ಕಡಲೆ ಕಾಯಿ ಹಂಚಿ ಹುಟ್ಟು ಹಬ್ಬ ಆಚರಿಸಿಕೊಂಡ ವಾಟಾಳ್!
ರಾಮನಗರ, ಸೆಪ್ಟೆಂಬರ್ 07; ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ, ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಮಂಗಳವಾರ ಹುಟ್ಟು ಹಬ್ಬ ಆಚರಿಸಿಕೊಂಡರು. ಪೋಲಿಸರ ಬೂಟಿನಿಂದ ಏಟು ತಿಂದ ದಿನವನ್ನೇ ತಮ್ಮ ಜನ್ಮ ದಿನಾಚರಣೆ ದಿನವಾಗಿ ವಾಟಾಳ್ ಆಚರಿಸಿಕೊಂಡು ಬರುತ್ತಿದ್ದಾರೆ.
ಕನ್ನಡ ಪರವಾದ ಹೋರಾಟಗಳನ್ನೇ ತಮ್ಮ ಉಸಿರಾಗಿಸಿಕೊಂಡಿರುವ ವಿಶಿಷ್ಟ ವ್ಯಕ್ತಿತ್ವ ಹೊಂದಿರುವ ವಾಟಾಳ್ ನಾಗರಾಜ್ ಏನೇ ಮಾಡಿದರು ಅದು ವಿಭಿನ್ನ. ಅದು ಹೋರಾಟವಾಗಿರಲಿ ಅಥವಾ ತಮ್ಮ ಜನ್ಮ ದಿನಾಚರಣೆಯೇ ಯಾವುದೇ ಆಗಲಿ ಅದರಲ್ಲಿ ವಿಶಿಷ್ಟತೆ ಇದ್ದೇ ಇರುತ್ತದೆ.
ಕನ್ನಡ ಪರವಾದ ಹೋರಾಟದ ಸಮಯದಲ್ಲಿ ಪೋಲಿಸರು ಪ್ರತಿಭಟನೆ ಹತ್ತಿಕ್ಕಲು ವಾಟಾಳ್ ನಾಗರಾಜ್ ಬಂಧಿಸಿ ಬೂಟ ಕಾಲಿನಿಂದ ಒದ್ದ ದಿನವನ್ನೇ ತಮ್ಮ ಜನ್ಮ ದಿನವನ್ನಾಗಿ ಆಚರಣೆ ಮಾಡಿಕೊಂಡು ಬರುತ್ತಿದ್ದಾರೆ.

ಮಂಗಳವಾರ ವಾಟಾಳ್ ನಾಗರಾಜ್ ತಮ್ಮ ಹುಟ್ಟು ಹಬ್ಬವನ್ನು ರಾಮನಗರದ ಬಸ್ ನಿಲ್ದಾಣದಲ್ಲಿ ಜನರಿಗೆ ಕಡಲೆ ಕಾಯಿ ವಿತರಿಸುವ ಮೂಲಕ ವಿನೂತನವಾಗಿ ಆಚರಿಸಿಕೊಂಡರು. ಹಲವು ಕನ್ನಡ ಪರ ಹೋರಾಟಗಾರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಮಾಧ್ಯಮಗಳ ಜೊತೆ ಮಾತನಾಡಿದ ವಾಟಾಳ್ ನಾಗರಾಜ್, "1962ರ ಸೆಪ್ಟೆಂಬರ್ 7ರಂದು ಬೆಂಗಳೂರಿನ ಕೆಂಪೇಗೌಡ ರಸ್ತೆಯ ಅಲಂಕಾರ್ ಚಿತ್ರಮಂದಿರಕ್ಕೆ ನುಗ್ಗಿದೆ. ಹಿಂದಿ ಚಿತ್ರಗಳ ವಿರುದ್ದ ತೀವ್ರ ಹೋರಾಟ ನಡೆಸಿದೆ. ಸ್ಕ್ರೀನ್ಗೆ ಬೆಂಕಿ ಇಟ್ಟು ಗಲಾಟೆ ಮಾಡಿದೆ. ಹೀಗಾಗಿ ನನ್ನನ್ನು ಬಂಧಿಸಿದ್ದರು. ಅಂದು ಬೂಟ್ ಏಟು ಬಿದ್ದಿತ್ತು. ಬೂಟು ಏಟು ಬಿದ್ದ ದಿನವನ್ನೇ ನನ್ನ ಜನ್ಮದಿನಾಚರಣೆಯನ್ನಾಗಿ ಆಚರಣೆ ಮಾಡಿಕೊಳ್ಳುತ್ತಿದ್ದೇನೆ" ಎಂದು ಹೇಳಿದರು.
ಭಾಷೆಯ ಕರ್ನಾಟಕ ಬೇಕು; ಜನರಿಗೆ ಕಡಲೆ ಕಾಯಿ ಹಂಚುವ ಮೂಲಕ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್, "ಜಾತಿಯ ಕರ್ನಾಟಕ ಬೇಡ ಭಾಷೆಯ ಕರ್ನಾಟಕ ಬೇಕು" ಎಂದುರು.

