ತೀರ್ಥಹಳ್ಳಿ: 10 ವರ್ಷಗಳ ನಂತರ ವಕೀಲ ವೃತ್ತಿಗೆ ಮರಳಿದ ಕಿಮ್ಮನೆ ರತ್ನಾಕರ್
ಶಿವಮೊಗ್ಗ, ಜುಲೈ.17: 2018ರ ವಿಧಾನಸಭೆ ಚುನಾವಣೆಯಲ್ಲಿ ಗೆದ್ದರೆ ವಿಧಾನಸಭೆಗೆ ಹೋಗುತ್ತೇನೆ. ಸೋತರೆ ವಕೀಲ ವೃತ್ತಿ ಮಾಡುತ್ತೇನೆ ಎಂದು ಹೇಳಿದ್ದ ತೀರ್ಥಹಳ್ಳಿಯ ಮಾಜಿ ಶಾಸಕ ಕಿಮ್ಮನೆ ರತ್ನಾಕರ್ ನುಡಿದ ಮಾತಿನಂತೆ ನಡೆದುಕೊಳ್ಳಲು ಸಿದ್ಧತೆ ನಡೆಸಿದ್ದಾರೆ.
ತೀರ್ಥಹಳ್ಳಿ ಕ್ಷೇತ್ರದ ಜನರು ಕಿಮ್ಮನೆರತ್ನಾಕರ್ ಅವರನ್ನು ಎರಡು ಅವಧಿಗೆ ಆಯ್ಕೆ ಮಾಡಿದಾಗ ಅವರು ಮಾಡುತ್ತಿದ್ದ ತಮ್ಮ ವಕೀಲ ವೃತ್ತಿಯನ್ನು ಬಿಟ್ಟು ಜನಸೇವೆ ಹಾಗೂ ಕ್ಷೇತ್ರದ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದ್ದರು.
ಚುನಾವಣೆಯಲ್ಲಿ ಸೋತ ನಂತರ ಇದೀಗ ಕೊಟ್ಟ ಮಾತಿನಂತೆ ತಮ್ಮ ವಕೀಲ ವೃತ್ತಿಯನ್ನು ಮುಂದುವರೆಸುವ ಸಲುವಾಗಿ ಕಚೇರಿಯನ್ನು ಸ್ವತಃ ಅವರೇ ಶುಚಿಗೊಳಿಸಿದ್ದಾರೆ.

ಕಿಮ್ಮನೆ ರತ್ನಾಕರ್ 10 ವರ್ಷಗಳ ನಂತರ ಪ್ರಾಕ್ಟೀಸ್ ಕೈಗೆತ್ತಿಕೊಂಡಿದ್ದಾರೆ. ಕಳೆದ ಎರಡು ದಿನಗಳಿಂದ ತೀರ್ಥಹಳ್ಳಿಯ ತಮ್ಮ ಕಚೇರಿಯಲ್ಲಿ ಕೆಲಸ ಆರಂಭಿಸಿದ್ದಾರೆ. ಶಾಸಕರಾಗುವ ಮೊದಲು ವಕೀಲಿಕೆಯಿಂದಲೇ ಕಿಮ್ಮನೆ ತಾಲೂಕಿನಾದ್ಯಂತ ಜನಮನ್ನಣೆ ಗಳಿಸಿದ್ದರು.
ಬಡವರು ಕೊಟ್ಟಷ್ಟು ಶುಲ್ಕ ಪಡೆದು ವಾದ ಮಾಡುವ ಮೂಲಕ ಗಮನ ಸೆಳೆದಿದ್ದರು. ಅನಂತರ ಶಾಸಕರಾಗಿ 10 ವರ್ಷಗಳ ಕಾಲ ವಿಧಾನಸೌಧದ ಅನುಭವದ ಬಳಿಕ ಕಿಮ್ಮನೆ ರತ್ನಾಕರ್ ಕೋರ್ಟ್ನತ್ತ ಮುಖ ಮಾಡುತ್ತಿರುವುದು ವಿಶೇಷ.
ಹೈ ಕೋರ್ಟ್ನತ್ತ ಆಸಕ್ತಿ
ಪುನಃ ತೀರ್ಥಹಳ್ಳಿ ಕೋರ್ಟ್ನಲ್ಲಿ ಪ್ರಾಕ್ಟೀಸ್ ಮಾಡಿದರೆ ತೊಂದರೆ ಉಂಟಾಗುತ್ತದೆ. ಕಕ್ಷಿದಾರನ ಪರವಾಗಿ ವಾದ ಮಾಡುವುದನ್ನು ಕೆಲವರು ರಾಜಕೀಯ ದೃಷ್ಟಿಕೋನದಿಂದ ನೋಡುವ ಅಪಾಯವಿದೆ. ಹಾಗಾಗಿ ಸ್ಥಳೀಯ ಕೋರ್ಟ್ನಲ್ಲಿ ವಾದ ಮಾಡದಿರಲು ಕಿಮ್ಮನೆ ನಿರ್ಧರಿಸಿದ್ದು, ಹೈ ಕೋರ್ಟ್ನಲ್ಲಿ ಪ್ರಾಕ್ಟೀಸ್ ಮುಂದುವರಿಸಲು ಉತ್ಸುಕರಾಗಿದ್ದಾರೆ ಎನ್ನಲಾಗಿದೆ.












Click it and Unblock the Notifications