ಚನ್ನಪಟ್ಟಣ; ಇತಿಹಾಸದ ಪುಟ ಸೇರಿದ ಚಾಮುಂಡೇಶ್ವರಿಯ ಅಭಿಷೇಕ
ರಾಮನಗರ, ಆಗಸ್ಟ್, 01: ಬೊಂಬೆ ನಗರಿ ಚನ್ನಪಟ್ಟಣದ ಗೌಡಗೆರೆ ಗ್ರಾಮದಲ್ಲಿ ಸುಮಾರು 68 ಅಡಿ ಎತ್ತರದ ಶ್ರೀ ಚಾಮುಂಡೇಶ್ವರಿ ಪಂಚಲೋಹ ವಿಗ್ರಹವನ್ನು ಸ್ಥಾಪಿಸಲಾಗಿದ್ದು, ಇದು ವಿಶ್ವದ ಅತೀ ಎತ್ತರದ ವಿಗ್ರಹವಾಗಿದೆ. ವಿಶ್ವವಿಖ್ಯಾತಿ ಶ್ರೀ ಚಾಮುಂಡೇಶ್ವರಿ ಮಹಾಮಸ್ತಾಭಿಷೇಕ ರಾಜ್ಯದ 2ನೇ ಮಹಾ ಮಜ್ಜನ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.
Recommended Video
ಐತಿಹಾಸಿಕ ಶ್ರೀ ಚಾಮುಂಡೇಶ್ವರಿ ತಾಯಿಯ ಮಹಾಮಜ್ಜನಕ್ಕೆ ನಾಡಿನ ಗಣ್ಯರು, ರಾಜಕೀಯ ಗಣ್ಯರು ಸೇರಿದಂತೆ ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ ಅಪಾರ ಭಕ್ತಾಧಿಗಳು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು. ಬೆಳಗ್ಗೆ 11ಕ್ಕೆ ಆರಂಭವಾದ ಮಹಾಮಸ್ತಾಭಿಷೇಕ ತಡ ರಾತ್ರಿವರೆಗೂ ಸಾಗಿತು.
ಜಗತ್ತಿನ ಮೂದಲ ಪಂಚಲೋಕ ವಿಗ್ರಹ ಎಂಬ ಖ್ಯಾತಿ ಪಡೆದಿರುವ 68 ಅಡಿ ಎತ್ತರದ ಚಾಮುಂಡೇಶ್ವರಿ ವಿಗ್ರಹಕ್ಕೆ ಇದೇ ಪ್ರಪ್ರಥಮ ಭಾರಿಗೆ ಮಹಾಮಸ್ತಾಭಿಷೇಕ ನಡೆಯಿತ್ತು. ಅದರಲ್ಲೂ ಶ್ರವಣಬೆಳಗೊಳದ ಬಾಹುಬಲಿ ಮೂರ್ತಿಗೆ ಮಾಡುವ ಮಹಾಮಸ್ತಾಭಿಷೇಕ ಬಿಟ್ಟರೆ ಪಂಚಲೋಹ ವಿಗ್ರಹಕ್ಕೆ ನಡೆದ ಮೊದಲ ಮಹಾಮಸ್ತಾಭಿಷೇಕ ಎಂಬ ಹೆಗ್ಗಳಿಕೆ ಪಾತ್ರವಾಗಿದೆ.
ಮಹಾ ಮಜ್ಜನದಲ್ಲಿ ದೇವಿಯ ಬೃಹತ್ ವಿಗ್ರಹಕ್ಕೆ ಕಾಶ್ಮೀರದಿಂದ ತರಿಸಿದ ಕೇಸರಿ, ಶುದ್ಧ ಶ್ರೀಗಂಧದ ಸೇರಿದಂತೆ ಹಾಲು, ಮೊಸರು, ಸಪ್ತನದಿಗಳ ಪವಿತ್ರ ಜಲ, ಎಳನೀರು, ಜೇನುತುಪ್ಪ, ಒಣ ಹಣ್ಣುಗಳು, 5 ಬಗೆಯ ಹಣ್ಣುಗಳು, ವಿಭೂತಿ, ಹರಿಶಿಣ, ಕುಂಕುಮ, ಚಿನ್ನದ ನೀರು, ಬೆಳ್ಳಿಯ ನೀರು, ಮುತ್ತಿನ ನೀರು, ಹಾಗೂ ಗೋಮಯಗಳಿಂದ ಅಭಿಷೇಕ ಮಾಡಲಾಯಿತು.