"ಹಲವು ಮಹನೀಯರ ಹೋರಾಟದ ಕರ್ನಾಟಕ ಏಕೀಕರಣ ತನ್ನ ಆಶಯವನ್ನು ಕಳೆದುಕೊಳ್ಳುತ್ತಿದೆ. ರಾಜಕೀಯದಲ್ಲಿ ಜಾತಿ, ಅಧಿಕಾರದಲ್ಲಿ ಜಾತಿ, ಎಲ್ಲೆಡೆ ಜಾತಿ ವ್ಯಾಮೋಹ ತುಂಬಿ ತುಳುಕುತ್ತಿದೆ ಇದು ಹೀಗೆ ಮುಂದುವರೆದರೆ ಕರ್ನಾಟಕಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ" ಎಂದು ವಾಟಾಳ್ ಕಳವಳ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರಕ್ಕೆ ಅಸಕ್ತಿ ಇಲ್ಲ; "ಮೇಕೆದಾಟು ನೀರಾವರಿ ಯೋಜನೆ ಅನುಷ್ಟಾನಕ್ಕೆ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಆಸಕ್ತಿ ಇಲ್ಲ. ಮೋದಿಯವರನ್ನು ಪ್ರಶ್ನಿಸುವ ಶಕ್ತಿ ಹಿಂದಿನ ಸಿಎಂ ಯಡಿಯೂರಪ್ಪಗೆ ಇರಲಿಲ್ಲ. ಹಾಗೆ ಇಂದಿನ ಸಿಎಂ ಬಸವರಾಜ ಬೊಮ್ಮಯಿಗೂ ಇಲ್ಲ" ಎಂದು ವಾಟಾಳ್ ಆಕ್ರೋಶ ವ್ಯಕ್ತಪಡಿಸಿದರು.
"ರಾಜ್ಯ ಸರ್ಕಾರದ ಸಚಿವ ಮುನಿರತ್ನ ಮೂಲತಃ ಆಂಧ್ರ ಪ್ರದೇಶದವರು ಅವರು ತಮಿಳುನಾಡಿನ ಅಣ್ಣಾಮಲೈ ಪರವಾಗಿ ಚುನಾವಣಾ ಪ್ರಚಾರ ಮಾಡಿದ್ದರು. ಅತಂಹವರಿಗೆ ನಮ್ಮ ರಾಜ್ಯದಲ್ಲಿ ಮಂತ್ರಿಸ್ಥಾನ ಕೊಟ್ಟಿದ್ದಾರೆ. ಇದು ಆಗಬಾರದಿತ್ತು, ಕೂಡಲೇ ಮುನಿರತ್ನ ತಮ್ಮ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು" ಎಂದು ಒತ್ತಾಯಿಸಿದರು.
"ಇನ್ನೂ ಕೇರಳದ ರಾಜೀವ್ ಚಂದ್ರಶೇಖರ್ಗೆ ರಾಜ್ಯಸಭಾ ಸ್ಥಾನ ಕೊಟ್ಟಿದ್ದಾರೆ. ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ಗೆ ನಮ್ಮ ರಾಜ್ಯದಿಂದ ರಾಜ್ಯಸಭೆಗೆ ಅವಕಾಶ ಕೊಟ್ಟಿದ್ದಾರೆ. ಈ ಕ್ರಮ ಸರಿಯಲ್ಲ. ಮುಂದಿನ ದಿನಗಳಲ್ಲಿ ಕರ್ನಾಟಕದವರನ್ನೇ ರಾಜ್ಯಸಭೆಗೆ ಆಯ್ಕೆ ಮಾಡಬೇಕು" ಎಂದು ವಾಟಾಳ್ ನಾಗರಾಜ್ ಒತ್ತಾಯಿಸಿದರು.












Click it and Unblock the Notifications