ರಾಮನಗರ: ಸ್ನೇಹಿತನ ಹೆಂಡತಿ ಮೇಲೆ ಸಾಮೂಹಿಕ ಅತ್ಯಾಚಾರ
ರಾಮನಗರ, ಜುಲೈ.02: ಮೂರು ಜನ ಕಾಮುಕರು ಸೇರಿ ಸ್ನೇಹಿತನ ಹೆಂಡತಿ ಮೇಲೆ ಅತ್ಯಾಚಾರವೆಸಗಿರುವ ಘಟನೆ ಮಾಗಡಿ ತಾಲೂಕಿನ ಕುದೂರು ಪೊಲೀಸ್ ಠಾಣಾ ವ್ಯಾಪ್ತಿಯ ವಳ್ಳಿಗನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಸ್ನೇಹಿತ ಮನೆಯಲ್ಲಿ ಇಲ್ಲದಿರುವುದನ್ನು ತಿಳಿದುಕೊಂಡ ಕಾಮುಕರು ಸ್ನೇಹಿತನ ಮನೆಗೆ ಏಕಾಏಕಿ ನುಗ್ಗಿ, ಸ್ನೇಹಿತನ ಹೆಂಡತಿ ಮೇಲೆ ಮನಬಂದಂತೆ ಹಲ್ಲೆ ನಡೆಸಿ, ಮನೆಯಿಂದ ಬಲವಂತವಾಗಿ ಎಳೆದೊಯ್ದು ಪಕ್ಕದಲ್ಲೇ ಇದ್ದ ತೋಟಕ್ಕೆ ಕರೆದುಕೊಂಡು ಹೋಗಿ ಆತ್ಯಾಚಾರ ನಡೆಸಿದ್ದಾರೆ. ಕೊನೆಗೆ ಆಕೆಯನ್ನು ಮನೆಯ ಸಮೀಪವೇ ಬಿಟ್ಟು ಪರಾರಿಯಾಗಿದ್ದಾರೆ.
ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ಥೆ ಪತಿ ಆಟೋಚಾಲಕನಾಗಿದ್ದು, ಆಕೆಯ ಜೊತೆ ಜಗಳವಾಡಿಕೊಂಡು ಮೂರು ತಿಂಗಳಿಂದ ಮನೆಗೆ ಬರುತ್ತಿಲಿಲ್ಲ. ಈ ಹಿನ್ನೆಲೆಯಲ್ಲಿ ಸಂತ್ರಸ್ಥೆ ಗ್ರಾಮದ ಹೊರಭಾಗದಲ್ಲಿರುವ ತೋಟದ ಮನೆಯಲ್ಲಿ ಆರು ವರ್ಷದ ಮಗನ ಜೊತೆಯಲ್ಲಿ ವಾಸವಾಗಿದ್ದಳು.

ಈ ಎಲ್ಲಾ ವಿಷಯ ತಿಳಿದುಕೊಂಡಿದ್ದ ಕಾಮುಕರು ಶನಿವಾರದ ರಾತ್ರಿ ಸಾಮೂಹಿಕ ಅತ್ಯಾಚಾರ ನಡೆಸಿ, ತಲೆ ಮರೆಸಿಕೊಂಡಿದ್ದಾರೆ. ಅತ್ಯಾಚಾರ ಎಸಗಿದವರು ಪುರುಷೋತ್ತಮ್, ಮಂಜು, ಗಂಗರಾಜು(ಕರಡಿ) ಎಂದು ತಿಳಿದು ಬಂದಿದೆ.

ಅತ್ಯಾಚಾರಕ್ಕೆ ಒಳಗಾದ ಮಹಿಳೆಗೆ ಮಾಗಡಿ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದು, ಈ ಸಂಬಂಧ ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications