ಶಿವಮೊಗ್ಗ: ಪ್ರತಿ ಲೀಟರ್ ಪೆಟ್ರೋಲ್ ಗೆ 15 ರೂ. ಉಳಿಸಲು ವಿದ್ಯಾರ್ಥಿಗಳ ಹೊಸ ಆವಿಷ್ಕಾರ
ಶಿವಮೊಗ್ಗ, ಅಕ್ಟೋಬರ್ 7: ಶಿವಮೊಗ್ಗ ನಗರದ ಜೆ.ಎನ್.ಎನ್.ಸಿ ಇಂಜಿನಿಯರಿಂಗ್ ಕಾಲೇಜು ರಾಜ್ಯ, ರಾಷ್ಟ್ರಕ್ಕೆ ಬಹಳಷ್ಟು ಪ್ರತಿಭಾನ್ವಿತ ವಿಜ್ಞಾನಿ, ಸಂಶೋಧಕರು ಹಾಗೂ ಇಂಜಿನಿಯರ್ ಗಳನ್ನು ಕೊಟ್ಟಂತಹ ಪ್ರತಿಷ್ಠಿತ ಸಂಸ್ಥೆಯಾಗಿದ್ದು, ಇಂತಹ ಕಾಲೇಜಿನ ಕೆಲವು ಪ್ರತಿಭಾನ್ವಿತ ವಿದ್ಯಾರ್ಥಿಗಳ ಈಗ ನೂತನ ಆವಿಷ್ಕಾರವೊಂದರಲ್ಲಿ ಯಶಸ್ಸು ಗಳಿಸಿದ್ದಾರೆ.
ಜೆ.ಎನ್.ಎನ್.ಸಿ ಇಂಜಿನಿಯರಿಂಗ್ ಕಾಲೇಜಿನ ರಸಾಯನ ವಿಜ್ಞಾನ ವಿಭಾಗದ ವತಿಯಿಂದ ಜೈವಿಕ ಎಥನಾಲ್ ಉತ್ಪಾದನೆಗಾಗಿ ಜೈವಿಕ ರಿಯಾಕ್ಟರ್ ಘಟಕವನ್ನು ವಿನ್ಯಾಸಗೊಳಿಸಲಾಗಿದ್ದು, ಸಸ್ಯ ಜನ್ಯ ಜೈವಿಕ ಎಥನಾಲ್ ಉತ್ಪಾದನೆಯಲ್ಲಿ ಒಂದು ವಿನೂತನ ಪ್ರಯತ್ನವಾಗಿದೆ.
ರಸಾಯನ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಎಸ್.ಜಿ ಚೇತನ್ ಅವರ ಮಾರ್ಗರ್ಶನದಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳಾದ ಜೆ.ಶರಣ್, ಎಸ್.ಆರ್ ರಾಹುಲ್ ಎಂಬ ವಿದ್ಯಾರ್ಥಿಗಳ ತಂಡ ಈ ನಾವಿನ್ಯಯುತ ಪ್ರಯತ್ನವನ್ನು ಮಾಡಿದೆ.

ಏನಿದು ಅವಿಷ್ಕಾರ ?
ಆಲ್ಕೋಹಾಲ್ ನ ಒಂದು ರೂಪವಾಗಿರುವ ಎಥೆನಾಲ್, ಪೆಟ್ರೋಲ್ ಅಥವಾ ಡೀಸೆಲ್ ವಾಹನಗಳಿಗೆ ಬೆರೆಸಿದಾಗ ವಾಹನದ ಕಾರ್ಯಕ್ಷಮತೆ ಉತ್ತಮವಾಗುವುದರ ಜೊತೆಗೆ ವಾಹನದಿಂದ ವಾತಾವರಣಕ್ಕೆ ಬಿಡುಗಡೆಯಾಗುವ ಇಂಗಾಲದ ಡೈ ಆಕ್ಸೈಡ್ ಪ್ರಮಾಣವನ್ನು ತಗ್ಗಿಸುತ್ತದೆ. ಇದರಿಂದ ಪೆಟ್ರೋಲ್ ಆಮದು ಮೇಲಿನ ಅವಲಂಬನೆ ಹೊರೆಯು ಇಳಿಮುಖವಾಗಲಿದೆ. ಒಂದೊಮ್ಮೆ ಶೇ.5 ರಷ್ಟು ಎಥೆನಾಲ್ ನ್ನು ಪೆಟ್ರೋಲ್ಗೆ ಬೆರೆಸಿದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಮೇಲೆ 15 ರುಪಾಯಿ ಉಳಿಸಬಹುದಾಗಿದ್ದು, ಇಂತಹ ಎಥೆನಾಲ್ ಉತ್ಪಾದನೆಗೆ ವಿದ್ಯಾರ್ಥಿಗಳ ಈ ನಾವಿನ್ಯ ಯೋಜನೆ ಪೂರಕವಾಗಲಿದೆ.

