ಶಾಸಕ ಎ.ಮಂಜುರಿಂದ ಕಾರ್ಯಕರ್ತರಿಗೆ ಪ್ರವಾಸ ಭಾಗ್ಯ!
ರಾಮನಗರ, ಮೇ 18: ಈಗ ಕಾಂಗ್ರೆಸ್ ಮತ್ತು ಜೆಡಿಎಸ್ ಒಂದಾಗಿ ಸರ್ಕಾರ ರಚನೆ ಮಾಡಲು ಹೋರಾಟ ನಡೆಸುತ್ತಿದ್ದರೆ, ಅದಕ್ಕೂ ಮುನ್ನ ಕಾಂಗ್ರೆಸ್ ಗೆ ಸೆಡ್ಡು ಹೊಡೆದು ಗೆಲುವು ಸಾಧಿಸಲು ಕಾರಣಕರ್ತರಾದ ಕಾರ್ಯಕರ್ತರಿಗೆ ಮಾಗಡಿ ಶಾಸಕ ಎ.ಮಂಜು ಅವರು ಪ್ರವಾಸ ಭಾಗ್ಯವನ್ನು ಕಲ್ಪಿಸಿದ್ದಾರೆ.
ಮಾಗಡಿ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಎ.ಮಂಜು ಅವರಿಗೆ ಕಾಂಗ್ರೆಸ್ ಅಭ್ಯರ್ಥಿ ಬಾಲಕೃಷ್ಣ ಪ್ರತಿಸ್ಪರ್ಧಿಯಾಗಿದ್ದರಲ್ಲದೆ, ಇವರ ನಡುವೆ ಭಾರೀ ದೊಡ್ಡ ಮಟ್ಟದ ಪೈಪೋಟಿ ಇತ್ತು. ಇಂತಹ ಸಂದರ್ಭದಲ್ಲಿ ಅವರಿಗೆ ಬೆನ್ನೆಲುಬಾಗಿ ನಿಂತಿದ್ದರು.
ಈ ನಡುವೆ ಪಟ್ಟಣದ 1ನೇ ವಾರ್ಡಿನಲ್ಲಿ ಜೆಡಿಎಸ್ ಅಭ್ಯರ್ಥಿ ಎ.ಮಂಜುರವರಿಗೆ ಅತೀ ಹೆಚ್ಚು ಮತ ಬಂದಿದ್ದು ಈ ಹಿನ್ನೆಲೆಯಲ್ಲಿ ವಾರ್ಡಿನ ಗುತ್ತಿಗೆದಾರ ಕರಡಿ ನಾಗರಾಜು ನೇತೃತ್ವದಲ್ಲಿ 40ಕ್ಕೂ ಹೆಚ್ಚು ಕಾರ್ಯಕರ್ತರಿಗೆ ಪ್ರವಾಸ ಭಾಗ್ಯವನ್ನು ಅವರು ಕಲ್ಪಿಸಿದ್ದಾರೆ.

ಈ ಸಂಬಂಧ ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಗುರುವಾರ ಗೋವಾ ಪ್ರವಾಸಕ್ಕೆ ಕಳುಹಿಸಿ ಮಾತನಾಡಿ ನಾಗರಾಜುರವರು, ಎ.ಮಂಜುರವರಿಗೆ ಅತೀ ಹೆಚ್ಚು ಲೀಡ್ ಅನ್ನು ಕೊಟ್ಟಿರುವುದರಿಂದ 4 ಬ್ಯಾಚ್ ಗಳನ್ನಾಗಿ ಮಾಡಿ ಗೋವಾ ಮತ್ತು ಧರ್ಮಸ್ಥಳಕ್ಕೆ ಪ್ರವಾಸಕ್ಕೆ ಕಳುಹಿಸಲಾಗಿದೆ. ನಮ್ಮ ನಾಯಕರಾದ ಎ.ಮಂಜುರವರು ಶಾಸಕರಾಗಬೇಕೆಂದು ಹಗಲು ರಾತ್ರಿ ಎನ್ನದೆ ದುಡಿದಿದ್ದು, ಈಗ ಗೆದ್ದ ನಂತರ ಕಾರ್ಯಕರ್ತರಿಗೆ ಮನೋರಂಜನೆಗೆ ಪ್ರವಾಸಕ್ಕೆ ಕಳುಹಿಸಲಾಗಿದೆ.
ಎ.ಮಂಜುರವರು ಈಗ ಬ್ಯೂಸಿಯಾಗಿದ್ದು ಮಾಗಡಿಗೆ ಬಂದ ನಂತರ ವಾರ್ಡಿನ ಜನತೆಗೆ ಕೃತಜ್ಞತೆ ಸಲ್ಲಿಸುತ್ತಾರೆ ಎಂದರು.
ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಕೃಷ್ಣಮೂರ್ತಿ ಮಾತನಾಡಿ, ಕಳೆದ 1 ತಿಂಗಳಿನಿಂದಲೂ ಹಗಲು ರಾತ್ರಿ ಎನ್ನದೆ ನಮ್ಮ ಪರವಾಗಿ ಕಾರ್ಯಕರ್ತರು ದುಡಿದಿದ್ದಾರೆ. ವಾರ್ಡಿನಲ್ಲಿ ನಮ್ಮ ಪರವಾಗಿ ಹೆಚ್ಚಿನ ಲೀಡ್ ಕೊಡಿಸಿರುವ ಹಿನ್ನೆಲೆಯಲ್ಲಿ ಗುತ್ತಿಗೆದಾರ ನಾಗರಾಜುರವರು ಪ್ರವಾಸಕ್ಕೆ ಕಳುಹಿಸಿದ್ದು ಇದು ಮತದಾರರಿಗೆ ಒಂದು ರೀತಿ ಕೃತಜ್ಞತೆ ಸಲ್ಲಿಸುವಂತಾಗಿದ್ದು ಇದು ಒಳ್ಳೆಯ ಬೆಳವಣಿಗೆಯಾಗಿದೆ ಎಂದು ತಿಳಿಸಿದ್ದಾರೆ.












Click it and Unblock the Notifications