ದಿಯೋಘರ್ ವಿಮಾನ ನಿಲ್ದಾಣಕ್ಕೆ ಅತಿಕ್ರಮ ಪ್ರವೇಶ: ನಿಶಿಕಾಂತ್ ದುಬೆ, ಮನೋಜ್ ತಿವಾರಿ ವಿರುದ್ಧ ಎಫ್ಐಆರ್
ರಾಂಚಿ ಸೆಪ್ಟೆಂಬರ್ 3: ಜಾರ್ಖಂಡ್ನ ದಿಯೋಘರ್ ವಿಮಾನ ನಿಲ್ದಾಣದಲ್ಲಿ ತಮ್ಮ ಚಾರ್ಟರ್ಡ್ ಫ್ಲೈಟ್ ಅನ್ನು ರಾತ್ರಿ ಟೇಕ್ಆಫ್ಗೆ ಒತ್ತಾಯಿಸಿದ್ದಾರೆಂದು ಬಿಜೆಪಿ ಸಂಸದರಾದ ನಿಶಿಕಾಂತ್ ದುಬೆ, ಮನೋಜ್ ತಿವಾರಿ ಮತ್ತು ಇತರ ಏಳು ಮಂದಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ವಿಮಾನ ನಿಲ್ದಾಣದ ಡಿಎಸ್ಪಿ ಸುಮನ್ ಅನನ್ ಅವರ ದೂರಿನ ಆಧಾರದ ಮೇಲೆ ಬಿಜೆಪಿ ನಾಯಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ನಿಶಿಕಾಂತ್ ದುಬೆ, ಮನೋಜ್ ತಿವಾರಿ ಮತ್ತು ವಿಮಾನ ನಿಲ್ದಾಣದ ನಿರ್ದೇಶಕರು ಸೇರಿದಂತೆ ಒಂಬತ್ತು ಜನರ ಮೇಲೆ ಇತರರ ಜೀವ ಅಥವಾ ಸುರಕ್ಷತೆಗೆ ಅಪಾಯ ಮತ್ತು ಕ್ರಿಮಿನಲ್ ಅತಿಕ್ರಮಣದ ಆರೋಪ ಹೊರಿಸಲಾಗಿದೆ.
ಎಫ್ಐಆರ್ ಪ್ರಕಾರ, ಆಗಸ್ಟ್ 31 ರಂದು, ಗೊಡ್ಡಾದ ಲೋಕಸಭಾ ಸಂಸದ ನಿಶಿಕಾಂತ್ ದುಬೆ, ಅವರ ಮಗ ಕನಿಷ್ಕ್ ಕಾಂತ್ ದುಬೆ, ಮಹಿಕಾಂತ್ ದುಬೆ, ಸಂಸದ ಮನೋಜ್ ತಿವಾರಿ, ಮುಖೇಶ್ ಪಾಠಕ್, ದೇವತಾ ಪಾಂಡೆ ಮತ್ತು ಪಿಂಟು ತಿವಾರಿ ಅವರು ಹೆಚ್ಚಿನ ಭದ್ರತೆಯ ಏರ್ ಟ್ರಾಫಿಕ್ ಕಂಟ್ರೋಲ್ (ಎಟಿಸಿ) ಪ್ರವೇಶಿಸಿದರು. ದಿಯೋಘರ್ ವಿಮಾನ ನಿಲ್ದಾಣದಲ್ಲಿ ಅನುಮತಿಯಿಲ್ಲದೆ ತಮ್ಮ ಪ್ರಭಾವವನ್ನು ಬಳಸಿ ತಮ್ಮ ಚಾರ್ಟರ್ಡ್ ವಿಮಾನ ಟೇಕ್ಆಫ್ಗೆ ಅನುಮತಿ ನೀಡುವಂತೆ ಅಧಿಕಾರಿಗಳಿಗೆ ಒತ್ತಡ ಹೇರಿದರು.
