ಕಾಂಗ್ರೆಸ್, ಬಿಜೆಪಿಗಿಂತ ಜೆಡಿಎಸ್ ಹೆಚ್ಚು ಸ್ಥಾನಗಳಲ್ಲಿ ಗೆಲ್ಲುತ್ತದೆ: ಕುಮಾರಸ್ವಾಮಿ
ರಾಮನಗರ, ಜುಲೈ, 25: ಪ್ರಸ್ತುತ ಪರಿಸ್ಥಿತಿಯನ್ನು ಗಮನಿಸಿದರೆ ಮುಂದಿನ ಚುನಾವಣೆಯಲ್ಲಿ ಎರಡು ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿಗಿಂತ ಜೆಡಿಎಸ್ 15ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಯವರು ಭವಿಷ್ಯ ನುಡಿದರು.
ಇಂದು ರಾಮನಗರ ನಗರ ವ್ಯಾಪ್ತಿಯ ಕೆಂಪೇಗೌಡನ ದೊಡ್ಡಿ ಗ್ರಾಮದಲ್ಲಿ ಅಂಗನವಾಡಿ ಕಟ್ಟಡ ಹಾಗೂ ಡಿಜಿಟಲ್ ಗ್ರಂಥಾಲಯ ಕಟ್ಟಡ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಮಾತನಾಡಿದ ಅವರು ಹಳೆ ಮೈಸೂರು ಭಾಗದಲ್ಲಿ ಪಕ್ಷದ ಸಂಘಟನೆಗೆ ಕಾಂಗ್ರೆಸ್ ಮತ್ತು ಬಿಜೆಪಿ ಒತ್ತು ಕೊಟ್ಟಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ ಪಕ್ಷವನ್ನು ಮುಗಿಸಬೇಕು ಎಂದು ಹೊರಟಿವೆ ಎಂದರು.
ಎರಡು ರಾಷ್ಟ್ರೀಯ ಪಕ್ಷಗಳಿಂದ ಜೆಡಿಎಸ್ ಪಕ್ಷವನ್ನು ನಿರ್ನಾಮ ಮಾಡಲು ಆಗಲ್ಲ. ಈ ಬಾರಿ ಕಾಂಗ್ರೆಸ್, ಬಿಜೆಪಿಗಿಂತ ನಮ್ಮ ಪಕ್ಷ 15-20 ಹೆಚ್ಚಿನ ಸ್ಥಾನ ಪಡೆಯುವ ವಿಶ್ವಾಸವಿದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿಗೆ ಪ್ರಚಾರವೇ ಜೀವಾಳ: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಚುನಾವಣಾ ಕಣದಿಂದ ಹಿಂದೆ ಸರಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು ಅದೆಲ್ಲಾ ಅವರ ಪಕ್ಷದ ತೀರ್ಮಾನಗಳು. ಅವರ ನಿರ್ಧಾರದಿಂದ ಸಂಚಲನ ಆಗೋದು ಬಿಡೋದು ಮುಂದಿನ ದಿನಗಳಲ್ಲಿ ಕಾದು ನೋಡಬೇಕು. ಅದೇನು ಮಹತ್ವದ ವಿಷಯವಲ್ಲ ಎಂದರು.
ವಿಧಾನಸಭೆಯ ಚುನಾವಣೆ ಅಭ್ಯರ್ಥಿ ಆಗುವುದೇ ರಾಜ್ಯದಲ್ಲಿ ದೊಡ್ಡ ಮಟ್ಟದ ಬೆಳವಣಿಗೆ ಅಂದುಕೊಂಡಿದ್ದಾರೆ. ಈ ಬಗ್ಗೆ ಅಷ್ಟೊಂದು ಪ್ರಚಾರ ಪಡೆಯವುದು ಅಗತ್ಯ ಏನಿದೆ. ಬಿಜೆಪಿಯವರಿಗೆ ಪ್ರಚಾರದ ಮೂಲಕವೇ ಅಧಿಕಾರಕ್ಕೆ ಬರುವುದು ಅಭ್ಯಾಸ ಆಗಿಬಿಟ್ಟಿದೆ. ಅವರು ಜನಸಾಮಾನ್ಯರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ಅಧಿಕಾರ ಹಿಡಿಯುವುದಿಲ್ಲ. ರಾಜಕೀಯದಲ್ಲಿ ದೊಡ್ಡ ಮಟ್ಟದ ಪ್ರಚಾರ ಪಡೆದು ಅಧಿಕಾರ ಹಿಡಿಯುವುದು ಅವರಿಗೆ ಅಭ್ಯಾಸವಾಗಿಬಿಟ್ಟಿದೆ. ಹೀಗೆ ಪ್ರಚಾರವೇ ಬಿಜೆಪಿ ಪಕ್ಷದ ಜೀವಾಳವಾಗಿದೆ ಎಂದು ಹೆಚ್.ಡಿ. ಕುಮಾರಸ್ವಾಮಿ ಅವರು ವ್ಯಂಗ್ಯವಾಡಿದರು.
