ಅರ್ಕಾವತಿ ನದಿಯಲ್ಲಿ ಆಯತಪ್ಪಿ ಬಿದ್ದು ವ್ಯಕ್ತಿ ಸಾವು; ಶವವಿಟ್ಟು ಪ್ರತಿಭಟನೆ
ರಾಮನಗರ, ನವೆಂಬರ್ 3: ಅರ್ಕಾವತಿ ನದಿ ದಾಟುತ್ತಿದ್ದ ವೇಳೆಯಲ್ಲಿ ಆಯತಪ್ಪಿ ಬಿದ್ದು ವ್ಯಕ್ತಿಯೊಬ್ಬ ಸಾವನ್ನಪ್ಪಿರುವ ಘಟನೆ ರಾಮನಗರ ತಾಲೂಕಿನ ಹುಲಿಕೆರೆ ಗ್ರಾಮದಲ್ಲಿ ಮಂಗಳವಾರ ಬೆಳಿಗ್ಗೆ ನಡೆದಿದೆ.
ಅಬ್ದುಲ್ ವಾಜಿದ್(44) ಸಾವಿಗೀಡಾದ ವ್ಯಕ್ತಿಯಾಗಿದ್ದು, ರಾಮನಗರ ತಾಲೂಕಿನ ಹುಲಿಕೆರೆ ಗ್ರಾಮದಲ್ಲಿನ ಅರ್ಕಾವತಿ ನದಿಯನ್ನು ದಾಟುವಾಗ ಈ ಅವಘಡ ಸಂಭವಿಸಿದೆ.
ರಾಮನಗರ ತಾಲೂಕಿನ ಸಬಕೆರೆ ಗ್ರಾಮದ ನಿವಾಸಿ ಅಬ್ದುಲ್ ವಾಜಿದ್ ಅವರ ಮೃತದೇಹವನ್ನು ಹುಡುಕಲು ಅಗ್ನಿಶಾಮಕ ಸಿಬ್ಬಂದಿಯಿಂದ ಬೆಳಿಗ್ಗೆಯಿಂದ ಪ್ರಯತ್ನಿಸಿತ್ತು.

ಸತತ ಎರಡು ಗಂಟೆ ಕಾರ್ಯಾಚರಣೆ ಬಳಿಕ ಅಬ್ದುಲ್ ವಾಜಿದ್ ಅವರ ಮೃತದೇಹ ಸಿಕ್ಕಿದೆ. ಸ್ಥಳಕ್ಕೆ ರಾಮನಗರ ತಹಶೀಲ್ದಾರ ನರಸಿಂಹಮೂರ್ತಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸಿಟ್ಟಿಗೆದ್ದ ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಮೃಹದೇಹ ಸಿಕ್ಕ ಬಳಿಕ ರಸ್ತೆಯಲ್ಲಿ ಮೃತದೇಹ ಇಟ್ಟು ಪ್ರತಿಭಟನೆಗೆ ಗ್ರಾಮಸ್ಥರು ಮುಂದಾಗಿದ್ದಾರೆ. ಪೊಲೀಸರ ವಶದಲ್ಲಿದ್ದ ಮೃತದೇಹ ತಗೆದುಕೊಂಡು ಹೋಗಿ ಪ್ರತಿಭಟನೆ ಮಾಡಿದ್ದಾರೆ.
ಪೊಲೀಸರಿಂದ ಗ್ರಾಮಸ್ಥರ ಮನವೋಲಿಕೆ ವಿಫಲವಾಗಿದ್ದು, ರಾಮನಗರ-ಕನಕಪುರ ಹೆದ್ದಾರಿಯಲ್ಲಿ ರಸ್ತೆಗೆ ಪೆಂಡಾಲ್ ಹಾಕಿ ಶವವಿಟ್ಟು, ಶಾಸಕರು, ಸಂಸದರು ಮತ್ತು ಜಿಲ್ಲಾಧಿಕಾರಿ ಸ್ಥಳಕ್ಕೆ ಬರುವಂತೆ ಪ್ರತಿಭಟನೆ ನಡೆಸುತ್ತಿದ್ದಾರೆ.

ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಕೋಟಹಳ್ಳಿಯಿಂದ ಹುಲಿಕೆರೆ ಬಳಿ ಅರ್ಕಾವತಿ ನದಿಸೇತುವೆ ನಿರ್ಮಾಣ ಹಲವು ವರ್ಷಗಳಿಂದ ನೆನಗುದಿಗೆ ಬಿದ್ದಿದೆ.
ಹೀಗಾಗಿ ಅವ್ವೇರಹಳ್ಳಿ-ಹುಲಿಕೆರೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ನಿರ್ಮಾಣಕ್ಕೆ ಒತ್ತಾಯಿಸಿ ಹಾಗೂ ನದಿಯಲ್ಲಿ ಕೊಚ್ಚಿ ಹೋಗಿ ಸಾವನ್ನಪ್ಪಿದ ಅಬ್ದುಲ್ ವಾಜೀದ್ ಅವರ ಕುಟುಂಬಕ್ಕೆ ಪರಿಹಾರ ನೀಡುವಂತೆ ಆಗ್ರಹಿಸಿ, ವಾಜಿದ್ ಶವ ಇಟ್ಟು ಅವ್ವೇರಹಳ್ಳಿ ಗೇಟ್ ಬಳಿ ಪ್ರತಿಭಟನೆ ನಡೆಸಲಾಯಿತು.












Click it and Unblock the Notifications