ಮಕರ ಸಂಕ್ರಾತಿಗೆ ಮಂಕಾದ ಕರಿ ಕಬ್ಬು ಮಾರಾಟ: ಸಂಕಷ್ಟದಲ್ಲಿ ರೈತ ವರ್ಗ
ರಾಮನಗರ, ಜನವರಿ 14: ವರ್ಷದ ಮೊದಲ ಸುಗ್ಗಿ ಹಬ್ಬ ಸಂಕ್ರಾಂತಿ, ಹಬ್ಬದ ದಿನ ಮಹಿಳೆಯರು ಮನೆ ಮನೆಗೆ ತೆರಳಿ ಎಳ್ಳು, ಬೆಲ್ಲದೊಂದಿಗೆ ತುಂಡು ಕರಿ ಕಬ್ಬು ಹಂಚಿ ಎಳ್ಳು ಬೆಲ್ಲ, ತಿಂದು ಒಳ್ಳೆಯ ಮಾತಡು ಎಂದು ಹಬ್ಬದ ಶುಭಾಶಯ ಕೋರುತ್ತಾರೆ. ಹಬ್ಬದ ಸಿಹಿಯಲ್ಲಿ ಸ್ಥಾನ ಪಡೆದು ಜನರ ಬಾಯಿ ಸಿಹಿ ಮಾಡುವ ಕರಿ ಕಬ್ಬು ಬೆಳದ ರೈತನಿಗರ ಈ ಬಾರಿ ಕಹಿಯಾಗಿ ಪರಿಣಮಿಸಿದೆ. ಧಾರಣೆ ಕುಸಿತದಿಂದಾಗಿ ಕಬ್ಬು ಬೆಳೆಗಾರರ ಮನೆಯಲ್ಲಿ ಸಂಕ್ರಾಂತಿ ಸಂಭ್ರಮವಿಲ್ಲ.
ಪ್ರತಿ ವರ್ಷ ಸಂಕ್ರಾಂತಿ ಹಬ್ಬದ ಮುನ್ನವೇ ರೈತರ ಜಮೀನಿಗೆ ಧಾವಿಸುತ್ತಿದ್ದ ಮಧ್ಯವರ್ತಿಗಳು ರೈತರಿಂದ ಕಬ್ಬು ಖರೀದಿಸಿ ಬೆಂಗಳೂರು ಸೇರಿದಂತೆ ಹೊರ ರಾಜ್ಯಗಳಿಗೆ ರಪ್ತು ಮಾಡುತ್ತಿದ್ದರು. ಕಳೆದ ಬಾರಿ ಒಂದು ಕಟ್ಟು ಕಬ್ಬಿಗೆ ಸುಮಾರು 300 ರಿಂದ 350 ರೂಪಾಯಿ ಬೆಲೆ ನೀಡಿ ಖರೀದಿ ಮಾಡಿದ್ದ ಮಧ್ಯವರ್ತಿಗಳು, ಈ ಭಾರಿ ಹಿಂದಿನ ಬೆಲೆ ನೀಡಿದರೆ ನಮಗೆ ಲಾಭ ಸಿಗುವುದಿಲ್ಲ ಎಂಬ ಕಾರಣ ನೀಡಿ ಕಬ್ಬು ಖರೀದಿಗೆ ಮುಂದಾಗಿಲ್ಲ. ಹಾಗಾಗಿ ಬೆಲೆ ಕಡಿಮೆಯಾದರೂ ಸರಿಯೇ ಬೆಳೆದಿರುವ ಕಬ್ಬು ಖಾಲಿಯಾದರೆ ಸಾಕು ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ರಾಜ್ಯದ ಲಕ್ಷಾಂತರ ಹೆಕ್ಟೇರ್ ಪ್ರದೇಶದಲ್ಲಿ ಬಿಳಿ ಕಬ್ಬು ಬೆಳೆಯುತ್ತಿದ್ದರೂ ಸಹ, ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಮಾತ್ರ ಬಹುತೇಕರ ಆಯ್ಕೆ ಮಾತ್ರ ಈ ಕರಿ ಕಬ್ಬು ಆಗಿರುತ್ತದೆ. ಸಂಕ್ರಾಂತಿಯಂದು ಎಳ್ಳು ಬೆಲ್ಲದೊಂದಿಗೆ ಒಂದು ತುಂಡು ಕಬ್ಬು ಹಂಚಿವುದು ಹಿಂದಿನಿಂದಲೂ ನಡೆದು ಬಂದಿರುವ ಸಂಪ್ರದಾಯ. ಹಾಗಾಗಿ ಸಂಕ್ರಾಂತಿ ಹಬ್ಬದಲ್ಲಿ ಕರಿ ಕಬ್ಬಿಗೆ ಬೇಡಿಕೆ ಕೂಡ ಜಾಸ್ತಿ ಇರುತ್ತದೆ.
