ರಾಮನಗರ; ಶಾಸಕರು, ಅಧಿಕಾರಿಗಳಿಗೆ ಕೋವಿಡ್ ಸೋಂಕು
ರಾಮನಗರ, ಜನವರಿ 17; ರಾಜ್ಯಾದ್ಯಂತ ಕೋವಿಡ್ ಮೂರನೇ ಅಲೆ ಅಬ್ಬರದ ನಡುವೆಯೂ ರಾಮನಗರ ಜಿಲ್ಲೆಯಲ್ಲಿ ಪ್ರತಿ ದಿನ ಬೆರಳೆಣಿಕೆಯಷ್ಟು ಕೋವಿಡ್ ಸೋಂಕಿತರು ಪತ್ತೆಯಾಗುತ್ತಿದ್ದರು. ಆದರೆ ಕಳೆದ ಒಂದು ವಾರದಿಂದ ಪ್ರತಿ ದಿನ ಮೂರಂಕಿಯ ಸಂಖ್ಯೆಯಲ್ಲಿ ಸೋಂಕಿತರು ಪತ್ತೆಯಾಗುತ್ತಿದ್ದಾರೆ.
ಬೆಂಗಳೂರು ಸಮೀಪದಲ್ಲಿರುವ ರಾಮನಗರ ಜಿಲ್ಲೆಯ ಜನರು ಪ್ರತಿದಿನ ನಾನಾ ಕೆಲಸಗಳ ನಿಮಿತ್ತ ಬೆಂಗಳೂರಿಗೆ ಭೇಟಿ ನೀಡುತ್ತಾರೆ. ಅದರಲ್ಲೂ ಪ್ರತಿ ದಿನ ಜಿಲ್ಲೆಯಿಂದ 4 ಸಾವಿರಕ್ಕೂ ಹೆಚ್ಚು ಮಂದಿ ಉದ್ಯೋಗಕ್ಕಾಗಿ ಬೆಂಗಳೂರನ್ನು ಆಶ್ರಯಿಸಿದ್ದಾರೆ. ಬೆಂಗಳೂರಿನೊಂದಿಗೆ ನಿರಂತರ ಸಂಪರ್ಕದಲ್ಲಿರುವ ರಾಮನಗರ ಕೋವಿಡ್ ಹಾಟ್ ಸ್ಪಾಟ್ ಆಗಲಿದೆಯೇ? ಎನ್ನುವ ಭೀತಿ ಜನರದ್ದು.
ರಾಮನಗರದ ಶಾಸಕಿ ಅನಿತಾ ಕುಮಾರಸ್ವಾಮಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಕಳೆದ ಸೋಮವಾರ ಕ್ಷೇತ್ರಕ್ಕೆ ಬಂದಿದ್ದ ಅವರು ಹಲವು ಅಭಿವೃದ್ಧಿ ಕಾಮಾಗಾರಿಗಳಿಗೆ ಗುದ್ದಲಿ ಪೂಜೆ ಮಾಡಿದ್ದರು. ಶನಿವಾರ ಬೆಳಗ್ಗೆ ವೈದ್ಯಕೀಯ ವರದಿಯಲ್ಲಿ ಅವರಿಗೆ ಕೋವಿಡ್ ಧೃಡಪಟ್ಟಿದೆ.

ಕೋವಿಡ್ ಸೋಂಕು ಪತ್ತೆಯಾದ ಹಿನ್ನಲೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಪತ್ನಿ ಅನಿತಾ ಕುಮಾರಸ್ವಾಮಿ ಬೆಂಗಳೂರಿನ ನಿವಾಸದಲ್ಲೇ ಹೋಂ ಐಸೋಲೇಷನ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಯಾವುದೇ ಕಾರ್ಯಕರ್ತರನ್ನು ಭೇಟಿಯಾಗುತ್ತಿಲ್ಲ, ಕ್ಷೇತ್ರಕ್ಕೂ ಸಹ ಭೇಟಿ ನೀಡಿಲ್ಲ.
ಮಾಜಿ ಶಾಸಕರಿಗೂ ಕೋವಿಡ್; ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿದ್ದ ಮೇಕೆದಾಟು ಪಾದಯಾತ್ರೆಯಲ್ಲಿ ಭಾಗಿಯಾಗಿದ್ದ ಕಾಂಗ್ರೆಸ್ ಮುಖಂಡ, ಮಾಜಿ ಶಾಸಕ. ಎಚ್. ಸಿ. ಬಾಲಕೃಷ್ಣಗೂ ಕೋವಿಡ್ ಸೋಂಕು ದೃಢಪಟ್ಟಿದೆ. ಪಾದಯಾತ್ರೆಯಲ್ಲಿ ಪಾಲ್ಗೊಂಡ ಹಲವಾರು ನಾಯಕರಿಗೆ ಸೋಂಕು ತಗುಲಿದೆ.
