ದೇವರಹೊಸಳ್ಳಿ ಸಂಜೀವರಾಯಸ್ವಾಮಿ ಜಾತ್ರೆ/ನವ ದಂಪತಿಗಳ ಜಾತ್ರೆಗೆ ತೆರೆ
ರಾಮನಗರ, ಜುಲೈ 24: ವ್ಯಾಸ ಮಹರ್ಷಿಗಳು ತಪಸ್ಸು ಮಾಡಿ, ಬೆಂಕಿಯ ಕೆಂಡದಲ್ಲಿ ಪ್ರಾಣದೇವರ ಮೂರ್ತಿಯನ್ನು ಪ್ರತಿಷ್ಠಾಪಿಸಿದರು ಎಂಬ ಪುರಾಣದ ಹಿನ್ನೆಲೆ ಇರುವ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ದೇವರಹೊಸಳ್ಳಿ ಸಂಜೀವರಾಯಸ್ವಾಮಿಯ ಬ್ರಹ್ಮರಥೋತ್ಸವ ವಿಜೃಂಭಣೆಯಿಂದ ನೆರವೇರಿತು.
ವರ್ಷಕ್ಕೊಮ್ಮೆ ಆಷಾಢ ಮಾಸದಲ್ಲಿ ನಡೆಯುವ ಬ್ರಹ್ಮರಥೋತ್ಸವದಲ್ಲಿ ಹೊಸದಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿರುವ ನವ ದಂಪತಿಗಳು ಸಂಜೀವರಾಯ ಸ್ವಾಮಿಯ ದರ್ಶನ ಪಡೆದರೆ ದಾಂಪತ್ಯ ಜೀವನ ಸುಖಮಯ ಆಗಿರುತ್ತದೆ ಎಂಬ ನಂಬಿಕೆ ಇದೆ. ಈ ಹಿನ್ನೆಲೆಯಲ್ಲಿ ರಾಜ್ಯದ ವಿವಿಧೆಡೆಗಳಿಂದ ನೂರಾರು ನವ ದಂಪತಿ ಆಗಮಿಸಿ, ಅದ್ಧೂರಿ ಬ್ರಹ್ಮರಥೋತ್ಸವದಲ್ಲಿ ಭಾಗವಹಿಸಿ, ಸಂಜೀವರಾಯನ ಕೃಪೆಗೆ ಪಾತ್ರರಾದರು.
'ಎರಡು ಕಣ್ಣು'ಗಳಿಗೆ 2 ಸಾವಿರ ಕೋಟಿ ಕೊಡುವುದಾಗಿ ಘೋಷಿಸಿದ ಎಚ್ ಡಿಕೆ
ವೈಶಿಷ್ಟ್ಯಗಳಿಂದ ಕೂಡಿದ ರಾಮನಗರ ಜಿಲ್ಲೆ ಚನ್ನಪಟ್ಟಣದ ದೇವರಹೊಸಹಳ್ಳಿಯ ಸಂಜೀವರಾಯಸ್ವಾಮಿಯ ಬ್ರಹ್ಮರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು. ಗೋಪೂಜೆ, ಅಶ್ವಪೂಜೆ ಮತ್ತು ಗಜಪೂಜೆ ನೆರವೆರಿತು. ತಹಶೀಲ್ದಾರ್ ರಮೇಶ್ ಅವರು ರಥಕ್ಕೆ ಪೂಜೆ ಸಲ್ಲಿಸುವುದರ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು.
ಸಾಲಿಗ್ರಾಮ ಶಿಲೆಯ ವಿಗ್ರಹ
ಸಾಲಿಗ್ರಾಮ ಶಿಲೆಗಳಿಂದ ಇಲ್ಲಿನ ಹನುಮನ ವಿಗ್ರಹ ಪ್ರತಿಷ್ಠಾಪನೆ ಆಗಿದ್ದು, ವ್ಯಾಸಮಹರ್ಷಿಗಳು ಬೆಂಕಿಯ ಕೆಂಡದ ಮೂಲಕ ಹನುಮನ ರೂಪ ನೀಡಿದ್ದಾರೆ ಎಬುದು ಇಲ್ಲಿನ ಜನರ ನಂಬಿಕೆ. ದೇವರಹೊಸಳ್ಳಿಯ ಸಂಜೀವರಾಯಸ್ವಾಮಿ ಮೂರ್ತಿ ಸೌಮ್ಯವಾಗಿದೆ. ಇದರಿಂದ ಸಂಜೀವರಾಯಸ್ವಾಮಿಯ ಮೊರೆ ಹೋದರೆ ಮಾನಸಿಕ ಮತ್ತು ದೈಹಿಕ ರೋಗಗಳು ನಿವಾರಣೆಯಾಗುತ್ತದೆ ಎಂಬ ಪ್ರತೀತಿ ಇದೆ.
