ರೋಗಿಗಳ ಪಾಲಿಗೆ ಕಹಿಯಾದ ರಾಮನಗರದ ಸರ್ಕಾರಿ ಡಯಾಲಿಸಿಸ್ ಸೆಂಟರ್
ರಾಮನಗರ, ಸೆಪ್ಟೆಂಬರ್ 11: ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿರುವ ಬಡ ರೋಗಿಗಳ ಚಿಕಿತ್ಸೆಗಾಗಿ ಸರ್ಕಾರ ಪ್ರತಿ ಜಿಲ್ಲಾ ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಕೇಂದ್ರಗಳನ್ನು ತೆರೆದಿದೆ. ಅದರೆ ರಾಮನಗರ ಜಿಲ್ಲಾ ಆಸ್ಪತ್ರೆಯ ಡಯಾಲಿಸಿಸ್ ಸೆಂಟರ್ ಸರಿಯಾದ ನಿರ್ವಹಣೆ ಇಲ್ಲದೆ ಕೆಟ್ಟು ನಿಂತಿದೆ.
ರಾಮನಗರ ಜಿಲ್ಲಾಸ್ಪತ್ರೆಯಲ್ಲಿ ಡಯಾಲಿಸಿಸ್ ರೋಗಿಗಳು ಸಿಕ್ಕಾಪಟ್ಟೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಒಂದೆಡೆ ಕೆಲವು ಯಂತ್ರಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಮತ್ತೊಂದೆಡೆ ಕೆಲವು ಯಂತ್ರಗಳು ಕೆಟ್ಟು ನಿಂತಿವೆ. ಡಯಾಲಿಸಿಸ್ಗೆ ಬರುವ ರೋಗಿಗಳಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮಾಡಿಸಿಕೊಳ್ಳಿ ಎಂದು ಸಿಬ್ಬಂದಿಗಳು ತಾಕೀತು ಮಾಡುತ್ತಿದ್ದಾರೆ ಎಂಬ ಆರೋಪವು ಇದೆ. ಇದು ಬಡ ಮೂತ್ರಪಿಂಡ ರೋಗಿಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ರಾಮನಗರ ಜಿಲ್ಲಾಸ್ಪತ್ರೆಯಲ್ಲಿ ಹಲವು ದಿನಗಳಿಂದ ಡಯಾಲಿಸಿಸ್ ರೋಗಿಗಳಿಗೆ ಸರಿಯಾದ ಚಿಕಿತ್ಸೆ ಸಿಗದೆ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಜಿಲ್ಲಾಸ್ಪತ್ರೆಯಲ್ಲಿ ಇರುವ 7 ಡಯಾಲಿಸಿಸ್ ಯಂತ್ರಗಳು ಕೆಟ್ಟು ನಿಂತಿದ್ದವು. ಇದರಿಂದ ಬಡ ಜನರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲಾಗದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ರೋಗಿ ಸಾವನ್ನಪ್ಪುವ ಸಾಧ್ಯತೆ ಹೆಚ್ಚು
ಇನ್ನು ಇಲ್ಲಿ ಬರುವ ರೋಗಿಗಳು ಡಯಾಲಿಸಿಸ್ ಮಾಡಿಸಲು ಬರಬೇಕಾದರೆ ಅವರುಗಳೇ ಚಿಕಿತ್ಸೆಗೆ ಅಗತ್ಯ ವಸ್ತುಗಳನ್ನು ಹೊರಗಡೆಯ ಮೆಡಿಕಲ್ ಸ್ಟೋರ್ಗಳಿಂದ ದುಬಾರಿ ಹಣ ತೆತ್ತು ತಂದುಕೊಡಬೇಕು ಎನ್ನುವ ಆರೋಪ ಕೂಡ ಇದೆ.
ರಾಮನಗರ ಜಿಲ್ಲೆಯ ವ್ಯಾಪ್ತಿಯಲ್ಲಿರುವ ಮೂತ್ರಪಿಂಡ ರೋಗಿಗಳು ಸರ್ಕಾರಿ ಡಯಾಲಿಸಿಸ್ ಕೇಂದ್ರದಲ್ಲಿ ನೋಂದಣಿ ಮಾಡಿಸಬೇಕು, ಅಲ್ಲದೇ ನಿಯಮಿತವಾಗಿ ರೋಗಿಯೂ ಡಯಾಲಿಸಿಸ್ಗೆ ಒಳಗಾಗದ್ದಿದ್ದರೆ ಆರೋಗ್ಯ ಹದಗೆಟ್ಟು, ರೋಗಿ ಸಾವನ್ನಪ್ಪುವ ಸಾಧ್ಯತೆ ಹೆಚ್ಚು. ಅದರೂ ಅಧಿಕಾರಿಗಳು ಡಯಾಲಿಸಿಸ್ ಯಂತ್ರಗಳ ಸರಿಪಡಿಸಲು ಮುಂದಾಗಿಲ್ಲ ಎಂದು ಡಯಾಲಿಸಿಸ್ ರೋಗಿಗಳು ಆರೋಪಿಸಿದ್ದಾರೆ.
ಎಲ್ಲಾ ಯಂತ್ರಗಳು ಕೆಟ್ಟು ನಿಂತಿದ್ದವು
ಹಲವು ದಿನಗಳಿಂದ ರಾಮನಗರ ಜಿಲ್ಲಾಸ್ಪತ್ರೆಯಲ್ಲಿ ಎಲ್ಲಾ ಯಂತ್ರಗಳು ಕೆಟ್ಟು ನಿಂತಿದ್ದವು. ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸುಮಾರು 30ಕ್ಕೂ ಹೆಚ್ಚು ಮಂದಿ ರೋಗಿಗಳು ಖಾಸಗಿ ಡಯಾಲಿಸಿಸ್ ಸೆಂಟರ್ಗೆ ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ. ಇನ್ನು ಪ್ರಭಾವಿ ವ್ಯಕ್ತಿಗಳಿಂದ ಒತ್ತಡ ತಂದರೆ ಮಾತ್ರ ಬೇರೆ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ವ್ಯವಸ್ಥೆಯಾಗುತ್ತದೆ. ಸಹಾಯಕ್ಕೆ ಯಾರೂ ಬರದಿದ್ದರೆ ಬಡವರ ಗತಿ ಏನು ಎಂದು ಪ್ರಶ್ನೆ ಮಾಡುತ್ತಾರೆ ರೋಗಿಯ ಸಂಬಂಧಿಗಳು.

