ರೇಷ್ಮೆ ಫಾರಂ ಜಾಗವನ್ನು ಮಾವು ಸಂಸ್ಕರಣ ಘಟಕಕ್ಕೆ ನೀಡಲು ಮುಂದಾದ ರಾಮನಗರ ಜಿಲ್ಲಾಡಳಿತ
ರಾಮನಗರ, ಅಕ್ಟೋಬರ್ 30: ರೇಷ್ಮೆ ಕೃಷಿಗೆ ಉತ್ತೇಜನ ನೀಡಲು ಸ್ಥಾಪಿಸಿದ ರೇಷ್ಮೆ ಕೃಷಿ ಫಾರಂ ಸ್ಥಳವನ್ನು ಮಾವು ಸಂಸ್ಕರಣ ಘಟಕಕ್ಕೆ ರಾಮನಗರ ಜಿಲ್ಲಾಡಳಿತ ನೀಡಲು ಮುಂದಾಗಿರುವುದನ್ನು ರೈತರು ಖಂಡಿಸಿದ್ದಾರೆ.
ಏಷ್ಯಾದಲ್ಲೇ ಅತಿದೊಡ್ಡ ರೇಷ್ಮೆ ಮಾರುಕಟ್ಟೆ ಹೊಂದಿರುವ ಜೊತೆಗೆ ರಾಮನಗರ ಜಿಲ್ಲೆಯಲ್ಲಿ ರೈತರು ರೇಷ್ಮೆ ಬೆಳೆಯನ್ನೇ ಹೆಚ್ಚಾಗಿ ಬೆಳೆಯುತ್ತಾರೆ. ಹೀಗಾಗಿ ಜಿಲ್ಲೆಗೆ ರೇಷ್ಮೆ ನಗರಿ ಎಂಬಾ ಖ್ಯಾತಿ ಪಡೆದಿದೆ.
ಸರ್ಕಾರ ರೇಷ್ಮೆ ಬೆಳೆಯನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ರೇಷ್ಮೆ ಕೃಷಿ ಫಾರಂ ನಿರ್ಮಾಣ ಮಾಡಲಾಗಿತ್ತು. ಆದರೆ ಇದೀಗ ಆ ಜಾಗಕ್ಕೆ ಜಿಲ್ಲಾಡಳಿತ ಮಾವು ಸಂಸ್ಕರಣ ಘಟಕಕ್ಕೆ ನೀಡಲು ಮುಂದಾಗಿರುವುದು ಜಿಲ್ಲೆಯ ರೇಷ್ಮೆ ಬೆಳೆಗಾರರಿಂದ ಆಕ್ರೋಶ ವ್ಯಕ್ತವಾಗಿದೆ.
ರಾಮನಗರ ತಾಲೂಕಿನ ಕೆ.ಪಿ ದೊಡ್ಡಿ ಗ್ರಾಮದ ಬಳಿ ಇರುವ ರೇಷ್ಮೆ ಫಾರಂ ಜಾಗದಲ್ಲಿ ಸರ್ಕಾರ, ಮಾವು ಸಂಸ್ಕರಣಾ ಘಟಕ ನಿರ್ಮಾಣ ಮಾಡಲು ಮುಂದಾಗಿದೆ. ರೇಷ್ಮೆ ಕೃಷಿ ಉತ್ತೇಜನಕ್ಕೆ ಮೀಸಲಿಟ್ಟ ಜಾಗವನ್ನು ಮಾವು ಸಂಸ್ಕರಣ ಘಟಕ ನೀಡುತ್ತಿರುವ ಸರ್ಕಾರದ ಕ್ರಮವನ್ನು ರೇಷ್ಮೆ ಬೆಳೆಗಾರರು ಪ್ರಶ್ನಿಸಿದ್ದಾರೆ.
ಮಾವು ಸಂಸ್ಕರಣಾ ಘಟಕ ನಿರ್ಮಾಣ
ರಾಮನಗರ ಜಿಲ್ಲೆಯಲ್ಲಿ ಹೆಚ್ಚು ರೇಷ್ಮೆ ಬೆಳೆಯುವ ಹಿನ್ನೆಲೆಯಲ್ಲಿ ರೇಷ್ಮೆ ಬೆಳೆ ಪ್ರಮುಖವಾಗಿದ್ದರೂ, ನಂತರದ ಸ್ಥಾನ ಮಾವು ಬೆಳೆಯನ್ನು ಬೆಳೆಯಲಾಗುತ್ತದೆ. ಹೀಗಾಗಿ ಮಾವು ಬೆಳೆಗಾರರ ಅನುಕೂಲಕ್ಕಾಗಿ ಜಿಲ್ಲೆಯಲ್ಲಿ ಮಾವು ಸಂಸ್ಕರಣಾ ಘಟಕ ನಿರ್ಮಾಣಕ್ಕೆ ತೋಟಗಾರಿಕೆ ಇಲಾಖೆ ಹಾಗೂ ಮಾವು ಅಭಿವೃದ್ಧಿ ಹಾಗೂ ಮಾರುಕಟ್ಟೆ ನಿಗಮ ಮುಂದಾಗಿದೆ.
