ಪವರ್ಫುಲ್ ನಾಯಕರ ಪರ ಅವರ ಪತ್ನಿಯರೇ ಸ್ಟಾರ್ ಪ್ರಚಾರಕಿಯರು
Recommended Video

ರಾಮನಗರ, ಮೇ. 4 : ರೇಷ್ಮೆನಗರಿ ರಾಮನಗರ ಜಿಲ್ಲೆಯ ರಾಜಕಾರಣ ಈ ಬಾರಿ ರಾಜ್ಯದ ಗಮನಸೆಳೆಯುತ್ತಿದೆ. ಘಟಾನುಘಟಿ ನಾಯಕರು ರಾಜಕೀಯ ಅಖಾಡಕ್ಕೆ ಧುಮುಕಿದ್ದು ಬಹಳಷ್ಟು ರಂಗಾಗಿದೆ. ಇನ್ನು ಪವರ್ಫುಲ್ ನಾಯಕರ ಪರವಾಗಿ ಅವರ ಪತ್ನಿಯರೇ ಸ್ಟಾರ್ ಪ್ರಚಾರಕಿಯರಾಗಿದ್ದಾರೆ.
ಅಭ್ಯರ್ಥಿಗಳ ಪರವಾಗಿ ಅವರ ಪತ್ನಿಯರು ಚುನಾವಣಾ ಪ್ರಚಾರ ಮಾಡುತ್ತಿರುವುದು ಕ್ಷೇತ್ರದಲ್ಲಿ ಹೊಸ ಸಂಚಲನ ಮೂಡಿಸಿದೆ. ರಾಮನಗರ ಹಾಗೂ ಚನ್ನಪಟ್ಟಣ ಕ್ಷೇತ್ರಗಳಲ್ಲಿ ಜೆಡಿಎಸ್ ಪಕ್ಷದಿಂದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕಣದಲ್ಲಿದ್ದಾರೆ. ಕನಕಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಪವರ್ಫುಲ್ ಲೀಡರ್ ಡಿ.ಕೆ.ಶಿವಕುಮಾರ್ ಅಖಾಡಕ್ಕೆ ಧುಮುಕಿದ್ದಾರೆ.
ಮತ್ತೊಂದೆಡೆ ಚನ್ನಪಟ್ಟಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸಿ.ಪಿ.ಯೋಗೇಶ್ವರ್ ಕಣಕ್ಕಿಳಿದಿದ್ದು, ಮಾಗಡಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಹೆಚ್.ಸಿ.ಬಾಲಕೃಷ್ಣ ಸ್ಪರ್ಧಿಸಿದ್ದಾರೆ. ಇನ್ನು ಈ ಎಲ್ಲಾ ಲೀಡರ್ ಗಳ ಪರವಾಗಿ ಅವರ ಪತ್ನಿಯರೇ ಪ್ರಚಾರಕ್ಕಿಳಿದು ಕ್ಷೇತ್ರದಾದ್ಯಂತ ಹೊಸ ಸಂಚಲನ ಮೂಡಿಸುತ್ತಿದ್ದಾರೆ.

ಅನಿತಾ ಕುಮಾರಸ್ವಾಮಿ
ರಾಮನಗರ ಹಾಗೂ ಚನ್ನಪಟ್ಟಣ ಕ್ಷೇತ್ರಗಳಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಯವರ ಪರವಾಗಿ ಪತ್ನಿ ಅನಿತಾಕುಮಾರಸ್ವಾಮಿ ಎರಡು ಕ್ಷೇತ್ರಗಳಲ್ಲಿ ಚುನಾವಾಣಾ ಪ್ರಚಾರದ ಸಂಪೂರ್ಣ ಹೊಣೆ ಹೊತ್ತಿದ್ದು, ಎರಡು ರಾಷ್ಟ್ರೀಯ ಪಕ್ಷಗಳನ್ನು ತಿರಸ್ಕರಿಸಿ ಪ್ರಾದೇಶಿಕ ಪಕ್ಷ ಜೆಡಿಎಸ್ ಬೆಂಬಲಿಸಿ ಎಂದು ಪ್ರಚಾರ ನಡೆಸಿದ್ದಾರೆ.

