ಶಿವಮೊಗ್ಗದಲ್ಲಿ ಯುವಕನ ಮೇಲೆ ದಾಳಿ, ಹಿಂದೂ ಮುಖಂಡರು ಆಸ್ಪತ್ರೆಗೆ ದೌಡು
ಶಿವಮೊಗ್ಗ, ಏಪ್ರಿಲ್ 8: ಯುವಕನೊಬ್ಬನ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದು, ತಪ್ಪಿಸಿಕೊಂಡು ಬಂದ ಯುವಕನನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ವಿಚಾರ ತಿಳಿಯುತ್ತಿದ್ದಂತೆ ಹಿಂದೂ ಸಂಘಟನೆ ಮುಖಂಡರು ಆಸ್ಪತ್ರೆಗೆ ದೌಡಾಯಿಸಿದರು. ಘಟನೆಗೆ ಕಾರಣರಾದವರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.
ಶಿವಮೊಗ್ಗದ ಎನ್.ಟಿ. ರಸ್ತೆ ನಿವಾಸಿ ಮಧು (22) ಎಂಬಾತನ ಮೇಲೆ ಹಲ್ಲೆಯಾಗಿದೆ. ನ್ಯೂ ಮಂಡ್ಲಿ 1ನೇ ಕ್ರಾಸ್ನಲ್ಲಿ ಮಧು ಮೇಲೆ ಆರು ಯುವಕರು ದಾಳಿ ಮಾಡಿದ್ದಾರೆ. ಆತನ ಮೇಲೆ ಹಲ್ಲೆ ನಡೆಸಿದ್ದಾರೆ.
ಮಧು ಅಲ್ಲಿಗೆ ಹೋಗಿದ್ದೇಕೆ?
ಮಧು ಹೂವಿನ ಮಾರುಕಟ್ಟೆಯಲ್ಲಿ ಕೆಲಸ ಮಾಡುತ್ತಾನೆ. ಗುರುವಾರ ಮಧ್ಯಾಹ್ನ ನ್ಯೂ ಮಂಡ್ಲಿಯ ಸಿದ್ದೇಶ್ವರ ರೈಸ್ ಮಿಲ್ ರಸ್ತೆಯಲ್ಲಿರುವ ವ್ಯಕ್ತಿಯೊಬ್ಬರಿಗೆ ಹೂವಿನ ಡಿಲೆವರಿ ಕೊಡಲು ಮಧು ತೆರಳಿದ್ದ. ಬೈಕ್ನಲ್ಲಿ ಹೋಗುತ್ತಿದ್ದ ಮಧುನನ್ನು ಆರು ಯುವಕರು ಬೈಕುಗಳಲ್ಲಿ ಬಂದು ಅಡ್ಡಗಟ್ಟಿದ್ದಾರೆ. ಅವಾಚ್ಯವಾಗಿ ನಿಂದಿಸಿ, ಹಲ್ಲೆ ನಡೆಸಿದ್ದಾರೆ. ಎಡ ಪಕ್ಕೆ, ಮೈಕೈಗೆ ಹೊಡೆದಿದ್ದಾರೆ.

ತಪ್ಪಿಸಿಕೊಂಡು ಬಂದು ಆಸ್ಪತ್ರೆಗೆ ದಾಖಲು
ಹಲ್ಲೆಕೋರರಿಂದ ತಪ್ಪಿಸಿಕೊಂಡು ಬಂದ ಮಧು ಸ್ನೇಹಿತರಿಗೆ ವಿಚಾರ ತಿಳಿಸಿದ್ದಾರೆ. ಕೂಡಲೇ ಆತನನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಿದ್ದು, ಚಿಕಿತ್ಸೆ ನೀಡಲಾಗಿದೆ. ಘಟನೆ ಕುರಿತು ಪೊಲೀಸರಿಗೆ ಮಾಹಿತಿ ನೀಡಲಾಯಿತು.
ಹಿಂದೂ ಸಂಘಟನೆ ಮುಖಂಡರು ದೌಡು
ಇನ್ನು ಮಧು ಮೇಲೆ ಹಲ್ಲೆ ನಡೆಸಿದ ವಿಚಾರ ತಿಳಿದು ಹಿಂದೂ ಸಂಘಟನೆಗಳು, ಬಿಜೆಪಿ ಮುಖಂಡರು ಮೆಗ್ಗಾನ್ ಆಸ್ಪತ್ರೆಗೆ ದೌಡಾಯಿಸಿದರು. ಮಧು ಆರೋಗ್ಯ ವಿಚಾರಿಸಿದರು. ಆತನ ಕುಟುಂಬದವರಿಗೆ ಧೈರ್ಯ ಹೇಳಿದರು. 'ಮುಸ್ಲಿಂ ಸಮುದಾಯಕ್ಕೆ ಸೇರಿದವರು ಹಲ್ಲೆ ನಡೆಸಿದ್ದಾರೆ. ಹಲ್ಲೆಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು' ಎಂದು ಹಿಂದೂ ಸಂಘಟನೆ ಮುಖಂಡರು ಆಗ್ರಹಿಸಿದ್ದಾರೆ.