ಕನಕಪುರ ನಗರಸಭೆಗೆ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆ
ಕೆ.ಪಿ ದೊಡ್ಡಿ ಬಳಿಯ ಸಿಲ್ಕ್ ಫಾರಂ ನಲ್ಲಿ ನಿರ್ಮಾಣ
ರಾಮನಗರ ಜಿಲ್ಲೆಯಲ್ಲಿ ಅತ್ಯಾಧುನಿಕ ಮಾವು ಸಂಸ್ಕರಣೆ ನಿರ್ಮಾಣಕ್ಕಾಗಿ ತಾಲೂಕಿನ ಕಣ್ವ ಗ್ರಾಮದ ಬಳಿ ಸ್ಥಳವನ್ನು ಗುರುತಿಸಲಾಗಿತ್ತು. ಆದರೆ ಇದೀಗ ಅದರ ಬದಲಿಗೆ ಕೆ.ಪಿ ದೊಡ್ಡಿ ಬಳಿಯ ಸಿಲ್ಕ್ ಫಾರಂ ನಲ್ಲಿ ನಿರ್ಮಾಣ ಮಾಡಲು ತೀರ್ಮಾನ ಮಾಡಲಾಗಿದೆ. ಇದು ರೇಷ್ಮೆ ಬೆಳೆಗಾರರ ವಿರೋಧಕ್ಕೂ ಕೂಡ ಕಾರಣವಾಗಿದೆ.
ಸುಮಾರು 26 ಎಕರೆ 30 ಗುಂಟೆ ವಿಸ್ತೀರ್ಣ
ತಾಲೂಕಿನ ಕೆ.ಪಿ ದೊಡ್ಡಿ ಗ್ರಾಮದ ಬಳಿ ಇರುವ ಸಿಲ್ಕ್ ಫಾರಂ ಅನ್ನು 1967ರಲ್ಲಿ ನಿರ್ಮಾಣ ಮಾಡಲಾಗಿದೆ. ಸುಮಾರು 26 ಎಕರೆ 30 ಗುಂಟೆ ವಿಸ್ತೀರ್ಣವಿದೆ. ರೇಷ್ಮೆ ಬೆಳೆ ಅಭಿವೃದ್ಧಿಗೆ ಸಂಬಂಧಿಸಿದ ಕಾರ್ಯ ಚಟುವಟಿಕೆಗಳು ಇಲ್ಲಿ ನಡೆಯುತ್ತವೆ. ಹಿಪ್ಪು ನೇರಳೆ ಗಿಡ ಅಭಿವೃದ್ಧಿಗೆ 8 ಎಕರೆ, ಒಂದು ಚಾಕಿ ಸಾಕಾಣಿಕಾ ಕೇಂದ್ರ ಇದೆ.
ರೇಷ್ಮೆ ಬೆಳೆಗಾರರ ಆಕ್ರೋಶ
ಅಲ್ಲದೆ ರೇಷ್ಮೆ ಮೊಟ್ಟೆಗಳನ್ನು ತಯಾರಿಸಿ ರೈತರಿಗೂ ಕೂಡ ಕಡಿಮೆ ಬೆಲೆಗೆ ವಿತರಣೆ ಮಾಡಲಾಗುತ್ತದೆ. ಇದು ರೇಷ್ಮೆ ಬೆಳೆಗಾರರಿಗೆ ಸಾಕಷ್ಟು ಅನುಕೂಲವಾಗಿದೆ. ಇಂತಹ ಜಾಗದಲ್ಲಿ ಏಕಾಏಕಿ ರೈತರಿಗೆ ತಿಳಿಸಿದೇ ಮಾವು ಸಂಸ್ಕರಣಾ ಘಟಕ ನಿರ್ಮಾಣ ಮಾಡುತ್ತಿರುವುದು ರೇಷ್ಮೆ ಬೆಳೆಗಾರರ ಆಕ್ರೋಶಕ್ಕೆ ಕಾರಣವಾಗಿದೆ. ಅನುಪಯುಕ್ತವಾಗಿರುವ ಸರ್ಕಾರಿ ಜಾಗದಲ್ಲಿ ಮಾವು ಸಂಸ್ಕರಣ ಘಟಕ ನಿರ್ಮಾಣ ಮಾಡಿ ಎಂಬುದು ರೈತರ ಒತ್ತಾಯ. ಇದಕ್ಕೆ ಸರ್ಕಾರ ಹಾಗೂ ರಾಮನಗರ ಜಿಲ್ಲಾಡಳಿತ ಯಾವ ಕ್ರಮ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.