ಜಾರ್ಖಂಡ್: ಬಿಜೆಪಿ ಜೊತೆ ಜೆವಿಎಂ ವೀಲಿನಕ್ಕೆ ಮುಹೂರ್ತ ನಿಗದಿ
ರಾಂಚಿ, ಫೆಬ್ರವರಿ 11: ಸರ್ಕಾರ ರಚನೆಯಾದ ಒಂದು ತಿಂಗಳೊಳಗೇ ಜಾರ್ಖಂಡ್ನ ಸಮ್ಮಿಶ್ರ ಸರ್ಕಾರದಲ್ಲಿ ಬಿರುಕು ಉಂಟಾಗಿದ್ದು ನೆನಪಿರಬಹುದು. ಮುಖ್ಯಮಂತ್ರಿ ಹೇಮಂತ್ ಸೊರೆನ್ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಜಾರ್ಖಂಡ್ ವಿಕಾಸ್ ಮೋರ್ಚಾ ಪ್ರಜಾತಾಂತ್ರಿಕ (ಜೆವಿಎಂ) ಹಿಂಪಡೆದುಕೊಂಡಿತ್ತು. ಈಗ ಬಿಜೆಪಿ ಜೊತೆ ವಿಲೀನವಾಗಲು ಜೆವಿಎಂ ಸಿದ್ಧವಾಗಿದೆ.
ಜಾರ್ಖಂಡ್ ವಿಕಾಸ್ ಮೋರ್ಚಾ(ಪ್ರಜಾತಾಂತ್ರಿಕ) ಹಾಗೂ ಭಾರತೀಯ ಜನತಾ ಪಕ್ಷದ ವಿಲೀನ ಫೆಬ್ರವರಿ 17ರಂದು ನಡೆಯಲಿದೆ ಎಂದು ಜೆವಿಎಂ ಪಕ್ಷದ ಮುಖ್ಯಸ್ಥ ಬಾಬುಲಾಲ್ ಮರಾಂಡಿ ಮಂಗಳವಾರದಂದು ತಿಳಿಸಿದರು.
ಜಾರ್ಖಂಡ್ ಫಲಿತಾಂಶ: ಬಿಜೆಪಿ ಮಿತ್ರಪಕ್ಷಗಳಿಂದ ಶೂನ್ಯ ಸಂಪಾದನೆ
ಬಿಜೆಪಿ ಜೊತೆ ಜೆವಿಎಂ ವಿಲೀನ ಕುರಿತಂತೆ ಪಕ್ಷದ ಕಾರ್ಯಕರ್ತರು, ಮುಖಂಡರ ಜೊತೆ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗಿದೆ. ಫೆಬ್ರವರಿ 17ರಂದು ನಡೆಯುವ ಕಾರ್ಯಕ್ರಮದಲ್ಲಿ ಉಭಯ ಪಕ್ಷಗಳ ಕಾರ್ಯಕರ್ತರ ಸಮ್ಮುಖದಲ್ಲಿ ಪಕ್ಷಗಳ ವಿಲೀನವಾಗಲಿದೆ ಎಂದು ಬಾಬುಲಾಲ್ ಹೇಳಿದರು.
ಜೆ. ಪಿ ನಡ್ಡಾ ಜೊತೆ ಬಾಬುಲಾಲ್ ಭೇಟಿ
ದೆಹಲಿಯಲ್ಲಿ ಬಿಜೆಪಿ ಅಧ್ಯಕ್ಷ ಜೆ. ಪಿ ನಡ್ಡಾ ಅವರನ್ನು ಭೇಟಿ ಮಾಡಿದ ಬಳಿಕ ಈ ಬೆಳವಣಿಗೆ ನಡೆದಿದೆ. ಕಳೆದ ವಾರ ಜೆವಿಎಂ ಶಾಸಕ ಪ್ರದೀಪ್ ಯಾದವ್ ಅವರು ಕಾಂಗ್ರೆಸ್ ವರಿಷ್ಠರಾದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ್ದರು. ಇದಾದ ಬಳಿಕ ಪ್ರದೀಪ್ ರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ. ಇದೇ ರೀತಿ ಬಂಧು ಟಿರ್ಕೆ ಅವರಿಗೂ ನೋಟಿಸ್ ನೀಡಲಾಗಿದೆ. ಇದೇ ಕಾರಣಕ್ಕೆ
ಜೆವಿಎಂ ಮೂರು ಶಾಸಕ ಸ್ಥಾನ ಗಳಿಸಿತ್ತು
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜೆವಿಎಂ ಮೂರು ಸ್ಥಾನ ಗಳಿಸಿತ್ತು. ಬಾಬುಲಾಲ್ ಮರಾಂಡಿ ಅಲ್ಲದೆ ಪ್ರದೀಪ್ ಯಾದವ್ ಹಾಗೂ ಬಂಧು ಟಿರ್ಕೆ ಇನ್ನಿಬ್ಬರು ಶಾಸಕರು. ಪ್ರದೀಪ್ ಹಾಗೂ ಬಂಧು ಸೆಳೆಯುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದ್ದು, ಜೆವಿಎಂನ ಏಕೈಕ ಶಾಸಕ ಬಾಬುಲಾಲ್ ಅವರು ಪಕ್ಷವನ್ನೇ ಬಿಜೆಪಿ ಜೊತೆಗೆ ವಿಲೀನಗೊಳಿಸುತ್ತಿದ್ದಾರೆ.
