ಮಾಸ್ತಿಗುಡಿ ಪ್ರಕರಣ: ವಿಚಾರಣೆ ಜೂನ್ 27ಕ್ಕೆ ಮುಂದೂಡಿಕೆ
ರಾಮನಗರ, ಜೂನ್ 12: 'ಮಾಸ್ತಿಗುಡಿ' ಸಿನಿಮಾ ಚಿತ್ರೀಕರಣದ ವೇಳೆ ಇಬ್ಬರು ನಟರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲ 6 ಮಂದಿ ಆರೋಪಿಗಳು ಮಂಗಳವಾರ ನ್ಯಾಯಾಲಯಕ್ಕೆ ಹಾಜರಾದರು.
ರಾಮನಗರದ 3ನೇ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಗೋಪಾಲಕೃಷ್ಣ ರೈ ಅವರ ಎದುರು ಚಿತ್ರದ ನಿರ್ಮಾಪಕ ಸುಂದರ್ ಪಿ. ಗೌಡ ಮತ್ತು ನಿರ್ದೇಶಕ ನಾಗಶೇಖರ್ ಸೇರಿದಂತೆ ಉಳಿದ ಆರೋಪಿಗಳು ಹಾಜರಾದರು.
ಮಾಸ್ತಿಗುಡಿ ಆರೋಪಿ ನಾಪತ್ತೆಗೆ ನೆರವು: ದುನಿಯಾ ವಿಜಯ್ ಬಂಧನ
ಸಾಹಸ ನಿರ್ದೇಶಕ ರವಿವರ್ಮ, ಪ್ರೊಡಕ್ಷನ್ ಮ್ಯಾನೇಜರ್ ಭರತ್, ಸಹಾಯಕ ನಿರ್ದೇಶಕ ಸಿದ್ಧಾರ್ಥ ಮತ್ತು ಹೆಲಿಕಾಪ್ಟರ್ ಪೈಲಟ್ ಪ್ರಕಾಶ್ ಬಿರಾದರ್ ಅವರು ಇತರೆ ಆರೋಪಿಗಳಾಗಿದ್ದಾರೆ.
ತಿಪ್ಪಗೊಂಡನಹಳ್ಳಿ ಜಲಾಶಯದಲ್ಲಿ ಚಿತ್ರೀಕರಣ ನಡೆಸುತ್ತಿದ್ದ ವೇಳೆ ಸಹನಟರಾದ ಉದಯ್ ರಾಘವ ಮತ್ತು ಅನಿಲ್ ಹೆಲಿಕಾಪ್ಟರ್ನಿಂದ ಜಿಗಿಯುವ ಸನ್ನಿವೇಶದಲ್ಲಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದರು.
ಈ ಸಂಬಂಧ ಆರು ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು. ಈ ದೋಷಾರೋಪ ಪಟ್ಟಿಯನ್ನು ರದ್ದುಗೊಳಿಸಿದ್ದ ಹೈಕೋರ್ಟ್, ಪ್ರಕರಣವನ್ನು ಹೊಸದಾಗಿ ವಿಚಾರಣೆ ನಡೆಸುವಂತೆ ರಾಮನಗರ ಜಿಲ್ಲಾ ಸೆಷನ್ಸ್ ನ್ಯಾಯಾಲಯಕ್ಕೆ ಮರಳಿಸಿತ್ತು.
ಪ್ರಕರಣದ ಪ್ರಮುಖ ಆರೋಪಿಯಾಗಿರುವ ನಿರ್ಮಾಪಕ ಸುಂದರ್ ಪಿ. ಗೌಡ ಅವರನ್ನು ಪೊಲೀಸರು ಬಂಧಿಸದಂತೆ ತಡೆದ ಆರೋಪದಡಿ ನಟ ದುನಿಯಾ ವಿಜಯ್ ಅವರನ್ನು ಇತ್ತೀಚೆಗೆ ಚನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸರು ತಮಿಳುನಾಡಿನಲ್ಲಿ ಬಂಧಿಸಿದ್ದರು.
ಬಳಿಕ ದುನಿಯಾ ವಿಜಯ್ ಜಾಮೀನಿನ ಮೇಲೆ ಬಿಡುಗಡೆ ಹೊಂದಿದ್ದರು.