ಭಕ್ತರ ಇಷ್ಟಾರ್ಥ ಸಿದ್ಧಿ
ಪ್ರತಿ ವರ್ಷದಂತೆಯೇ ರಾಜ್ಯದ ವಿವಿಧೆಡೆಗಳಿಂದ ಸಾವಿರಾರು ಭಕ್ತರು ಇಷ್ಟಾರ್ಥ ಸಿದ್ಧಿಗಾಗಿ ಆಗಮಿಸಿದ್ದರು. ಪೂರ್ವಿಕರ ಕಾಲದಿಂದಲೂ ಸಂಜೀವರಾಯಸ್ವಾಮಿಯ ಬ್ರಹ್ಮರಥೋತ್ಸವಕ್ಕೆ ನವ ದಂಪತಿಗಳು ಭಕ್ತಿ - ಶ್ರದ್ಧೆಯಿಂದ ಪೂಜೆ ಸಲ್ಲಿಸುವುದು ವಾಡಿಕೆ. ದೇವರ ದರ್ಶನದಿಂದ ಮಾನಸಿಕವಾಗಿ ನೆಮ್ಮದಿ ಸಿಗುತ್ತಿದೆ ಮತ್ತು ಭಕ್ತರ ಇಷ್ಟಾರ್ಥ ಸಿದ್ಧಿಯಾಗುತ್ತದೆ ಎಂಬ ನಂಬಿಕೆ ಆಸ್ತಿಕರಲ್ಲಿ ಮನೆ ಮಾಡಿದೆ.
ವಿಜೃಂಭಣೆಯ ರಥೋತ್ಸವಕ್ಕೆ ತೆರೆ
ಅದರಲ್ಲೂ ಮುಖ್ಯವಾಗಿ ಆಷಾಢ ಮಾಸದಲ್ಲಿ ನವದಂಪತಿಗಳು ಸಂಜೀವರಾಯಸ್ವಾಮಿ ದರ್ಶನ ಪಡೆದರೆ ದಾಂಪತ್ಯ ಜೀವನದಲ್ಲಿ ಸುಖ, ಶಾಂತಿ, ಮನೆಯಲ್ಲಿ ಸಮೃದ್ಧಿ, ನೆಮ್ಮದಿ ನೆಲೆಸುತ್ತದೆ ಎಂಬ ನಂಬಿಕೆ ಇದೆ. ಕಳೆದ ಮೂರು ದಿನಗಳಿಂದ ನಡೆಯುತ್ತಿದ್ದ ವಿಜೃಂಭಣೆಯ ರಥೋತ್ಸವಕ್ಕೆ ಇಂದು ತೆರೆಬಿದ್ದಿತು.
ದಂಪತಿಗಳ ಭೇಟಿಗೊಂದು ಅವಕಾಶ
ಆಷಾಢ ಮಾಸದಲ್ಲಿ ನಡೆಯುವ ಈ ಸಂಜೀವರಾಯಸ್ವಾಮಿ ರಥೋತ್ಸವದಲ್ಲಿ ನವ ದಂಪತಿಗಳ ಹೆಚ್ಚಾಗಿ ಕಂಡುಬರುತ್ತಾರೆ. ಮದುವೆಯಾದ ಮೊದಲ ವರ್ಷ ಪತಿ- ಪತ್ನಿ ಸಾಮಾನ್ಯವಾಗಿ ದೂರ ಇರುತ್ತಾರೆ. ಸಂಜೀವರಾಯಸ್ವಾಮಿ ಜಾತ್ರೆಗೆ ನವ ದಂಪತಿಗಳು ಬಂದು, ಅಲ್ಲಿ ಭೇಟಿ ಮಾಡಲು ಒಂದು ಅವಕಾಶ ಕೂಡ ಸಿಕ್ಕಂತಾಗುತ್ತದೆ.