ಧರಣಿ ಕೈಬಿಡದ ಕಾರ್ಮಿಕರು, ಮತ್ತೆ ಲಾಕೌಟ್ ಘೋಷಿಸಿದ ಬಿಡದಿ ಟೊಯೊಟಾ
ರಾಮನಗರ, ನವೆಂಬರ್ 24: ಬಿಡದಿಯಲ್ಲಿರುವ ಟೊಯೊಟಾ ಕಾರು ತಯಾರಿಕಾ ಘಟಕದ ಆಡಳಿತ ಮಂಡಳಿ ಹಾಗೂ ಕಾರ್ಮಿಕ ಸಂಘಟನೆ ನಡುವಿನ ಬಿಕ್ಕಟ್ಟು ಇನ್ನಷ್ಟು ಹೆಚ್ಚಾಗಿದೆ. ಸರ್ಕಾರದ ಮಧ್ಯಪ್ರವೇಶದ ನಂತರವೂ ಸಮಸ್ಯೆಗೆ ಪರಿಹಾರ ದೊರೆತಿಲ್ಲ. ಆಡಳಿತ ಮಂಡಳಿ ವರ್ತನೆ ಖಂಡಿಸಿ ಕಾರ್ಮಿಕರು ಕಳೆದ 16 ದಿನಗಳಿಂದ ಧರಣಿ ನಡೆಸುತ್ತಿದ್ದು, ಕಂಪನಿ ಎರಡನೇ ಬಾರಿ ಲಾಕ್ ಔಟ್ ಘೋಷಣೆ ಮಾಡಿದೆ.
ಕಾರ್ಮಿಕರು ಅಗತ್ಯ ಸಂಖ್ಯೆಯಲ್ಲಿ ಕೆಲಸಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ನ.23ರಿಂದ ಅನಿರ್ದಿಷ್ಟಾವಧಿ ಕಾರ್ಖಾನೆಯನ್ನು ಲಾಕ್ ಔಟ್ ಮಾಡಿರುವುದಾಗಿ ಟೊಯೊಟಾ ಕಿರ್ಲೋಸ್ಕರ್ ಕಂಪನಿಯ ಆಡಳಿತ ಮಂಡಳಿ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ. ಕಾರ್ಮಿಕರ ಮುಷ್ಕರ ಮತ್ತು ನವೆಂಬರ್ 19ರಿಂದ ಜಾರಿಗೆ ಬರುವಂತೆ ಟಿಕೆಎಂ ಆಡಳಿತವು ಘೋಷಿಸಿದ್ದ ಕಾನೂನುಬದ್ಧ ಲಾಕೌಟ್ ಎರಡನ್ನೂ ಕಾರ್ಮಿಕ ಇಲಾಖೆ ನಿಷೇಧಿಸಿತ್ತು. ಟಿಕೆಎಂನಲ್ಲಿ ಕಾರ್ಯಾಚರಣೆ ಪುನರಾರಂಭಿಸಲು ಸೂಚಿಸಲಾಗಿತ್ತು. ಮುಂದೆ ಓದಿ...

ಕಾರ್ಮಿಕ ಸಂಘಟನೆ ಮೇಲೆ ಆಡಳಿತ ಮಂಡಳಿ ಆರೋಪ
ಸರ್ಕಾರದ ನಿರ್ದೇಶನದ ಪರಿಣಾಮವಾಗಿ ಟಿಕೆಎಂ ಆಡಳಿತವು ನ.19 ರಿಂದ ಲಾಕೌಟ್ ಹಿಂತೆಗೆದುಕೊಂಡಿತ್ತು. ನಂತರ ಕೆಲ ಸದಸ್ಯರು ತಮ್ಮ ಶಿಫ್ಟ್ ವೇಳಾಪಟ್ಟಿ ಪ್ರಕಾರ ಕೆಲಸ ಮಾಡಲು ಮುಂದಾಗಿದ್ದಾರೆ. ಆದರೆ ಬಹುಪಾಲು ಕಾರ್ಮಿಕರು ತಮ್ಮ ಮುಷ್ಕರವನ್ನು ಮುಂದುವರಿಸುತ್ತಿದ್ದಾರೆ ಎಂದು ಕಂಪನಿ ಆರೋಪಿಸಿದೆ.
ಸ್ಥಾವರ ಕಾರ್ಯಾಚರಣೆಗಳು ಸುಗಮವಾಗಿ ನಡೆಯಲು, ಪ್ರತಿ ಪಾಳಿಯಲ್ಲಿ ಕನಿಷ್ಠ 90%ರಷ್ಟು ಉದ್ಯೋಗಿಗಳ ಅಗತ್ಯವಿರುತ್ತದೆ ಮತ್ತು ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಉತ್ಪಾದನಾ ಚಟುವಟಿಕೆಯನ್ನು ಮುಂದುವರೆಸುವುದು ಕಾರ್ಯಸಾಧ್ಯವಲ್ಲ ಎಂದು ಕಂಪನಿ ತಿಳಿಸಿದೆ.

