ತರಗತಿ ಬಹಿಷ್ಕಾರದ ಎಚ್ಚರಿಕೆ ಕೊಟ್ಟ ಪ್ರಾಥಮಿಕ ಶಾಲಾ ಶಿಕ್ಷಕರು
ರಾಮನಗರ, ಅಕ್ಟೋಬರ್ 22; "ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಅಕ್ಟೋಬರ್ 29ರ ವರೆಗೆ ಕರ್ತವ್ಯ ನಿರ್ವಹಿಸುವ ವೇಳೆ ತೋಳಿಗೆ ಕಪ್ಪು ಪಟ್ಟಿ ಧರಿಸುವುದಾಗಿ" ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಮನಗರ ಜಿಲ್ಲಾಧ್ಯಕ್ಷ ರಮೇಶ್ ಹೇಳಿದ್ದಾರೆ.
ಶುಕ್ರವಾರ ಈ ಸಂಬಂಧ ಪತ್ರಿಕಾ ಹೇಳಿಕೆ ಪ್ರಾಥಮಿಕ ಬಿಡುಗಡೆ ಮಾಡಿರುವ ಅವರು, ಪದವೀಧರ ಸಂಘದ ಶಿಕ್ಷಕರ ಸಮಸ್ಯೆ ಈಡೇರಿಸುವುದು, ವೃಂದ ಮತ್ತು ನೇಮಕಾತಿ ನಿಯಮಗಳ ತಿದ್ದುಪಡಿ, ಸೇವಾವಧಿಯಲ್ಲಿ ಶಿಕ್ಷಕರು ಬಯಸುವ ಜಿಲ್ಲೆಗೆ ಒಂದು ಬಾರಿ ವರ್ಗಾವಣೆಗೆ ಆಗ್ರಹಿಸಿದ್ದಾರೆ.
ಮುಖ್ಯ ಗುರುಗಳಿಗೆ 15, 20, 25 ವರ್ಷಗಳ ವೇತನ ಬಡ್ತಿ, ನೂತನ ಪಿಂಚಣಿ ಯೋಜನೆ ರದ್ದುಗೊಳಿಸುವುದು. ಗ್ರಾಮೀಣಾ ಕೃಪಾಂಕ ಶಿಕ್ಷಕರ ಸಮಸ್ಯೆ, ದೈಹಿಕ ಶಿಕ್ಷಕರು ಹಾಗೂ ಹಿಂದಿ ಶಿಕ್ಷಕರ ಸಮಸ್ಯೆ ಹೀಗೆ ಶಿಕ್ಷಕರ ಇನ್ನೂ ಹಲವಾರು ಪ್ರಮುಖ ಬೇಡಿಕೆ ಈಡೇರಿಸಬೇಕು ಎಂದು ಶಿಕ್ಷಕರ ಸಂಘ ಸರ್ಕಾರವನ್ನು ಆಗ್ರಹಿಸಿದೆ.

ಶಿಕ್ಷಕರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲು ಕಪ್ಪು ಪಟ್ಟಿ ಧರಿಸಿ ಶಿಕ್ಷಕರು ಕರ್ತವ್ಯಕ್ಕೆ ಹಾಜರಾಗುತ್ತಿರುವುದಾಗಿ ತಿಳಿಸಿದ್ದಾರೆ. ನಮ್ಮ ಬೇಡಿಕೆಗಳ ಈಡೇರಿಕೆ ವಿಚಾರದಲ್ಲಿ ಶಿಕ್ಷಕರ ರಾಜ್ಯ ಸಂಘಟನೆಯ ವತಿಯಿಂದ ಸರ್ಕಾರಕ್ಕೆ ಹಲವಾರು ಬಾರಿ ಮನವಿ ಸಲ್ಲಿಸಲಾಗಿದೆ ಅದರೂ ಏನು ಪ್ರಯೋಜನವಾಗಿಲ್ಲ ಎಂದು ದೂರಿದ್ದಾರೆ.
ನಮ್ಮ ಬೇಡಿಕೆಗಳ ಈಡೇರಿಕೆಗೆ ಇತ್ತೀಚೆಗೆ ಶಿಕ್ಷಕರ ತರಬೇತಿ ಶಿಬಿರ ಬಹಿಷ್ಕರಿಸಿ ಅಸಮಾಧಾನ ವ್ಯಕ್ತಪಡಿಸಲಾಗಿದೆ. ಆದರೆ ಸರ್ಕಾರ ತಮ್ಮ ಸಮಸ್ಯೆಗಳ ಬಗ್ಗೆ ಗಮನ ಹರಿಸುತ್ತಿಲ್ಲ. ಕೋವಿಡ್ ಸೋಂಕಿನಿಂದ ಬೋಧನೆ ಕುಂಠಿತವಾಗಿದೆ. ಹೀಗಾಗಿ ವಿದ್ಯಾರ್ಥಿಗಳ ಭವಿಷ್ಯವನ್ನು ಗಮನದಲ್ಲಿ ಇಟ್ಟುಕೊಂಡು ಶಿಕ್ಷಕರು ತಮ್ಮ ಕರ್ತವ್ಯದಲ್ಲಿ ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಮನಗರ ಘಟಕ ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆಯಲ್ಲಿ ಹೋರಾಟದ ಹಾದಿ ಮತ್ತು ಮುಂದೆ ನಡೆಸುವ ಹೋರಾಟದ ಕುರಿತು ವಿವರಿಸಿದ್ದಾರೆ.
