ಹಿಜಾಬ್, ಕೇಸರಿ ವಿವಾದ ಬೆಳೆಯಲು ಸರ್ಕಾರವೇ ಕಾರಣ; ಡಿಕೆಶಿ ಆರೋಪ
ರಾಮನಗರ, ಫೆಬ್ರವರಿ 14: "ನಮಗೆ ಮಕ್ಕಳ ವಿದ್ಯಾಭ್ಯಾಸ ಮುಖ್ಯ, ಇದು ಬಹಳ ಕ್ರೂಷಿಯಲ್ ಟೈಮ್. ಅವರಿಗೆ ಪರೀಕ್ಷೆಗಳು ಇದ್ದಾವೆ, ಈಗ ಡಿಸ್ಟರ್ಬ್ ಮಾಡುವುದರಲ್ಲಿ ಅರ್ಥ ಇಲ್ಲ. ಹಿಜಾಬ್ ವಿವಾದ ಬೆಳೆಯಲು ರಾಜ್ಯ ಸರ್ಕಾರವೇ ಅವಕಾಶ ಮಾಡಿಕೊಟ್ಟಿದೆ," ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನೇರವಾಗಿ ಆರೋಪಿಸಿದರು.
ಚನ್ನಪಟ್ಟಣದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಹಾಗೂ ಕನಕಪುರ ಶಾಸಕ ಡಿ.ಕೆ. ಶಿವಕುಮಾರ್, 'ಇಂದಿನಿಂದ ಶಾಲೆಗಳು ಪ್ರಾರಂಭ ವಿಚಾರಕ್ಕೆ ಪ್ರತಿಕ್ರಿಯಿಸಿ, ಹಿಜಬ್- ಕೇಸರಿ ವಿವಾದವನ್ನು ಸರ್ಕಾರ ಕಂಟ್ರೋಲ್ ಮಾಡಬೇಕಿತ್ತು, ಆದರೆ ಬೆಳೆಯಲಿಕ್ಕೆ ಅವಕಾಶ ಮಾಡಿಕೊಟ್ಟಿದೆ," ಎಂದರು.
"ಪಾಪ ಅವರಿಗೆ ನಿಯಮಗಳು ಗೊತ್ತಿಲ್ಲ, ನಾನು ಸಿಎಂ ಬೊಮ್ಮಾಯಿ ಅವರಿಗೆ ಶಾಲಾ- ಕಾಲೇಜಿಗೆ ರಜೆ ಕೊಡಿ ಎಂದು ಮನವಿ ಮಾಡಿದ್ದೆ, ಹಾಗಾಗಿ ರಜೆ ನೀಡಿದ್ದರು. ಕೋರ್ಟ್ ಮಧ್ಯ ಪ್ರವೇಶ ಮಾಡಿದ್ದು, ನ್ಯಾಯಾಲಯದ ತೀರ್ಪಿಗೆ ನಾವು ಬದ್ಧರಿದ್ದೇವೆ," ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.

"ರಾಜಕೀಯ ಮಾಡೋಣ, ಆದರೆ ಶಾಲಾ ಮಕ್ಕಳನ್ನು ಕಟ್ಟಿಕೊಂಡು ರಾಜಕೀಯ ಮಾಡೋದು ಸರಿಯಲ್ಲ. ಕೇಸರಿ ಧ್ವಜವನ್ನು ಅವರ ಮನೆ- ಮಠದಲ್ಲಿ ಇಟ್ಟುಕೊಳ್ಳಲಿ. ಯಾರೋ ಒಬ್ಬ ಮಂತ್ರಿ ರಾಷ್ಟ್ರಧ್ವಜ ತೆಗೆದು, ಕೇಸರಿ ಧ್ವಜ ಹಾಕುತ್ತೇವೆ ಎಂದಿದ್ದಾರೆ. ಇನ್ನು ಅವರ ಮೇಲೆ ಕೇಸ್ ಹಾಕಿಲ್ಲ, ನಾವು ಸುಮ್ಮನೇ ಬಿಡಬೇಕಾ? ಕೆಂಪುಕೋಟೆಯ ಮೇಲೆ ಭಗವಾ ಧ್ವಜ ಹಾರಿಸುತ್ತೇವೆ," ಎಂದು ಹೇಳಿಕೆ ನೀಡಿದ್ದ ಸಚಿವ ಕೆ.ಎಸ್. ಈಶ್ವರಪ್ಪನವರ ಹೆಸರು ಹೇಳದೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹರಿಹಾಯ್ದರು.