ನಿಲ್ಲುತ್ತಿಲ್ಲ ಕಾರ್ಮಿಕ-ಆಡಳಿತ ಮಂಡಳಿ ಜಟಾಪಟಿ
ಕೆಲವು ಸದಸ್ಯರು ಅಕ್ರಮ ಮುಷ್ಕರವನ್ನು ಪ್ರಚೋದಿಸುತ್ತಿದ್ದಾರೆ. ಕೆಲಸಕ್ಕೆ ಮರಳಲು ಬಯಸುವ ಇತರ ಸದಸ್ಯರನ್ನು ಅಥವಾ ಈಗಾಗಲೇ ಕೆಲಸ ಮಾಡುತ್ತಿರುವ ಸದಸ್ಯರನ್ನು ಪ್ರಚೋದಿಸುತ್ತಿದ್ದಾರೆ ಎಂದು ಆರೋಪಿಸಿದೆ. ಅಲ್ಲದೇ ಅವರು ಕಂಪನಿಯ ವಿರುದ್ಧ ಅವಹೇಳನಕಾರಿ ಮತ್ತು ಪ್ರಚೋದನಕಾರಿ ಹೇಳಿಕೆ ನೀಡುವ ಭಾಷಣ ಮಾಡುತ್ತಿದ್ದಾರೆ. ಕಂಪನಿಯ ಅಧಿಕಾರಿಗಳನ್ನು ದೂಷಿಸುವುದಲ್ಲದೆ ಅವರಿಗೆ ಬೆದರಿಕೆ ಹಾಕುವುದನ್ನು ಸಹ ಮಾಡುತ್ತಿದ್ದಾರೆ. ಟಿಕೆಎಂ ಮ್ಯಾನೇಜ್ ಮೆಂಟ್ ಲೌಕೌಟ್ ಹಿಂತೆಗೆದುಕೊಂಡ ನಂತರ ಪ್ರತಿದಿನ ಸುಮಾರು 400 ರಿಂದ 500 ಸದಸ್ಯರು ತಮಗೆ ಗೊತ್ತುಪಡಿಸಿದ ನಿಗದಿತ ಸಮಯವನ್ನು ಮೀರಿ ಕಂಪನಿಗೆ ಬಲವಂತವಾಗಿ ನುಗ್ಗಲು ಪ್ರಯತ್ನಿಸುತ್ತಿದ್ದಾರೆ ಎಂದು ತಿಳಿಸಿದೆ.

ಮತ್ತೊಮ್ಮೆ ಲಾಕೌಟ್ ಘೋಷಿಸಿದ ಟೊಯೊಟಾ
ಕಾರ್ಮಿಕ ಸಂಘಟನೆಯ ಸದಸ್ಯರ ಪ್ರತಿಕೂಲ ಚಟುವಟಿಕೆಗಳು ಕಾರ್ಖಾನೆಯ ಆವರಣದ ಸುತ್ತಲೂ ಆತಂಕದ ಪರಿಸ್ಥಿತಿ ನಿರ್ಮಿಸಿದೆ. ಕಂಪನಿಯ ಇತರೆ ಉದ್ಯೋಗಿಗಳಿಗೆ ಅಸುರಕ್ಷಿತ ವಾತಾವರಣ ಏರ್ಪಡುತ್ತಿದೆ. ಸ್ಥಾವರದಲ್ಲಿ ಸುರಕ್ಷಿತ ವಾತಾವರಣ ಹದಗೆಡುತ್ತಿದ್ದು, ಈ ಕಾರಣವಾಗಿ ಟಿಕೆಎಂ ಮ್ಯಾನೇಜ್ ಮೆಂಟ್ ನವೆಂಬರ್ 23ರಿಂದ ಬಿಡದಿಯಲ್ಲಿನ ತನ್ನ ಸ್ಥಾವರದಲ್ಲಿ ಮತ್ತೊಮ್ಮೆ ಲಾಕೌಟ್ ಮಾಡುವ ದಾರಿ ಬಿಟ್ಟು ಬೇರೆ ದಾರಿ ಇಲ್ಲದಂತಾಗಿದೆ.

ಅಗತ್ಯ ಕ್ರಮಕ್ಕೆ ಮುಂದಾಗಿರುವುದಾಗಿ ಟಿಕೆಎಂ ಸ್ಪಷ್ಟನೆ
ಪರಸ್ಪರ ನಂಬಿಕೆ ಮತ್ತು ಗೌರವದಿಂದ ಸದಸ್ಯರೊಂದಿಗೆ ಮುಕ್ತ ಸಂವಹನದ ಮೂಲಕ ಪರಿಸ್ಥಿತಿಗೆ ತ್ವರಿತ ಪರಿಹಾರ ಕಂಡುಹಿಡಿಯಲು ಟಿಕೆಎಂ ಬಯುಸುತ್ತದೆ. ದುರದೃಷ್ಟವಶಾತ್, ಈ ಅಕ್ರಮ ಮುಷ್ಕರವನ್ನು ಕೊನೆಗೊಳಿಸಲು ಅಗತ್ಯವಾದ, ನಿರೀಕ್ಷಿತ ನಡವಳಿಕೆ ಕಾರ್ಮಿಕ ಸಂಘಟನೆ ಸದಸ್ಯರಿಂದ ವ್ಯಕ್ತವಾಗಿಲ್ಲ. ಇದರಿಂದ ಟಿಕೆಎಂ ಕಾನೂನಿನ ಪ್ರಕಾರ ಅಗತ್ಯ ಕ್ರಮಗಳನ್ನು ಪ್ರಾರಂಭಿಸಲು ಉದ್ದೇಶಿಸಿದೆ ಎಂದು ಕಂಪನಿ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಕಾರ್ಖಾನೆಯು ಕಾರ್ಮಿಕ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ ಎಂದು ಆರೋಪಿಸಿ ಬಿಡದಿಯ ಕಾರು ತಯಾರಿಕಾ ಸಂಸ್ಥೆ ಟೊಯೊಟಾ ಕಂಪನಿ ನೌಕರರು ನವೆಂಬರ್ 10ರಿಂದಲೂ ಅಹೋರಾತ್ರಿ ಧರಣಿಗಿಳಿದಿದ್ದಾರೆ.












Click it and Unblock the Notifications