ಸಮಸ್ಯೆ ನಿಜ ಅಂತಾರೆ ಜಿಲ್ಲಾಧಿಕಾರಿಗಳು
ಸರ್ಕಾರಿ ಡಯಾಲಿಸಿಸ್ ಸೆಂಟರ್ ಸರಿಯಾದ ನಿರ್ವಹಣೆ ಇಲ್ಲದೇ ಹಲವು ಯಂತ್ರ ಕೆಟ್ಟು ನಿಂತು ರೋಗಿಗಳು ಚಿಕಿತ್ಸೆಗೆ ಪರದಾಡುತ್ತಿರುವ ಬಗ್ಗೆ ಆರೋಗ್ಯ ಇಲಾಖೆ ಅಧಿಕಾರಿಗಳನ್ನು ಪ್ರಶ್ನೆ ಮಾಡಿದರೆ ಈ ಬಗ್ಗೆ ಪ್ರತಿಕ್ರಿಯೆ ಕೊಡಲು ನಿರಾಕರಿಸುತ್ತಾರೆ.
ಇನ್ನು ಈ ಬಗ್ಗೆ ಮಾತನಾಡಿದ ರಾಮನಗರ ಜಿಲ್ಲಾಧಿಕಾರಿ ಡಾ. ರಾಕೇಶ್ ಕುಮಾರ್, ಸರ್ಕಾರಿ ಆಸ್ಪತ್ರೆಯಲ್ಲಿ ಎಲ್ಲಾ ಯಂತ್ರೋಪಕರಣಗಳು ಕೆಟ್ಟು ನಿಂತಿದ್ದು ನಿಜ. ನಾನೇ ಖುದ್ದು ಆರೋಗ್ಯ ಇಲಾಖೆ ಆಯುಕ್ತರನ್ನು ಸಂಪರ್ಕ ಮಾಡಿ ಕೆಲ ಯಂತ್ರಗಳನ್ನು ಸರಿಪಡಿಸಿ ಕೊಟ್ಟಿದ್ದೇನೆ ಎಂದರು.
ಇನ್ನು ಸರ್ಕಾರದಿಂದ ನಿಯೋಜನೆ ಮಾಡಿದ್ದ ಟೆಕ್ನಿಷಿಯನ್ಗಳಿಗೆ ಸರಿಯಾದ ಸಮಯಕ್ಕೆ ಸಂಬಳ ಕೊಡದಿದ್ದರಿಂದಲೂ ಸಮಸ್ಯೆಯಾಗಿತ್ತು. ಈಗ ಇಲಾಖೆಯ ಉನ್ನತ ಅಧಿಕಾರಿಗಳ ಗಮನ ಸೆಳೆದು ಒಂದೊಂದಾಗೆ ಸರಿಪಡಿಸುವ ಕೆಲಸ ಮಾಡಲಾಗುತ್ತಿದೆ ಎಂದು ಸಮಜಾಯಿಷಿ ನೀಡುತ್ತಾರೆ.

ಡಯಾಲಿಸಿಸ್ ಮಾಡಲು ಸಾಧ್ಯವಿಲ್ಲ
ನನ್ನ ಪತಿಗೆ ಮೂತ್ರಪಿಂಡ ಕಾಯಿಲೆಯಿಂದ ಕಳೆದ ಎರಡು ವರ್ಷಗಳಿಂದ ಸರ್ಕಾರಿ ಡಯಾಲಿಸಿಸ್ ಸೆಂಟರ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇವೆ. ಕಳೆದ ಎಂಟು ದಿನಗಳಿಂದ ಡಯಾಲಿಸಿಸ್ ಮಾಡಲು ಸಾಧ್ಯವಿಲ್ಲ ಎಂದು ಇಲ್ಲಿನ ಸಿಬ್ಬಂದಿಗಳು ಹೇಳುತ್ತಿದ್ದಾರೆ. ನಾವು ವಾರಕ್ಕೆ ಮೂರು ಬಾರಿ ಡಯಾಲಿಸಿಸ್ ಮಾಡಿಸಬೇಕು, ನಾನು ದಿನಕ್ಕೆ 200 ರೂ. ದುಡಿಯುತ್ತೇನೆ. ಸಾವಿರಾರು ಖರ್ಚು ಮಾಡಿ ಖಾಸಗಿ ಅಸ್ಪತ್ರೆಯಲ್ಲಿ ಹೇಗೆ ಮಾಡಿಸಲಿ ಎನ್ನುತ್ತಾರೆ ರೋಗಿಯ ಸಂಬಂಧಿ ಅಸೀನಾ.












Click it and Unblock the Notifications