* ದಿನಾಂಕ 4/10/2021ರಿಂದ ಶಿಕ್ಷಕರ ತರಬೇತಿ ಬಹಿಷ್ಕಾರವನ್ನು ಮುಂದುವರಿಸಲಾಗಿದೆ.
* ದಿನಾಂಕ 21/10/2021 ರಿಂದ 29/10/2021ರವರೆಗೆ ಕಪ್ಪು ಪಟ್ಟಿ ಧರಿಸಿ ಶಾಲಾ ಶೈಕ್ಷಣಿಕ ಚಟುವಟಿಕೆ ನಿರ್ವಹಿಸುತ್ತಾ ಸರ್ಕಾರದ ಗಮನ ಸೆಳೆಯುವುದು.
* ಸರ್ಕಾರ/ ಇಲಾಖೆ ಸ್ಪಂದಿಸದಿದ್ದರೆ ನಿರಂತರ ಅಸಹಕಾರ ಚಳವಳಿ ಮುಂದುವರಿಸಲಾಗುತ್ತದೆ
* ದಿನಾಂಕ 30/10/2021 ರಿಂದ 10/11/2021ರವರೆಗೆ ಮಧ್ಯಾಹ್ನದ ಬಿಸಿಯೂಟದ (MDM)
ಮಾಹಿತಿಯನ್ನು ಅಪ್ಡೇಟ್ ಮಾಡದೇ ನಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೆ
ಅಸಹಕಾರ ವ್ಯಕ್ತಪಡಿಸುವುದು.
* ದಿನಾಂಕ 11/11/2021 ರಿಂದ 18/11/2021 ರವರೆಗೆ SATS ಮಾಹಿತಿಯನ್ನು Uplode ಮಾಡದೆ ರಾಜ್ಯದ ಶಿಕ್ಷಕರ ಸಮಸ್ಯೆಗಳ ಕುರಿತು ಗಮನ ಸೆಳೆಯುವುದು.
* 50:1ರಂತೆ ಆಯ್ಕೆಯಾದ ರಾಜ್ಯದ ಎಲ್ಲಾ ಪ್ರತಿನಿಧಿಗಳು/ ಪದಾಧಿಕಾರಿಗಳು/ ನಿರ್ದೇಶಕರು ಒಂದು ದಿನದ ರಾಜ್ಯ ಮಟ್ಟದ ಜಾಥ ಹಾಗೂ ಧರಣಿ ಸತ್ಯಾಗ್ರಹವನ್ನು ನಡೆಸಲಾಗುವುದು.
ಶಿಕ್ಷಕರು ನಿರಂತರವಾಗಿ ಮಕ್ಕಳ ಪಾಠ ಬೋಧನೆಗೆ ತೊಂದರೆಯಾಗದ ರೀತಿಯಲ್ಲಿ ಕಳೆದೆರಡು
ತಿಂಗಳಿನಿಂದ ಮಾಡಿರುವ ಹೋರಾಟ ಕುರಿತು ಹಾಗೂ ಅಂತಿಮವಾಗಿ ರಾಜ್ಯ ಮಟ್ಟದ ಚುನಾಯಿತ ಶಿಕ್ಷಕ ಪ್ರತಿನಿಧಿಗಳ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳುವ ಬಗ್ಗೆ ಚರ್ಚಿಸಲಾಗುವುದು ಎಂದು ಹೇಳಿದ್ದಾರೆ.
ನಮ್ಮ ಹೋರಾಟಕ್ಕೆ ಸರ್ಕಾರ ಸೂಕ್ತವಾಗಿ ಸ್ಪಂದಿಸದಿದ್ದರೆ ಇನ್ನೂ ಉಗ್ರವಾದ ಹೋರಾಟಗಳಾದ, ತರಗತಿ ಬಹಿಷ್ಕಾರ, ಶಾಲಾ ಬಹಿಷ್ಕಾರ ಇಂತಹ ಅಂತಿಮ ಹೋರಾಟಕ್ಕೆ ಸಂಘಟನೆಯಿಂದ ರೂಪರೇಷೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದೆ.
ಸರ್ಕಾರ ಈ ಹಂತದ ಹೋರಾಟಕ್ಕೆ ಶಿಕ್ಷಕರನ್ನು ಬಿಡದೇ ನಮ್ಮ ಬೇಕು-ಬೇಡಿಕೆಗಳನ್ನು ಕಾಲಮಿತಿಯಲ್ಲಿ ಈಡೇರಿಸಬೇಕೆಂದು ಈ ಮೂಲಕ ಒತ್ತಾಯಿಸುತ್ತಿದ್ದೇವೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಮನಗರ ಘಟಕ ಸರ್ಕಾರವನ್ನು ಒತ್ತಾಯಿಸಿದೆ.












Click it and Unblock the Notifications