ಪಟ್ಲು ಗ್ರಾಮದ ಕರಿ ಕಬ್ಬಿಗೆ ರಾಷ್ಟ್ರಮಟ್ಟದಲ್ಲಿ ಬೇಡಿಕೆ
ಸಂಕ್ರಾಂತಿ ಹಬ್ಬದಲ್ಲಿ ಪ್ರಧಾನವಾದ ಕರಿ ಕಬ್ಬು ಬೆಳೆಯುವ ರೈತರು ಮತ್ತು ಗ್ರಾಮಗಳು ಮಾತ್ರ ರಾಜ್ಯದಲ್ಲಿ ಅತೀ ವಿರಳ. ಬೊಂಬೆ ನಗರಿ ಖ್ಯಾತಿಯ ಚನ್ನಪಟ್ಟಣದ ಪಟ್ಲು ಗ್ರಾಮ ಕರಿ ಕಬ್ಬಿನಿಂದಾಗಿ ರಾಷ್ಟ್ರದ ಗಮನ ಸೆಳೆದಿದೆ. ಅಲ್ಲದೇ ಇಲ್ಲಿ ಬೆಳೆದ ಕರಿ ಕಬ್ಬು ಕಳೆದ ಬಾರಿ ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ಹೊರ ರಾಜ್ಯದಲ್ಲೂ ತನ್ನ ಕಂಪನ್ನು ಬೀರಿದೆ.
ತಾಲೂಕಿನ ಪಟ್ಲು, ತಿಟ್ಟಮಾರನಹಳ್ಳಿ, ಚಿಕ್ಕನದೊಡ್ಡಿ, ಕಳ್ಳಿ ಹೊಸೂರು, ಅಬ್ಬೂರು ಮತ್ತು ಅಬ್ಬೂರು ದೊಡ್ಡಿ ಗ್ರಾಮದ ರೈತರು ಈ ಕರಿಕಬ್ಬು ಬೇಸಾಯವನ್ನು ನಂಬಿಕೊಂಡಿದ್ದಾರೆ. ಇಡೀ ರಾಮನಗರ ಜಿಲ್ಲೆಯಲ್ಲಿ ಕರಿ ಕಬ್ಬನ್ನು ಬೆಳೆಯುವ ಗ್ರಾಮಗಳು ಎಂಬ ಹಿರಿಮೆಯನ್ನು ಈ ಗ್ರಾಮಗಳು ಹೊಂದಿವೆ.
ಈ ಗ್ರಾಮಗಳ ಕರಿ ಕಬ್ಬಿಗೆ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಬಹು ಬೇಡಿಕೆ ಇದೆ. ಈ ಕಬ್ಬಿನ ಬೇಡಿಕೆ ರಾಜ್ಯವನ್ನು ದಾಟಿ, ನೆರೆಯ ಕೇರಳ, ತಮಿಳುನಾಡು, ಗುಜರಾತ್ ಅಲ್ಲದೇ ದೇಶದ ರಾಜಧಾನಿ ದೆಹಲಿ ರಾಜ್ಯಗಳಿಗೂ ಇಲ್ಲಿನ ಕಬ್ಬು ರಫ್ತಾಗುತ್ತದೆ. ಈ ಗ್ರಾಮಗಳ ಬಹುತೇಕ ರೈತರು ಕರಿ ಕಬ್ಬಿನ ವ್ಯವಸಾಯವನ್ನೇ ಮಾಡಿಕೊಂಡು ಬಂದಿದ್ದಾರೆ.