ಶೀಲಾಯೋಗೇಶ್ವರ್
ಚನ್ನಪಟ್ಟಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಕಣದಲ್ಲಿರುವ ಸಿ.ಪಿ.ಯೋಗೇಶ್ವರ್ ಪರವಾಗಿ ಪತ್ನಿ ಶೀಲಾಯೋಗೇಶ್ವರ್ ಚುನಾವಣಾ ಪ್ರಚಾರಕ್ಕಿಳಿದಿದ್ದು, ಅಬ್ಬರದ ಕ್ಯಾಂಪೇನ್ ಮಾಡುತ್ತಿದ್ದಾರೆ. ಇನ್ನು ಇದೇ ವಿಚಾರವಾಗಿ ಮಾತನಾಡಿರುವ ಶೀಲಾಯೋಗೇಶ್ವರ್ ಈ ಬಾರಿ ಚನ್ನಪಟ್ಟಣದಲ್ಲಿ ಯೋಗೇಶ್ವರ್ ಗೆ ಹೆಚ್ಚಿನ ಮತಕೊಟ್ಟು ಗೆಲ್ಲಿಸುತ್ತಾರೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಉಷಾ ಶಿವಕುಮಾರ್
ಕನಕಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಹಿರಿಯ ನಾಯಕ ಡಿ.ಕೆ.ಶಿವಕುಮಾರ್ ಪತ್ನಿ ಉಷಾಶಿವಕುಮಾರ್ ಕೂಡ ಕ್ಷೇತ್ರದಾದ್ಯಂತ ಚುನಾವಣಾ ಪ್ರಚಾರಕ್ಕಿಳಿದಿದ್ದು, ಜನರಿಂದ ಉತ್ತಮ ರೆಸ್ಪಾನ್ಸ್ ಸಿಗುತ್ತಿದೆ ಎಂದು ತಿಳಿಸಿದ್ದಾರೆ.
ಕನಕಪುರ ಕ್ಷೇತ್ರದಲ್ಲಂತೂ ನಮಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ನನ್ನ ಪತಿ ಕ್ಷೇತ್ರದಲ್ಲಿ ಒಳ್ಳೊಳ್ಳೆ ಅಭಿವೃದ್ಧಿ ಕೆಲಸಕಾರ್ಯಗಳನ್ನು ಮಾಡಿದ್ದಾರೆ. ಹಾಗಾಗಿ ಕಾಂಗ್ರೆಸ್ ಪಕ್ಷಕ್ಕೆ ಮತಕೊಡಿ ಎಂದು ಕೇಳುತ್ತಿದ್ದೇನೆಂದು ತಿಳಿಸಿದ್ದಾರೆ.

ಲಕ್ಷ್ಮೀಮಂಜುನಾಥ್
ಮತ್ತೊಂದೆಡೆ ಮಾಗಡಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಕಣದಲ್ಲಿರುವ ಎ.ಮಂಜು ಪತ್ನಿ ಲಕ್ಷ್ಮೀಮಂಜುನಾಥ್ ಕೂಡ ತನ್ನ ಪತಿಯ ಪರವಾಗಿ ಕ್ಷೇತ್ರದಲ್ಲಿ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ.

ರಾಧ ಬಾಲಕೃಷ್ಣ
ಅಂತೆಯೇ ಕಾಂಗ್ರೆಸ್ ಅಭ್ಯರ್ಥಿ ಬಾಲಕೃಷ್ಣ ಪರ ಅವರ ಪತ್ನಿ ರಾಧ ಬಾಲಕೃಷ್ಣ ಚುನಾವಣಾ ಪ್ರಚಾರದಲ್ಲಿ ಸಕ್ರಿಯರಾಗಿದ್ದಾರೆ.
ಒಟ್ಟಾರೆ ಅಭ್ಯರ್ಥಿಗಳ ಪರವಾಗಿ ಅವರ ಪತ್ನಿಯರೇ ಚುನಾವಣಾ ಪ್ರಚಾರ ಮಾಡುತ್ತಿರುವುದು ಒಂದೆಡೆ ಫ್ಲಸ್ ಆಗುತ್ತಿದೆ. ಕ್ಷೇತ್ರದಲ್ಲಿರುವ ಮಹಿಳಾ ಮತದಾರರನ್ನು ಸೆಳೆಯುವುದಕ್ಕೆ ಈ ಮಾಸ್ಟರ್ ಪ್ಲಾನ್ ಮಾಡಿರುವ ನಾಯಕರಿಗೆ ಚುನಾವಣೆಯಲ್ಲಿ ವರ್ಕೌಟ್ ಅಗುತ್ತ ಎಂಬುದನ್ನ ತಿಳಿಯಲು ಮೇ 15 ರವರೆಗೆ ಕಾಯಬೇಕಿದೆ.












Click it and Unblock the Notifications