"ಹೇಳಿಕೆ ನೀಡಿರುವ ಸಚಿವರಿಂದ ಸಿಎಂ ಬಸವರಾಜ ಬೊಮ್ಮಾಯಿಯವರು ಈ ಕೂಡಲೇ ರಾಜೀನಾಮೆ ಪಡೆಯಬೇಕು. ಇಲ್ಲದಿದ್ದರೆ ಇದೇ ವಿಚಾರವಾಗಿ ರಾಜ್ಯದಲ್ಲಿ ದೊಡ್ಡ ಹೋರಾಟ ನಡೆಯುತ್ತದೆ. 'ರಾಷ್ಟ್ರಧ್ವಜ ಬೇಕೋ, ಕೇಸರಿ ಧ್ವಜ ಬೇಕೋ' ಎಂದು ಹೋರಾಟ ಮಾಡುತ್ತೇವೆ," ಎಂದು ಸರ್ಕಾರಕ್ಕೆ ಡಿ.ಕೆ. ಶಿವಕುಮಾರ್ ಎಚ್ಚರಿಕೆ ನೀಡಿದರು.
ಕೇಸರಿ ಧ್ವಜವನ್ನು ಅವರ ಮನೆ, ಮಠದಲ್ಲಿ ಇಟ್ಟುಕೊಳ್ಳಲಿ ನಮ್ಮ ಅಭ್ಯಂತರ ಇಲ್ಲ. ಆದರೆ ರಾಷ್ಟ್ರಧ್ವಜದ ಜಾಗಕ್ಕೆ ಕೇಸರಿ ಧ್ವಜ ಹಾಕಲು ನಿರ್ಧಾರ ಮಾಡುತ್ತಿದ್ದಾರೆ ಅಂದರೆ, ಇದು ದೇಶದ್ರೋಹದ ಕೆಲಸ. ಅದನ್ನು ರಾಜ್ಯದ ಜನರು ತೀರ್ಮಾನ ಮಾಡಬೇಕು. ಸಿಎಂ ಅವರು ಕೂಡಲೇ ಅವರನ್ನು ಬಂಧಿಸಬೇಕು, ರಾಜೀನಾಮೆ ಪಡೆಯಬೇಕು. ಸರ್ಕಾರ ಈ ವಿಚಾರವಾಗಿ ಕಂಪ್ಲೀಟ್ ಫೇಲ್ ಆಗಿದೆ ಎಂದು ಆರೋಪಿಸಿದರು.

ನಮ್ಮ ಮೇಲೆ ಎಚ್ಡಿಕೆಗೆ ಪ್ರೀತಿ
ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿಯವರು ನಿನ್ನೆ ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ ಬಾಬು ಅವರಿಗೆ ನಿಮ್ಮ ವರ್ತನೆ ಸರಿ ಮಾಡಿಕೊಳ್ಳಿ, ಇಲ್ಲವಾದಲ್ಲಿ ನಾನು ಕನಕಪುರದವರ ರೀತಿ ಡೈಲಾಗ್ ಹೊಡೆಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್, ಓ ಹೌದಾ, ಕನಕಪುರದವರ ರೀತಿ ಕಲಿತುಕೊಳ್ಳಲಿ ಬಿಡಿ, ದೇವರು ಒಳ್ಳೆಯದು ಮಾಡಲಿ ಎಂದು ಟಾಂಗ್ ನೀಡಿದರು.
