ಅಧಿಕಾರ ಯಾರಿಗೂ ಶಾಶ್ವತ ಅಲ್ಲ ಎಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್
ರಾಮನಗರ, ನವೆಂಬರ್ 8: ಅಧಿಕಾರದಲ್ಲಿ ಯಾರೂ ಶಾಶ್ವತವಾಗಿ ಇರುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದರು.
ಭಾನುವಾರ ಕನಕಪುರದಲ್ಲಿ ನಡೆದ ಎಪಿಎಂಸಿ ಚುಮಾವಣೆಯಲ್ಲಿ ಮತ ಚಲಾಯಿಸಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಡಿ.ಕೆ ಶಿವಕುಮಾರ್, ಬಿಜೆಪಿ ಸರ್ಕಾರ ಕನಕಪುರಕ್ಕೆ ಒಂದು ರುಪಾಯಿ ಅನುದಾನ ನೀಡಿಲ್ಲ ಎಂದು ಸಹೋದರ, ಸಂಸದ ಡಿ.ಕೆ.ಸುರೇಶ ಮಾಡಿದ ಆರೋಪಕ್ಕೆ ಪ್ರತಿಕ್ರಿಯೆ ನೀಡಿದರು.
ಕನಕಪುರದಿಂದ ಮೆಡಿಕಲ್ ಕಾಲೇಜು ಶಿಫ್ಟ್ ಆದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಡಿಕೆಶಿ, ಮೈತ್ರಿ ಸರ್ಕಾರದಲ್ಲಿ ಕನಕಪುರಕ್ಕೆ ಮೆಡಿಕಲ್ ಕಾಲೇಜು ಸಿಕ್ಕಿತ್ತು, ಯಡಿಯೂರಪ್ಪನವರು ಕೂಡ ಅದಕ್ಕೆ ಓಟ್ ಮಾಡಿದ್ದರು. ಆದರೆ ಈಗ ಅದನ್ನು ಕೇಂದ್ರ ಸರ್ಕಾರದ ಯೋಜನೆ ಅಂತಾ ನೆಪ ಹೇಳುತ್ತಿದ್ದಾರೆ ಎಂದು ಆರೋಪಿಸಿದರು.

ಕನಕಪುರ ಮೆಡಿಕಲ್ ಕಾಲೇಜಿಗೆ ಕೇಂದ್ರ ಸರ್ಕಾರದ ಅನುಮತಿ ಏನು ಬೇಕಿಲ್ಲ. ಕನಕಪುರಕ್ಕೆ ಮೆಡಿಕಲ್ ಕಾಲೇಜು ಕೊಡಬಹುದಿತ್ತು, ಆದರೆ ಅವರಿಗೆ ಕೊಡುವ ಮನಸಿಲ್ಲ. ಮೆಡಿಕಲ್ ಕಾಲೇಜನ್ನೇ ಕೊಡಲಿಲ್ಲ, ಇನ್ನು ಬೇರೆ ಅಭಿವೃದ್ಧಿ ಯಾಕೆ ಅಂತಾ ಬಿಟ್ಟಿದ್ದೀವಿ ಎಂದರು.
ನಿಮ್ಮ ಯೋಜನೆ ಕ್ಲಿಯರ್ ಮಾಡ್ತೇವೆಂದು, ಸಿಎಂ ಯಡಿಯೂರಪ್ಪ ನನಗೆ ಮಾತು ಕೊಟ್ಟಿದ್ದರು. ಆದರೆ ಅವರು ಹಾಗೆ ಮಾಡಲಿಲ್ಲ. ನಮ್ಮ ಜಿಲ್ಲೆಗೊಂದು ಮೆಡಿಕಲ್ ಕಾಲೇಜು ಕೇಳಿದ್ದೇವೆ ಕೊಡಬಹುದು, ಅವರಿಗೆ ಅಧಿಕಾರ ಇದೇ. ಅಧಿಕಾರದಲ್ಲಿ ಯಾರೂ ಶಾಶ್ವತ ಇರಲ್ಲ ಎಂದು ಡಿ.ಕೆ.ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.












Click it and Unblock the Notifications