ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಭೂಮಿ ಮಾರಾಟ; ರಾಮನಗರದಲ್ಲಿ 6 ಜನ ಅಂದರ್
ರಾಮನಗರ, ಸೆಪ್ಟೆಂಬರ್, 16; ಜಿಲ್ಲೆಯಲ್ಲಿ ಉಳುಮೆ ಮಾಡಲು ಸ್ವಲ್ಪ ಭೂಮಿಗಾಗಿ ಲಕ್ಷಾಂತರ ಫಲಾನುಭವಿಗಳು ಅರ್ಜಿ ಹಾಕಿ ವರ್ಷಾನುಗಟ್ಟಲೇ ಅಲೆಯುತ್ತಾರೆ. ಅವರಿಗೆ ಉಳುಮೆ ಮಾಡಲು ಭೂಮಿಯೇ ಸಿಗುತ್ತಿಲ್ಲ. ಆದರೆ ದಾಖಲೆಗಳನ್ನು ಸೃಷ್ಟಿಸಿ ಕೋಟ್ಯಂತರ ರೂಪಾಯಿ ಬೆಳೆ ಬಾಳುವ ಸರ್ಕಾರಿ ಭೂಮಿಯನ್ನು, ಭೂದಾಖಲೆಗಳನ್ನ ಸರ್ಕಾರಿ ತಂತ್ರಾಂಶದಲ್ಲಿ ಅಪ್ಲೋಡ್ ಮಾಡಿರುವ ಜಾಲ ಇದೀಗ ಬೆಳಕಿಗೆ ಬಂದಿದೆ.
ಸರ್ಕಾರಿ ಭೂಮಿಯನ್ನು ಬೇಕಾಬಿಟ್ಟಿಯಾಗಿ ಮಾರಾಟ ಮಾಡಿರುವ ಕಾಂಗ್ರೆಸ್ ಮುಖಂಡ ಇದೀಗ ಪೊಲೀಸರ ಅತಿಥಿ ಆಗಿದ್ದಾನೆ. ಕನಕಪುರ ನಗರಸಭೆ ಉಪಾಧ್ಯಕ್ಷ ಸೇರಿದಂತೆ 6 ಮಂದಿ ಖದೀಮರ ತಂಡವನ್ನು ಇದೀಗ ರಾಮನಗರ ಪೊಲೀಸರು ಬಲೆಗೆ ಕೆಡವಿದ್ದಾರೆ. ಜಮೀನು ಕೊಳ್ಳುವಾಗ ನೂರೆಂಟು ದಾಖಲೆಗಳನ್ನು ನೋಡಿ ಖರೀದಿ ಮಾಡಲಾಗುತ್ತದೆ. ಯಾಕೆಂದರೆ ಇಲ್ಲಿ ಅಸಲಿಗಿಂತ ನಕಲಿ, ಮೋಸವೇ ಹೆಚ್ಚಾಗಿರುತ್ತದೆ. ಆದರೆ ಎಲ್ಲವೂ ಅಸಲಿ ಆಗಿದ್ದರೂ ಇದೀಗ ಜಮೀನು ಖರೀದಿಸಿದವರು ಬೃಹತ್ ಜಾಲಕ್ಕೆ ಬಿದ್ದಿರುವುದು ವಿಪರ್ಯಾಸ ಸಂಗತಿ ಆಗಿದೆ.
ರಾಮನಗರ ಜಿಲ್ಲೆಯಲ್ಲಿ ಇಂತಹದೊಂದು ಜಾಲ ಬೆಳಕಿಗೆ ಬಂದಿದ್ದು, ಸರ್ಕಾರಿ ಜಮೀನಿನಲ್ಲಿ ಉಳುಮೆ ಮಾಡಲು ಫಾರಂ 57ರ ಅಡಿ ಅರ್ಜಿ ಸಲ್ಲಿಸಿದವರೇ ಇವರ ಟಾರ್ಗೆಟ್ ಆಗಿದ್ದಾರೆ. ಸರ್ಕಾರಿ ಸರ್ವರ್ನಲ್ಲಿರುವ ತಂತ್ರಾಂಶಗಳ ಲೋಪಗಳೇ ಈ ಖದೀಮರಿಗೆ ವರದಾನ ಆಗಿತ್ತು. ಕನಕಪುರದ ನಗರಸಭಾ ಉಪಾಧ್ಯಕ್ಷ, ಕಾಂಗ್ರೆಸ್ ಮುಖಂಡ, ಸೈಬರ್ ಸೆಂಟರ್ ಮಾಲೀಕ ರಾಮದುರ್ಗಯ್ಯ ಸೇರಿದಂತೆ ಸರ್ಕಾರಿ ಸಿಬ್ಬಂದಿಗಳು, ರಿಯಲ್ ಎಸ್ಟೆಟ್ ಏಜೆಂಟ್, ಬ್ರೋಕರ್ ಕೆಲಸ ಮಾಡುತ್ತಿದ್ದ 6 ಆರೋಪಿಗಳು ಸೇರಿ ಸರ್ವರ್ ಹ್ಯಾಕ್ ಮಾಡಿದ್ದಾರೆ ಎನ್ನುವ ಭಯಾನಕ ಮಾಹಿತಿಯೊಂದು ಹೊರಬಿದ್ದಿದೆ.

