600 ರೂ ಎಣ್ಣೆ ಬಾಕಿ ಕೇಳಿದ್ದಕ್ಕೆ ಮಹಿಳೆಯ ಕೊಲೆ, ಆಭರಣದೊಂದಿಗೆ ಪರಾರಿಯಾಗಿದ್ದ ಖದೀಮರ ಬಂಧನ
ರಾಮನಗರ, ಸೆಪ್ಟೆಂಬರ್ 12: ಅಕ್ರಮವಾಗಿ ಮದ್ಯ ಮಾರಟ ಮಾಡುತ್ತಿದ್ದ ಮಹಿಳೆ ತಾನು ನೀಡಿದ್ದ ಎಣ್ಣೆಯ 600 ರೂಪಾಯಿ ಬಾಕಿ ಮೊತ್ತ ನೀಡುವಂತೆ ಕೇಳಿದ ಕಾರಣ ಸಾಲಗಾರನಿಂದ ಬರ್ಭರವಾಗಿ ಕೊಲೆಯಾಗಿದ್ದರು. ಈ ಪ್ರಕರಣವನ್ನು ಭೇದಿಸುವಲ್ಲಿ ರಾಮನಗರ ಗ್ರಾಮಾಂತರ ಪೋಲಿಸರು ಯಶಸ್ಸಿಯಾಗಿದ್ದಾರೆ.
ಕೇವಲ 600 ರೂ ಸಾಲದ ವಿಚಾರಕ್ಕೆ ಕೆಂಪಮ್ಮ (45) ಎಂಬ ಮಹಿಳೆಯನ್ನು ಕೊಲೆ ಮಾಡಿ, ಆಕೆಯ ಮೈಮೇಲಿದ್ದ ಚಿನ್ನದ ಒಡವೆ ದೋಜಿ ಪರಾರಿಯಾಗಿದ್ದ ಓರ್ವ ಅಪ್ರಾಪ್ತ ಸೇರಿದಂತೆ ಮೂವರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಕೇವಲ 600ರೂ ಸಾಲ ತೀರಿಸಲಾಗದೇ ಮಹಿಳೆ ಹತ್ಯೆ ಮಾಡಿ ಯುವಕರು ಜೈಲು ಪಾಲಾದರೆ, ಪೆಟ್ಟಿ ಅಂಗಡಿ ಅಕ್ರಮವಾಗಿ ಮದ್ಯ ಮಾರಾಟ ಮಾಡಿದ್ದಲ್ಲದೇ, ಆರೋಪಿಗೆ ಸಾಲ ನೀಡಿದ ತಪ್ಪಿಗೆ ಕೆಂಪಮ್ಮ ತನ್ನ ಜೀವವನ್ನೇ ಕಳೆದುಕೊಂಡಿರೋದು ವಿಪರ್ಯಾಸವೇ ಸರಿ.
ರಾಮನಗರ ತಾಲೂಕಿನ ಅಚ್ಚಲು ಕಾಲೋನಿಯಲ್ಲಿ ಕೆಂಪಮ್ಮ ಪೆಟ್ಟಿ ಅಂಗಡಿ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದರು, ಪಟ್ಟಿ ಅಂಗಡಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದರು. ಕೆಂಪಮ್ಮ ಸೆಪ್ಟೆಂಬರ್ 8 ರಂದು ಅರ್ಕಾವತಿ ನದಿ ದಡದಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ಹೆಣವಾಗಿ ದೊರೆತ ಪ್ರಕರಣ ಬೆನ್ನು ಹತ್ತಿದ ಗ್ರಾಮಾಂತರ ಪೋಲಿಸರು ಕೇವಲ ನಾಲ್ಕು ದಿನಗಳಲ್ಲಿ ಆರೋಪಿಗಳ ಹೆಡಮುರಿಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿಗಳ ಬಂಧನ, ಚಿನ್ನ ವಶ
ಕೆಂಪಮ್ಮ ಕೊಲೆ ಸಂಬಂದ ಅದೇ ಗ್ರಾಮದ ಓರ್ವ ಅಪ್ರಾಪ್ತ ಸೇರಿದಂತೆ ಲಿಂಗರಾಜು (19) ಹಾಗೂ ರವಿ (20) ಎಂಬ ಮೂವರನ್ನು ಬಂಧಿಸಲಾಗಿದೆ. ಅವರಿಂದ ಕೆಂಪಮ್ಮ ಮೈಮೇಲಿದ್ದ ಸುಮಾರು 22 ಗ್ರಾಂ ಚಿನ್ನ ಒಡವೆಗಳನ್ನು ವಶಪಡಿಸಿಕೊಂಡಿರುವ ಪೊಲೀಸರು ಆರೋಪಿಗಳನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವುದಾಗಿ ಜಿಲ್ಲಾ ಪೋಲಿಸ್ ಭವನದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿ ಎಸ್ಪಿ ಸಂತೋಷ್ ಬಾಬು ಮಾಹಿತಿ ನೀಡಿದರು.

