ಪಿಎಸ್ಐ ನೇಮಕಾತಿ ಮರು ಪರೀಕ್ಷೆ ಅನಿವಾರ್ಯ: ಆರಗ ಜ್ಞಾನೇಂದ್ರ
ರಾಮನಗರ, ಮೇ 19: "ಪಿಎಸ್ಐ ನೇಮಕಾತಿ ಹಗರಣದಲ್ಲಿ ಒಂದೇ ಸೆಂಟರ್ನಲ್ಲಿ ಅಕ್ರಮ ನಡೆದಿಲ್ಲ. ಹೆಡ್ ಆಫೀಸ್ನ ಲಾಕರ್ನಲ್ಲಿದ್ದ ಒಎಂಆರ್ ಶೀಟ್ಗಳನ್ನು ತಿದ್ದಿದ್ದಾರೆ. ಅಲ್ಲದೇ ಪರೀಕ್ಷೆಯಲ್ಲಿ ಬ್ಲೂಟೂತ್ ಡಿವೈಸ್ ಬಳಸಿ ಅಕ್ರಮ ನಡೆಸಿದ್ದಾರೆ ಹಾಗಾಗಿ ಪಿಎಸ್ಐ ನೇಮಕಾತಿಗೆ ಮರು ಪರೀಕ್ಷೆ ಅನಿವಾರ್ಯ. ಆದರೆ ನೋಟಿಪಿಕೇಷನ್ ರದ್ದು ಮಾಡುವುದಿಲ್ಲ" ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಪಷ್ಟಪಡಿಸಿದರು.
ಗುರುವಾರ ರಾಮನಗರ ಜಿಲ್ಲಾ ಪೊಲೀಸ್ ಭವನದಲ್ಲಿ ಹಮ್ಮಿಕೊಂಡಿದ್ದ ಪೊಲೀಸ್ ಇಲಾಖೆ ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಗೃಹ ಸಚಿವರು, "ಪಿಎಸ್ಐ ನೇಮಕಾತಿ ಹಗರಣದ ತನಿಖೆ ನಡೆಯುತ್ತಿದೆ. ಹಗರಣದಲ್ಲಿ ಅನೇಕ ಜನರನ್ನು ವಂಚಿಸಿದ್ದಾರೆ. ಇದಕ್ಕೆ ಸದ್ಯದಲ್ಲೇ ಲಾಜಿಕಲ್ ಅಂತ್ಯ ಹಾಡಲಿದ್ದೇವೆ. ಕಷ್ಟಪಟ್ಟು ಓದಿದವರ ಬಾಯಿಗೆ ಮಣ್ಣು ಹಾಕಿದ್ದಾರೆ, ಅಂತಹವರನ್ನು ಸುಮ್ಮನೆ ಬಿಡುವುದಿಲ್ಲ. ನಾವು ತಪ್ಪು ಮಾಡಿದ ಪೊಲೀಸರನ್ನೇ ಬಿಡುತ್ತಿಲ್ಲ ಇನ್ನೂ ತಪ್ಪು ಮಾಡಿರುವ ವಂಚಕರನ್ನು ಬಿಡುತ್ತೇವೆಯೇ?" ಎಂದರು.
"ಪಿಎಸ್ಐ ನೇಮಕಾತಿ ಪರೀಕ್ಷೆ ರಾಜ್ಯದ 92 ಕೇಂದ್ರಗಳಲ್ಲಿ ನಡೆದಿದೆ. ಎಲ್ಲಾ ಕೇಂದ್ರಗಳಲ್ಲಿ ನಾನು ಹೋಗಿ ಪರಿಶೀಲನೆ ನಡೆಸಲು ಸಾಧ್ಯವೇ ?. ಈಗ ಪರೀಕ್ಷೆಯನ್ನೇ ರದ್ದು ಮಾಡಿದ್ದೇವೆ. ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಯಾರು ಅಕ್ರಮ ನಡೆಸಿದ್ದಾರೆ? ಎಂದು ಹೇಳಲು ಸಾಧ್ಯವಾಗುತ್ತಿಲ್ಲ. ಇಂದು ನಾವು ಅಸಹಾಯಕರಾಗಿದ್ದೇವೆ" ಎಂದು ಹೇಳಿದರು.