ನೂರಾರು ರಕರೆ ಭೂಮಿಗೆ ಖನ್ನಾ
ತಹಶೀಲ್ದಾರ್, ಉಪವಿಭಾಗಕಾರಿಗಳು ಮಾಡಲಾಗದ ಆರ್ಟಿಸಿಯನ್ನು ಕುಳಿತಲ್ಲಿಯೇ ಫಲಾನುವಿಗಳಿಗೆ ನೀಡಿದ್ದಾರೆ. ಒಂದು ಆರ್ಟಿಸಿಗೆ 5 ಲಕ್ಷಗಳಂತೆ 7 ಆರ್ಟಿಸಿಗೆ 35 ಲಕ್ಷ ಹಣ ಮಾಡಿರುವ ಆರೋಪಿಗಳು, ಅಂದಾಜು 6 ಕೋಟಿಯಷ್ಟು ಹಣವನ್ನು ಸರ್ಕಾರಕ್ಕೆ ವಂಚಿಸಿದ್ದಾರೆ. ಅಲ್ಲದೇ ಇದೇ ಮಾದರಿಯಲ್ಲಿ ನೂರಾರು ಎಕರೆ ಸರ್ಕಾರಿ ಭೂಮಿಯನ್ನು ಮಾರಾಟ ಮಾಡಿರುವ ಶಂಕೆಯು ವ್ಯಕ್ತವಾಗಿದೆ. ಫಾರಂ ನಂಬರ್ 56, 57ರ ಅಡಿಯಲ್ಲಿ ಭೂಮಿ ನೀಡಿ ಎಂದು ಸರ್ಕಾರಕ್ಕೆ ಒಂದಷ್ಟು ಜನರು ಅರ್ಜಿ ಹಾಕಿದ್ದರು. ಇಂಥವರನ್ನು ಬಲಿಪಶುಗಳಾಗಿ ಮಾಡಿದ್ದ ಕಾಂಗ್ರೆಸ್ ಮುಖಂಡ, ಕನಕಪುರದ ನಗರಸಭಾ ಉಪಾಧ್ಯಕ್ಷ ರಾಮದುರ್ಗಯ್ಯ ನೇತೃತ್ವದ ನುಂಗಣ್ಣರ ಗುಂಪು 6 ಜನ ಫಲಾನುಭವಿಗಳಿಗೆ ಭೂಮಿ ಮಾರಾಟ ಮಾಡಿದ್ದಾರೆ.