ಆದರೆ, ಹೊಸದಾಗಿ ಉದ್ಘಾಟನೆಗೊಂಡ ವಿಮಾನ ನಿಲ್ದಾಣವನ್ನು ರಾತ್ರಿ ಕಾರ್ಯಾಚರಣೆಗೆ ಇನ್ನೂ ಅನುಮತಿಯಿಲ್ಲ. ವಿಮಾನ ನಿಲ್ದಾಣದಲ್ಲಿ ವಿಮಾನ ಸೇವೆಗಳನ್ನು ಪ್ರಸ್ತುತ ಸೂರ್ಯಾಸ್ತದ 30 ನಿಮಿಷಗಳ ಮೊದಲು ಟೇಕ್ಆಫ್ ಆಗಲು(ತೆರಳಲು) ಅನುಮತಿಸಲಾಗುತ್ತದೆ.
ದೂರುದಾರರ ಹೇಳಿಕೆಯ ಪ್ರಕಾರ, ಘಟನೆಯ ದಿನ ಸೂರ್ಯಾಸ್ತದ ಸಮಯ ಸಂಜೆ 6:03 ಆಗಿತ್ತು. ಬಿಜೆಪಿ ನಾಯಕರೊಂದಿಗೆ ಚಾರ್ಟರ್ಡ್ ಫ್ಲೈಟ್ ಸಂಜೆ 6:17ಕ್ಕೆ ಟೇಕಾಫ್ ಆಗಿದೆ.
ತನ್ನ ವಿರುದ್ಧದ ಎಫ್ಐಆರ್ಗೆ ಪ್ರತಿಕ್ರಿಯಿಸಿದ ನಿಶಿಕಾಂತ್ ದುಬೆ ಸುದ್ದಿಗಾರರೊಂದಿಗೆ ಮಾತನಾಡಿ, "ವಿಮಾನ ನಿಲ್ದಾಣ ಪ್ರಾಧಿಕಾರವು ಆಕ್ಷೇಪಿಸಲಿಲ್ಲ. ನಾವು ವಿಮಾನ ನಿಲ್ದಾಣದ ನಿರ್ದೇಶಕರಿಂದ ಅನುಮತಿ ಪಡೆದಿದ್ದೇವೆ, ನಾನು ಪ್ರಕರಣದ ವಿರುದ್ಧ ಹೋರಾಡಲು ಸಿದ್ಧನಿದ್ದೇನೆ, ಘಟನೆಯನ್ನು ನಮ್ಮ ಪರವಾಗಿದೆ'' ಎಂದಿದ್ದಾರೆ.
ಶುಕ್ರವಾರ ರಾತ್ರಿ, ದುಬೆ ಅವರು ದಿಯೋಘರ್ ಜಿಲ್ಲಾ ಮ್ಯಾಜಿಸ್ಟ್ರೇಟ್ (ಡಿಎಂ) ಮಂಜುನಾಥ್ ಭಜಂತ್ರಿ ಅವರೊಂದಿಗೆ ಟ್ವಿಟರ್ ಜಗಳವಾಡಿದರು. ಟ್ವೀಟ್ ಮಾಡಿರುವ ದುಬೆ, "ವಾಯುಯಾನ ನಿಯಮಗಳನ್ನು ಮತ್ತೊಮ್ಮೆ ಅಧ್ಯಯನ ಮಾಡಲು ನಾನು ನಿಮಗೆ ಸಲಹೆ ನೀಡುತ್ತೇನೆ. ಒಬ್ಬ ಐಎಎಸ್ ಅಧಿಕಾರಿಯಾಗಿ, ರಾಷ್ಟ್ರವು ನಿಮ್ಮಿಂದ ಉತ್ತಮವಾದದ್ದನ್ನು ನಿರೀಕ್ಷಿಸುತ್ತದೆ. ಈಗ ಈ ವಿಷಯವು ಸಾಧ್ಯವಿರುವ ಎಲ್ಲ ಹಂತಗಳಲ್ಲಿ ತನಿಖೆಯಲ್ಲಿದೆ, ದಯವಿಟ್ಟು ವಾಯುಯಾನ ಮತ್ತು ವಿಮಾನ ನಿಲ್ದಾಣದ ನಿಯಮಗಳನ್ನು ಓದಿದ ನಂತರ ಮಾತ್ರ ಹೆಚ್ಚಿನ ಕಾಮೆಂಟ್ ಮಾಡಿ" ಎಂದಿದ್ದಾರೆ.