ಶಸ್ತ್ರಚಿಕಿತ್ಸೆ ಆಗಿದ್ದ ಜಾಗಕ್ಕೆ ಪೆಟ್ಟು
ಮಧುಗೆ ಈ ಹಿಂದೆ ಹೊಟ್ಟೆ ಭಾಗದಲ್ಲಿ ಶಸ್ತ್ರಚಿಕಿತ್ಸೆಯಾಗಿತ್ತು. ದಾಳಿ ವೇಳೆ ಅದೆ ಭಾಗಕ್ಕೆ ಪಟ್ಟು ಬಿದ್ದಿದೆ. ''ಯುವಕ ಮಧುವಿಗೆ ಈ ಹಿಂದೆ ಹೊಟ್ಟೆ ಭಾಗಕ್ಕೆ ಶಸ್ತ್ರಚಿಕಿತ್ಸೆ ಆಗಿದ್ದ ಜಾಗಕ್ಕೆ ಪುನಃ ಪೆಟ್ಟುಬಿದ್ದಿದೆ. ಅದೃಷ್ಟವಶಾತ್ ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ,'' ಎಂದು ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮ ಉಪಾಧ್ಯಕ್ಷ ಎಸ್. ದತ್ತಾತ್ರಿ ತಿಳಿಸಿದ್ದಾರೆ.
ನಾಲ್ವರು ಯುವಕರು ವಶಕ್ಕೆ
ಇನ್ನು ಘಟನೆ ಮಾಹಿತಿ ತಿಳಿಯುತ್ತಿದ್ದ ಹಾಗೆ ಪೊಲೀಸರು ಎಚ್ಚೆತ್ತುಕೊಂಡಿದ್ದು, ಕೂಡಲೇ ಕಾರ್ಯಾಚರಣೆ ನಡೆಸಿದ್ದಾರೆ. ಹಲ್ಲೆ ನಡೆಸಿದ ನಾಲ್ವರನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

'ನಿಜವಾದ ಶಾಂತಿದೂತರಾಗಿ..'
ಮತ್ತೊಂದೆಡೆ ಘಟನೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿರುವ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಎಸ್. ದತ್ತಾತ್ರಿ ಅವರು,''ಮುಸಲ್ಮಾನ್ ಮುಖಂಡರುಗಳು ಕೇವಲ ಬಾಯಿ ಮಾತಿಗೆ ಶಾಂತಿಯನ್ನು ಪಠಿಸದೆ ತಮ್ಮ ಸಮುದಾಯದ ಇಂತಹ ಕಿಡಿಗೇಡಿ ಯುವಕರನ್ನು ಹತೋಟಿಯಲ್ಲಿ ಇಡಬೇಕು. ಈಗಾಗಲೇ ರಾಜ್ಯದಲ್ಲಿ ಹಿಜಾಬ್ ಇಂದ ಹಿಡಿದು ಅಜಾನ್ ವಿಚಾರದವರೆಗೂ ಎರಡು ಸಮುದಾಯಗಳ ಮಧ್ಯೆ ಕಂದಕಗಳು ಸೃಷ್ಟಿಯಾಗಿವೆ, ಇದು ಬೇರೆಲ್ಲೋ ಹೋಗುವುದಕ್ಕಿಂತ ಮುನ್ನ ಮುಸಲ್ಮಾನ್ ಮುಖಂಡರುಗಳು ಎಚ್ಚೆತ್ತುಕೊಳ್ಳಬೇಕು, ನಿಜವಾದ ಶಾಂತಿದೂತರಾಗಬೇಕು,'' ಎಂದು ಆಗ್ರಹಿಸಿದ್ದಾರೆ.












Click it and Unblock the Notifications