಟೆ, ಯಡೂರು, ಕವಲೇದುರ್ಗ, ಕೊಂಡ್ಲೂರು, ತೀರ್ಥಹಳ್ಳಿ ಸಂಪರ್ಕಿಸಬಹುದು.

ಜಿಲ್ಲೆಯ ಮಳೆ ಪ್ರಮಾಣ ಮತ್ತು ಜಲಾಶಯ ಮಟ್ಟ
ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 29.10 ಮಿ.ಮೀ ಮಳೆಯಾಗಿದ್ದು, ಸರಾಸರಿ 4.16 ಮಿ.ಮೀ ಮಳೆ ದಾಖಲಾಗಿದೆ. ಸೆಪ್ಟೆಂಬರ್ ತಿಂಗಳ ಸಾಮಾನ್ಯ ಮಳೆಯ ಸರಾಸರಿ ಪ್ರಮಾಣ 164.16 ಮಿ.ಮೀ ಇದ್ದು, ಇದುವರೆಗೆ ಸರಾಸರಿ 347.25 ಮಿ.ಮೀ ಮಳೆ ದಾಖಲಾಗಿದೆ. ಶಿವಮೊಗ್ಗ 1.40, ತೀರ್ಥಹಳ್ಳಿ 6.40., ಸಾಗರ 4.00, ಶಿಕಾರಿಪುರ 1.80, ಸೊರಬ 3.30 ಹಾಗೂ ಹೊಸನಗರ 12.20 ಮಿ.ಮೀ ಮಳೆಯಾಗಿದೆ.












Click it and Unblock the Notifications