ಅಭಿಮಾನಿಗಳಿಗೆ ಕೊನೆಗೂ ಸಿಹಿಸುದ್ದಿ ಕೊಟ್ಟ ನಟಿ ಮೇಘನಾ ರಾಜ್: ಹೊಸ ಅವತಾರದಲ್ಲಿ ಬರ್ತಿದ್ದಾರೆ ‘ರಾಜಾಹುಲಿ’ ಬೆಡಗಿ
ಸ್ಯಾಂಡಲ್ವುಡ್ನ ಜನಪ್ರಿಯ ನಟಿ, "ರಾಜಾಹುಲಿ" ಖ್ಯಾತಿಯ ಮೇಘನಾ ರಾಜ್ ಅವರು ಕಿರುತೆರೆ ಪ್ರೇಕ್ಷಕರಿಗೆ ಬಿಗ್ ಸರ್ಪ್ರೈಸ್ ಒಂದನ್ನು ನೀಡಿದ್ದಾರೆ. ಮದುವೆ ಹಾಗೂ ಪತಿ ಚಿರಂಜೀವಿ ಸರ್ಜಾ ಅವರ ಅಕಾಲಿಕ ಅಗಲಿಕೆಯ ನಂತರ, ನಟಿ ಮೇಘನಾ ಅವರು ತಮ್ಮ ಮುದ್ದಿನ ಮಗ ರಾಯನ್ ರಾಜ್ ಸರ್ಜಾ ಆರೈಕೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದರು. ಈ ಕಾರಣದಿಂದಾಗಿ ಅವರು ಬೆಳ್ಳಿಪರದೆಯಿಂದ ಸ್ವಲ್ಪ ದೂರವೇ ಉಳಿದಿದ್ದರು. ಮೇಘನಾ ಅವರು ಮತ್ತೆ ಚಿತ್ರರಂಗದಲ್ಲಿ ಸಕ್ರಿಯರಾಗಬೇಕು, ಸಿನಿಮಾಗಳಲ್ಲಿ ನಟಿಸಬೇಕು ಎಂಬುದು ಅವರ ಕೋಟ್ಯಂತರ ಅಭಿಮಾನಿಗಳ ಆಸೆಯಾಗಿತ್ತು. ಈಗ ಅಭಿಮಾನಿಗಳ ಆಸೆಯ ಒಂದು ಭಾಗ ಈಡೇರಿದ್ದು, ಮೇಘನಾ ರಾಜ್ ಅವರು ಕಿರುತೆರೆ ಲೋಕಕ್ಕೆ ಅದ್ಧೂರಿಯಾಗಿ ಮರಳಿದ್ದಾರೆ.
ಕನ್ನಡ ಕಿರುತೆರೆಯ ಇತಿಹಾಸದಲ್ಲೇ ಅತ್ಯಂತ ವಿಭಿನ್ನ ಹಾಗೂ ಜನಪ್ರಿಯ ರಿಯಾಲಿಟಿ ಶೋ ಆಗಿರುವ 'ಕ್ವಾಟ್ಲೆ ಕಿಚನ್ ಸೀಸನ್ 2' ಈಗ ವೀಕ್ಷಕರಲ್ಲಿ ಭಾರಿ ಕುತೂಹಲ ಮೂಡಿಸಿದೆ. ಈ ಹೊಸ ಸೀಸನ್ಗೆ ನಟಿ ಮೇಘನಾ ರಾಜ್ ಅವರು ಮುಖ್ಯ ತೀರ್ಪುಗಾರರಾಗಿ (Judge) ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ. ಈ ಹಿಂದೆ 'ಡ್ಯಾನ್ಸಿಂಗ್ ಚಾಂಪಿಯನ್ ಶಿಪ್' ರಿಯಾಲಿಟಿ ಶೋ ಮೂಲಕ ಕಿರುತೆರೆಯಲ್ಲಿ ಯಶಸ್ವಿ ಜರ್ನಿ ಆರಂಭಿಸಿದ್ದ ಮೇಘನಾ, ತಮ್ಮ ಅದ್ಭುತ ಮಾತುಗಾರಿಕೆ ಹಾಗೂ ನಗುವಿನ ಮೂಲಕ ಪ್ರೇಕ್ಷಕರ ಮನಗೆದ್ದಿದ್ದರು. ಈಗ ಈ ವಿಶಿಷ್ಟ ಕಾಮಿಡಿ ಹಾಗೂ ಅಡುಗೆ ಶೋನಲ್ಲಿ ಸ್ಪರ್ಧಿಗಳ 'ಕ್ವಾಟ್ಲೆ' ಮತ್ತು ಅವರು ಮಾಡುವ 'ಅಡುಗೆ'ಯನ್ನು ಒಟ್ಟಿಗೆ ಜಡ್ಜ್ ಮಾಡಲು ಸಜ್ಜಾಗಿದ್ದಾರೆ.