ನನ್ನ ಜಮೀನಿನಲ್ಲಿ ಕಲ್ಲಿದೆ, ಮಣ್ಣಿದೆ ನಾನು ಬಂಡೆ ಹೊಡ್ಕೋತೀನೋ, ಮಾರಿಕೊಳ್ಳುತಿನೋ ಅದು ನನಗೆ ಬಿಟ್ಟಿದ್ದು. ಏನೋ ಕದ್ದೋ ಪದ್ದೋ ಮಾಡಿದರೆ ಪೊಲೀಸ್ ಕೇಸ್, ಸರ್ಕಾರ ಇದೆ. ತನಿಖೆ ಇದೆ, ವಿಧಾನಸಭೆಯಲ್ಲಿ ಪ್ರಸ್ತಾವನೆ ಇದೆ, ಹಿಂದೆಯೆಲ್ಲ ಆಗಿದೆ, ಈಗಲೂ ಪ್ರಸ್ತಾಪ ಮಾಡಲಿ ಎಂದು ಸವಾಲು ಹಾಕಿದರು.
ಮುಂದುವರೆದು ಇನ್ನೂ ಬೇಕಿದ್ದರೆ ತನಿಖೆ ನಡೆಸಲಿ, ಯಾರು ಬೇಡ ಅಂತಾರೆ. ಯಾರ ಮೇಲೆ ಪ್ರೀತಿ ಜಾಸ್ತಿನೋ ಅವರ ಮೇಲೆ, ಯಾರು ಕಣ್ಣಿಗೆ ಕಾಣುತ್ತಾರೋ ಅವರ ಮೇಲೆ ಟಾರ್ಗೆಟ್ ಇರುತ್ತದೆ. ದೂರದಲ್ಲಿ ಇರುವವರ ಬಗ್ಗೆ ಯಾರು ಮಾತನಾಡಲ್ಲ. ನಾವು ಪಕ್ಕದಲ್ಲಿದ್ದೇವೆ ಅದಕ್ಕೆ ನಮ್ಮ ಬಗ್ಗೆ ಪ್ರೀತಿಯಿಂದ ಮಾತನಾಡುತ್ತಾರೆ ಎಂದು ಎಚ್.ಡಿ. ಕುಮಾರಸ್ವಾಮಿ ಆರೋಪಗಳಿಗೆ ಡಿ.ಕೆ. ಶಿವಕುಮಾರ್ ಟಾಂಗ್ ನೀಡಿದರು.

ಸದನದಲ್ಲಿ 40% ಕಮಿಷನ್ ಬಗ್ಗೆ ಚರ್ಚೆ
ಇಂದಿನಿಂದ ಬಜೆಟ್ ಅಧಿವೇಶನ ಪ್ರಾರಂಭವಾಗಿದ್ದು, ನಾವು ರಾಜ್ಯದ ಜನರಿಗೆ ಆಗಿರುವ ತೊಂದರೆ, ಸರ್ಕಾರದ 40% ಕಮಿಷನ್, ಸರ್ಕಾರದ ವೈಫಲ್ಯ, ರಾಜ್ಯದಲ್ಲಿ ಉದ್ಭವಿಸಿರುವ ಲಾ ಅಂಡ್ ಆರ್ಡರ್ ಪ್ರಾಬ್ಲಂ ಬಗ್ಗೆ ಪ್ರಸ್ತಾಪ ಮಾಡುತ್ತೇವೆ ಎಂದು ಪ್ರಸ್ತುತ ಸದನದ ಕಲಾಪ ಗಂಭೀರ ರೂಪ ಪಡೆಯುವ ಸೂಚನೆಯನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನೀಡಿದರು.
