ಶ್ರೀರಾಮ ದೇವರ ಬೆಟ್ಟ ಯೋಜನೆಯನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ: ಅಶ್ವತ್ಥ್ ನಾರಾಯಣ್
ರಾಮನಗರದ ಶ್ರೀರಾಮನ ಬೆಟ್ಟ ಯೋಜನೆಯನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಅಂತಾ ಸಚಿವ ಅಶ್ವತ್ಥ್ ನಾರಾಯಣ್ ಗುಡುಗಿದ್ದೇಕೆ?
ರಾಮನಗರ, ಜನವರಿ, 27: ಶ್ರೀರಾಮದೇವರ ಬೆಟ್ಟ ಅನೇಕ ಐತಿಹಾಸಿಕ ಘಟನೆಗಳಿಗೆ ಸಾಕ್ಷಿಯಾಗಿದೆ. ಹೀಗಾಗಿ ಜೀರ್ಣೋದ್ದಾರ ಮಾಡಲು ಡಿಪಿಆರ್ ಸಿದ್ದಪಡಿಸಲಾಗುತ್ತಿದೆ. ಈ ಯೋಜನೆಯನ್ನು ಯಾರು ನಿಲ್ಲಿಸಲು ಸಾಧ್ಯವಿಲ್ಲ ಎಂದು ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ್ ರಾಮನಗರದಲ್ಲಿ ಹೇಳಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ್, ಅಯೋಧ್ಯೆಯ ರಾಮಜನ್ಮ ಭೂಮಿ ಬಿಟ್ಟರೆ ದಕ್ಷಿಣದಲ್ಲಿ ಶ್ರೀರಾಮ ವಾಸಮಾಡಿದ ಶ್ರೀರಾಮ ದೇವರ ಬೆಟ್ಟ ಪವಿತ್ರ ಕ್ಷೇತ್ರವಾಗಿದೆ. ಹಾಗಾಗಿ ಶ್ರೀರಾಮ ದೇವರ ಬೆಟ್ಟ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.
ಚನ್ನಪಟ್ಟಣ ಕ್ಷೇತ್ರಕ್ಕೆ ಎಚ್.ಡಿ.ಕುಮಾರಸ್ವಾಮಿ ಕೊಡುಗೆ ಏನು?: ಸಿ.ಪಿ.ಯೋಗೇಶ್ವರ್ ಪ್ರಶ್ನೆ
ಕೆಲವರು ಅಸಹಾಯಕರಾಗಿದ್ದಾರೆ
ಸರ್ಕಾರ ತನ್ನ ಕೊನೆಯ ಅವದಿಯಲ್ಲಿ ಚುನಾವಣೆಗಾಗಿ ಶ್ರೀರಾಮನ ಜಪ ಮಾಡುತಿದೆ ಎಂಬ ವಿಪಕ್ಷಗಳ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ರಾಮನಗರದಲ್ಲಿ ಈವರೆಗೆ ಬೇರೆಯವರು ಏನು ಮಾಡುತ್ತಿದ್ದರು? ಕೆಲವರು ಅಸಹಾಯಕರಾಗಿದ್ದಾರೆ. ಶ್ರೀರಾಮನ ಹೆಸರು ಕೇಳಿದರೆ ಕೆಲವರಿಗೆ ನಡುಕ ಉಂಟಾಗುತ್ತದೆ. ರಾಮನ ಕಾರ್ಯ ಮಾಡುವುದು ನಮ್ಮ ತನವಾಗಿದೆ. ವಿಪಕ್ಷದಲ್ಲಿ ಈವರೆಗೂ ಯಾರೊಬ್ಬರೂ ಬೆಟ್ಟ ನೋಡಿಲ್ಲ. ರಾಮಜನ್ಮ ಭೂಮಿಯನ್ನಷ್ಟೇ ಪವಿತ್ರವಾದ ಶ್ರೀರಾಮ ದೇವರ ಬೆಟ್ಟದ ಸೂಕ್ಷ್ಮತೆಗಳನ್ನು ಗಮನಿಸಿ ಕಾನೂನಿನ ಚೌಕಟ್ಟಿನಲ್ಲಿ ಅಭಿವೃದ್ಧಿಪಡಿಸುತ್ತೇವೆ ಎಂದರು.

