ಸಮ್ಮೇಳನದ ಹೆಸರಲ್ಲಿ ರಾಜಕಾರಣದ ಮೈಲೇಜ್ ಗೆ ಸಿದ್ದು 8 ಕೋಟಿ ಖರ್ಚು: ಎಚ್ ಡಿಕೆ
ರಾಮನಗರ, ನವೆಂಬರ್ 28: "ಮೈಸೂರಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನ ಹಾಗೂ ಉಡುಪಿಯಲ್ಲಿ ನಡೆದ ಧರ್ಮ ಸಂಸತ್ ಎರಡೂ ರಾಜಕೀಯ ಪ್ರೇರಿತ ಸಭೆಗಳು" ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.
ಚನ್ನಪಟ್ಟಣ ತಾಲೂಕಿನ ಹುಲುವಾಡಿ ಗ್ರಾಮದಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಡುಪಿಯಲ್ಲಿ ಧರ್ಮದ ಹೆಸರಿನಲ್ಲಿ ಬಿಜೆಪಿ ಸಭೆ ನಡೆಸಿದ್ದಾರೆ. ಮೈಸೂರಿನಲ್ಲಿ ಕನ್ನಡ ಸಾಹಿತ್ಯ ಸಮ್ಮೆಳನದ ಹೆಸರಿನಲ್ಲಿ ಕಾಂಗ್ರೆಸ್ ನವರು ಸಮ್ಮೇಳನ ನಡೆಸಿದ್ದಾರೆ ಎಂದರು.
ಸಾಹಿತ್ಯ ಸಮ್ಮೇಳನದ ಹೆಸರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲೆಯ ರಾಜಕಾರಣಕ್ಕೆ ಅನುಕೂಲ ಮಾಡಿಕೊಳ್ಳಲು ಎಂಟು ಕೋಟಿ ಹಣ ವ್ಯಯ ಮಾಡಿದ್ದಾರೆ. ಈ ಹಿಂದೆ ನಡೆದ ಯಾವುದೇ ಸಾಹಿತ್ಯ ಸಮ್ಮೇಳನಕ್ಕೆ ಇಷ್ಟು ಹಣ ಕೊಟ್ಟ ನಿದರ್ಶನಗಳು ನನ್ನ ಗಮನಕ್ಕೆ ಬಂದಿಲ್ಲ. ಸರಕಾರದ ಹಣವನ್ನು ಬಳಸಿಕೊಂಡು ಸಾಹಿತ್ಯದ ಹೆಸರಿನಲ್ಲಿ ರಾಜಕೀಯ ಸಮ್ಮೇಳನ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.

ಉತ್ತರ ಪ್ರದೇಶದಲ್ಲಿ ರಾಮಮಂದಿರ ಕಟ್ಟಬೇಕು ಅದ್ದರಿಂದ ಅಯೋಧ್ಯೆಯಲ್ಲಿ ಈ ಧರ್ಮ ಸಭೆಯನ್ನು ನಡೆಸಬೇಕಿತ್ತು. ಅದರೆ ಅದನ್ನು ಬಿಟ್ಟು ಕರ್ನಾಟಕದಲ್ಲಿ ಸಭೆ ಮಾಡುವುದು ಎಷ್ಟು ಸರಿ? ಚುನಾವಣೆ ಹತ್ತಿರ ಇರುವುದರಿಂದ ರಾಮನ ಹೆಸರು ಹೇಳಿಕೊಂಡು ಬಿಜೆಪಿಯವರು ಇಂತಹ ಸಭೆ ನಡೆಸಿದ್ದಾರೆ ಎಂದು ಕುಟುಕಿದರು.
ಸಂವಿಧಾನದ ಹೆಸರಿನಲ್ಲಿ ಹೇಳಿಕೆಗಳನ್ನು ನೀಡಿ ಬಾಯಿ ಚಪಲ ತೀರಿಸಿಕೊಳ್ಳಬಹುದು. ಆದರೆ ಸಂವಿಧಾನ ಬದಲಿಸಲು ಸಾಧ್ಯವಿಲ್ಲ ಎಂದು ಪೇಜಾವರ ಶ್ರೀಗಳ ಸಂವಿಧಾನ ಬಗೆಗಿನ ಹೇಳಿಕೆಗೆ ತೀರುಗೇಟು ನೀಡಿದರು.
ನಾವು ಮಾಗಡಿ ಹಾಗೂ ನಾಗಮಂಗಲದಲ್ಲಿ ಮಾತ್ರ ಸಮಾವೇಶ ಮಾಡುವುದಿಲ್ಲ. ರಾಜ್ಯದ ಎಲ್ಲ ಕ್ಷೇತ್ರಗಳಲ್ಲಿ ಜೆಡಿಎಸ್ ಸಮಾವೇಶಗಳನ್ನು ಮಾಡಲಾಗುವುದು. ನಾಗಮಂಗಲ ಹಾಗೂ ಮಾಗಡಿ ಕ್ಷೇತ್ರಕ್ಕೆ ಅಷ್ಟು ಮಹತ್ವ ಕೊಡುವ ಅಗತ್ಯವಿಲ್ಲ. ಜೆಡಿಎಸ್ ಅಭ್ಯರ್ಥಿಗಳ ಪಟ್ಟಿಯನ್ನು ಆದಷ್ಟು ಬೇಗ ಬಿಡುಗಡೆ ಮಾಡುತ್ತೇವೆ ಎಂದು ಕುಮಾರಸ್ವಾಮಿ ಹೇಳಿದರು.












Click it and Unblock the Notifications