ಇನ್ನು ಗೋವಾ ಚುನಾವಣೆಯ ಪ್ರಣಾಳಿಕೆಯಲ್ಲಿ ಮಹಾದಾಯಿ ಪ್ರಸ್ತಾಪ ವಿಚಾರವಾಗಿ ಮಾತನಾಡಿ, ಅದು ನನಗೆ ಗೊತ್ತಿಲ್ಲ, ತಿಳಿದು ಮಾತನಾಡುತ್ತೇನೆ ಎಂದರು.
ನಾನು ಎಲ್ಲಿ ಸ್ಪರ್ಧೆ ಮಾಡಬೇಕು ಎಂದು ಪಕ್ಷ ತೀರ್ಮಾನಿಸುತ್ತದೆ
ಮುಂದಿನ ಬಾರಿ ಸಮ್ಮಿಶ್ರ ಸರ್ಕಾರ ಬರುತ್ತದೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಹೇಳಿಕೆ ವಿಚಾರವಾಗಿ ಮಾತನಾಡಿ, ಕುಮಾರಸ್ವಾಮಿಯವರು ತಮ್ಮ ಕಾಲದಲ್ಲೇ ಫುಲ್ ಮೆಜಾರಿಟಿ ಬರುತ್ತದೆ ಅಂದಿದ್ದಾರೆ. ಬೊಮ್ಮಾಯಿ ಹಾಗೂ ಯಡಿಯೂರಪ್ಪ ಬಿಜೆಪಿಗೆ 150 ಸೀಟ್ ಬರುತ್ತದೆ ಅಂತ ಹೇಳುತ್ತಾರೆ. ಇದರ ಮಧ್ಯೆ ದೇವೇಗೌಡರು ಸಮ್ಮಿಶ್ರ ಸರ್ಕಾರ ಅಂತಾರೆ. ಅದರೆ ಅದನ್ನು ಕಾಲ ನಿರ್ಣಯ ಮಾಡುತ್ತದೆ ಎಂದು ಪ್ರತಿಕ್ರಿಯೆ ನೀಡಿದರು.
2023ರ ವಿಧಾನಸಭಾ ಚುನಾವಣೆಯಲ್ಲಿ ಡಿ.ಕೆ. ಶಿವಕುಮಾರ್ ರಾಮನಗರದಿಂದ ಸ್ಪರ್ಧೆ ಮಾಡುತ್ತಾರೆ ಎಂಬ ವದಂತಿಗೆ ಪ್ರತಿಕ್ರಿಯೆ ನೀಡಿದ ಡಿಕೆಶಿ, ಕನಕಪುರದ ಜನ ಸಾಕಿ ಸಲುಹಿದ್ದಾರೆ. ಅವರು ಒಳ್ಳೆಯದ್ದು, ಕೆಟ್ಟದ್ದು ನೋಡಿದ್ದಾರೆ. ನನ್ನ ಪರವಾಗಿ ಕೆಲಸ ಮಾಡಿ ಬೇಕಾದಷ್ಟು ಕೇಸ್ ಹಾಕಿಸಿಕೊಂಡಿದ್ದಾರೆ. ನಾನು ಜೈಲಿನಲ್ಲಿದ್ದಾಗ ಬೇಕಾದಷ್ಟು ಅವಮಾನ ಅನುಭವಿಸಿದ್ದಾರೆ. ಕೇಸ್ ಹಾಕಿಸಿಕೊಂಡಿದ್ದಾರೆ. ಹಾಗಾಗಿ ಇದರ ಬಗ್ಗೆ ತಿರ್ಮಾನ ಮಾಡುವುದಕ್ಕೆ ನಾನು ಯಾರು? ನಾನು ಎಲ್ಲಿ ಚುನಾವಣೆ ಸ್ಪರ್ಧೆ ಮಾಡಬೇಕು ಅಂತಾ ನಮ್ಮ ಪಾರ್ಟಿ ತೀರ್ಮಾನ ಮಾಡುತ್ತದೆ. ಈಗ ಸಧ್ಯಕ್ಕೆ ನಾನು ಕನಕಪುರದ ಎಂಎಲ್ಎ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.












Click it and Unblock the Notifications