ಮೇಕೆದಾಟು; ಕಾಂಗ್ರೆಸ್ ಪಾದಯಾತ್ರೆ ರಹಸ್ಯ ಹೇಳಿದ ಸೋಮಣ್ಣ!
ರಾಮನಗರ, ಡಿಸೆಂಬರ್ 28; " ಮೇಕೆದಾಟು ಯೋಜನೆ ತಾರ್ಕಿಕ ಅಂತ್ಯಕ್ಕೆ ಬಂದಿದೆ. ಈಗ ಎಲ್ಲಿ ಯೋಜನೆಯ ಕ್ರೆಡಿಟ್ ಬಿಜೆಪಿಗೆ ಹೋಗುತ್ತದೆಯೋ ಎಂದು ಕಾಂಗ್ರಸ್ ಪಾದಯಾತ್ರೆ ಹಮ್ಮಿಕೊಂಡಿದೆ" ಎಂದು ವಸತಿ ಸಚಿವ ವಿ. ಸೋಮಣ್ಣ ಹೇಳಿದರು.
ಮಂಗಳವಾರ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ದೊಡ್ಡೂರು ಗ್ರಾಮದಲ್ಲಿ ಮಾತನಾಡಿದ ಸಚಿವರು, "ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ಪಾದಯಾತ್ರೆ ನಡೆಸುವ ಮೂಲಕ ರಾಜಕೀಯ ಮಾಡುತ್ತಿದೆ" ಎಂದು ಆರೋಪಿಸಿದರು.
"ಈ ಹಿಂದೆ ಅವರೇ ಸರ್ಕಾರದಲ್ಲಿ ಇದ್ದರು. ಈ ಯೋಜನೆ ಆರಂಭಿಸಲು ಕಾನೂನು ತೊಡಕು ಮುಗಿಸಿ, ತಾಂತ್ರಿಕ ಸಮಸ್ಯೆಗಳನ್ನು ಮುಗಿಸಿ ಒಂದು ಹಂತಕ್ಕೆ ಬಂದಿದೆ. ಇದನ್ನು ತಿಳಿದುಕೊಂಡು ಬಿಜೆಪಿ ಅವರಿಗೆ ಹೆಸರು ಬರಬಾರದು ಎಂದು ಪಾದಯಾತ್ರೆ ಹಮ್ಮಿಕೊಂಡಿದ್ದಾರೆ" ಎಂದರು.

"ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಕನಕಪುರ ತಾಲೂಕಿನವರು ಅವರ ಕರ್ತವ್ಯ ಮಾಡುತ್ತಿದ್ದಾರೆ. ಈ ಯೋಜನೆ ಆರಂಭಿಸುತ್ತೇವೆ ಎಂದು ಈಗಾಗಲೇ ಸಿಎಂ ಹೇಳಿದ್ದಾರೆ. ಹೀಗಾಗಿ ಈ ಯೋಜನೆ ಮಾಡುತ್ತೇವೆ, ಜನರಿಗೆ ಅನುಕೂಲವಾಗುವ ಯೋಜನೆಗಳನ್ನು ಸರ್ಕಾರ ಮಾಡುತ್ತದೆ" ಎಂದು ಸಚಿವರು ತಿಳಿಸಿದರು.
"ಚುನಾವಣೆಗೆ ಇನ್ನೂ ಒಂದೂವರೆ ವರ್ಷ ಇದೆ, ಏನೋ ಮಾಡುತ್ತಿದ್ದಾರೆ. ಮೇಕೆದಾಟು ಯೋಜನೆ ನಿನ್ನೆ ಮೊನ್ನೆಯದ್ದಲ್ಲ. ಮಾಜಿ ಪ್ರಧಾನಿ ದೇವೇಗೌಡರು ಸಿಎಂ ಆದಾಗಲಿಂದಲೂ ಇದೆ. ಇದೀಗ ಒಂದು ಹಂತಕ್ಕೆ ಬಂದಿದೆ. ಮೇಕೆದಾಟು ಯೋಜನೆ ಆಗಬೇಕು ಎಂಬುದು ಎಲ್ಲರ ಆಶಯವಾಗಿದೆ. ಕಾನೂನು ಚೌಕಟ್ಟಿನಲ್ಲಿ ಮಾಡಬೇಕಾಗಿದ್ದು, ಕಾನೂನು ಮೀರಲು ಯಾರಿಂದಲೂ ಸಾಧ್ಯವಿಲ್ಲ. ಇದೀಗ ಕಾಂಗ್ರೆಸ್ನವರಿಗೆ ಜ್ಞಾನೋದಯ ಆಗಿದೆ" ಎಂದು ದೂರಿದರು.