ಈ ಬಾರಿ ಕಬ್ಬು ಬೆಳೆಗಾರರ ಬಳಿ ಸುಳಿಯದ ಮಧ್ಯವರ್ತಿಗಳು
ಕಳೆದ ವರ್ಷ ಕೋವಿಡ್ ಭೀತಿಯಿಂದ ಕರಿ ಕಬ್ಬು ಉತ್ಪಾದನೆ ಕಡಿಮೆ ಇದ್ದರೂ, 10 ಕಬ್ಬಿನ ಜಲ್ಲೆ ಇರುವ ಒಂದು ಕಟ್ಟಿಗೆ ಸರಾಸರಿ 300 ರಿಂದ 350 ರೂಪಾಯಿ ಬೆಲೆ ಸಿಕ್ಕಿತ್ತು. ಅದರೆ ಈ ಬಾರಿ ಉತ್ತಮ ಮಳೆಯಾದ ಕಾರಣ ಹೆಚ್ಚಿನ ಫಸಲು ಬಂದಿದೆ. ಆದರೆ ಖರೀದಿದಾರರು ಬಾರದ ಹಿನ್ನಲೆಯಲ್ಲಿ ಒಂದು ಕಟ್ಟು ಕರಿ ಕಬ್ಬನ್ನು ಕೇವಲ 200 ರೂಪಾಯಿಗಳಿಗೆ ಮಾರಾಟ ಮಾಡಲಾಗುತ್ತಿದೆ. ಕಡಿಮೆ ಬೆಲೆಗೆ ಮಾರಟ ಮಾಡಲು ಮುಂದಾದರೂ ವರ್ತಕರು ಇತ್ತ ಸುಳಿಯುತ್ತಿಲ್ಲ ಎನ್ನುವುದು ರೈತರ ಅಳಲಾಗಿದೆ.
ಪ್ರತಿ ಎಕರೆ ಕರಿ ಕಬ್ಬು ಬೆಳೆಯಲು ಕನಿಷ್ಠ 2 ಲಕ್ಷ ಖರ್ಚಾಗುತ್ತಿದ್ದು, ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಕ್ಕು ಪಸಲು 4 ರಿಂದ 5 ಲಕ್ಷ ರೂಪಾಯಿಗೆ ಮಾರಾಟವಾದರೆ ರೈತನಿಗೆ ಲಾಭ ಸಿಗುತ್ತದೆ. ಆದರೆ ಮಾರುಕಟ್ಟೆಯಲ್ಲಿ ಬೆಲೆ ಏರಿಳಿತದಿಂದ ಹಲವಾರು ಬಾರಿ ಬಂಡವಾಳ ಹಾಕಿದ ದುಡ್ಡು ಸಿಗದೆ ನಷ್ಟ ಅನುಭವಿಸಿದ್ದಾರೆ. ಈ ಬಾರಿ ಕರಿ ಕಬ್ಬು ಬೆಲೆ ಕುಸಿದಿರುವ ಹಿನ್ನಲೆಯಲ್ಲಿ ಕಬ್ಬು ಬೆಳೆಗಾರ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.
ರೈತನಿಗೆ ಸಿಗದ ಅಸಲಿನ ಬೆಲೆ
ಕಬ್ಬು ಬೆಳೆಗಾರರ ಸಂಕಷ್ಟದ ಬಗ್ಗೆ ಮಾತಾನಾಡಿದ ರೈತ ಅಜಿತ್, "ವರ್ಷಕ್ಕೆ ಒಂದೇ ಬೆಳೆಯಾದ ಕರಿ ಕಬ್ಬು ಬೇಸಾಯ ಈ ಬಾರಿ ರೈತನಿಗೆ ದುಬಾರಿಯಾಗಿದೆ. ಕಳೆದೆರಡು ವರ್ಷ ಕೋವಿಡ್ ಹಾವಳಿಯಿಂದಾಗಿ ರೈತರಿಗೆ ನಷ್ಟ ಅನುಭವಿಸಿದ್ದರು. ಆದರೆ ಈ ಬಾರಿ ಕೋವಿಡ್ ಹಾವಳಿ ಇಲ್ಲದ ಕಾರಣ ಹೆಚ್ಚಿನ ಆದಾಯದ ನಿರೀಕ್ಷೆಯಿತ್ತು. ಆದರೆ ಮಧ್ಯವರ್ತಿಗಳು ಮತ್ತು ವರ್ತಕರು ಕಬ್ಬು ಖರೀದಿ ಮಾಡದೆ ರೈತರನ್ನು ಸಾಲದ ಕೂಪಕ್ಕೆ ತಳ್ಳಿದ್ದಾರೆ ಎಂದು ಆರೋಪಿಸಿದರು.