ಬ್ಲಾಕ್ಮೇಲರ್ಗಳಿಗೆ ತಕ್ಕ ಪಾಠವಾಗಬೇಕು
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಮಾಜಿ ಸಚಿವ ರಮೇಶ್ ಜಾರಕಿಹೋಳಿ ನಡುವೆ ಸಿಡಿ ಜಟಾಪಟಿ ವಿಚಾರವಾಗಿ ಮಾತನಾಡಿದ ಸಚಿವರು, ಈ ಬಗ್ಗೆ ತನಿಖೆ ನಡೆದು ಸತ್ಯ ಹೊರಬರಬೇಕು. ಷಡ್ಯಂತ್ರ ಮಾಡುವವರು, ಬ್ಲಾಕ್ ಮೇಲರ್ಗಳಿಗೆ ತಕ್ಕ ಪಾಠ ಕಲಿಸುವ ಕೆಲಸ ಆಗಬೇಕು. ಈ ಬಗ್ಗೆ ಜಾರಕಿಹೊಳಿ ಸಹ ತನಿಖೆ ನಡೆಸಿ ಎಂದು ಒತ್ತಾಯಿಸಿದ್ದಾರೆ. ಅವರ ಹೇಳಿಕೆಯನ್ನು ಸ್ವಾಗತಿಸುತ್ತೇನೆ ಎಂದು ಹೇಳಿದರು.
ಮೈ ಪರಚಿಕೊಂಡರೆ ಸುಳ್ಳು ಸತ್ಯ ಆಗಲ್ಲ
ಸರ್ಕಾರದ ವೈಫಲ್ಯಗಳನ್ನು ಎತ್ತಿ ಹಿಡಿಯುವುದು ಪ್ರತಿಪಕ್ಷಗಳ ಕರ್ತವ್ಯವಾಗಿದೆ. ಆದರೆ ಸುಮ್ಮನೆ ನಿರಾಧಾರವಾಗಿ ಹೇಳಿಕೆ ಕೊಡುವುದು ಸೂಕ್ತವಲ್ಲ. ದಾಖಲೆ ಸಮೇತ ಆರೋಪ ಮಾಡಬೇಕು. ಆರೋಗ್ಯ ಇಲಾಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪದ ವಿಚಾರವಾಗಿ ಪ್ರತಿಕ್ರಯಿಸಿದ ಅವರು, ಕಾಂಗ್ರೆಸ್ನವರು ಮೈ ಪರಚಿಕೊಂಡು ಆಪಾದನೆ ಮಾಡಿದರೆ ಸುಳ್ಳು ಸತ್ಯವಾಗುವುದಿಲ್ಲ ಎಂದು ಟಾಂಗ್ ನೀಡಿದರು.
ರಾಜಕೀಯ ಪ್ರೇರಿತವಾಗಿ ಧ್ವನಿ ಎತ್ತಿ ಮಾತನಾಡಿದರೆ ಅದೇ ಸತ್ಯವಾಗುವುದೇ. ಯಾವುದೇ ಆರೋಪಗಳಿದ್ದರೂ ದಾಖಲೆ ಸಮೇತ ಚರ್ಚೆ ಮಾಡಲು ಸದನ ಮತ್ತು ಕಮಿಟಿ ಇದೆ. ಅದನ್ನು ಬಿಟ್ಟು ನಿರಾಧಾರವಾಗಿ ಆರೋಗ್ಯ ಇಲಾಖೆಯಲ್ಲಿ ಹಗರಣ ನಡೆದಿದೆ ಎಂದು ಹೇಳಿಕೆ ನೀಡುವುದು ಸರಿ ಅಲ್ಲ. ಹೀಗೆ ಆರೋಗ್ಯ ಸಚಿವ ಸುಧಾಕರ್ ವಿರುದ್ಧ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ್ ತಿರುಗೇಟು ನೀಡಿದರು.












Click it and Unblock the Notifications