ದಶಪಥ ಹೆದ್ದಾರಿ ನಿರ್ಮಾಣದಲ್ಲಿ ಹಲವೆಡೆ ಅವೈಜ್ಞಾನಿಕ ಕಾಮಗಾರಿ: ಸ್ಥಳೀಯರ ಆಕ್ರೋಶ
ರಾಮನಗರ, ಡಿಸೆಂಬರ್ 7: ಬೆಂಗಳೂರು-ಮೈಸೂರು ದಶಪಥ ಎಕ್ಸ್ಪ್ರೆಸ್ ಹೈವೇ ಜನವರಿ ತಿಂಗಳಿನಲ್ಲಿ ಸಂಚಾರಕ್ಕೆ ಮುಕ್ತವಾಗಲಿದ್ದು, ಮಾರ್ಚ್ ತಿಂಗಳಲಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಲಿದ್ದಾರೆ ಎನ್ನಲಾಗುತ್ತಿದೆ. ದಶಪಥ ರಾಷ್ಟ್ರೀಯ ಹೆದ್ದಾರಿ ಉದ್ಘಾಟನೆಗೆ ದಿನ ಗಣನೆ ಪ್ರಾರಂಭವಾದ ಬೆನ್ನಲೇ ಅವೈಜ್ಞಾನಿಕ ಸರ್ವಿಸ್ ರಸ್ತೆ ನಿರ್ಮಾಣ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
ಎಕ್ಸ್ಪ್ರೆಸ್ ಹೈವೇ ಪಕ್ಕದಲ್ಲಿ ನಿರ್ಮಾಣ ಮಾಡಿರುವ ಸರ್ವಿಸ್ ರಸ್ತೆಯಲ್ಲಿ ಹಲವೆಡೆ ಅವೈಜ್ಞಾನಿಕ ಕಾಮಗಾರಿ ಮಾಡಿರುವ ಹಿನ್ನಲೆಯಲ್ಲಿ ಅಪಘಾತಗಳು ಹೆಚ್ಚಾಗುತ್ತಿವೆ. ತಕ್ಷಣವೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅವೈಜ್ಞಾನಿಕ ಸರ್ವಿಸ್ ರಸ್ತೆ ಸರಿಪಡಿಸದಿದ್ದರೆ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಮಂಚನಾಯ್ಕನಹಳ್ಳಿ ಗ್ರಾಮ ಪಂಚಾಯತಿ ಸದಸ್ಯರು ಎಚ್ಚರಿಕೆ ನೀಡಿದ್ದಾರೆ.
ಸುಳ್ಳೇ.. ಬಿಜೆಪಿ ನಾಯಕರ ಮನೆ ದೇವರು: ರಾಮನಗರದಲ್ಲಿ ಸಂಸದ ಡಿ.ಕೆ.ಸುರೇಶ್ ಗಂಭೀರ ಆರೋಪ
ಬಿಡದಿ ಮೂಲಕ ಹಾದು ಹೋಗಿರುವ ನೂತನ ಬೆಂಗಳೂರು-ಮೈಸೂರು ದಶಪಥ ರಾಷ್ಟ್ರೀಯ ಹೆದ್ದಾರಿಯ ಮಂಚನಾಯ್ಕನಹಳ್ಳಿ ಗ್ರಾಮದ ಸಮೀಪದಲ್ಲಿರುವ ಎಸ್.ಪಿ.ಆರ್. ಕಾರ್ಖಾನೆ ಬಳಿ ಮೈಸೂರು ಕಡೆಯ ರಸ್ತೆಯಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಿದ ಮಂಚನಾಯ್ಕನಹಳ್ಳಿ ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಗ್ರಾಮಸ್ಥರು ಹೆದ್ದಾರಿ ಪ್ರಾಧಿಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೆಚ್ಚಿದ ಅಪಘಾತಗಳ ಸಂಖ್ಯೆ: ಸ್ಥಳೀಯರಲ್ಲಿ ಆತಂಕ
ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಎಸ್.ಪಿ.ಆರ್. ಗ್ರೂಪ್ಗೆ ಸೇರಿದ ಕಂಪನಿಯ ಬಳಿಯಲ್ಲಿ ನಿರ್ಮಿಸಿರುವ ಸರ್ವಿಸ್ ರಸ್ತೆ ತೀರಾ ಕಿರಿದಾಗಿದೆ. ಕೇವಲ ಹತ್ತು ಅಡಿಯಷ್ಟು ವಿಸ್ತೀರ್ಣವಿದ್ದು ಒಂದು ವಾಹನ ಸಂಚರಿಸಲಷ್ಟೇ ಅವಕಾಶವಿದೆ. ಅಲ್ಲದೇ ತಿರುವು ಇರುವುದರಿಂದ ಎದುರುಗಡೆಯಿಂದ ಬರುವ ವಾಹನಗಳು ಕಾಣಿಸದೇ ಹಲವಾರು ಅಪಘಾತಗಳಾಗಿವೆ. ಸಮಸ್ಯೆ ಗೊತ್ತಿದ್ದು, ಹೈವೇ ಪ್ರಾಧಿಕಾರದ ಅಧಿಕಾರಿಗಳು ಸಮಸ್ಯೆ ಪರಿಹಾರಕ್ಕೆ ಮುಂದಾಗಿಲ್ಲ ಎಂದು ಗ್ರಾಮಸ್ಥರು ಕಿಡಿಕಾರಿದರು.
