ಕುಮಾರಸ್ವಾಮಿ, ದೇವೇಗೌಡರನ್ನು ತರಾಟೆಗೆ ತೆಗೆದುಕೊಂಡ ಬಾಲಕೃಷ್ಣ
Recommended Video

ರಾಮನಗರ, ಏಪ್ರಿಲ್ 6 : ಚನ್ನಪಟ್ಟಣದ ಶಾಸಕ ಸಿಪಿ.ಯೋಗೇಶ್ವರ್ ಹೇಳಿದಂತೆ ಕುಮಾರಸ್ವಾಮಿ ಗೆಸ್ಟ್ ಲೆಕ್ಚರರ್. ಕ್ಷೇತ್ರಕ್ಕೆ ವಾರಕೊಮ್ಮೆ ಬಂದು ಪಾಠ ಮಾಡುವಂತೆ ಬರುತ್ತಾರೆ. ಆದರೆ ನಾವು ಕ್ಷೇತ್ರದಲ್ಲಿ ದಿನದ 24 ಗಂಟೆಗಳ ಕಾಲ ಶ್ರಮಿಸುತ್ತಿದ್ದೇವೆ. ನಾವು ಪರ್ಮನೆಂಟ್ ಲೆಕ್ಚರರ್ ಗಳು. ಸಮಯ ಸಿಕ್ಕರೆ ಸ್ಪೆಷಲ್ ಕ್ಲಾಸ್ ತೆಗೆದುಕೊಳ್ಳುತ್ತೇವೆ ಎಂದು ಮಾಗಡಿಯ ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ ವ್ಯಂಗ್ಯವಾಡಿದರು.
ತಾಲೂಕಿನ ಆಗಲಕೋಟೆ ಮತ್ತು ಬೆಳಗುಂಬ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿಡಿಗನಹಳ್ಳಿ, ಹರ್ತಿ ಗ್ರಾಮಗಳು ಸೇರಿದಂತೆ ವಿವಿಧೆಡೆ ಪ್ರಚಾರ ನಡೆಸಿ, ಮತ ಯಾಚನೆ ಮಾಡುವ ವೇಳೆ ಮಾತನಾಡಿದರು.
ರಾಮನಗರ ಅದೃಷ್ಟವಂತ ಕ್ಷೇತ್ರ. ಇಲ್ಲಿಂದ ಸ್ಪರ್ಧಿಸಿದರೆ ಮುಖ್ಯಮಂತ್ರಿ ಆಗಬಹುದು. ಕೆಂಗಲ್ ಹನುಮಂತಯ್ಯ, ರಾಮಕೃಷ್ಣ ಹೆಗಡೆ ಮತ್ತು ಎಚ್.ಡಿ.ದೇವೇಗೌಡರು ಈ ಜಿಲ್ಲೆಯಿಂದಲೇ ಸ್ಪರ್ಧಿಸಿ ಮುಖ್ಯಮಂತ್ರಿ ಆಗಿದ್ದರು ಎಂದು ಈ ಜಿಲ್ಲೆಯಿಂದ ಕುಮಾರಸ್ವಾಮಿ ಸ್ಪರ್ಧಿಸುತ್ತಾರೆ ಅಷ್ಟೆ. ಬೇರೇನೂ ಇಲ್ಲ ಎಂದು ಅವರು ಹೇಳಿದರು.
ಎಚ್.ಡಿ.ಕುಮಾರಸ್ವಾಮಿ ಐದು ವರ್ಷ ಸಂಸದರಾಗಿದ್ದರು. ಆ ವೇಳೆ ಕೇಂದ್ರದಿಂದ ಯಾವ ವಿಶೇಷ ಅನುದಾನ ತಂದು ಯೋಜನೆ ಅನುಷ್ಠಾನ ಮಾಡಿದ್ದಾರೆ? ಅಂದು ಜನರ ಕೈಗೆ ಸಿಗುತ್ತಿರಲಿಲ್ಲ. ನಾವು ಆಗಲೇ ಸರಕಾರದಿಂದ ಸಣ್ಣಪುಟ್ಟ ಅನುದಾನ ತಂದು, ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದೇವೆ ಎಂದರು.