ಬೆಂಬಲ ವಾಪಸ್ ಪಡೆದ ಪತ್ರ
'ನಮ್ಮ ಪಕ್ಷವಾದ ಜಾರ್ಖಂಡ್ ವಿಕಾಸ್ ಮೋರ್ಚಾ (ಪ್ರಜಾತಾಂತ್ರಿಕ) 2019ರ ಡಿ. 24ರಂದು ನಿಮ್ಮ (ಹೇಮಂತ್ ಸೊರೆನ್) ನಾಯಕತ್ವದ ಸರ್ಕಾರಕ್ಕೆ ಷರತ್ತುರಹಿತ ಬೆಂಬಲ ನೀಡುವ ಪತ್ರವನ್ನು ಸಲ್ಲಿಸಿತ್ತು. ಆದರೆ ಯುಪಿಎ ಮೈತ್ರಿಕೂಟದ ಭಾಗವಾದ ಕಾಂಗ್ರೆಸ್ ನಮ್ಮ ಶಾಸಕರನ್ನು ಸೆಳೆಯಲು ಪ್ರಯತ್ನಿಸುತ್ತಿದೆ. ಅದರ ಕುರಿತು ಇಂದಿನ ಪ್ರತಿಷ್ಠಿತ ಪತ್ರಿಕೆಯಲ್ಲಿ ವರದಿಯಾಗಿದೆ. ಹೀಗಾಗಿ ನಮ್ಮ ಪಕ್ಷ ತನ್ನ ಬೆಂಬಲವನ್ನು ಪರಾಮರ್ಶಿಸಿದೆ ಹಾಗೂ ನಿಮ್ಮ ನಾಯಕತ್ವದ ಯುಪಿಎ ಸರ್ಕಾರಕ್ಕೆ ನೀಡಿರುವ ಬೆಂಬಲವನ್ನು ವಾಪಸ್ ಪಡೆದುಕೊಳ್ಳುತ್ತಿದೆ' ಎಂದು ಪತ್ರದಲ್ಲಿ ಬಾಬುಲಾಲ್ ಹೇಳಿದ್ದಾರೆ.
ಜಾರ್ಖಂಡ್: ಬಿಜೆಪಿ ಜೊತೆ ಜೆವಿಎಂ ವೀಲಿನಕ್ಕೆ ಮುಹೂರ್ತ ನಿಗದಿ
ರಾಜ್ಯದಲ್ಲಿ ಪ್ರಮುಖ ವಿರೋಧಪಕ್ಷವಾಗಿರುವ ಬಿಜೆಪಿ ಜತೆ ಜೆವಿಎಂ ವಿಲೀನಗೊಳ್ಳಲಿದ್ದು, ಜೆವಿಎಂ ಸ್ಥಾಪಕ ಬಾಬುಲಾಲ್ ಘೋಷಿಸಿದ್ದಾರೆ. ಪಕ್ಷವಿರೋಧಿ ಚಟುವಟಿಕೆ ನಡೆಸಿರುವ ಹಿನ್ನೆಲೆಯಲ್ಲಿ ಪ್ರದೀಪ್ ಯಾದವ್ ಅವರನ್ನು ಶಾಸಕಾಂಗ ಪಕ್ಷದ ನಾಯಕನ ಸ್ಥಾನದಿಂದ ಕಿತ್ತುಹಾಕಲಾಗಿದೆ.
ಆದರೆ ಜೆವಿಎಂ ತನ್ನ ಬೆಂಬಲ ಹಿಂದಕ್ಕೆ ಪಡೆದುಕೊಂಡರೂ ಹೇಮಂತ್ ಸೊರೆನ್ ಸರ್ಕಾರಕ್ಕೆ ಯಾವುದೇ ಧಕ್ಕೆ ಆಗುವುದಿಲ್ಲ. 81 ಸದಸ್ಯರ ಸದನದಲ್ಲಿ ಸರ್ಕಾರ 47 ಶಾಸಕರ ಬಲ ಹೊಂದಿದೆ. 25 ಸದಸ್ಯರನ್ನು ಹೊಂದಿರುವ ಬಿಜೆಪಿ, ಶಾಸಕಾಂಗ ಪಕ್ಷದ ನಾಯಕನ ಹೆಸರನ್ನು ಇನ್ನೂ ಘೋಷಿಸಿಲ್ಲ.