ಕುಮಾರಸ್ವಾಮಿ ಚನ್ನಪಟ್ಟಣ ಸ್ಪರ್ಧೆ ಸುದ್ದಿಯಿಂದ ದಿಡಗ್ಗನೆ ಎದ್ದು ಕೂತಿತು ಜೆಡಿಎಸ್
ರಾಮನಗರ, ಮಾರ್ಚ್ 23 : ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರಲ್ಲಿ ಈಗ ಹೊಸ ಉತ್ಸಾಹ ಮೂಡಿದೆ. ಈ ಕ್ಷೇತ್ರದಿಂದ ಎಚ್.ಡಿ.ಕುಮಾರಸ್ವಾಮಿ ಸ್ಪರ್ಧೆ ಮಾಡುವ ಸುದ್ದಿ ಇಲ್ಲಿನ ಜೆಡಿಎಸ್ ಕಾರ್ಯಕರ್ತರಿಗೆ ಹೊಸ ಹುಮ್ಮಸ್ಸು ತುಂಬಿದೆ. ಇಷ್ಟು ಸಮಯ ಇದ್ದ ಸಣ್ಣ-ಪುಟ್ಟ ಅಸಮಾಧಾನ ಹಾಗೂ ಬಿಕ್ಕಟ್ಟನ್ನು ಸಹ ತೊರೆಯುವುದಾಗಿ ಮಾತನಾಡಲು ಆರಂಭಿಸಿದ್ದಾರೆ.
ಕಳೆದ ನಾಲ್ಕೂವರೆ ವರ್ಷಗಳಿಂದ ಇಲ್ಲದ ಜೆಡಿಎಸ್ ಕಚೇರಿ ಇದೀಗ ಉದ್ಘಾಟನೆ ಭಾಗ್ಯ ಕಂಡಿದೆ. 2018ರ ವಿಧಾನಸಭಾ ಚುನಾವಣೆ ಜಿದ್ದಾಜಿದ್ದಿಯಲ್ಲಿ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕು ರಾಜ್ಯದ ಗಮನ ಸೆಳೆಯುತ್ತಿದೆ. ಇಷ್ಟು ದಿನ ಚನ್ನಪಟ್ಟಣದ ಜೆಡಿಎಸ್ ಅಭ್ಯರ್ಥಿ ಯಾರು ಎಂಬ ಬಗ್ಗೆ ಇದ್ದ ಗೊಂದಲಕ್ಕೆ ಸ್ವತಃ ಎಚ್ ಡಿಕೆ ಸ್ಪಷ್ಟನೆ ನೀಡಿದ್ದಾರೆ.
ಚನ್ನಪಟ್ಟಣ, ರಾಮನಗರದಲ್ಲಿ ಸ್ಪರ್ಧೆ : ಕುಮಾರಸ್ವಾಮಿ ಘೋಷಣೆ
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ನಾನೇ ಅಭ್ಯರ್ಥಿ ಎಂದು ಬಹಿರಂಗವಾಗಿ ಹೇಳಿಕೆ ನೀಡುವ ಮೂಲಕ ವಿದ್ಯುತ್ ಸಂಚಾರಕ್ಕೆ ಕಾರಣ ಆಗಿದ್ದಾರೆ. ಕುಮಾರಸ್ವಾಮಿ ಅವರ ಈ ನಿರ್ಧಾರದಿಂದ ಉತ್ಸಾಹದ ಬುಗ್ಗೆ ಆಗಿರುವ ಜೆಡಿಎಸ್ ಮುಖಂಡರು ಶುಕ್ರವಾರ ಚನ್ನಪಟ್ಟಣ ನಗರದ ಮಹಾಲಕ್ಷ್ಮೀ ಬಡಾವಣೆಯ ಎರಡನೇ ಅಡ್ಡರಸ್ತೆಯಲ್ಲಿ ಜೆಡಿಎಸ್ ನೂತನ ಕಚೇರಿ ಉದ್ಘಾಟನೆ ಮಾಡಿದರು.
ಆ ಮೂಲಕ ಜೆಡಿಎಸ್ ಸಂಘಟನೆಗೆ ಮುಂದಾಗಿದ್ದಾರೆ. ಇನ್ನು ಎಚ್.ಡಿ.ಕುಮಾರಸ್ವಾಮಿ ಅವರನ್ನು ಈ ಬಾರಿ ಅತಿ ಹೆಚ್ಚಿನ ಮತಗಳಿಂದ ಗೆಲ್ಲಿಸುತ್ತೇವೆಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಂದಹಾಗೆ ತಾಲೂಕಿನ ಜೆಡಿಎಸ್ ಮುಖಂಡರ ನಡುವೆ ಇದ್ದ ಕೆಲ ಗೊಂದಲ ಹಾಗೂ ಬಿಕ್ಕಟ್ಟುಗಳು ಕುಮಾರಸ್ವಾಮಿ ಅಭ್ಯರ್ಥಿ ಎಂದು ತೀರ್ಮಾನವಾದ ಬಳಿಕ ಶಮನವಾಗಿದೆ.
ಶುಕ್ರವಾರ ನಡೆದ ಜೆಡಿಎಸ್ ಕಚೇರಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಎಂ.ಸಿ.ಅಶ್ವಥ್, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಎಚ್.ಸಿ.ಜಯಮುತ್ತು, ಎಸ್.ಲಿಂಗೇಶ್ ಕುಮಾರ್, ಜಬೀಉಲ್ಲಾಖಾನ್, ಎಂ.ಸಿ.ಕರಿಯಪ್ಪ ಸೇರಿದಂತೆ ಹಲವರು ಭಾಗವಹಿಸುವ ಮೂಲಕ ಒಗ್ಗಟ್ಟು ಪ್ರದರ್ಶನ ಮಾಡಿದರು.
ನಾಲ್ಕೂವರೆ ವರ್ಷಗಳಿಂದ ಇಲ್ಲದ ಕಚೇರಿ ಇದೀಗ ಎಚ್ ಡಿಕೆ ಅಭ್ಯರ್ಥಿ ಆಗುತ್ತಿದ್ದಂತೆಯೇ ಆರಂಭವಾಗಿದೆ. ಅಲ್ಲದೇ ಇಷ್ಟು ದಿನಗಳ ಕಾಲ ಚನ್ನಪಟ್ಟಣ ತಾಲ್ಲೂಕು ಜೆಡಿಎಸ್ ಮುಖಂಡರ ಮಧ್ಯೆ ಇದ್ದ ಭಿನ್ನಭಿಪ್ರಾಯ ಶಮನವಾಗಿ ಕುಮಾರಸ್ವಾಮಿ ಗೆಲ್ಲಿಸುವ ಕಡೆಗೆ ತಮ್ಮ ಹೆಜ್ಜೆ ಇಟ್ಟಿದ್ದಾರೆ.