ಟೊಯೋಟಾ ಕಾರ್ಮಿಕರಿಗೆ ಶುಭ ಸುದ್ದಿ ನೀಡಿದ ಸಚಿವರು
ರಾಮನಗರ, ಫೆಬ್ರವರಿ 03: ರಾಮನಗರದ ಬಿಡದಿಯಲ್ಲಿರುವ ಟೊಯೋಟಾ ಕಾರು ತಯಾರಿಕಾ ಘಟಕದ ಕಾರ್ಮಿಕರು 86 ದಿನಗಳಿಂದ ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ. ಕಾರ್ಮಿಕ ಮತ್ತು ಆಡಳಿತ ಮಂಡಳಿ ನಡುವಿನ ಬಿಕ್ಕಟ್ಟಿನ ಕುರಿತು ಸದನದಲ್ಲಿ ವಿಚಾರವನ್ನು ಪ್ರಸ್ತಾಪಿಸಲಾಗಿದೆ.
"ಕಾರ್ಮಿಕರು ಮತ್ತು ಆಡಳಿತ ಮಂಡಳಿ ನಡುವಿನ ವಿವಾದವನ್ನು ಶೀಘ್ರದಲ್ಲಿಯೇ ಇತ್ಯರ್ಥ ಪಡಿಸಲಾಗುತ್ತದೆ" ಎಂದು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.
ಶೂನ್ಯ ವೇಳೆಯಲ್ಲಿ ಬಿಜೆಪಿ ಶಾಸಕ ಜಿ. ಕರುಣಾಕರ ರೆಡ್ಡಿ ಟೊಯೋಟಾ ಕಾರ್ಮಿಕರು ಹೋರಾಟದ ಬಗ್ಗೆ ವಿಚಾರವನ್ನು ಪ್ರಸ್ತಾಪಿಸಿದರು. ಆಗ ಕಾರ್ಮಿಕ ಸಚಿವರು ಸದನದಲ್ಲಿ ಹೇಳಿಕೆಯನ್ನು ನೀಡಿದರು.

"ಖುದ್ದಾಗಿ ನಾನು ಟೊಯೋಟಾ ಕಾರ್ಖಾನೆಗೆ ಭೇಟಿ ನೀಡಿ ವಿವಾದ ಇತ್ಯರ್ಥ ಮಾಡಲು ಪ್ರಯತ್ನ ನಡೆಸಿದ್ದೆ. ವಿಧಾನಸೌಧದಲ್ಲಿ ಸಭೆ ನಡೆಸಿದಾಗ ಕಾರ್ಮಿಕ ಮುಖಂಡರು ದೂರವುಳಿದರು" ಎಂದು ಸಚಿವರು ಸದನಕ್ಕೆ ಮಾಹಿತಿ ನೀಡಿದರು.
"3,415 ಕಾರ್ಮಿಕರ ಪೈಕಿ 1896 ಮಂದಿ ಈಗಾಗಲೇ ಕೆಲಸಕ್ಕೆ ಹಾಜರಾಗಿದ್ದಾರೆ. ವಿವಾದವನ್ನು ಇತ್ಯರ್ಥಪಡಿಸುವ ಸಂಬಂಧ ಮುಖ್ಯಮಂತ್ರಿಗಳ ಜೊತೆ ಚರ್ಚೆ ನಡೆಸಲಾಗುತ್ತದೆ" ಎಂದು ಕಾರ್ಮಿಕರ ಸಚಿವರು ಭರವಸೆ ಕೊಟ್ಟರು.
ಕರುಣಾಕರ ರೆಡ್ಡಿ ಅವರು, "ಕಾರ್ಮಿಕರನ್ನು ಕೆಲಸದಿಂದ ಕಿತ್ತು ಹಾಕುವ ಪ್ರಯತ್ನ ನಡೆಯುತ್ತಿದೆ. ಮೂರು ನಿಮಿಷದಲ್ಲಿ ಮಾಡಬಹುದಾದ ಕೆಲಸವನ್ನು ಎರಡೂವರೆ ನಿಮಿಷದಲ್ಲೇ ಮಾಡಬೇಕು ಎಂದು ಕಾರ್ಮಿಕರ ಮೇಲೆ ಒತ್ತಡ ಹಾಕಲಾಗುತ್ತಿದೆ. ಕಾರ್ಮಿಕರ ಹಿತದ ಬಗ್ಗೆಯೂ ಸರ್ಕಾರ ಗಮನಹರಿಸಬೇಕು" ಎಂದು ಒತ್ತಾಯಿಸಿದರು.
ಭಾನುವಾರ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಭಟನೆ ನಡೆಸುತ್ತಿರುವ ಕಾರ್ಮಿಕರನ್ನು ಭೇಟಿ ಮಾಡಿದ್ದರು. ಬಿಡದಿಯಲ್ಲಿರುವ ಟೊಯೋಟಾ ಘಟಕದ ಬಳಿ ಸಿದ್ದರಾಮಯ್ಯ ಕಾರ್ಮಿಕರ ಅಹವಾಲುಗಳನ್ನು ಕೇಳಿದ್ದರು.
ಕಾರ್ಮಿಕರ ಸಮಸ್ಯೆಗಳ ಬಗ್ಗೆ ವಿಧಾನಸಭೆಯಲ್ಲಿ ವಿಷಯ ಪ್ರಸ್ತಾಪಿಸುತ್ತೇನೆ ಎಂದು ಹೇಳಿದ್ದರು ಮತ್ತು
ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಅವರಿಗೆ ಸ್ಥಳದಿಂದಲೇ ಕರೆಮಾಡಿ ಮಾತನಾಡಿದ್ದರು. ಆದಷ್ಟು ಶೀಘ್ರವೇ ಆಡಳಿತ ಮಂಡಳಿ ಹಾಗೂ ಕಾರ್ಮಿಕ ನಾಯಕರ ಸಭೆ ಕರೆದು ಸಮಸ್ಯೆ ಬಗೆಹರಿಸುವಂತೆ ತಿಳಿಸಿದ್ದರು.












Click it and Unblock the Notifications