Sagar Bandh :ಬಜರಂಗದಳ ಸಂಚಾಲಕನ ಮೇಲೆ ಹಲ್ಲೆಗೆ ಯತ್ನ: ಜನವರಿ 10ರಂದು ಸಾಗರ ಬಂದ್ಗೆ ಕರೆ
ಶಿವಮೊಗ್ಗ, ಜನವರಿ, 10: ಬಜರಂಗದಳ ಸಂಘಟನೆಯ ಸಹ ಸಂಚಾಲಕ ಸುನೀಲ್ ಎಂಬುವವರ ಮೇಲೆ ದುಷ್ಕರ್ಮಿಯೊಬ್ಬ ತಲ್ವಾರ್ನಿಂದ ಹಲ್ಲೆಗೆ ಯತ್ನಿಸಿದ್ದಾನೆ. ಕೂದಲೆಳೆ ಅಂತರದಿಂದ ಸುನಿಲ್ ಬಚಾವಾಗಿದ್ದಾರೆ. ಇನ್ನು ಸುನೀಲ್ ಮೇಲೆ ಹಲ್ಲೆ ಯತ್ನ ಖಂಡಿಸಿ ಸಾಗರ ನಗರದಲ್ಲಿ ಬಂದ್ ಮಾಡಲು ಹಿಂದೂ ಸಂಘಟನೆಗಳ ಮುಖಂಡರು ಕರೆ ನೀಡಿದ್ದಾರೆ. ಜನವರಿ 10ರಂದು ಸಾಗರ ಪಟ್ಟಣದಲ್ಲಿ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ಬಂದ್ ಮಾಡಲು ತೀರ್ಮಾನಿಸಲಾಗಿದೆ.
ಪ್ರಾಣಾಪಾಯದಿಂದ ಪಾರಾದ ಸುನೀಲ್
ಬಜರಂಗದಳ ನಗರ ಸಹ ಸಂಚಾಲಕ ಸುನಿಲ್ ಸೋಮವಾರ ಬೆಳಗ್ಗೆ ತಮ್ಮ ದ್ವಿಚಕ್ರ ವಾಹನದಲ್ಲಿ ಕೆಲಸಕ್ಕೆ ತೆರಳುತ್ತಿದ್ದರು. ನಗರದ ಬಿ.ಹೆಚ್.ರಸ್ತೆ ಆಭರಣ ಶೋ ರೂಂ ಬಳಿ ಬರುತ್ತಿದ್ದಂತೆ ಈ ಘಟನೆ ಸಂಭವಿಸಿದೆ. ಈ ಮೊದಲೆ ಶೋ ರೂಂ ಬಳಿ ಬಂದು ನಿಂತಿದ್ದ ಯುವಕನೊಬ್ಬ ತನ್ನ ದ್ವಿಚಕ್ರ ವಾಹನದಲ್ಲಿ ಇಟ್ಟಿದ್ದ ಮಾರಕಾಸ್ತ್ರ ತೆಗೆದು ಸುನಿಲ್ನತ್ತ ಬೀಸುತ್ತಾನೆ. ಆಗ ಸ್ವಲ್ಪದರಲ್ಲಿಯೇ ಸುನಿಲ್ ಪಾರಾಗುತ್ತಾರೆ. ಸುನಿಲ್ ಬರುವ ಮುಂಚೆಯೇ ಅಲ್ಲಿ ಬಂದು ನಿಂತಿದ್ದ ಸಮೀರ್ ಎಂಬಾತ ಮಾರಕಾಸ್ತ್ರದಿಂದ ಬೀಸಿದ್ದಾನೆ. ಹಾಗೆಯೇ ಸಮೀರ್ನ ಗಾಡಿಯಲ್ಲಿ ಯಾವ ಆಯುಧ ಇತ್ತು ಅನ್ನುವುದರ ಕುರಿತು ಪರಿಶೀಲನೆ ನಡೆಯುತ್ತಿದೆ. ಘಟನೆಯಲ್ಲಿ ಯಾವುದೇ ಅಪಾಯಗಳು ಪ್ರಣಾಪಾಯಗಳು ಸಂಭವಿಸಿಲ್ಲ. ಈ ಸಂಬಂಧ ಪ್ರಕರಣ ದಾಖಲಿಸಲಾಗುತ್ತಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಶಿವಮೊಗ್ಗದಲ್ಲಿ ಹೊಸವರ್ಷದ ಪಾರ್ಟಿ ವೇಳೆ ಗನ್ ಫೈರ್, ಯುವಕನಿಗೆ ಗಾಯ, ಗುಂಡು ಹಾರಿಸಿದ ವ್ಯಕ್ತಿ ಸಾವು
ಸಿಸಿಟಿವಿಯಲ್ಲಿ ದೃಶ್ಯ ಸೆರೆ
ಸುನಿಲ್ ಮೇಲೆ ಸಮೀರ್ ಎಂಬಾತ ಮಾರಕಾಸ್ತ್ರ ಬೀಸಲು ಯತ್ನಿಸಿದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಟ್ಟಡವೊಂದರ ಮುಂದೆ ನಿಲ್ಲಿಸಿದ್ದ ತನ್ನ ಬೈಕನ್ನು ಸಮೀರ್ ಎಂಬಾತ ಹಿಂದಕ್ಕೆ ತೆಗೆದುಕೊಳ್ಳುತ್ತಿರುತ್ತಾನೆ. ಇದೇ ಹೊತ್ತಿಗೆ ಸುನಿಲ್ ಆ ರಸ್ತೆಯಲ್ಲಿ ಬರುತ್ತಾರೆ. ಆಗ ಈ ಕಿರಾತಕರು ಕೂಡ ಕೂಡಲೇ ಬೈಕ ಅನ್ನು ಯು ಟರ್ನ್ ಮಾಡಿಕೊಂಡು ಕಟ್ಟಡದ ಕಡೆಗೆ ಬರುತ್ತಾರೆ. ಸುನಿಲ್ ಬರುವುದನ್ನು