ಶಿವಮೊಗ್ಗ: ಸಂಜೆ ವೇಳೆ ಶಿಕ್ಷಕಿಯ ಮಾಂಗಲ್ಯ ಸರ ಅಪಹರಿಸಿದ ಕಳ್ಳರು
ಶಿವಮೊಗ್ಗ, ಸೆಪ್ಟೆಂಬರ್ 8: ಶಿವಮೊಗ್ಗ ನಗರದಲ್ಲಿ ಸೋಮವಾರ ಸಂಜೆ ವೇಳೆ ಶಿಕ್ಷಕಿಯೊಬ್ಬರ ಸರಗಳ್ಳತನವಾದ ಪ್ರಕರಣ ದಾಖಲಾಗಿದೆ.
ಶಿವಮೊಗ್ಗದ ರವೀಂದ್ರ ನಗರದ ಗಣಪತಿ ದೇವಸ್ಥಾನಕ್ಕೆ ತೆರಳಿದ್ದ ಶಿಕ್ಷಕಿಯೋರ್ವರು, ಪೂಜೆ ಮುಗಿಸಿಕೊಂಡು ಮನೆಗೆ ನಡೆದುಕೊಂಡು ಬರುತ್ತಿರುವಾಗ ಶಿಕ್ಷಕಿಯ ಕುತ್ತಿಗೆಯಲ್ಲಿದ್ದ ಮಾಂಗಲ್ಯ ಸರವನ್ನು ಖದೀಮರು ಎಗರಿಸಿರುವ ಘಟನೆ ಸೋಮವಾರ ಸಂಜೆ 7.50 ರ ಸಮಯದಲ್ಲಿ ನಡೆದಿದೆ.
ರವೀಂದ್ರ ನಗರದ 5ನೇ ತಿರುವಿನಲ್ಲಿ ವಾಸವಾಗಿದ್ದ ಶಿಕ್ಷಕಿ ಶಶಿ ಎಂಬುವವರು ಗಣಪತಿ ದೇವಸ್ಥಾನಕ್ಕೆ ನಿನ್ನೆ ಸಂಜೆ ಸುಮಾರು 7.30ರ ವೇಳೆಯಲ್ಲಿ ತೆರಳಿದ್ದರು. ಬೈಕ್ ನಲ್ಲಿ ಬಂದಿದ್ದ ಇಬ್ಬರು ಅಪರಿಚಿತರು ಅವರ ಕುತ್ತಿಗೆಗೆ ಕೈಹಾಕಿ ಮಾಂಗಲ್ಯ ಸರವನ್ನು ಅಪಹರಿಸಿದ್ದಾರೆ.

1 ಲಕ್ಷದ 60 ಸಾವಿರ ರೂ. ಮೌಲ್ಯದ ಎರಡು ಎಳೆಯ ಮಾಂಗಲ್ಯ ಸರ ಇದಾಗಿದ್ದು, ಎರಡು ತಾಳಿ, ಎರಡು ಗುಂಡುಗಳು, ಒಂದು ಹವಳವಿರುವ ಸುಮಾರು 40 ಗ್ರಾಂ ತೂಕದ ಸರವಾಗಿತ್ತು ಎಂದು ಶಶಿಯವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ಘಟನೆ ಬಡಾವಣೆಯ 5 ನೇ ತಿರುವಿನಲ್ಲಿರುವ ಖಾಲಿ ನಿವೇಶನದ ಮರದ ಬಳಿ ನಡೆದಿದೆ. ಶಶಿಯವರು ಸೊರಬ ತಾಲೂಕಿನ ಹೊರಬೈಲು ಪ್ರಾಥಮಿಕ ಶಾಲೆಯ ಶಿಕ್ಷಕರಾಗಿದ್ದಾರೆ. ಈ ಸಂಬಂಧಿಸಿದಂತೆ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications