ರಾಮನಗರ; ಮಕ್ಕಳಿಗೆ ಮದ್ಯ ಕುಡಿಸಿದ ದುಷ್ಕರ್ಮಿಗಳು
ರಾಮನಗರ, ಜೂನ್ 07; ರಾಮನಗರದಲ್ಲಿ ಮಕ್ಕಳಿಗೆ ಮದ್ಯ ಕುಡಿಸಿ ವಿಡಿಯೋ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕೋಡಿಹಳ್ಳಿ ಪೊಲೀಸರು ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ.
ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಕೋಡಿಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಬಾಳೆ ತೋಟದಲ್ಲಿ 10 ವರ್ಷದೊಳಗಿನ 7 ಮಕ್ಕಳು ಬಾಡೂಟದ ಜತೆಗೆ ಮದ್ಯ ಕುಡಿಯುತ್ತಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.
ಮದ್ಯ ಕುಡಿದ ಬಳಿಕ ಮಕ್ಕಳು ಅವಾಚ್ಯ ಶಬ್ದಗಳಿಂದ ಬೈದಾಡಿಕೊಳ್ಳುತ್ತಿದ್ದಾರೆ. ಬಾಲಕನೊಬ್ಬ ತನಗೆ ಮತ್ತಷ್ಟು ಮದ್ಯ ಬೇಕು ಎಂದು ಕೂಗಾಡುತ್ತಾನೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಜನರು ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದರು.

ವಿಡಿಯೋ ವೈರಲ್ ಆಗುತ್ತಿದ್ದಂತೆ ಪ್ರಕರಣ ದಾಖಲು ಮಾಡಿಕೊಂಡ ಕೋಡಿಹಳ್ಳಿ ಠಾಣಾ ಪೊಲೀಸರು ಮೂವರ ವಿರುದ್ಧ ಕೇಸ್ ದಾಖಲಿಸಿಕೊಂಡಿದ್ದಾರೆ. ಮರಳೀಪುರ ಗ್ರಾಮದ ಗಣೇಶ್, ಪ್ರಮೋದ್, ಸೋಮಸುಂದರ್ ಆರೋಪಿಗಳು.
ರಾಮನಗರ: ಮಕ್ಕಳಿಗೆ ಮದ್ಯ ಕುಡಿಸಿ ವಿಕೃತಿ ಮರೆದ ವಿಡಿಯೋಗಳು ಸಮಾಜಿಕ ಜಾಲತಾಣದಲ್ಲಿ ವೈರಲ್.
— oneindiakannada (@OneindiaKannada) June 7, 2021
ಬಾಳೆ ತೋಟದಲ್ಲಿ 10 ವರ್ಷದೊಳಗಿನ 7 ಮಕ್ಕಳು ಬಾಡೂಟದ ಜತೆಗೆ ಮದ್ಯ ಕುಡಿಯುತ್ತಿರುವ ವಿಡಿಯೋ ಸಕ್ಕತ್ ವೈರಲ್.
ಸಾಮಾಜಿಕ ಜಾಲತಾಣದ ಪ್ರಕಾರ ರಾಮನಗರ ಜಿಲ್ಲೆ ಕನಕಪುರ ತಾಲ್ಲೂಕಿನ ಕೋಡಿಹಳ್ಳಿಯಲ್ಲಿ ಘಟನೆ..#Ramanagara @BlrCityPolice pic.twitter.com/cGSoZtMXIU
ಮನೆಯಲ್ಲಿ ಬಾಡೂಟ ಆಯೋಜನೆ ಮಾಡಲಾಗಿತ್ತು. ಬಾಡೂಟದ ವೇಳೆ ಮಕ್ಕಳಿಗೆ ಮದ್ಯ ಕುಡಿಸಿ ಆರೋಪಿಗಳು ಖುಷಿ ಪಟ್ಟಿದ್ದರು. ಅದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದರು. ಪ್ರಕರಣ ಸಂಬಂಧ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.












Click it and Unblock the Notifications