"2016ರಲ್ಲಿ ಪಿಯುಸಿಯಲ್ಲಿ ನಾಲ್ಕು ಭಾರೀ ಪರೀಕ್ಷೆ ನಡೆದಿದೆ. 2014 -15 ರಲ್ಲಿ ಎಸಿಪಿಗಳ ಸೆಲೆಕ್ಷನ್ ನಲ್ಲಿಯು ಅಂಕಗಳನ್ನು ತಿದ್ದಿದ್ದಾರೆ. ಅಮಾಯಕರಿಗೆ ಅನ್ಯಾಯವಾಗಿರುವುದು ನನ್ನ ಗಮನಕ್ಕೆ ಬಂದಿದೆ. ಮುಂದಿನ ಪರೀಕ್ಷೆಯಲ್ಲಿ ಅಕ್ರಮ ತಡೆಯುವ ಬಗ್ಗೆ ಯೋಚನೆ ಮಾಡುತ್ತಿದ್ದೆ. ಹಾಗಾಗಿ ಯಾವುದೇ ಮುಲಾಜು, ಪ್ರಭಾವ ಇಲ್ಲದೇ ತನಿಖೆ ನಡೆಸಲು ಸಿಐಡಿಗೆ ಅವಕಾಶ ನೀಡಿದ್ದೇವೆ" ಎಂದರು.
ಉಗ್ರಗಾಮಿ ಚಟುವಟಿಕೆ ಕಡಿಮೆಯಾಗಿದೆ; ಬೆಂಗಳೂರಿನ ವೈದ್ಯನ ಮೂಲಕ ಐಸಿಸ್ಗೆ ಸೇರ್ಪಡೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಗೃಹ ಸಚಿವರು, "ನಾನು ಈ ವಿಚಾರ ಮಾಧ್ಯಮದಲ್ಲಿ ನೋಡಿದ್ದೇನೆ, ಇಲಾಖೆಯ ಮೇಲಾಧಿಕಾರಿಗಳಿಗೆ ಈ ಬಗ್ಗೆ ತಿಳಿಸಿದ್ದೇನೆ. ಈ ವಿಚಾರವಾಗಿ ಮಾಹಿತಿ ನೀಡಬೇಕು ಎಂದಿದ್ದೇನೆ, ಮಾಹಿತಿ ಸಂಗ್ರಹ ಮಾಡಿ ನನ್ನ ಬಳಿ ಮಾತನಾಡುತ್ತಾರೆ" ಎಂದರು.
"ಈ ಹಿಂದೆ 2-3 ಕಡೆ ಬಾಂಬ್ ಕೂಡ ಸ್ಫೋಟವಾಗಿತ್ತು. ಈ ರೀತಿಯ ಚಟುವಟಿಕೆ ಮಾಡುವವರು ಇದ್ದಾರೆ. ಇಲ್ಲ ಎನ್ನಲು ಸಾಧ್ಯವಿಲ್ಲ. ಆದರೆ ಇತ್ತೀಚೆಗೆ ಈ ರೀತಿಯ ಚಟುವಟಿಕೆಗಳು ತುಂಬಾ ಕಡಿಮೆಯಾಗಿವೆ. ನಮ್ಮ ಪೊಲೀಸರು ಸಿಟಿಯಲ್ಲಿ ವಿಧ್ವಂಸಕ ಕೃತ್ಯ ನಡೆಸುವರ ಮೇಲೆ ವಿಶೇಷವಾಗಿ ಕಣ್ಗಾವಲು ಇಟ್ಟಿದ್ದಾರೆ. ಎನ್ಐಎ ಈ ಬಗ್ಗೆ ವರದಿ ಕೊಟ್ಟಿದೆ, ನಮ್ಮ ಪೊಲೀಸರು ಜಾಗೃತರಾಗಿ ಕಣ್ಣಿಟ್ಟಿದ್ದಾರೆ" ಎಂದು ಹೇಳಿದರು.