ಹೊಸಕೋಟೆ ಮತ್ತು ಕೋಲಾರ ಭಾಗದಲ್ಲೂ ಕರಿ ಕಬ್ಬು ಬೆಳೆದಿದ್ದು, ಆ ಭಾಗದ ಕಬ್ಬು ಹೆಚ್ಚಾಗಿ ಹೊರ ರಾಜ್ಯಕ್ಕೆ ರಫ್ತಾಗುತ್ತಿತ್ತು. ಆದರೆ ಈ ಬಾರಿ ಮಧ್ಯವರ್ತಿಗಳು ಚನ್ನಪಟ್ಟಣದ ಖರೀದಿ ಬದಲು ಕೋಲಾರ ಮತ್ತು ಹೊಸಕೋಟೆಯ ರೈತರಿಂದ ಕಡಿಮೆ ಬೆಲೆ ಕಬ್ಬು ಖರೀದಿ ಮಾಡುತ್ತಿದ್ದಾರೆ. ಹಾಗಾಗಿ ಇತ್ತ ವರ್ತಕರು ಸುಳಿಯುತ್ತಿಲ್ಲ. ರೈತರ ತಾವು ಬೆಳೆದ ಕರಿ ಕಬ್ಬನ್ನು ಸ್ಥಳೀಯ ಮಾರುಕಟ್ಟೆ ಹಾಗೂ ಹೆದ್ದಾರಿ ಪಕ್ಕದಲ್ಲಿ ಮಾರಾಟ ಮಾಡುತ್ತಿದ್ದಾರೆ ಆದರೂ ಸೂಕ್ತ ಬೆಲೆ ಸಿಗುತ್ತಿಲ್ಲ. ಸರ್ಕಾರ ರೈತರ ನೆರವಿಗೆ ಧಾವಿಸಿ ಸಂಕಷ್ಟದಲ್ಲಿರುವ ಕರಿ ಕಬ್ಬು ಬೆಳೆಗಾರರಿಗೆ ಪರಿಹಾರ ನೀಡಬೇಕು ಎಂದು ರೈತರು ಮನವಿ ಮಾಡಿದ್ದಾರೆ.
ಸಂಕ್ರಾಂತಿ ಕಬ್ಬು ಮಾರಾಟದ ಬಗ್ಗೆ ರೈತರ ಅಳಲು
ಕಬ್ಬು ಬೆಳೆಗಾರ ಕುಮಾರ್ ಮಾತನಾಡಿ "ಹೊಸಕೋಟೆ ಮತ್ತು ಕೋಲಾರ ಭಾಗದಲ್ಲಿ ಕೆಮಿಕಲ್ ಮಿಶ್ರಿತ ನೀರು ಇರುವರಿಂದ ಅಲ್ಲಿನ ರೈತರು ಬೇಸಾಯಕ್ಕೆ ರಸಗೊಬ್ಬರ ಬಳಸುವುದಿಲ್ಲ. ಆದರೆ ಈ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅಗತ್ಯ ಪೋಷಕಾಂಶಗಳು ಸೇರಿದಂತೆ ರಸಗೊಬ್ಬರಕ್ಕೆ ಹೆಚ್ಚಿನ ಪ್ರಮಾಣದ ಹಣ ವ್ಯಯವಾಗುತ್ತದೆ. ಹಾಗಾಗಿ ನಮ್ಮಲ್ಲಿ ಕರಿ ಕಬ್ಬಿನ ಬೆಲೆ ಜಾಸ್ತಿ. ಕೋಲಾರ ಮತ್ತು ಹೊಸಕೋಟೆ ಭಾಗದ ರೈತರು ಕಡಿಮೆ ಖರ್ಚಿನಲ್ಲಿ ಬೇಸಾಯ ಮಾಡುವ ಹಿನ್ನಲೆಯಲ್ಲಿ ಕಡಿಮೆ ಬೆಲೆಗೆ ಕಬ್ಬು ಮಾರಟ ಮಾಡುತ್ತಿದ್ದಾರೆ. ಅದನ್ನೇನೆಪ ಮಾಡಿಕೊಂಡಿರುವ ಮಧ್ಯವರ್ತಿಗಳು ಈ ಭಾಗದ ರೈತರನ್ನು ಶೋಷಣೆ ಮಾಡುತ್ತಿದ್ದಾರೆ" ಎಂದು ಆರೋಪಿಸಿದರು.