ರಾಮನಗರದ ಅಭಿವೃದ್ಧಿ ಸಭೆಯಲ್ಲಿ ನಿದ್ರೆಗೆ ಜಾರಿದ ಅಧಿಕಾರಿಗಳು:ವ್ಯಾಪಕ ಟೀಕೆ
ರಾಮನಗರ, ಆಗಸ್ಟ್.05: ಸರ್ಕಾರದ ಇಲಾಖೆಗಳ ಪ್ರಗತಿ ಪರಿಶೀಲನೆ ಬಗ್ಗೆ ಸಂಸದರು, ಶಾಸಕರು, ಜನಪ್ರತಿನಿಧಿಗಳು ಸಭೆ ಕರೆದು ವಿಸ್ತೃತ ಚರ್ಚೆ ನಡೆಸುತ್ತಿದ್ದರೆ, ಇತ್ತ ತಮ್ಮ ಇಲಾಖೆಯಲ್ಲಿ ಕೈಗೊಂಡ ಪ್ರಗತಿಯ ಬಗ್ಗೆ ಮಾಹಿತಿ ನೀಡಬೇಕಾದ ಅಧಿಕಾರಿಗಳು ನಿದ್ದೆಗೆ ಜಾರಿದ ಘಟನೆ ರಾಮನಗರದಲ್ಲಿ ನಡೆದಿದೆ.
ಅಧಿಕಾರಿಗಳಿಗಿಂತ ನಾವೇನು ಕಮ್ಮಿ ಇಲ್ಲ ಅನ್ನೋ ರೀತಿ ಕೆಲ ಜಿ.ಪಂ.ಸದಸ್ಯರು ಕೂಡ ನಿದ್ರೆಗೆ ಶರಣಾಗಿದ್ದರು. ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ.ಸುರೇಶ್ ನೇತೃತ್ವದಲ್ಲಿ ನಡೆಯುತ್ತಿದ ಸಭೆಗೆ ಕಿಂಚಿತ್ತು ಬೆಲೆ ಕೊಡದೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈ ರೀತಿ ದುರ್ವರ್ತನೆ ತೋರಿರುವುದು ಬೆಳಕಿಗೆ ಬಂದಿದೆ.
ಉತ್ತರ ಕರ್ನಾಟಕ ಮುಖಂಡರ ಜೊತೆ ಸಿಎಂ ಸಭೆ, ಹಳೆ ಹೇಳಿಕೆಗಳಿಗೆ ತೇಪೆ
ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಸದಸ್ಯ ಡಿ.ಕೆ.ಸುರೇಶ್ ನೇತೃತ್ವದಲ್ಲಿ ಕರೆಯಲಾಗಿದ್ದ ದಿಶಾ ಮೀಟಿಂಗ್ ನಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಅಧಿಕಾರಿಗಳು ನಿದ್ದೆಗೆ ಜಾರಿದರು.
ಎಂ.ಪಿ. ಸಾಹೇಬರು ಕೇಂದ್ರ ಸರ್ಕಾರದ ಯೋಜನೆಯ ಜಾರಿಗೆ ಗಂಟಲು ಬಿರಿಯುವ ಹಾಗೆ ಭಾಷಣ ಮಾಡುತ್ತಿದ್ದರೆ, ಚಿಂತೆ ಇಲ್ಲದವನಿಗೆ ಸಂತೆಯಲ್ಲೂ ನಿದ್ದೆ ಎಂಬಂತೆ ತಲೆಗೆ ಕೈಕೊಟ್ಟು ನಿದ್ದೆ ಮಾಡುತ್ತಿದ್ದ ದೃಶ್ಯ ಮಾಧ್ಯಮದ ಕಣ್ಣಿಗೆ ಬಿದಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿಯ ಸಭೆ ನಡೆಸಲಾಗುತ್ತಿತ್ತು. ರಾಮನಗರ ಜಿಲ್ಲೆಯ ಅಭಿವೃದ್ಧಿ ಕಾರ್ಯಗಳ ಬಗ್ಗೆ ಸಂಸದ ಡಿ.ಕೆ.ಸುರೇಶ್ ಅತ್ತ ಗಂಭೀರ ಚರ್ಚೆ ನಡೆಸುತ್ತಿದ್ದರೆ, ಇತ್ತ ಈ ಸಭೆಗೂ ತಮಗೂ ಸಂಬಂಧವಿಲ್ಲವೆಂಬಂತೆ ಕೆಲ ಅಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯರು ನಿದ್ದೆಗೆ ಜಾರಿದ್ದರು.
ಅಲ್ಲದೇ ಕೆಲ ಅಧಿಕಾರಿಗಳು ವಾಟ್ಸಾಪ್ ಹಾಗೂ ತಮ್ಮ ಫೋನ್ಗಳಲ್ಲಿ ಬ್ಯುಸಿಯಾಗಿದ್ದರು. ಇನ್ನು ಜನರ ಸಮಸ್ಯೆಗಳನ್ನು ಆಲಿಸಬೇಕಾದ ಅಧಿಕಾರಿಗಳು ಕೇವಲ ನಾಮಕಾವಸ್ತೆಗೆ ಸಭೆಯಲ್ಲಿ ಹಾಜರಿರುವಂತೆ ವರ್ತಿಸಿದ್ದಾರೆ.
ನಿದ್ರಾಹೀನತೆಯಲ್ಲಿ ಭಾರತೀಯರು ಮುಂದೆ: ಸಮೀಕ್ಷೆ
ಅಲ್ಲದೇ ಕಳೆದ ಬಾರಿ ನಡೆದ ಸಾಮಾನ್ಯ ಸಭೆಯಲ್ಲಿ ಇಂತಹದ್ದೇ ಪ್ರಕರಣ ಮಾಧ್ಯಮಗಳಲ್ಲಿ ಪ್ರಸಾರವಾಗಿ ಮೊಬೈಲ್ ಸ್ವಿಚ್ ಆಫ್ ಮಾಡಲು ಜಿಲ್ಲಾಡಳಿತ ಅಧಿಕಾರಿಗಳಿಗೆ ಸೂಚಿಸಿತ್ತು. ಆದರೆ ಜಿಲ್ಲಾಡಳಿತದ ಸೂಚನೆಗೂ ಕೇರ್ ಮಾಡದ ಅಧಿಕಾರಿಗಳು ಮತ್ತೆ ತಮ್ಮ ಹಳೆ ಚಾಳಿಯನ್ನು ಮುಂದುವರೆಸಿರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ.