ರಾಮನಗರ ಬಫರ್ ಜೋನ್ ತೆರವುಗೊಳಿಸಿದ ಜಿಲ್ಲಾಡಳಿತ; ಆರ್ಥಿಕ ಚಟುವಟಿಕೆ ಶುರು
ರಾಮನಗರ, ಮೇ 04: ಪಾದರಾಯನಪುರ ಕೈದಿಗಳಲ್ಲಿ ಕೊರೊನಾ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ರಾಮನಗರದಲ್ಲಿ ವಿಧಿಸಲಾಗಿದ್ದ ಬಫರ್ ಜೋನ್ ಗಳನ್ನು ಇದೀಗ ಜಿಲ್ಲಾಡಳಿತ ಕೇಂದ್ರ ಮತ್ತು ರಾಜ್ಯ ಸರ್ಕಾರದ ಲಾಕ್ ಡೌನ್ ನಿಯಮಾವಳಿಯ ಮೇರೆಗೆ ಬಫರ್ ಜೋನ್ ತೆರವುಗೊಳಿಸಿ ವ್ಯಾಪಾರ ವಹಿವಾಟಿಗೆ ಗ್ರೀನ್ ಸಿಗ್ನಲ್ ನೀಡಿದೆ.
ಜಿಲ್ಲಾ ಕಾರಾಗೃಹದಿಂದ 100 ಮೀಟರ್ ಕಂಟೇನ್ ಮೆಂಟ್ (ನಿರ್ಬಂಧಿತ) ವಲಯ ಹೊರತುಪಡಿಸಿ, ಬಫರ್ ಜೋನ್ ತೆರವುಗೊಳಿಸಿ ಜಿಲ್ಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಾರ್ಗ ಸೂಚಿಯಂತೆ ಎಲ್ಲಾ ರೀತಿಯ ಆರ್ಥಿಕ ಚಟುವಟಿಕೆಗಳನ್ನು ಆರಂಭಿಸಲು ಅನುಮತಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಅವರು ತಿಳಿಸಿದ್ದಾರೆ.
ಬೆಂಗಳೂರಿನ ಪಾದರಾಯನಪುರದಲ್ಲಿ ಏಪ್ರಿಲ್ 19ರಂದು ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಮನಗರ ಜಿಲ್ಲಾ ಕಾರಾಗೃಹದಲ್ಲಿರಿಸಿದ್ದ ಆರೋಪಿಗಳಲ್ಲಿ 5 ಮಂದಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಕಂಟೈನ್ಮೆಂಟ್ ಝೋನ್ ಎಂದು ಘೋಷಣೆ ಮಾಡಿದ್ದ 100 ಮೀಟರ್ ಪ್ರದೇಶವನ್ನು ಯಥಾಸ್ಥಿತಿಯಲ್ಲಿಟ್ಟು, ಜಿಲ್ಲೆಯ ಇನ್ನುಳಿದ ಪ್ರದೇಶಗಳಲ್ಲಿ ರಾಜ್ಯ ಸರ್ಕಾರದ ಮಾರ್ಗದರ್ಶನದಂತೆ ದಿನಸಿ ಅಂಗಡಿ ಮತ್ತು ಇನ್ನಿತರ ಆರ್ಥಿಕ ಚಟುವಟಿಕೆಗಳನ್ನು ನಡೆಸಲು ಅನುಮತಿ ನೀಡಲಾಗಿದೆ.

ರಾಮನಗರ, ಚನ್ನಪಟ್ಟಣ, ಮಾಗಡಿ ಮತ್ತು ಕನಕಪುರಗಳ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಮಾಲ್ ಗಳು, ಚಲನಚಿತ್ರ ಮಂದಿರ ಮತ್ತು ಬೃಹತ್ ಅಂಗಡಿ ಮಳಿಗೆಗಳನ್ನು ಹೊರತುಪಡಿಸಿ ಶಾಪ್ಸ್ ಅಂಡ್ ಎಸ್ಟಾಬ್ಲಿಶ್ ಮೆಂಟ್ ಕಾಯಿದೆ ಅಡಿ ನೋಂದಾಯಿಸಲಾದ ನೆರೆಹೊರೆ ಅಂಗಡಿಗಳು, ಒಂಟಿ ಅಂಗಡಿಗಳನ್ನು ಮತ್ತು ವಸತಿ ಸಮುಚ್ಛಯದಲ್ಲಿರುವ ಅಂಗಡಿಗಳನ್ನು ತೆರೆಯಬಹುದಾಗಿದೆ.
ಈ ಅಂಗಡಿಗಳಲ್ಲಿ ಶೇ. 50ರಷ್ಟು ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸಬಹುದಾಗಿದೆ. ಸಿಬ್ಬಂದಿ ಹಾಗೂ ಗ್ರಾಹಕರು ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ವ್ಯವಹರಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












Click it and Unblock the Notifications