ಮಹಾಮಸ್ತಾಭಿಷೇಕದಲ್ಲಿ ದೇಶದ 7 ಪವಿತ್ರ ನದಿಗಳ ಜಲ ಸೇರಿದಂತೆ 47 ಬಗೆಯ ವಸ್ತುಗಳನ್ನು ಸುಮಾರು 1,008 ಲೀಟರ್ ಅಳತೆಯಲ್ಲಿ ಬಳಸಿ ಅಭಿಷೇಕ ಮಾಡಲಾಯಿತು. ಮಹಾಮಸ್ತಕಾಭಿಷೇಕ ಬೆಳಗ್ಗೆಯಿಂದ ತಡರಾತ್ರಿಯವರೆಗೂ ಮುಂದುವರೆದಿತ್ತು. ಅಭಿಷೇಕಕ್ಕೆ ಬಳಕೆ ಮಾಡಲಾದ ವಸ್ತುಗಳನ್ನು ಭಕ್ತರಿಗೆ ಪ್ರಸಾದ ರೂಪದಲ್ಲಿ ನೀಡಲಾಯಿತು.

ಮಹಾಮಸ್ತಾಭಿಷೇಕದ ಬಗ್ಗೆ ನಾಯಕರ ಅಭಿಪ್ರಾಯ
ಮಹಾಮಸ್ತಾಭಿಷೇಕದ ಹಿನ್ನೆಲೆಯಲ್ಲಿ ಬೆಳಗ್ಗೆ 10 ಗಂಟೆಗೆ ಆಗಮಿಸಿದ ಮಾಜಿ ಮುಖ್ಯಮಂತ್ರಿ ಹಾಗೂ ಕ್ಷೇತ್ರದ ಶಾಸಕ ಎಚ್. ಡಿ. ಕುಮಾರಸ್ವಾಮಿ ಅವರು ಭಕ್ತರು ಕಾಣಿಕೆಯಾಗಿ ನೀಡಿರುವ ಸುಮಾರ 15 ಕೆ.ಜಿ. ಚಿನ್ನದ ಚಾಮುಂಡೇಶ್ವರಿ ವಿಗ್ರಹವನ್ನು ಅನಾವರಣಗೊಳಿಸಿದರು. ನಂತರ ದೇವಿಗೆ ಹಾಲಿನ ಅಭಿಷೇಕ ಮಾಡಿ ವಿಶೇಷ ಪೂಜೆ ಸಲ್ಲಿಸಿದರು. ಅಲ್ಲದೇ ಮೂಲ ವಿಗ್ರಹದ ದರ್ಶನವನ್ನು ಪಡೆದರು.
ಈ ಬಗ್ಗೆ ಮಾತನಾಡಿದ ಅವರು ಕ್ಷೇತ್ರದಲ್ಲಿ ವಿಶ್ವದ ಅತಿ ದೂಡ್ಡ ಪಂಚಲೋಹದ ತಾಯಿ ಶ್ರೀ ಚಾಮುಂಡೇಶ್ವರಿ ತಾಯಿಯನ್ನು ನಿರ್ಮಾಣ ಮಾಡಿರುವುದು ಹೆಮ್ಮೆಯ ವಿಚಾರವಾಗಿದೆ. ನಾನು ಕ್ಷೇತ್ರದ ಶಾಸಕನಾಗಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ಮುಂದೆಯೂ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತೇನೆ ಎಂದರು. ರಾಜ್ಯದಲ್ಲಿ ಉಂಟಾಗಿರುವ ವೈಷಮ್ಯದ ವಾತವಾರಣ ದೂರ ಮಾಡಿ, ಜನರು ಸುಖ, ಶಾಂತಿ ಹಾಗೂ ಸಹಬಾಳ್ವೆಯಿಂದ ಜೀವನ ನಡೆಸುವಂತೆ ಹರಸು ತಾಯಿ ಎಂದು ದೇವಿಯಲ್ಲಿ ಪ್ರಾರ್ಥನೆ ಸಲ್ಲಿಸಿದ್ದೇನೆ ಎಂದರು.
ತಡವಾಗಿ ಕ್ಷೇತ್ರಕ್ಕೆ ಆಗಮಿಸಿದ ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ್ ಅವರು ದೇವಿಗೆ ಕೇಸರಿ ಹಾಗೂ ಮೈಸೂರಿನ ಶ್ರೀಗಂಧದ ಅಭ್ಯಂಜನ ನೆರವೇರಿಸಿದರು. ಈ ಬಗ್ಗೆ ಮಾತಾನಾಡಿದ ಅವರು ಕ್ಷೇತ್ರಕ್ಕೆ ಮೂದಲ ಬಾರಿಗೆ ಭೇಟಿ ನೀಡುತ್ತಿದ್ದೇನೆ. ಅದರಲ್ಲೂ ಐತಿಹಾಸಿ ಮಹಾಮಸ್ತಾಭಿಷೇಕಕ್ಕೆ ಸಾಕ್ಷಿಯಾಗಿದ್ದೇನೆ. ಇದು ಅವಿಸ್ಮರಣೀಯ ಕ್ಷಣ ಎಂದು ಭಾವುಕರಾದರು. ಕ್ಷೇತ್ರದ ಅಭಿವೃದ್ಧಿಗೆ ವೈಯಕ್ತಿಕವಾಗಿ 10 ಲಕ್ಷ ರೂಪಾಯಿಗಳ ಕೊಡುಗೆ ನೀಡುತ್ತಿದ್ದೇನೆ. ನಾನು ಜಿಲ್ಲಾ ಉಸ್ತುವಾರಿ ಸಚಿವನಾಗಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.