ಈ ಸಂಬಂಧ ಟ್ವಿಟ್ ಮಾಡಿರುವ ಎಚ್. ಸಿ. ಬಾಲಕೃಷ್ಣ, "ಇಂದು ನನಗೆ ಕೋವಿಡ್ ಧೃಡಪಟ್ಟಿದ್ದು, ನಾನು ಆರೋಗ್ಯವಾಗಿದ್ದೇನೆ. ಕಳೆದೆರಡು ದಿನಗಳಿಂದ ನನ್ನ ಜೊತೆ ಸಂಪರ್ಕದಲ್ಲಿದ್ದವರು ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಿ" ಎಂದು ಮನವಿ ಮಾಡಿದ್ದಾರೆ.
ಪ್ರಸ್ತುತ ಬೆಂಗಳೂರಿನ ಮನೆಯಲ್ಲಿ ಬಾಲಕೃಷ್ಣ ಐಸೋಲೇಷನ್ ಆಗಿದ್ದಾರೆ. ಭೇಟಿಯಾಗಲು ಬರುವ ಕಾರ್ಯಕರ್ತರಿಗೂ ಮುಂದಿನ ಸೂಚನೆವರಗೂ ಸಹಕರಿಸುವಂತೆ ಮನವಿ ಮಾಡಿದ್ದಾರೆ. ಅಲ್ಲದೇ ಎಲ್ಲರೂ ಎಚ್ಚರದಿಂದ ಇರುವಂತೆ ಹೇಳಿದ್ದಾರೆ.
ಅಧಿಕಾರಿಗಳಿಗೂ ಸೋಂಕು; ಜನವರು 3ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಮನಗರ ಕ್ಷೇತ್ರ ಪ್ರವಾಸ ಕಾರ್ಯಕ್ರಮದ ನಂತರ ಜಿಲ್ಲಾಧಿಕಾರಿ, ಅಪರಾ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತಿ ಸಿಇಓಗೆ ಸೋಂಕು ತಗುಲಿತ್ತು. ಅಧಿಕಾರಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೊದಲು ರಾಮನಗರ ಜಿಲ್ಲಾಧಿಕಾರಿ ಡಾ. ಕೆ. ರಾಕೇಶ್ ಕುಮಾರ್ಗೆ ಕೋವಿಡ್ ಸೋಂಕು ದೃಢಪಟ್ಟಿದೆ. ನಂತರ ಜಿಲ್ಲಾ ಪಂಚಾಯತಿ ಸಿಇಓ ಇಕ್ರಾಂ, ಅಪರ ಜಿಲ್ಲಾಧಿಕಾರಿ ಜವರೇಗೌಡಗೂ ಕೋವಿಡ್ ಸೋಂಕು ದೃಢಪಟ್ಟಿದೆ.
ಏರಿಕೆಯಾದ ಸಕ್ರಿಯ ಪ್ರಕರಣ; ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಏರುತ್ತಿದ್ದು, ಮೂರನೇ ಅಲೆ ಪ್ರಾರಂಭದ ನಂತರ ಭಾನುವಾರ ಓರ್ವ ಸೋಂಕಿತ ಕೋವಿಡ್ಗೆ ಬಲಿಯಾಗಿದ್ದಾನೆ. ಅಲ್ಲದೇ ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳು ಸಾವಿರದ ಗಡಿ ದಾಟಿದೆ.
ಹೆಲ್ತ್ ಬುಲೆಟಿನ್ ಪ್ರಕಾರ ಜಿಲ್ಲೆಯಲ್ಲಿ 148 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. ಓರ್ವ ಮೃತಪಟ್ಟಿದ್ದಾನೆ. ಚನ್ನಪಟ್ಟಣ 28, ಕನಕಪುರ 62, ರಾಮನಗರ 45 ಹಾಗೂ ಮಾಗಡಿ 13 ಪ್ರಕರಣ ದಾಖಲಾಗಿದೆ. ಒಟ್ಟಾರೆ ಜಿಲ್ಲೆಯಲ್ಲಿ ಸೋಂಕಿತರ ಸಾವಿನ ಸಂಖ್ಯೆ 367.












Click it and Unblock the Notifications