ಅಧಿಕಾರಿಗಳಿಗೆ ಪ್ರಯಾಣಿಕರ ಸುರಕ್ಷತೆ ಬಗ್ಗೆ ಒಂದಿಷ್ಟು ಕಾಳಜಿ ಇಲ್ಲ
ದಶಪಥ ಹೆದ್ದಾರಿ ಪಕ್ಷದ ಸರ್ವಿಸ್ ರಸ್ತೆ ನಿರ್ಮಾಣಕ್ಕೆ ಎಸ್.ಪಿ.ಆರ್. ಗ್ರೂಪ್ಗೆ ಸೇರಿದ ಭೂಮಿ ಸ್ವಾಧೀನವಾಗಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ಸರಿಯಾಗಿ ನಿಭಾಯಿಸುತ್ತಿಲ್ಲ. ಪ್ರಯಾಣಿಕರ ಸುರಕ್ಷತೆ ಬಗ್ಗೆ ಒಂದಿಷ್ಟು ಕಾಳಜಿ ಇಲ್ಲ. ಈ ಸ್ಥಳದಲ್ಲಿ ಅವೈಜ್ಞಾನಿಕ ರಸ್ತೆ ನಿರ್ಮಾಣವಾಗಿರುವ ಬಗ್ಗೆ ಸ್ಥಳೀಯರು ಅಧಿಕಾರಿಗಳಿಗೆ ಮನವರಿಕೆ ಮಾಡಿದರು ಹೆದ್ದಾರಿ ಅಧಿಕಾರಿಗಳು ಕ್ಯಾರೆ ಅನ್ನುತ್ತಿಲ್ಲ, ಇದರಿಂದ ಪ್ರತಿದಿನ ಒಂದಲ್ಲಾ ಒಂದು ಅಪಘಾತ ಸಂಭವಿಸುತ್ತಲೇ ಇವೆ ಎಂದು ಗ್ರಾಮಸ್ಥರು ಆರೋಪಿಸಿದರು.
ಬಿಡದಿ: 15 ರೂ. ವಿದ್ಯುತ್ ಬಿಲ್ ಪಾವತಿಸಿ ಎಂದು ಖಾತೆಯಿಂದ 7 ಲಕ್ಷ ರೂ. ದೋಚಿದ ವಂಚಕರು
ಮಳೆಯಿಂದ ಬಹಿರಂಗವಾದ ಅವೈಜ್ಞಾನಿಕ ರಸ್ತೆ ನಿರ್ಮಾಣ
ಹಿಂದಿನ ಬೆಂಗಳೂರು - ಮೈಸೂರು ಹೆದ್ದಾರಿ ಪಕ್ಕದ ಎರಡು ಬದಿಯಲ್ಲಿ ಕಾಲುವೆಗಳನ್ನು ನಿರ್ಮಾಣ ಮಾಡಿದ್ದರು. ಹಾಗಾಗಿ ಮಳೆಗಾಲದಲ್ಲಿ ನೀರು ಸರಾಗವಾಗಿ ಹರಿದು ಹೋಗುತ್ತಿತ್ತು. ಆದರೆ ದಶಪಥ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಹೊಣೆ ಹೊತ್ತ ಡಿಬಿಎಲ್ ಕಂಪನಿ ರಸ್ತೆ ಬದಿಯಲ್ಲಿ ಚರಂಡಿಯನ್ನು ನಿರ್ಮಾಣ ಮಾಡದ ಹಿನ್ನಲೆಯಲ್ಲಿ ಕಳೆದ ಎರಡು ತಿಂಗಳ ಹಿಂದೆ ಜಿಲ್ಲೆಯಲ್ಲಿ ಸುರಿದ ರಣ ಮಳೆಗೆ ಹೆದ್ದಾರಿಗಳು ಕೆರೆಗಳಂತಾಗಿ ಅವೈಜ್ಞಾನಿಕ ರಸ್ತೆ ನಿರ್ಮಾಣ ಬಹಿರಂಗವಾಗಿತ್ತು.
ಮನೆಗಳಿಗೆ ನುಗ್ಗುವ ಮಳೆ ನೀರು
ನೂತನ ದಶಪಥ ಹೆದ್ದಾರಿಯ ಸರ್ವಿಸ್ ರಸ್ತೆಗಳು ಮೊದಲಿಗಿಂತ ತೀರಾ ಎತ್ತರದಲ್ಲಿ ನಿರ್ಮಾಣ ವಾಗಿರುವುದರಿಂದ ಮಳೆ ನೀರು ಅಂಡರ್ ಪಾಸ್ ಹಾಗೂ ರಸ್ತೆಯ ಬದಿಯಲ್ಲಿರುವ ಮನೆಗಳಿಗೆ ನೇರವಾಗಿ ನುಗ್ಗಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಅಲ್ಲದೆ ಮನೆಗಳಿಂದ ಹೊರಹೋಗುವ ತ್ಯಾಜ್ಯ ನೀರು ಸಹ ಸರಾಗವಾಗಿ ಹರಿದು ಹೋಗುವ ವ್ಯವಸ್ಥೆಯನ್ನು ನೂತನ ರಸ್ತೆ ನಿರಾಣ ಕಾಮಗಾರಿ ನುಂಗಿ ಹಾಕಿದೆ ಎಂದು ಗ್ರಾಮಸ್ಥರು ಆರೋಪಿಸಿದರು.