ಮಾಜಿ ಸಚಿವ ಸಿ.ಪಿ.ಯೋಗೇಶ್ ಈ ಬಗ್ಗೆ ಮಾತನಾಡಿದ ಅವರು ವಿಶ್ವದಲ್ಲೇ ಅತೀ ಎತ್ತರದ ಚಾಮುಂಡೇಶ್ವರಿ ವಿಗ್ರಹವನ್ನು ಪ್ರತಿಷ್ಠಾಪಿಸಿದ್ದ ಡಾ. ಮಲ್ಲೇಶ್ ಗುರೂಜಿ ಅವರು ಇದೀಗ ಮಹಾಮಸ್ತಕಾಭಿಷೇಕ ಮಾಡುವ ಮೂಲಕ ತಾಲೂಕಿನ ಕೀರ್ತಿಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ಮಹಾಮಸ್ತಕಾಭಿಷೇಕಕ್ಕೆ ಮುಖ್ಯಮಂತ್ರಿಗಳು ಆಗಮಿಸಬೇಕಾಗಿತ್ತು. ಅವರು ಕಾರಣಾಂತರಗಳಿಂದ ಬರಲಾಗಿಲ್ಲ. ಮುಂದಿನ ದಿನಗಳಲ್ಲಿ ಸಿಎಂ ಕ್ಷೇತ್ರಕ್ಕೆ ಬಂದು ದೇವಿಯ ಆಶೀರ್ವಾದ ಪಡೆಯಲಿದ್ದಾರೆ ಎಂದರು.

ವಿವಿಧ ಮಠಾಧೀಶರಿಂದ ನೆರವೇರಿದ ಕಾರ್ಯಕ್ರಮ
ಕಾರ್ಯಕ್ರಮದಲ್ಲಿ ವಿವಿಧ ಮಠಾಧೀಶರು ಪಾಲ್ಗೊಂಡು ದೇವಿಗೆ ಪೂಜೆ ಸಲ್ಲಿಸಿದರು. ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗೇಶ್ವರ ಸ್ವಾಮೀಜಿ, ಆದಿಚುಂಚನಗಿರಿ ಅರ್ಚಕರಹಳ್ಳಿ ಶಾಖಾಮಠಾಧೀಶ ಶ್ರೀ ಅನ್ನದಾನೇಶ್ವರನಾಥ ಸ್ವಾಮೀಜಿ, ಬೇವೂರು ಮಠದ ಮೃತ್ಯುಂಜಯ ಶಿವಾಚಾರ್ಯ ಸ್ವಾಮೀಜಿ, ಕುಡಿನೀರು ಕಟ್ಟೆ ಮಠದ ಶ್ರೀ ಮುಮ್ಮಡಿ ಶಿವರುದ್ರಮಹಾಸ್ವಾಮೀಜಿ ಸೇರಿದಂತೆ ಧಾರ್ಮಿಕ ಕ್ಷೇತ್ರದ ವಿವಿಧ ಮುಖಂಡರು ಪಾಲ್ಗೊಂಡು ಮಹಾಮಸ್ತಕಾಭಿಷೇಕದ ಯಶಸ್ವಿಗೆ ಸಾಕ್ಷಿಯಾದರು.