ಗಮನಿಸಿದ ಸಮೀರ್, ತನ್ನ ಬೈಕಿನ ಡಿಕ್ಕಿಯಲ್ಲಿದ್ದ ಮಾರಕಾಸ್ತ್ರವನ್ನು ಹೊರಗೆ ತೆಗೆಯುತ್ತಾನೆ. ಆಗ ಅಪಾಯದ ಮುನ್ಸೂಚನೆ ಸಿಗುತ್ತಿದ್ದಂತೆ ಸುನಿಲ್ ಬೈಕ ಅನ್ನು ವೇಗವಾಗಿ ಚಲಾಯಿಸುತ್ತಾರೆ. ಅಷ್ಟು ಹೊತ್ತಿಗಾಗಲೇ ಸಮೀರ್ ಮಾರಕಾಸ್ತ್ರ ಬೀಸಿದ್ದು, ಕೂದಲೆಳೆ ಅಂತರದಲ್ಲಿ ಸುನೀಲ್ ಪಾರಾಗಿದ್ದಾರೆ. ಈ ವೇಳೆ ರಸ್ತೆಯಲ್ಲಿ ಹೋಗುತ್ತಿದ್ದ ಶಾಲಾ ಮಕ್ಕಳು ಘಟನೆ ಕಂಡು ಆತಂಕಕ್ಕೀಡಾಗಿರುವುದು ಕೂಡ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಸುನೀಲ್ ಮನೆಗೆ ಹರತಾಳು ಹಾಲಪ್ಪ ಭೇಟಿ
ಭಾನುವಾರ ಶಿವಮೊಗ್ಗ ನಗರದಲ್ಲಿ ಬಜರಂಗದಳದ ವತಿಯಿಂದ ಶೌರ್ಯ ಯಾತ್ರೆ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಸುನಿಲ್ ಬೈಕಿನಲ್ಲಿ ತೆರಳುತ್ತಿದ್ದರು. ಆಗ ಬಿ.ಹೆಚ್.ರಸ್ತೆಯಲ್ಲಿ ಸುನಿಲ್ ಬೈಕಿಗೆ ತಾಗುವಂತೆ ಬೈಕನ್ನು ಹತ್ತಿರಕ್ಕೆ ತಂದ ಯುವಕರ ಗುಂಪು, ಅವಾಚ್ಯವಾಗಿ ನಿಂದಿಸಿ, ಜೀವ ಬೆದರಿಕೆಯೊಡ್ಡಿದೆ ಎಂದು ಸುನಿಲ್ ದೂರಿನಲ್ಲಿ ಆರೋಪಿಸಿದ್ದಾರೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಹಿಂದೂ ಸಂಘಟನೆಗಳ ಕಾರ್ಯಕರ್ತರು ಸೋಮವಾರ ಸಾಗರ ನಗರ ಪೊಲೀಸ್ ಠಾಣೆ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸಿದರು. ದುಷ್ಕರ್ಮಿಗಳನ್ನು ಕೂಡಲೆ ಬಂಧಿಸಿ, ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪಟ್ಟು ಹಿಡಿದರು. ಇನ್ನು, ಮಾಹಿತಿ ತಿಳಿಯುತ್ತಿದ್ದಂತೆ ಬಜರಂಗದಳ ಸಹ ಸಂಚಾಲಕ ಸುನಿಲ್ ಮನೆಗೆ ಶಾಸಕ ಹರತಾಳು ಹಾಲಪ್ಪ ಭೇಟಿ ನೀಡಿದರು. ಸುನಿಲ್ ಮತ್ತು ಆತನ ಕುಟುಂಬದವರಿಗೆ ಧೈರ್ಯ ಹೇಳಿದರು. ಅಲ್ಲದೆ ಸಾಗರ ಎಎಸ್ಪಿ, ಪಟ್ಟಣದ ಪೊಲೀಸರ ಜೊತೆಗೆ ಸಭೆ ನಡೆಸಿ ಕೂಡಲೆ ಆರೋಪಿಗಳನ್ನು ಬಂಧಿಸಬೇಕು ಎಂದು ಸೂಚಿಸಿದರು.
ಆರೋಪಿಗಳ ಪತ್ತೆಗೆ ಮೂರು ತಂಡ ರಚನೆ
ಮಾರಕಾಸ್ತ್ರ ಬೀಸಿದ ಪ್ರಕರಣ ಸಂಬಂಧ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆರೋಪಿ ಸಮೀರ್ ಮತ್ತು ಇತರೆ ದುಷ್ಕರ್ಮಿಗಳ ಬಂಧನಕ್ಕೆ ತಂಡವನ್ನು ರಚಿಸಲಾಗಿದೆ. ಹಾಗೆಯೇ ಆರೋಪಿಗಳ ಬಂಧನಕ್ಕೆ ಮೂರು ತಂಡ ರಚಿಸಲಾಗಿದೆ. ತನಿಖೆಯ ಬಳಿಕ ಘಟನೆಗೆ ಕಾರಣ ಏನೆಂಬುದು ತಿಳಿಯಲಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ತಿಳಿಸಿದ್ದಾರೆ.