ಸ್ನೇಹಿತರೊಂದಿಗೆ ಸೇರಿನ ಕೊಲೆ
ಕೊಲೆಯಾದ ಕೆಂಪಮ್ಮ ಆರೋಪಿ ಲಿಂಗರಾಜು ಎಂಬಾತನಿಗೆ ತನ್ನ ಪಟ್ಟಿ ಅಂಗಡಿಯಲ್ಲಿ 600 ರೂ.ಗಳಿಗೆ ಮದ್ಯವನ್ನು ಸಾಲವಾಗಿ ನೀಡಿದ್ದಳು. ಸೆಪ್ಟೆಂಬರ್ 8 ರಂದು ಕೆಂಪಮ್ಮ ಆರೋಪಿ ಲಿಂಗರಾಜು ಬಳಿ ಕುಡಿದ ಎಣ್ಣೆಯ ಬಾಕಿಯನ್ನು ವಾಪಸ್ಸು ನೀಡುವಂತೆ ಜಗಳ ಮಾಡಿದ್ದಾಳೆ. ಇದರಿಂದ ಕುಪಿತನಾದ ಲಿಂಗರಾಜು ಕೆಂಪಮ್ಮನ್ನು ಕೊಲೆ ಮಾಡಲು ನಿರ್ಧಾರ ಮಾಡಿದ್ದಾನೆ. ತನ್ನ ಸ್ನೇಹಿತ ರವಿ ಹಾಗೂ ಇನ್ನೋರ್ವ ಅಪ್ರಾಪ್ತನ ನೆರವಿನೊಂದಿಗೆ ಕೊಲೆ ಮಾಡಿದ್ದಾರೆ.

ವೈರ್ ಮೂಲಕ ಕುತ್ತಿಗೆ ಬಿಗಿದು ಕೊಲೆ
ದನ ಮೇಯಿಸಲು ಅರ್ಕಾವತಿ ನದಿ ಬಳಿಗೆ ಹೋಗಿದ್ದ ಕೆಂಪಮ್ಮನನ್ನು ಲಿಂಗರಾಜು ಹಾಗೂ ಸ್ನೇಹಿತರು ಅಲ್ಲೇ ಸಿಕ್ಕ ವೈರ್ ಮೂಲಕ ಕೆಂಪಮ್ಮ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾರೆ. ಬಳಿಕ ಕೆಂಪಮ್ಮ ಶವವನ್ನು ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ ಅರ್ಕಾವತಿ ನದಿಗೆ ಎಸೆಯಲು ಮುಂದಾಗಿದ್ದಾರೆ. ಆದರೆ ನದಿ ಇನ್ನೂಂದು ದಡದ ಬಳಿ ಮೀನುಗಾರರು ಇದ್ದಿದ್ದರಿಂದ ನದಿ ದಡದಲ್ಲೇ ಶವ ಬಿಟ್ಟು ಕೆಂಪಮ್ಮ ಮೈಲೇಲಿದ್ದ ಚಿನ್ನಾಭರಣಗಳನ್ನು ಕದ್ದು ಅಲ್ಲಿಂದ ಪಾರಾರಿಯಾಗಿದ್ದಾರೆ.

ಜಗಳ ನಡೆದಿದ್ದ ಹಿನ್ನಲೆ ಆರೋಪಿಗಳ ವಿಚಾರಣೆ
ಯಾರಿಗೂ ತಮ್ಮ ಮೇಲೆ ಅನುಮಾನ ಬಾರದಿರಲಿ ಎಂದು ಆರೋಪಿಗಳು ಕಾಣೆಯಾದ ಕೆಂಪಮ್ಮನನ್ನ ಹುಡುಕಲು ಗ್ರಾಮಸ್ಥರ ಹಾಗೂ ಕೆಂಪಮ್ಮ ಸಂಭಂದಿಕರೊಂದಿಗೆ ಸೇರಿಕೊಂಡು ಹುಡುಕುವ ನಾಟಕವಾಡಿದ್ದರು. ಅರ್ಕಾವತಿ ನದಿ ದಂಡೆಯಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ಕೆಂಪಮ್ಮ ಶವ ದೊರೆತ ತಕ್ಷಣ ಚುರುಕಾದ ಪೋಲಿಸರು ಕೊಲೆ ಪ್ರಕರಣ ದಾಖಲಿಸಿಕೊಂಡು. ಕೆಂಪಮ್ಮ ಜೊತೆ ಲಿಂಗರಾಜು ಜಗಳ ಆಡಿದ್ದ ಮಾಹಿತಿ ಕಲೆ ಹಾಕಿ ಲಿಂಗರಾಜು, ರವಿ ಹಾಗೂ ಓರ್ವ ಅಪ್ರಾಪ್ತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಪೋಲಿಸರ ವಿಚಾರಣೆ ವೇಳೆ ಕೊಲೆ ಮಾಡಿದ್ದಾಗಿ ಆರೋಪಿಗಳು ತಪ್ಪು ಒಪ್ಪಿಕೊಂಡಿದ್ದಾರೆ ಎಂದು ರಾಮನಗರ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಸಂತೋಷ್ ಬಾಬು ತಿಳಿಸಿದರು.












Click it and Unblock the Notifications