47 ಬಗೆಯ ದ್ರವ್ಯಗಳಿಂದ ಮಹಾಮಸ್ತಾಭಿಷೇಕ
ನಾಡಿನ ಜನರು ಶಾಂತಿ, ನೆಮ್ಮದಿಯಾಗಿ ಜೀವನ ನಡೆಸಲಿ ಎಂಬ ಲೋಕಕಲ್ಯಾಣಕ್ಕಾಗಿ ಸುಮಾರು 47 ಬಗೆಯ 37,247 ಕೆ.ಜಿ. ಪ್ರಮಾಣದ ದ್ರವ್ಯಗಳಿಂದ ಶ್ರೀ ಚಾಮುಂಡೇಶ್ವರಿ ತಾಯಿಯ 68 ಅಡಿ ಎತ್ತರದ ಪಂಚಲೋಹ ವಿಗ್ರಹಕ್ಕೆ ಪ್ರಥಮ ಬಾರಿಗೆ ಮಹಾಮಸ್ತಾಭಿಷೇಕ ನಡೆಸಲಾಯಿತು. ಇನ್ನೂ ಮುಂದೆ 3 ವರ್ಷ ಅಥವಾ 5 ವರ್ಷಗಳಿಗೆ ಒಮ್ಮೆ ದೇವಿಯ ಮಹಾಮಸ್ತಾಭಿಷೇಕ ಮಾಡಲಾಗುವುದು ಎಂದು ಅಲ್ಲಿನ ಗಣ್ಯರು ತಳಿಸಿದರು. 2011ರಲ್ಲಿ ಗೌಡಗೆರೆ ಕ್ಷೇತ್ರಕ್ಕೆ ಭೇಟಿ ನೀಡಿದ ಅಘೋರಿ ನಾಗ ಸಾಧುಗಳು ಕ್ಷೇತ್ರದಲ್ಲಿ ಚಾಮುಂಡೇಶ್ವರಿ ತಾಯಿಯ ಪಂಚಲೋಹದ ವಿಗ್ರಹ ಸ್ಥಾಪನೆ ಮಾಡುವಂತೆ ಸೂಚನೆ ನೀಡಿದರು. ಅಘೋರಿ ಸಾಧುಗಳು ಪ್ರತಿಮೆ ನಿರ್ಮಾಣದ ನಂತರ ತಾಯಿ ಮಹಾಮಸ್ತಾಭಿಷೇಕ ಮಾಡಬೇಕು ಎಂದು ಆದೇಶ ಮಾಡಿದ್ದರು. ಹಾಗಾಗಿ ಮಹಾಮಸ್ತಾಭಿಷೇಕ ನೆರವೇರಿಸಿದ್ದೇವೆ ಎಂದು ಧರ್ಮದರ್ಶಿ ಮಲ್ಲೇಶ್ ತಿಳಿಸಿದರು.

ವಿಗ್ರಹಕ್ಕೆ ಬಳಸಲಾದ ಪ್ರಮುಖ ವಸ್ತುಗಳು
ಅತಿ ಎತ್ತರದಲ್ಲಿ ಜಗತ್ತಿನಲ್ಲೇ ಪ್ರಥಮ ವಿಗ್ರಹ ಎನ್ನಲಾಗಿರುವ ಗೌಡಗೆರೆ ಗ್ರಾಮದ ಶ್ರೀ ಚಾಮುಂಡೇಶ್ವರಿ ಪಂಚಲೋಹ ವಿಗ್ರಹ, ಸುಮಾರು 35 ಸಾವಿರ ಕೆ.ಜಿ ತೂಕದ ಚಿನ್ನ, ಬೆಳ್ಳಿ, ಇತ್ತಾಳೆ, ಕಂಚು, ತಾಮ್ರ ಸೇರಿದಂತೆ ಪಂಚಲೋಹಗಳಿಂದ ತಯಾರಾಗಿದೆ. ಈ ವಿಗ್ರಹ ಮುಸ್ಲಿಂ ಕಲಾವಿಧನ ಸಾರಥ್ಯದಲ್ಲಿ ನಿರ್ಮಾಣಗೊಂಡಿದೆ ಎಂಬುದು ವಿಶೇಷವಾಗಿದೆ.
ಇದು ನೆಲಮಟ್ಟದಿಂದ 68 ಅಡಿ ಎತ್ತರವಿರುವ ದೇವಿಯ ಕೈಯಲ್ಲಿ ಶಂಖ ಚಕ್ರ, ಗದಾ ಹಸ್ತೆ, ಸರ್ಪ ಶಾರ್ದೂಲ, ಕಮಂಡಲ, ಅಂಕುಶ, ಖಡ್ಗ, ಪರಶು, ಧನಸ್ಸು ಸೇರದಂತೆ 18 ಬಗೆಯ ಆಯುಧಗಳು ಇವೆ. ಸಿಂಹದ ಜೊತಯಲ್ಲಿ ಸೌಮ್ಯ ರೂಪಿಯಾಗಿ ನಿಂತ ಭಂಗಿಯಲ್ಲಿರುವ ನಾಡ ದೇವತೆ ಪ್ರತಿಮೆಯನ್ನು ಪ್ರತಿ ದಿನ ದೇಶದ ನಾನಾ ಮೂಲೆಗಳಿಂದ ಆಗಮಿಸುವ ಸಾವಿರಾರು ಭಕ್ತಾಧಿಗಳು ಕಣ್ತುಂಬಿಕೊಳ್ಳುತ್ತಿದ್ದಾರೆ.











Click it and Unblock the Notifications