ಜೂನ್ 6ರಿಂದ 'ಕ್ವಾಟ್ಲೆ ಕಿಚನ್ ಸೀಸನ್ 2' ಆರಂಭ
ಕಲರ್ಸ್ ಕನ್ನಡ ವಾಹಿನಿಯಲ್ಲಿ ಸದ್ಯ ಯಶಸ್ವಿಯಾಗಿ ಮುಕ್ತಾಯಗೊಂಡಿರುವ 'ಗಿಚ್ಚಿ ಗಿಲಿಗಿಲಿ ಜ್ಯೂನಿಯರ್ಸ್' ಶೋ ಜಾಗಕ್ಕೆ ಈಗ ಹೊಸ ಅಡುಗೆ ಹಂಗಾಮಾ ಬರಲಿದೆ. ಇದೇ ವಾರಾಂತ್ಯ ಅಂದರೆ ಜೂನ್ 6 ಮತ್ತು 7ರಂದು ಶನಿವಾರ ಹಾಗೂ ಭಾನುವಾರ ರಾತ್ರಿ 9 ಗಂಟೆಗೆ 'ಕ್ವಾಟ್ಲೆ ಕಿಚನ್ ಸೀಸನ್ 2' ಶುರುವಾಗಲಿದೆ. ಈ ಹಿಂದೆ ಪ್ರಸಾರವಾಗಿದ್ದ 'ಕ್ವಾಟ್ಲೆ ಕಿಚನ್ ಸೀಸನ್ 1' ಕಾರ್ಯಕ್ರಮಕ್ಕೆ 'ಮ್ಯಾಡ್ ಶೆಫ್' ಎಂದೇ ಹೆಸರುವಾಸಿಯಾಗಿರುವ ಕೌಶಿಕ್ ಶಂಕರ್ ಹಾಗೂ ಹಿರಿಯ ನಟಿ ಶ್ರುತಿ ಅವರು ಜಡ್ಜ್ ಆಗಿ ಧೂಳೆಬ್ಬಿಸಿದ್ದರು. ಆದರೆ ಈ ಬಾರಿ ಸೀಸನ್ 2ರಲ್ಲಿ ನಟಿ ಶ್ರುತಿ ಅವರ ಬದಲಿಗೆ ಮೇಘನಾ ರಾಜ್ ಅವರು ಕೌಶಿಕ್ ಶಂಕರ್ ಜೊತೆ ತೀರ್ಪುಗಾರರ ಕುರ್ಚಿಯನ್ನು ಅಲಂಕರಿಸಲಿದ್ದಾರೆ.
ಬದಲಾಗಿದ್ದಾರೆ ನಿರೂಪಕರು
ಮೊದಲ ಸೀಸನ್ನಲ್ಲಿ ಕಾಮಿಡಿ ಕಿಂಗ್ ಕುರಿ ಪ್ರತಾಪ್ ಹಾಗೂ ಅನುಪಮಾ ಗೌಡ ಜೋಡಿಯು ನಿರೂಪಣೆಯ ಜವಾಬ್ದಾರಿ ಹೊತ್ತುಕೊಂಡಿತ್ತು. ಆದರೆ ಈ ಬಾರಿ ಶೋನಲ್ಲಿ ಆಂಕರ್ಸ್ ಕೂಡ ಬದಲಾಗಿದ್ದಾರೆ. ಕುರಿ ಪ್ರತಾಪ್ ಅವರು ಪ್ರಸ್ತುತ ಜೀ ಕನ್ನಡ ವಾಹಿನಿಯ 'ಜೋಡಿ ನಂ 1' ಶೋನಲ್ಲಿ ಬ್ಯುಸಿಯಾಗಿದ್ದರೆ, ಅನುಪಮಾ ಗೌಡ ಕೂಡ ಈ ಸೀಸನ್ನಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಅನುಪಮಾ ಗೌಡ ಅವರ ಬದಲಿಗೆ ಈ ಬಾರಿ ಕಿರುತೆರೆಯ ಖ್ಯಾತ ನಟಿ, 'ಭಾಗ್ಯಲಕ್ಷ್ಮೀ' ಸೀರಿಯಲ್ ಮೂಲಕ ಮನೆಮಾತಾಗಿರುವ ಸುಷ್ಮಾ ರಾವ್ ಅವರು ಕಾರ್ಯಕ್ರಮದ ಸೂತ್ರಧಾರಿಯಾಗಿ ನಿರೂಪಣೆಯ ಹೊಣೆ ಹೊತ್ತುಕೊಂಡಿದ್ದಾರೆ.
ಸುಷ್ಮಾ ರಾವ್ ಅವರ ಸೌಮ್ಯ ಸ್ವಭಾವ ಹಾಗೂ ಸಮಯಪ್ರಜ್ಞೆಯ ನಿರೂಪಣೆ ಶೋಗೆ ಮತ್ತಷ್ಟು ಕಳೆ ತರಲಿದೆ. ಮೇಘನಾ ರಾಜ್ ಅವರ ಗ್ಲಾಮರಸ್ ಎಂಟ್ರಿ, ಮ್ಯಾಡ್ ಶೆಫ್ ಕೌಶಿಕ್ ಶಂಕರ್ ಅವರ ಅಡುಗೆ ಜ್ಞಾನ ಮತ್ತು ಸುಷ್ಮಾ ಕೆ. ರಾವ್ ಅವರ ಚಾಕಚಕ್ಯತೆಯ ನಿರೂಪಣೆಯೊಂದಿಗೆ 'ಕ್ವಾಟ್ಲೆ ಕಿಚನ್ ಸೀಸನ್ 2' ವೀಕ್ಷಕರಿಗೆ ಭರಪೂರ ಮನರಂಜನೆ ನೀಡಲು ರೆಡಿಯಾಗಿದೆ.













Click it and Unblock the Notifications