ನೈಟ್ ಕರ್ಫ್ಯೂ ಸಮರ್ಥನೆ; "ರಾಜ್ಯದಲ್ಲಿ ನೈಟ್ ಕರ್ಫೂ ಇಂದಿನಿಂದ ಜಾರಿಯಾಗಲಿದೆ. ಸಾರ್ವಜನಿಕರು ಹಾಗೂ ವಿರೋಧ ಪಕ್ಷದವರು ಆಕ್ರೋಶ ವ್ಯಕ್ರಪಡಿಸುವುದು ಸಹಜ. ಎರಡನೇ ಅಲೆಯಲ್ಲಿ ಆದ ಘಟನೆಗಳು ಮೂರನೇ ಅಲೆಯಲ್ಲಿ ಆಗಬಾರದು ಎಂಬುದು ನಮ್ಮ ಚಿಂತನೆ" ಎಂದು ವಿ.ಸೋಮಣ್ಣ ತಿಳಿಸಿದರು.
ನೈಟ್ ಕರ್ಫ್ಯೂ ಜಾರಿ ವಿಚಾರದಲ್ಲಿ ವಿರೋಧ ವ್ಯಕ್ತಪಡಿಸಿದ ಸಿ. ಟಿ. ರವಿ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ವಿ. ಸೋಮಣ್ಣ, "ಸಿ. ಟಿ. ರವಿ ಅವರೂ ಯಾವ ರೀತಿ ಹೇಳಿದ್ದಾರೆ ನನಗೆ ಗೊತ್ತಿಲ್ಲ. ಸಿಎಂ ಅವರೂ ಸರಿಯಾದ ಕ್ರಮ ತೆಗೆದುಕೊಂಡಿದ್ದಾರೆ. ಸಾರ್ವಜನಿಕರು ಸಹಕಾರ ಕೊಡಬೇಕು" ಎಂದರು.
ಸಿಎಂ ಬದಲಾವಣೆ; "ಮುಖ್ಯಮಂತ್ರಿ ಬದಲಾಗುತ್ತಾರೆ ಎಂಬುದುದ ಕೇವಲ ಊಹಾಪೋಹ ಯಾರೂ ಹುಚ್ಚರು ಮಾತನಾಡುತ್ತಾರೆ ಅಷ್ಟೆ. ಸಿಎಂ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ಅರುಣ್ ಸಿಂಗ್ ಸಿಎಂ ಆಗಿ ಬಸವರಾಜ ಬೊಮ್ಮಯಿ ಮುಂದುವರೆಯಲಿದ್ದಾರೆ ಎಂದು ಹೇಳಿದ್ದಾರೆ" ಎಂದು ಸೋಮಣ್ಣ ಹೇಳಿದರು.
"ಬಸವರಾಜ ಬೊಮ್ಮಾಯಿ ಯಶಸ್ವಿಯಾಗಿ ಎರಡು ಅಧಿವೇಶನ ನಡೆಸಿದ್ದಾರೆ. ಅವರೇ ಸಿಎಂ ಆಗಿ ಮುಂದುವರೆಯುತ್ತಾರೆ. 2023ರ ಚುನಾವಣೆ ಕೂಡ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆಯುತ್ತದೆ" ಎಂದು ಸೋಮಣ್ಣ ಸ್ಪಷ್ಟಪಡಿಸಿದರು.
ಕಾಂಗ್ರೆಸ್ ಪಾದಯಾತ್ರೆ; ಮೇಕೆದಾಟು ಯೋಜನೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್ ಮೇಕೆದಾಟುವಿನಿಂದ ಬೆಂಗಳೂರಿನ ತನಕ ಪಾದಯಾತ್ರೆ ನಡೆಸಲಿದೆ. ಜನವರಿ 9 ರಿಂದ 19ರ ತನಕ ಪಾದಯಾತ್ರೆ ನಡೆಯಲಿದೆ.
ಬೆಂಗಳೂರು, ತುಮಕೂರು, ಹಾಸನ, ಬೆಂಗಳೂರು ಗ್ರಾಮಾಂತರ, ರಾಮನಗರ ಸೇರಿದಂತೆ ವಿವಿಧ ಜಿಲ್ಲೆಗಳ ಕಾಂಗ್ರೆಸ್ ಕಾರ್ಯಕರ್ತರು ಈ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ವಿಧಾನಸಭೆ ಚುನಾವಣೆಗೆ 1 ವರ್ಷ ಬಾಕಿ ಇರುವಾಗ ಕಾಂಗ್ರೆಸ್ ಈ ಪಾದಯಾತ್ರೆ ಹಮ್ಮಿಕೊಂಡಿದೆ.
ಕರ್ನಾಟಕ ಸರ್ಕಾರದ ಪ್ರಸ್ತಾವಿತ ಮೇಕೆದಾಟು ಯೋಜನೆಗೆ ತಮಿಳುನಾಡು, ಪುದುಚೇರಿ ರಾಜ್ಯಗಳು ವಿರೋಧ ವ್ಯಕ್ತಪಡಿಸುತ್ತಿವೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿವೆ. ಸುಪ್ರೀಂಕೋರ್ಟ್ನಲ್ಲಿ ಸಹ ಅರ್ಜಿ ಸಲ್ಲಿಕೆ ಮಾಡಿವೆ.












Click it and Unblock the Notifications