ಜಾರಕಿಹೊಳಿ ರಾಜೀನಾಮೆ: ಸಿಎಂಗೆ ಅಭಿನಂದನೆ ಸಲ್ಲಿಸಿದ ದೂರುದಾರ
ರಾಮನಗರ, ಮಾರ್ಚ್ 3: ಲೈಂಗಿಕ ಹಗರಣದ ಸಿಡಿ ಬಿಡುಗಡೆಗೆ ಸಂಬಂಧಿಸಿದಂತೆ ಜಲಸಂಪನ್ಮೂಲ ಸಚಿವರಾಗಿದ್ದ ರಮೇಶ್ ಜಾರಕಿಹೊಳಿ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಾಮಾಜಿಕ ಹೋರಾಟಗಾರ, ಪ್ರಕರಣದ ದೂರುದಾರ ದಿನೇಶ್ ಕಲ್ಲಳ್ಳಿ, "ಮುಖ್ಯಮಂತ್ರಿಗಳಿಗೆ ಮೊದಲು ಅಭಿನಂದನೆ ಸಲ್ಲಿಸುತ್ತೇನೆ. ಇಡೀ ಪ್ರಕರಣದ ಸಂಬಂಧ ಸಂಪೂರ್ಣವಾಗಿ ತನಿಖೆಯಾಗಬೇಕು'' ಎಂದು ಎಂದು ಹೇಳಿದ್ದಾರೆ.
"ನಾನು ಪೊಲೀಸ್ ಆಯುಕ್ತರಿಗೆ ಸಿಡಿಯನ್ನು ನೀಡಿದ್ದೇನೆ, ಆ ಸಿಡಿಯಲ್ಲಿ ಸತ್ಯಾಂಶ ಇದೆ. ನೈತಿಕತೆಯಲ್ಲಿ ಸಿಎಂ ಯಡಿಯುರಪ್ಪ ಅವರು ರಮೇಶ್ ಜಾರಕಿಹೊಳಿ ಅವರ ರಾಜೀನಾಮೆ ಪಡೆದಿದ್ದಾರೆ. ಈ ಪ್ರಕರಣದಲ್ಲಿ ಗಂಭೀರತೆ ಇದೆ'' ಎಂದು ತಿಳಿಸಿದರು.

"ಸಚಿವ ಸಂಪುಟದಲ್ಲಿ ಇಂಥವರು ಇರುವುದು ಬೇಡ, ರಾಜೀನಾಮೆ ಪಡೆಯಿರಿ ಅಂತಾ ಹೇಳಿದ್ದೆ. ಹೀಗಾಗಿ ರಾಜೀನಾಮೆ ಪಡೆದಿದ್ದಾರೆ. ರಮೇಶ್ ಜಾರಕಿಹೊಳಿ ಅವರು ತನಿಖೆಯ ಮೇಲೆ ಪ್ರಭಾವ ಬೀರುವುದಿಲ್ಲ ಅಂತಾ ಅಂದುಕೊಂಡಿದ್ದೇನೆ. ನಾನು ಉಚ್ಚ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸುತ್ತೇನೆ, ನನ್ನ ಹೋರಾಟ ಮುಂದುವರೆಯುತ್ತದೆ'' ಎಂದು ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಳ್ಳಿ ತಿಳಿಸಿದರು.
"ನಾನು ಕಾನೂನು ಪರವಾಗಿ ಹೋರಾಟ ಮಾಡುತ್ತೇನೆ. ಬಹಳ ಅಕ್ರಮಗಳು ಇವೆ, ನಾನು ಮುಂದೆ ಹೇಳುತ್ತೇನೆ. ಇಂತಹ ಗಂಭೀರ ಪ್ರಕರಣಗಳು ಇವೆ. ಕೆಲವು ಪ್ರಭಾವಿ ನಾಯಕರು ಹಾಗೂ ಸಚಿವ ಸಂಪುಟದಲ್ಲಿ ಇನ್ನೂ ಕೆಲವರು ಇದ್ದಾರೆ. ಮುಂದೆ ಇದರ ಬಗ್ಗೆ ಮಾತನಾಡುತ್ತೇನೆ. ನನಗೆ ಜೀವ ಬೆದರಿಕೆ ಕೆರಗಳು ಬರುತ್ತಿವೆ ನಾನು ರಾಮನಗರ ಎಸ್ಪಿಗೆ ದೂರು ನೀಡಿತ್ತಿದ್ದೇನೆ'' ಎಂದರು.

ಸಾಮಾಜಿಕ ಹೋರಾಟ ದಿನೇಶ್ ಕಲ್ಲಳ್ಳಿ ಅವರು ರಾಮನಗರ ಎಸ್ಪಿಗೆ ದೂರು ನೀಡಿದ್ದಾರೆ. ಅಪರಿಚಿತರು ಮನೆಯ ಬಳಿ ತಿರುಗಾಟ ಹಾಗೂ ಅಪರಿಚಿತರಿಂದ ಬಂದ ಕರೆಗಳ ಹಿನ್ನೆಲೆ ವಾಟ್ಸಾಪ್ ಮೂಲಕ ದಿನೇಶ್ ಕಲ್ಲಳ್ಳಿ ದೂರು ನೀಡಿದರು.












Click it and Unblock the Notifications