ಕುಮಾರಸ್ವಾಮಿಯಿಂದ ನಮ್ಮ ಜಿಲ್ಲೆಯಿಂದ ಏನು ನಿರೀಕ್ಷಿಸಲು ಸಾಧ್ಯ?
ಮುಖ್ಯಮಂತ್ರಿಯಾದರೆ ಮಾತ್ರ ಕೆಲಸ ಮಾಡಬಹುದು ಎಂದರೆ ಎಷ್ಟು ಸರಿ? ನಾನು ಕಳೆದ 20 ವರ್ಷದಿಂದ ವಿರೋಧ ಪಕ್ಷದಲ್ಲಿದ್ದು, ಸಾಕಷ್ಟು ಕೆಲಸ ಮಾಡಿಸಿದ್ದೇನೆ. ಹೇಮಾವತಿ ನೀರು ಮಾಗಡಿಗೆ ಬರುವುದಿಲ್ಲ. ಹೇಮಾವತಿಯಲ್ಲಿ ನೀರಿಲ್ಲ. ಇದು ಬೋಗಸ್ ಸ್ಕೀಂ ಎಂದು ಕುಮಾರಸ್ವಾಮಿ ಅವರೇ ಮಾಧ್ಯಮಗಳಿಗೆ ಹೇಳಿಕೆ ನೀಡುತ್ತಾರೆ . ಅವರಿಂದ ನಮ್ಮ ಜಿಲ್ಲೆಗೆ ಏನು ನಿರೀಕ್ಷಿಸಲು ಸಾಧ್ಯ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಗೆ ಬಂದ ಅಹಿಂದ ಬೆಂಬಲವೂ ಇದೆ
ಚುನಾವಣೆ ಹಿನ್ನೆಲೆಯಲ್ಲಿ ತಾಲೂಕಿನ ಕೆಲವಡೆ ಮುಖಂಡರ ಭೇಟಿ ಮಾಡಿದ್ದು, ಉತ್ತಮ ವಾತಾವರಣ ಇದೆ. ಈ ಬಾರಿಯ ಚುನಾವಣೆಯಲ್ಲಿ ಶೇ 99ರಷ್ಟು ಜಯಶೀಲನಾಗುತ್ತೇನೆ ಎಂಬ ಆಶಾ ಭಾವನೆ ವ್ಯಕ್ತಪಡಿಸಿದರು. ಜೆಡಿಎಸ್ ಪಕ್ಷದಲ್ಲಿದಾಗ ನನಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸೇರಿದಂತೆ ಅಹಿಂದ ಬೆಂಬಲ ಇರಲಿಲ್ಲ. ನಾನು ಕಾಂಗ್ರೆಸ್ ಗೆ ಬಂದ ನಂತರ ಎಲ್ಲಾ ವರ್ಗಗಳ ಬೆಂಬಲ ಸಿಕ್ಕಿದೆ. ಚುನಾವಣೆಯಲ್ಲಿ ಅಧಿಕ ಮತದಿಂದ ಜಯಶೀಲನಾಗುತ್ತೇನೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಮಾಗಡಿಯಲ್ಲಿ ನೀರಿನ ಸಮಸ್ಯೆ ಇದ್ದರೂ ರಾಮನಗರವೇ ಮುಖ್ಯವಾಗಿತ್ತು
ಮಂಚನಬೆಲೆ ಜಲಾಶಯದಿಂದ ರಾಮನಗರಕ್ಕೆ ನೀರು ತೆಗೆದುಕೊಂಡು ಹೋದರೆ ಬೇಸಿಗೆಯಲ್ಲಿ ಮಾಗಡಿಯ ಸುತ್ತಮುತ್ತಲ 50 ಗ್ರಾಮಗಳಿಗೆ ಹಾಗೂ ಪಟ್ಟಣದ ಜನರಿಗೆ ಕುಡಿಯುವ ನೀರಿಗೆ ಸಮಸ್ಯೆ ಆಗುತ್ತದೆ ಎಂದು ಪರಿಪರಿಯಾಗಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಕೇಳಿಕೊಂಡೆ. ಆದರೆ ಜೆಡಿಎಸ್ ಪಕ್ಷದಲ್ಲಿದ್ದಾಗಲೆ ನನ್ನ ವಿರುದ್ಧವಾಗಿ ನೀರಿಗಾಗಿ ಪಾದಯಾತ್ರೆ ಮಾಡಿದರು. ಮಾಗಡಿಯಲ್ಲಿ ನೀರಿನ ಸಮಸ್ಯೆ ಇದ್ದರೂ ರಾಮನಗರವೇ ಮುಖ್ಯವಾಗಿತ್ತು ಎಂದು ಅಂದೇ ಕುಮಾರಸ್ವಾಮಿ ಸಾಬೀತುಪಡಿಸಿದರು ಎಂದು ಆರೋಪಿಸಿದರು.

ಭಾವನಾತ್ಮಕವಾಗಿ ಜನರನ್ನು ಸೆಳೆಯುವ ಕೆಲಸ ಮಾಡುತ್ತಿದ್ದಾರೆ
ದೇವೇಗೌಡರು ಮತ್ತು ಕುಮಾರಸ್ವಾಮಿ ಭಾವನಾತ್ಮಕವಾಗಿ ಜನರನ್ನು ಸೆಳೆಯುವ ಕೆಲಸ ಮಾಡುತ್ತಿದ್ದಾರೆ. ಜಾತಿ ಅಧಾರದ ಮೇಲೆ ಮತ ಕೇಳುತ್ತಿದ್ದಾರೆ. ಅವರ ಜಾತಿ ಇರುವ ಕಡೆ ಅನುಕೂಲ ಆಗಬಹುದು ಅಷ್ಟೆ. ಒಬ್ಬ ರಾಜಕಾರಣಿ ಜಾತಿ ಆಧಾರದ ಮೇಲೆ ಚುನಾವಣೆ ಮಾಡಬಾರದು. ಕಣ್ಣೀರು ಹಾಕುತ್ತಾ ಚುನಾವಣೆ ಮಾಡುವುದು ಸೂಕ್ತವಲ್ಲ. ರಾಜಕಾರಣಿ ಆದವನು ಅತ್ಮಸ್ಥೈರ್ಯ ಮತ್ತು ಧೈರ್ಯದಿಂದ ಚುನಾವಣೆ ಮಾಡಬೇಕು. ಅದನ್ನು ಬಿಟ್ಟು ನಾನು ಸತ್ತರೆ ಇಲ್ಲಿ ಮಣ್ಣು ಮಾಡಿ ಎನ್ನಬಾರದು. ನಮ್ಮ ದುಡಿಮೆಯ ಅಧಾರದ ಮೇಲೆ ಚುನಾವಣೆ ಮಾಡಬೇಕು ಎಂದು ಎಚ್.ಸಿ.ಬಾಲಕೃಷ್ಣ ಲೇವಡಿ ಮಾಡಿದರು.












Click it and Unblock the Notifications