ಸುಳ್ಳೇ.. ಬಿಜೆಪಿ ನಾಯಕರ ಮನೆ ದೇವರು: ರಾಮನಗರದಲ್ಲಿ ಸಂಸದ ಡಿ.ಕೆ.ಸುರೇಶ್ ಗಂಭೀರ ಆರೋಪ
ರಾಮನಗರ, ಡಿಸೆಂಬರ್, 04: ಬಿಜೆಪಿ ನಾಯಕರು ಹೇಳುವುದು ಒಂದಾದರೆ, ಮಾಡುವುದು ಇನ್ನೂಂದಾಗಿರುತ್ತದೆ. ಬಿಜೆಪಿಗೆ ಮುಂದೆ ಒಂದು ರೀತಿಯ ಮುಖ, ಹಿಂದೆ ಮತ್ತೊಂದು ರೀತಿಯ ಮುಖ ಇದೆ. ಬಿಜೆಪಿಯ ರಾಷ್ಟ್ರೀಯ ಮಟ್ಟದ ನಾಯಕರದ ಕೆಳ ಹಂತದ ನಾಯಕರು ಸುಳ್ಳನ್ನು ಮನೆ ದೇವರು ಮಾಡಿಕೊಂಡಿದ್ದಾರೆ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಸದಸ್ಯ ಡಿ.ಕೆ.ಸುರೇಶ್ ಬಿಜೆಪಿ ವಿರುದ್ಧ ರಾಮನಗರದಲ್ಲಿ ಹರಿಹಾಯ್ದರು.
ಬಿಜೆಪಿ ವಿರುದ್ಧ ಡಿ.ಕೆ.ಸುರೇಶ್ ಆಕ್ರೋಶ
ರಾಮನಗರ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ್ದಾರೆ. ಬಿಜೆಪಿ ಪಕ್ಷಕ್ಕೆ ರೌಡಿ ಶೀಟರ್ಗಳ ಸೇರ್ಪಡೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಅಧಿಕಾರಕ್ಕಾಗಿ ಬಿಜೆಪಿಯವರು ಸುಳ್ಳು ಹೇಳಿ, ಸತ್ಯವನ್ನು ಮಾಚುತ್ತಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿ ಅಧಿಕಾರಕ್ಕೆ ಬರಬೇಕು ಎಂಬ ಕಾರಣಕ್ಕೆ ಯಾವುದನ್ನು ಏನು ಬೇಕಾದರೂ ಮಾಡುತ್ತಾರೆ. ಬಿಜೆಪಿ ರಾಷ್ಟ್ರೀಯ ನಾಯಕರಿಂದ ಕೆಳ ಹಂತದ ನಾಯಕರವರೆಗೂ ಎಲ್ಲರು ಸುಳ್ಳನ್ನು ಮನೆ ದೇವರು ಮಾಡಿಕೊಂಡಿದ್ದಾರೆ. ಇವತ್ತು ಅಧಿಕಾರಕ್ಕಾಗಿ ಸಂಸ್ಕೃತಿಯ ಹೆಸರಿನಲ್ಲಿ ಎಲ್ಲಾ ರೀತಿಯ ತಂತ್ರಗಾರಿಕೆಯನ್ನು ಬಳಸುತ್ತಿದ್ದಾರೆ. ರಾಜ್ಯದ ಆಢಳಿತದಲ್ಲಿನ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ದಾರಿ ತಪ್ಪಿಸಲು ಹಲವು ವಿಚಾರಗಳು ಚರ್ಚೆಗೆ ಬಂದಿವೆ ಎಂದು ಡಿ.ಕೆ.ಸುರೇಶ್ ಆರೋಪಿಸಿದರು.

ಬಿಜೆಪಿಯಿಂದ ಕೋಮುವಾದ ಸೃಷ್ಟಿ
ಇನ್ನು ಭ್ರಷ್ಟಾಚಾರ, 40% ಕಮಿಷನ್, ನೇಮಕಾತಿ ಹಗರಣ, ಬೆಲೆ ಏರಿಕೆಯಂತಹ ವೈಫಲ್ಯಗಳನ್ನು ಮರೆಮಾಚಲು ಕೋಮುವಾದ ಸೃಷ್ಟಿಸುವ ಕೆಲಸಕ್ಕೆ ಬಿಜೆಪಿ ಮುಂದಾಗಿದೆ. ಇದೀಗ ಮತದಾರರ ಪಟ್ಟಿಗೆ ದ್ರೋಹ ಬಗೆದಿದ್ದಾರೆ. ಅಂತಿಮವಾಗಿ ರೌಡಿಗಳನ್ನು ಇಟ್ಟುಕೊಂಡು ಚುನಾವಣೆ ನಡೆಸಲು ಬಿಜೆಪಿ ಯವರು ನಿರ್ಧಾರ ಮಾಡಿದ್ದಾರೆ ಎಂಬುದು ಮೇಲ್ನೋಟಕ್ಕೆ ಸಾಬೀತಾಗಿದೆ ಎಂದು ವ್ಯಂಗ್ಯವಾಡಿದರು. ಕಾಂಗ್ರೆಸ್ ಪಕ್ಷದಲ್ಲಿ ಭವಿಷ್ಯ ಇಲ್ಲ ಎಂದು ಬಿಜೆಪಿಗೆ ಬರುತ್ತಿದ್ದಾರೆ ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದು, ಬಿಜೆಪಿಯಲ್ಲಿ ರೌಡಿಗಳಿಗೆ ಭವಿಷ್ಯ ಇರಬಹುದು. ಇವರು ರೌಡಿಗಳಿಗೆ ಆಶ್ರಯ ಕೊಡಲಿ.

ಕಾಂಗ್ರೆಸ್ ಪಕ್ಷದಲ್ಲಿ ರೌಡಿಗಳಿದ್ದರೆ, ಅಧಿಕಾರದಲ್ಲಿ ಇರುವ ಬಿಜೆಪಿಯವರು ಅವರನ್ನು ಬಂಧಿಸಲಿ. ಏನು ಬೇಕು ಅದನ್ನು ಮಾಡಲಿ, ಸುಮ್ಮನೆ ಹೇಳಿಕೆಯನ್ನು ಏಕೆ ನೀಡುತ್ತಾರೆ? ಅವರ ನಡವಳಿಕೆ ದೇಶ ಹಾಗೂ ರಾಜ್ಯದ ಜನರಿಗೆ ಮಾಡುತ್ತಿರುವ ಅವಮಾನವಾಗಿದೆ ಎಂದು ಸಂಸದ ಡಿ.ಕೆ.ಸುರೇಶ್ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.












Click it and Unblock the Notifications