ಆಜಾನ್ ಸಮಸ್ಯೆ ಇಲ್ಲ; ಆಜಾನ್ ಗದ್ದಲದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಆರಗ ಜ್ಞಾನೇಂದ್ರ, "ಆಜಾನ್ ವಿಚಾರದಲ್ಲಿ ಯಾವುದೇ ಸಮಸ್ಯೆ ಇಲ್ಲ , ಅವರೇ ಒಪ್ಪಿಕೊಂಡಿದ್ದಾರೆ ಬೆಳಗ್ಗೆ 6 ರ ನಂತರ ಆಜಾನ್ ಹಾಕುತ್ತೇವೆಂದು. ಎಷ್ಟು ಡೆಸಿಬಲ್ ಶಬ್ದ ಇರಬೇಕು ಎಂದು ಕೋರ್ಟ್ ಆರ್ಡರ್ ಇದೆ. ಅದರ ಪ್ರಕಾರ ನಿಯಮಾವಳಿಗಳನ್ನು ಅವರಿಗೆ ಕೊಡಲಾಗಿದೆ. ಎಲ್ಲಾ ಸಮುದಾಯದವರು ಮೈಕ್ ಲೈಸೆನ್ಸ್ ತೆಗೆದುಕೊಳ್ಳಬೇಕೆಂದು ಹೇಳಿದ್ದೇವೆ. ಈ ಬಗ್ಗೆ ಪರಿಸರ ಇಲಾಖೆಯಿಂದ ನಿರ್ದೇಶನ ನೀಡಲಾಗಿದೆ. ಇದರಲ್ಲಿ ಯಾರ ಪ್ರೋತ್ಸಾಹ ನಡೆಯಲ್ಲ, ಎಲ್ಲವೂ ಕಾನೂನು ಪ್ರಕಾರ ನಡೆಯಬೇಕು" ಎಂದು ಸ್ಪಷ್ಟಪಡಿಸಿದರು.
ಪಠ್ಯ ವಿವಾದ ಊಹಾಪೋಹ; ರಾಜ್ಯದಲ್ಲಿ ಸದ್ದು ಮಾಡುತ್ತಿರುವ ಪಠ್ಯ ಪುಸ್ತಕದ ಗೊಂದಲದ ವಿಚಾರ ಹಾಗೂ ಪಠ್ಯದಲ್ಲಿ ಚಕ್ರವರ್ತಿ ಸೂಲಿಬೆಲೆಯವರ ಭಾಷಣ ಅಳವಡಿಕೆ ವಿಚಾರದ ಬಗ್ಗೆ ಮಾತನಾಡಿ, "ಇದು ನನ್ನ ಇಲಾಖೆ ಅಲ್ಲ, ಶಿಕ್ಷಣ ಸಚಿವರು ಪ್ರತಿದಿನ ಈ ಬಗ್ಗೆ ಮಾಹಿತಿ ಕೊಡುತ್ತಿದ್ದಾರೆ. ನಾರಾಯಣಗುರು, ಭಗತ್ ಸಿಂಗ್ ವಿಚಾರವನ್ನು ಕೈಬಿಟ್ಟಿದ್ದಾರೆ ಎಂದು ಆರೋಪಿಸುತ್ತಿದ್ದಾರೆ. ಸಚಿವರು ಕೈಬಿಟ್ಟಿಲ್ಲ ಎಂದು ಹೇಳುತ್ತಿದ್ದಾರೆ. ಕೇವಲ ಊಹಾಪೋಹದಲ್ಲಿ ಚರ್ಚೆಗಳು ನಡೆಯುತ್ತಿದೆ. ಹಾಗಾಗಿ ಅದನ್ನು ಶಿಕ್ಷಣ ಸಚಿವರು ಹೇಳುತ್ತಾರೆ" ಎಂದರು.












Click it and Unblock the Notifications