ಭದ್ರಾವತಿಯ 3 ನಗರಸಭೆ ಸದಸ್ಯರು ಬಿಜೆಪಿ ಪಕ್ಷದಿಂದ ಉಚ್ಚಾಟನೆ- ಆಯನೂರು ಮಂಜುನಾಥ್ ಕ್ಷಮೆ ಕೇಳುವಂತೆ ಆಗ್ರಹ
ಶಿವಮೊಗ್ಗ ಸೆಪ್ಟೆಂಬರ್ 3: ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಮೂವರು ನಗರಸಭೆ ಸದಸ್ಯರನ್ನು ಬಿಜೆಪಿ ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ. ಭದ್ರಾವತಿ ನಗರಸಭೆಯ ಉಪಾಧ್ಯಕ್ಷ ಚುನಾವಣೆಗೆ ಗೈರು ಹಿನ್ನೆಲೆ ಮೂವರು ಸದಸ್ಯರನ್ನು ಪಕ್ಷದಿಂದ ಉಚ್ಚಾಟನೆ ಮಾಡಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ.ಮೇಘರಾಜ್ ಆದೇಶ ಹೊರಡಿಸಿದ್ದಾರೆ.
ಉಪಾಧ್ಯಕ್ಷ ಚುನಾವಣೆಯಲ್ಲಿ ಭಾಗವಹಿಸಿ ಮತ ಚಲಾಯಿಸುವಂತೆ ಬಿಜೆಪಿ ವಿಪ್ ಜಾರಿಗೊಳಿಸಿತ್ತು. ವಿಪ್ ಜಾರಿ ಮಾಡಿದ್ದರೂ ಚುನಾವಣೆಗೆ ಮೂವರು ನಗರಸಭೆ ಸದಸ್ಯರು ಗೈರಾಗಿದ್ದರು. ಹೀಗಾಗಿ ಕದಿರೇಶ್, ಅನಿತಾ, ಲಲಿತಾ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ. ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ 6 ವರ್ಷಗಳ ಕಾಲ ಉಚ್ಚಾಟನೆ ಮಾಡಿ ಆದೇಶ ಹೊರಡಿಸಲಾಗಿದೆ.

26-8-2024ರ ಸೋಮವಾರದಂದು ಭದ್ರಾವತಿಯ ನಗರಸಭಾ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಭಾಹವಹಿಸಿ ಮತ ಚಲಾವಣೆ ಮಾಡಲು ವಿಪ್ ಜಾರಿಗೊಳಿಸಲಾಗಿತ್ತು. ಚುನಾವಣೆಗೆ ಹಾಜರಾಗದೆ ವಿಪ್ ಉಲ್ಲಂಘನೆ ಮಾಡಿರುವುದು ಕಂಡು ಬಂದಿರುವುದರಿಂದ ಪಕ್ಷದ ನಗರಸಭಾ ಸದಸ್ಯರುಗಳಾದ ವಿ ಕದಿರೇಶ್, ಅನಿತಾ ಮಲ್ಲೇಶ್ ಮತ್ತು ಶಶಿಕಲಾ ನಾರಾಯಣಪ್ಪ ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಆರು ವರ್ಷಗಳ ಕಾಲ ಭಾರತೀಯ ಜನತಾ ಪಾರ್ಟಿಯ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸಲಾಗಿದೆ ಎಂದು ಬಿಜೆಪಿ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಶಿವಮೊಗ್ಗದಲ್ಲಿ ಮಾಜಿ ಸಚಿವ ಹರತಾಳು ಹಾಲಪ್ಪ ಸುದ್ದಿಗೋಷ್ಠಿ
ಶಿವಮೊಗ್ಗದಲ್ಲಿ ಮಾಜಿ ಸಚಿವ ಹರತಾಳು ಹಾಲಪ್ಪ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇತ್ತಿಚೀಗೆ ಕಾಂಗ್ರೆಸ್ ಪಕ್ಷದ ವಕ್ತಾರರು ಯಡಿಯೂರಪ್ಪ ಕುಟುಂಬದ ಬಗ್ಗೆ ಮಾತಾಡಿದ್ದಾರೆ. ವಾಲ್ಮೀಕಿ ಹಗರಣದ ಬಗ್ಗೆ ನಾವು ಹೋರಾಟ ಮಾಡಿದ್ದೇವೆ. ಆಡಳಿತ ಪಕ್ಷದ ವಿರುದ್ದ ವಿರೋಧ ಪಕ್ಷದವರಾದ ನಾವು ಹೋರಾಟ ಮಾಡಿದ್ದೇವೆ.
ಯಡಿಯೂರಪ್ಪ ನವರ ಮೇಲೆ ಆರೋಪ ಬಂದಾಗ ರಾಜೀನಾಮೆ ಕೊಟ್ಟು ಪ್ರಕರಣದಿಂದ ಹೊರ ಬಂದು ಖುಲಾಷೆ ಆಗಿದ್ದಾರೆ. ಮುಡಾ ಹಗರಣದ ವಿಚಾರ ಬಂದಾಗ ಯಡಿಯೂರಪ್ಪ ಕುಟುಂಬದ ಬಗ್ಗೆ ಮಾತಾಡೋದು ಸರಿಯಲ್ಲ. ಪಕ್ಷದಲ್ಲಿ ಅಸ್ತಿತ್ವ ಉಳಿಸಿಕೊಳ್ಳಲು ಆಯನೂರು ಮಂಜುನಾಥ್ ಈ ಹೇಳಿಕೆ ನೀಡಿದ್ದಾರೆ.