ಹೇಗೆ ಕೆಲಸ ಮಾಡುತ್ತದೆ?
ಸುಮಾರು 100 ಲೀಟರ್ ರಿಯಾಕ್ಟರ್ ಸಾಮರ್ಥ್ಯದೊಂದಿಗೆ 90 ಡಿಗ್ರಿ ಸೆಲ್ಸಿಯಸ್ ಆಪರೇಷನ್ ಉಷ್ಣತೆ ಅವಶ್ಯಕತೆಯಿದೆ. ಕೃಷಿ ತ್ಯಾಜ್ಯಗಳಾದ ಕಬ್ಬು, ಕಾಫಿ ಹಣ್ಣು, ಗೊಂಡಬಿಯ ಸಿಪ್ಪೆಗಳು, ತಿರುಳುಗಳು, ಹುಲ್ಲು ಮೊದಲಾದವುಗಳಿಂದ ಸೆಲ್ಯುಲಸ್ ಎಂಬ ಸಂಯುಕ್ತ ಶರ್ಕರಾಂಶದಿಂದ ಎಥೆನಾಲ್ ಉತ್ಪಾದಿಸಬಹುದಾಗಿದೆ. ಜೊತೆಗೆ ಅನುಪಯುಕ್ತ ಹಣ್ಣುಗಳು, ಬೀಜಗಳಿಂದ ಎಥನಾಲ್ ತಯಾರಿಸಬಹುದಾಗಿದೆ.

ಸ್ಟಾರ್ಟ್ ಅಪ್ ಶುರು ಮಾಡುವ ಅಭಿಲಾಷೆ
100 ಲೀಟರ್ ರಿಯಾಕ್ಟರ್ ಸಾಮರ್ಥ್ಯದ ಈ ಘಟಕದಿಂದ ಸುಮಾರು 20 ಲೀಟರ್ನಷ್ಟು ಎಥೆನಾಲ್ ಉತ್ಪಾದನೆ ಮಾಡಬಹುದಾಗಿದ್ದು, ಉತ್ಪಾದನೆಗೆ ನೀಡುವ ತ್ಯಾಜ್ಯಗಳ ಆಧಾರದ ಮೇಲೆ ಸುಮಾರು ಎರಡು ದಿನಗಳಿಂದ ಏಳು ದಿನಗಳೊಳಗೆ ಎಥೆನಾಲ್ ನ್ನು ಈ ಘಟಕದಲ್ಲಿ ಡಿಸ್ಟಿಲೇಷನ್ ಮಾಡಹುದಾಗಿದೆ. ಜೈವಿಕ ಎಥೆನಾಲ್ ಜೊತೆಗೆ ಜೈವಿಕ ಇಂಧನವನ್ನು ಕೂಡ ಈ ಘಟಕದಲ್ಲಿ ಉತ್ಪಾದಿಸಬಹುದಾಗಿದೆ. ಮುಂದಿನ ದಿನಗಳಲ್ಲಿ ಈ ನಾವಿನ್ಯ ಯೋಜನೆಯ ಮೂಲಕ ಉತ್ಪಾದಿಸಲ್ಪಟ್ಟ ಎಥೆನಾಲ್ ಮಾರಾಟ ಹಾಗೂ ವಿನ್ಯಾಸ ಮತ್ತು ಫ್ಯಾಬ್ರಿಕೇಷನ್ ನನ್ನು ಇತರೆಡೆಗಳಲ್ಲೂ ಸ್ಥಾಪಿಸುವ ಮೂಲಕ ಸ್ಟಾರ್ಟ್ ಅಪ್ ಶುರು ಮಾಡುವ ಅಭಿಲಾಷೆ ಈ ತಂಡದ್ದಾಗಿದೆ.

ವಿದ್ಯಾರ್ಥಿಗಳ ಪ್ರತಿ ನಾವಿನ್ಯ ಯೋಜನೆಗೆ 2.5 ಲಕ್ಷ ರುಪಾಯಿ
ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಕಾಲೇಜಿನಲ್ಲಿ ಸ್ಥಾಪಿಸಿರುವ ನ್ಯೂ ಜೆನರೇಷನ್ ಇನೋವೇಷನ್ ಎಂಟ್ರಾಪ್ರಿನರ್ ಶಿಪ್ ಡೆವಲಪ್ಮೆಂಟ್ ಸೆಂಟರ್ ಮೂಲಕ ಈ ನಾವಿನ್ಯ ಯೋಜನೆಗೆ ಆರ್ಥಿಕ ಸಹಕಾರ ನೀಡಲಾಗಿದೆ. ಈ ಕುರಿತಂತೆ ಮಾತನಾಡಿರುವ ಜೆ.ಎನ್.ಎನ್.ಸಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಚ್.ಆರ್ ಮಹದೇವಸ್ವಾಮಿ, ಭಾರತ ಸರ್ಕಾರ ಕಾಲೇಜಿನಲ್ಲಿ ಸ್ಥಾಪಿಸಿರುವ ನ್ಯೂ ಜೆನರೇಷನ್ ಇನೋವೇಷನ್ ಎಂಟ್ರಾಪ್ರಿನರ್ ಶಿಪ್ ಡೆವಲಪ್ಮೆಂಟ್ ಸೆಂಟರ್ ಮೂಲಕ ವಿದ್ಯಾರ್ಥಿಗಳ ಪ್ರತಿ ನಾವಿನ್ಯ ಯೋಜನೆಗೆ 2.5 ಲಕ್ಷ ರುಪಾಯಿ ಆರ್ಥಿಕ ಸಹಕಾರ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ನಾವಿನ್ಯ ಯೋಜನೆಗಳು ಅನುಷ್ಠಾನಗೊಳಿಸಲು ಅಗತ್ಯ ಸಹಕಾರ ನೀಡಲಾಗುವುದು ಎಂದರು.












Click it and Unblock the Notifications