ಬೃಹತ್ ಪ್ರತಿಭಟನೆ ಎಚ್ಚರಿಕೆ ನೀಡಿದ ಮಂಚನಾಯ್ಕನಹಳ್ಳಿ ಗ್ರಾಮಸ್ಥರು
ಅವೈಜ್ಞಾನಿಕ ಹೆದ್ದಾರಿ ನಿರ್ಮಾಣದ ಬಗ್ಗೆ ಮಾತನಾಡಿದ ಮಂಚನಾಯ್ಕನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಸತೀಶ್ ಮಾತನಾಡಿ, "ದಶಪಥ ಹೆದ್ದಾರಿಯ ಹೆಜ್ಜಾಲದ ಟೋಲ್ ಬಳಿಯಿಂದ ಕಾಡುಮನೆ ಸರ್ಕಲ್ ವರೆಗಿನ ಬೆಂಗಳೂರು ಮೈಸೂರು ದಶಪಥ ಹೆದ್ದಾರಿ ಹಳ್ಳಿಗಳ ಪಕ್ಕದಲ್ಲಿ ಹಾದು ಹೋಗುತ್ತಿದೆ. ಸರ್ವಿಸ್ ರಸ್ತೆ ಕ್ರಮಬದ್ಧವಾಗಿ ನಿರ್ಮಿಸದ ಕಾರಣ ಉಂಟಾಗುವ ಅನಾಹುತದಿಂದ ಸ್ಥಳೀಯರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿ ಗ್ರಾಮ ಪಂಚಾಯತಿ ಸಭೆಯಲ್ಲಿ ನಿರ್ಣಯ ಕೈಗೊಂಡು ಹೆದ್ದಾರಿ ಪ್ರಾಧಿಕಾರಕ್ಕೆ ಸಭೆಯ ನಿರ್ಣಯ ಸಲ್ಲಿಸಲಾಗುವುದು. ಸಮಸ್ಯೆ ಪರಿಹಾರಕ್ಕೆ ಗಡುವು ನೀಡಲಾಗುವುದು. ಒಂದು ವೇಳೆ ಸಮಸ್ಯೆ ನಿವಾರಣೆಯಾಗದಿದ್ದರೆ. ಬೃಹತ್ ಪ್ರತಿಭಟನೆ ನಡೆಸುತ್ತೇವೆ" ಎಂದು ತಿಳಿಸಿದರು.
ಹೆದ್ದಾರಿ ಅವೈಜ್ಞಾನಿಕ ಸರ್ವಿಸ್ ರಸ್ತೆ ನಿರ್ಮಾಣ ಖಂಡಿಸಿ ಸಾಂಕೇತಿಕವಾಗಿ ನಡೆದ ಪ್ರತಿಭಟನೆಯಲ್ಲಿ ಮಂಚನಾಯ್ಕನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಸತೀಶ್ ಕುಮಾರ್.ವಿ, ಸದಸ್ಯರುಗಳಾದ ಆರ್.ನಂದಪ್ರಭಾ, ಶಾಂತರಾಜ್.ಎಚ್.ಎನ್, ನಾಗೇಶ್, ಆನಂದ್, ಮಮತಾ, ಮಹೇಶ್ಕುಮಾರ್.ಜಿ, ಎಂ.ಲೀಲಾವತಿ, ಎಲ್.ಟಿ, ಭಾಗ್ಯಮ್ಮ, ಸತೀಶ್.ಎಸ್., ಜ್ಯೋತಿ, ಮುನಿರತ್ನಮ್ಮ, ಭಾಗ್ಯಮ್ಮ, ರಮ್ಯ, ಸುಶೀಲಾ, ಪುಟ್ಟರೇವಯ್ಯ, ಪವಿತ್ರ, ಮಲ್ಲೇಶ್, ಗೋವಿಂದರಾಜು, ಮಂಜುಳ, ವೇಣುಗೋಪಾಲ, ಶಂಕುಮಾರ್, ಪುಷ್ಪ.ಎನ್, ಭಾಗ್ಯ, ರವಿಕುಮಾರ್.ಎಚ್.ಎನ್., ವರಲಕ್ಷ್ಮಿ.ವೈ, ಟಿ.ಕಾಳಪ್ಪ, ಸ್ಟುಡಿಯೋ ಗೋವಿಂದರಾಜು ಸೇರಿದಂತೆ ಗ್ರಾಮಸ್ಥರು ಪಾಲ್ಗೊಂಡಿದ್ದರು.