ರಾಮನಗರದಲ್ಲಿ ಗುಡುಗು ಸಹಿತ ಮಳೆ; ಬಾಳೆ, ರೇಷ್ಮೆ ನಾಶ
ರಾಮನಗರ, ಮೇ 18: ರಾಮನಗರ ಜಿಲ್ಲೆಯಾದ್ಯಂತ ನಿನ್ನೆ ಸಂಜೆಯಿಂದ ನಿರಂತರ ಮಳೆಯಾಗಿದೆ. ಗುಡುಗು ಸಹಿತ ಬಿರುಗಾಳಿ ಮಳೆಗೆ ಜಿಲ್ಲೆಯ ಹಲವೆಡೆ ಹಾನಿ ಸಂಭವಿಸಿದೆ. ರೈತರು ತಮ್ಮ ಬೆಳೆಗಳನ್ನು ಕಳೆದುಕೊಂಡಿದ್ದಾರೆ.
ನಿನ್ನೆ ಸಂಜೆ 5 ಗಂಟೆಯಿಂದ ಜಿಲ್ಲೆಯಲ್ಲಿ ಮಳೆ ಆರಂಭವಾಗಿ ನಿರಂತರವಾಗಿ ಸುರಿದಿದೆ. ಮಳೆಯಿಂದಾಗಿ ಪಟ್ಟಣದಲ್ಲಿ ಸಂಪೂರ್ಣ ವಿದ್ಯುತ್ ಸ್ಥಗಿತಗೊಂಡಿತ್ತು. ರಾತ್ರಿಯೂ ಮಳೆ ಮುಂದುವರೆದಿದ್ದು, ಮಳೆ, ಬಿರುಗಾಳಿಗೆ ಸಿಲುಕಿ ಹಲವು ಕಡೆ ಬಾಳೆ ತೋಟಗಳು ನಾಶವಾಗಿವೆ. ಹಲವೆಡೆ ರೇಷ್ಮೆ ಸಾಕಾಣಿಕೆ ಮನೆಯೂ ಮಳೆಯಿಂದಾಗಿ ಧ್ವಂಸಗೊಂಡಿವೆ.
ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನ ಸೀಬನಹಳ್ಳಿಯಲ್ಲಿ ರೈತರ ರೇಷ್ಮೆ ಗೂಡಿಗೂ ಹಾನಿಯಾಗಿದೆ. ಜೋರು ಗಾಳಿಯಿಂದಾಗಿ ಕೆಂಪೇಗೌಡ ಎಂಬುವರಿಗೆ ಸೇರಿದ ರೇಷ್ಮೆ ಸಾಕಾಣಿಕೆ ಮನೆಯ ಹೆಂಚುಗಳು ಹಾರಿಹೋಗಿ, ಮನೆಯೊಳಗಿದ್ದ ರೇಷ್ಮೆ ಗೂಡುಗಳು ಧ್ವಂಸಗೊಂಡಿವೆ. ಇದರಿಂದ ಸಾಕಷ್ಟು ಪ್ರಮಾಣದಲ್ಲಿ ರೈತನಿಗೆ ನಷ್ಟ ಸಂಭವಿಸಿದೆ.
ಅದೇ ಗ್ರಾಮದ ನಾಗವೇಣಿ ಎಂಬುವರಿಗೆ ಸೇರಿದ ಮನೆಯ ಶೀಟ್ ಗಳೂ ಗಾಳಿಯಿಂದಾಗಿ ಹಾರಿಹೋಗಿವೆ. ಮಳೆಯ ಅಬ್ಬರ ಇನ್ನೂ ಮುಂದುವೆರೆಯುವ ಲಕ್ಷಣಗಳಿದ್ದು, ಮತ್ತಷ್ಟು ಹಾನಿ ಸಂಭವಿಸುವ ಸಾಧ್ಯತೆಯಿದೆ.