ಯಡಿಯೂರಪ್ಪ ಆಶೀರ್ವಾದದಿಂದಲೇ ಆಯನೂರು ಮಂಜುನಾಥ್ ಎಲ್ಲಾ ಸ್ಥಾನಮಾನ ಪಡೆದುಕೊಂಡಿದ್ದಾರೆ. ಯಾರನ್ನೋ ಸಂತೋಷ ಪಡಿಸಲು ವಕ್ತಾರರ ಸ್ಥಾನ ಉಳಿಸಿಕೊಳ್ಳಲು ಈ ಹೇಳಿಕೆ ನೀಡುತ್ತಿದ್ದಾರೆ. ಸುಮ್ ಸುಮ್ಮನೆ ಯಡಿಯೂರಪ್ಪ ಕುಟುಂಬದ ಮೇಲೆ ಆರೋಪ ಮಾಡುವುದು ಸರಿಯಲ್ಲ. ಯಡಿಯೂರಪ್ಪ ನವರು ಜನತಾ ನ್ಯಾಯಾಲಯ,ದೇವಾಲಯ,ನ್ಯಾಯಾಲಯದಲ್ಲಿ ಕ್ಲೀನ್ ಚಿಟ್ ಸಿಕ್ಕಿದೆ. ಆಯನೂರು ಮಂಜುನಾಥ್ ಅವರಿಗೆ ಮಾತನಾಡುವ ಕಲೆ ಇದೆ ಅದು ನಮಗೆ ಗೊತ್ತು. ಆಯನೂರು ಮಂಜುನಾಥ್ ಯಡಿಯೂರಪ್ಪ ಕುಟುಂಬದ ಕ್ಷೇಮೆ ಕೇಳಬೇಕು ಎಂದು ಹರತಾಳು ಹಾಲಪ್ಪ ಆಗ್ರಹಿಸಿದರು.
ಚುನಾವಣಾ ರಾಜಕೀಯದಿಂದ ಯಡಿಯೂರಪ್ಪ ದೂರ ಸರಿದಿದ್ದಾರೆ. ಯಡಿಯೂರಪ್ಪ ಕುಟುಂಬದ ಬಗ್ಗೆ ಮಾತಾಡಿರೋದು ನೋವಾಗಿದೆ. ಮುಡಾ ಹಗರಣ, ವಾಲ್ಮೀಕಿ ಹಗರಣದ ಸಮಯದಲ್ಲಿ ಯಡಿಯೂರಪ್ಪ ನವರ ಬಗ್ಗೆ ಹೇಳುವುದು ಸರಿಯಲ್ಲ ಎಂದು ಹೇಳಿದರು.
ಶಿವಮೊಗ್ಗದಲ್ಲಿ ಮಾಜಿ ಎಂಎಲ್ ಸಿ ರುದ್ರೇಗೌಡ ಹೇಳಿಕೆ
ಬಳಿಕ ಮಾಜಿ ಎಂಎಲ್ ಸಿ ರುದ್ರೇಗೌಡ ಮಾತನಾಡಿ, ಆಯನೂರು ಮಂಜುನಾಥ್ ಬಹಳ ವಾಗ್ಮಿ, ಒಂದೇ ವಿಷಯವನ್ನು ತಿರುಚಿ ಹೇಗೆ ಬೇಕಾದರೂ ಮಾತನಾಡ್ತಾರೆ. ಏನೇ ಮಾತಾಡಲಿ ಆದರೆ ಯಡಿಯೂರಪ್ಪ ಅವರ ಹಿರಿತನಕ್ಕೆ ಗೌರವ ಕೊಟ್ಟು ಮಾತನಾಡಲಿ. ಆಯನೂರು ಮಂಜುನಾಥ್ ಪಕ್ಷದಲ್ಲಿ ಬಹಳ ಎತ್ತರಕ್ಕೆ ಬೆಳೆದವರು. ನೀವು ಈಗಿರುವ ಪಕ್ಷದಲ್ಲಿ ಆಶೀರ್ವಾದ ಪಡೆಯಲು ಈ ರೀತಿ ಮಾತನಾಡೋದು ಎಷ್ಟು ಸರಿ. ಒಂದೊಂದು ಪಕ್ಷದಲ್ಲಿ ಇದ್ದಾಗ ಅವರು ಒಂದೊಂದು ರೀತಿ ಮಾತನಾಡ್ತಾರೆ. ಯಡಿಯೂರಪ್ಪ ಅವರಿಗೆ ಕ್ಷೇಮೆಯನ್ನ ಆಯನೂರು ಮಂಜುನಾಥ್ ಕೇಳಬೇಕು ಎಂದು ಆಗ್ರಹಿಸಿದರು.












Click it and Unblock the Notifications