ಡಿಜಿಟಲ್ ಸಹಿ ಇಲ್ಲದೇ ಸರ್ಕಾರಿ ಭೂಮಿ ಮಾರಾಟ
ಕನಕಪುರ ತಾಲೂಕಿನ ಬನ್ನಿಕುಪ್ಪೆ, ತುಗಣಿ ಹಾಗೂ ರಾಂಪುರ ಭಾಗದಲ್ಲಿ 6 ಎಕರೆ 26 ಗುಂಟೆ ಸರ್ಕಾರಿ ಭೂಮಿಗೆ 2019-20ನೇ ಸಾಲಿನಲ್ಲಿಯೇ ಆರ್ಟಿಸಿ ನೀಡಿದ್ದಾರೆ. ಆದರೆ ಆರ್.ಟಿ.ಸಿಯಲ್ಲಿನ ಪರಭಾರೆ ಕಾಲಂ ಅನ್ನು ಖಾಲಿ ಬಿಟ್ಟಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ. ಅಲ್ಲದೇ ಡಿಜಿಟಲ್ ಸಹಿ ಇಲ್ಲದಿರುವುದನ್ನು ಗಮನಿಸಿದ ಅಧಿಕಾರಿಗಳು ಸೈಬರ್ ಠಾಣೆಗೆ ದೂರು ನೀಡಿದ್ದಾರೆ.

ಯಾವ್ಯಾವ ಕಲಂನಡಿ ಪ್ರಕರಣ
ಒಳಸಂಚು ನಡೆಸಿ ಪಹಣಿ ಸೃಷ್ಟಿಸಿರುವುದಾಗಿ ನೀಡಿದ ದೂರಿನ ಮೇರೆಗೆ ರಾಮನಗರ ಸಿ.ಇ.ಎನ್ ಪೊಲೀಸರು ಮೊ.ನಂ. 144/2022 ಕಲಂ 66, 66 (ಸಿ) 66 (ಡಿ) ಐಟಿ ಆಕ್ಟ್ & ಕಲಂ 420, 465, 467, 468, 471, 477, 120 (ಬಿ) ರೆ/ವಿ 34 ಐಪಿಸಿ ಹಾಗೂ ಕಲಂ 192 (ಎ) ಕರ್ನಾಟಕ ಲ್ಯಾಂಡ್ ರೆವಿನ್ಯೂ ಆಕ್ಟ್ 1964ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

6 ಜನ ಸರ್ಕಾರಿ ಭೂಮಿ ವಂಚಕ ಪಟ್ಟಿ
ಪ್ರಕರಣ ಬೆನ್ನತ್ತಿದ ಪೊಲೀಸರು 6 ಮಂದಿಯನ್ನ ವಶಕ್ಕೆ ಪಡೆದಿದ್ದಾರೆ. ರಾಮದುರ್ಗಯ್ಯ, ಚಿಕ್ಕಮರೀಗೌಡ, ನರಸಿಂಹಮೂರ್ತಿ, ರಾಘವಮೂರ್ತಿ, ಅರುಣ್, ಶಿವರಾಜು ಮೇಲೆ ಎಫ್ಐಆರ್ ದಾಖಲಿಸಿದ್ದು, ಭೂಮಿ ಖರೀದಿಸಿದವರನ್ನೂ ವಿಚಾರಣೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಸಂತೋಷ್ ಬಾಬು ಮಾಹಿತಿ ನೀಡಿದ್ದಾರೆ. ಒಟ್ಟಾರೆ ಸರ್ಕಾರಿ ತಂತ್ರಾಂಶಗಳ ಲೋಪಗಳನ್ನೇ ಟಾರ್ಗೆಟ್ ಮಾಡುತ್ತಿದ್ದ ಕಾಂಗ್ರೆಸ್ ಮುಖಂಡ ರಾಮದುರ್ಗಯ್ಯ ನೇತೃತ್ವದ ಖದೀಮರ ತಂಡ ಇದೀಗ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಬ್ರೋಕರ್ಗಳ ಮೂಲಕ ಭೂಮಿ ಖರೀದಿಸಿದ್ದವರಿಗೂ ಕೂಡ ಕಂಟಕ ಎದುರಾಗಿದ್ದು, ಅತ್ತ ಭೂಮಿಯೂ ಇಲ್ಲ, ಇತ್ತ ಕೊಟ್ಟ ಕಾಸು ಇಲ್ಲವೆನ್ನುವ ಆತಂಕ ರೈತರದ್ದಾಗಿದೆ.












Click it and Unblock the Notifications