ಶಿವಮೊಗ್ಗ: ಮಳೆಯಿಂದ ಮುರಿದು ಬಿದ್ದ ಬನ್ನಿ ಮಂಟಪ
ಶಿವಮೊಗ್ಗ, ಅಕ್ಟೋಬರ್ 26: ಮಳೆಯಿಂದಾಗಿ ನಗರದ ಹಳೇ ಜೈಲಿನ ಬಳಿ ನಿರ್ಮಿಸಲಾಗಿದ್ದ, ದಸರಾ ಉತ್ಸವದ ಬನ್ನಿ ಮಂಟಪ ಕುಸಿದು ಬಿದ್ದಿರುವ ಘಟನೆ ನಡೆದಿದೆ.
ಸಂಜೆ ವೇಳೆ ಸುರಿದ ಜೋರು ಮಳೆಯಿಂದಾಗಿ ಬನ್ನಿ ಮಂಟಪ ಕುಸಿದು ಬಿದ್ದಿದೆ. ನವರಾತ್ರಿಯ ಕೊನೆಯ ದಿನವಾದ ಇಂದು ಹಲವು ಪೂಜೆ ಪುನಸ್ಕಾರ ನಡೆಸಲು ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು. ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ನಂದಿ ಧ್ವಜ ತಂದು ಪೂಜೆ ಸಲ್ಲಿಸಲಾಗಿದೆ. ಈ ಬಾರಿ ಅದ್ಧೂರಿ ಮೆರವಣಿಗೆಯನ್ನು ರದ್ದುಗೊಳಿಸಲಾಗಿದ್ದು, ಕೋಟೆ ಆಂಜನೇಯ ಸ್ವಾಮಿ ದೇವಾಲಯದಿಂದ ಹಳೇ ಜೈಲಿ ಬಳಿ ಬನ್ನಿ ಮಂಟಪಕ್ಕೆ ತೆರಳುವ ವೇಳೆ ಮಳೆ ಸುರಿಯಲು ಆರಂಭಿಸಿದೆ. ಹೀಗಾಗಿ ಕೋಟೆ ಆವರಣದಲ್ಲಿಯೇ ಸಾಂಪ್ರದಾಯಿಕವಾಗಿ ಸಾಗಿದ್ದ ಮೆರವಣಿಗೆ ಸ್ಥಗಿತಗೊಂಡಿದೆ.

ಜೊತೆಗೆ ಬನ್ನಿ ಕಡಿಯುವ ಜಾಗವೂ ಕುಸಿದು ಹಾನಿಯಾಗಿದೆ. ದೇವತೆಗಳು ಬನ್ನಿ ಮಂಟಪದ ಹತ್ತಿರ ಬರುವ ಮುನ್ನವೇ ಮಳೆಗೆ ಮಂಟಪ ಕುಸಿದು ಬಿದ್ದಿದ್ದು, ಮಹಾನಗರ ಪಾಲಿಕೆ ಸಿಬ್ಬಂದಿ ತಕ್ಷಣ ಬಿದ್ದಿರುವ ಮಂಟಪ ತೆರವುಗೊಳಿಸಿದರು. ಕೊನೆ ಗಳಿಗೆಯಲ್ಲಿ ಆದ ಈ ಹಾನಿಯಿಂದ ಬದಲೀ ವ್ಯವಸ್ಥೆಯೂ ಕಷ್ಟವಾಗಿತ್ತು. ಬೇರೆ ಮಂಟಪವನ್ನು ಸಿದ್ಧಪಡಿಸಿ ಬನ್ನಿ ಕಡಿಯುವ ವ್ಯವಸ್ಥೆ ಕಲ್ಪಿಸಲಾಯಿತು.











Click it and Unblock the Notifications