ಯಡಿಯೂರಪ್ಪಗೆ ಸಿಂಪತಿ ಸಿಗುವುದಿಲ್ಲ:
ಬಿಎಸ್ವೈ ಚುನಾವಣೆಯಿಂದ ಹಿಂದೆ ಸರಿದರೆ ಯಾವ ಸಿಂಪತಿ ಸಿಗುತ್ತದೆ ಎಂಬುದು ನನಗೆ ಗೊತ್ತಿಲ್ಲ. ಆದರೆ ಬಹಳ ಜನಕ್ಕೆ ಯಡಿಯೂರಪ್ಪನವರು ರಾಜಕೀಯದಲ್ಲಿ ಇರಬೇಕೆಂಬ ಆಸೆ ಇದೆ. ಹಾಗಾಗಿ ಚುನಾವಣೆಯ ಕಣದಲ್ಲಿ ಮುಂದುವರಿಯುವುದು ಅಥವಾ ಹಿಂದೆ ಸರಿಯುವುದು ಅವರಿಗೆ ಬಿಟ್ಟ ವಿಚಾರ. ಬಿಜೆಪಿಯಲ್ಲಿ 75 ವರ್ಷದ ನಂತರ ಅಧಿಕಾರವಿಲ್ಲ ಹಾಗಾಗಿ ಅಧಿಕಾರದಿಂದ ನಿರ್ಗಮಿಸುವ ತೀರ್ಮಾನ ಮಾಡಿಕೊಂಡಿದ್ದಾರೆ ಎಂದರು. ಸಿಎಂ ಸ್ಥಾನಕ್ಕೆ ಅಪೇಕ್ಷೆ ಪಡುವುದು ತಪ್ಪಲ್ಲ: ಕಾಂಗ್ರೆಸ್ನಲ್ಲಿ ಮುಂದಿನ ಸಿಎಂ ಕುರ್ಚಿಯ ರೇಸ್ನ ಬಗ್ಗೆ ಪ್ರತಿಕ್ರಿಯೆ ನೀಡಿದ ಹೆಚ್.ಡಿ.ಕುಮಾರಸ್ವಾಮಿ, ಈಗಾಗಲೇ ಚುನಾವಣೆಯ ಬಿರುಸು ಆರಂಭವಾಗಿದೆ. ಚುನಾವಣೆ ಘೋಷಣೆಗೂ ಮುನ್ನವೇ ಸಿಎಂ ನಾನು ನಾನು ಅನ್ನುವ ದೊಡ್ಡ ಪ್ರಚಾರಗಳು ನಡೆಯುತ್ತಿವೆ. ಸಿಎಂ ಪಟ್ಟಕ್ಕಾಗಿ ಆಸೆ ಪಡುವುದು ತಪ್ಪೇನು ಇಲ್ಲ. ಆದರೆ ಅವರ ಆಸೆಗಳನ್ನು ನೆರವೇರಿಸುವುದು ನಾಡಿನ ಜನತೆ ಎಂದರು.
ಡಿ.ಕೆ.ಶಿವಕುಮಾರ್ ಒಕ್ಕಲಿಗ ಟ್ರಂಪ್ ಕಾರ್ಡ್ ನಡೆಯಲ್ಲ:
ರಾಮನಗರದಲ್ಲಿ ಡಿ.ಕೆ.ಶಿವಕುಮಾರ್ ಅವಕಾಶ ಕೇಳಿರುವುದು ತಪ್ಪಿಲ್ಲ. ಆದರೆ ಜನರ ಕಷ್ಟ ಸುಖಕ್ಕೆ ಕೆಲಸ ಮಾಡಿದ್ದೇನೆ ಮತ ಕೊಡಿ ಎಂದು ಕೇಳಬಹುದು. ಕೇವಲ ಅಧಿಕಾರಕ್ಕೆ ಮಾತ್ರ ಮತ ಕೇಳಿದರೆ ಆಗಲ್ಲ. ಅವರ ಹಿಂದಿನ ಚರಿತ್ರೆಗಳನ್ನು ಜನ ನೋಡುತ್ತಾರೆ. ಇಲ್ಲಿ ಸಿಎಂ ಆಗುವುದು ಮುಖ್ಯವಲ್ಲ, ಅವರ ನಡವಳಿಕೆ, ನಾಡಿನ ಸಮಸ್ಯೆ ಬಗ್ಗೆ ಅರಿವಿರಬೇಕು ಎಂದರು.
ದೇವೇಗೌಡ ಅವರನ್ನು ಗೆಲ್ಲಿಸಿದ್ದೀರಿ, ಕುಮಾರಸ್ವಾಮಿ ಅವರನ್ನು ಗೆಲ್ಲಿಸಿದ್ದೀರಿ ಈ ಬಾರಿಯೂ ನನ್ನನ್ನು ಗೆಲ್ಲಿಸಿ ಎಂದು ಜನರ ಬಳಿ ಹೆಚ್.ಡಿ.ಕೆ ಕೇಳಿಕೊಂಡಿದ್ದಾರೆ. ಡಿ.ಕೆ.ಶಿವಕುಮಾರ್ ಅವರು ಒಕ್ಕಲಿಗ ಟ್ರಂಪ್ ಕಾರ್ಡ್ ಬಳಸಿದರೆ ಜನರು ತೀರ್ಮಾನ ಮಾಡುತ್ತಾರೆ. ಕೇವಲ ಸಿಎಂ ಆಗಲು ಅಪೇಕ್ಷೆ ಪಟ್ಟರೆ ಸಾಲದು. ಜನರಿಗಾಗಿ ಏನು ಮಾಡುತ್ತೇನೆ ಎಂದು ಹೇಳಬೇಕಲ್ಲ. ಬಡವರಿಗಾಗಿ ಯಾವ ಕಾರ್ಯಕ್ರಮಗಳನ್ನು ಕೊಡುತ್ತೇನೆ ಎಂದು ಜನರಿಗೆ ತಿಳಿಸಿ ನಂತರ ಅಧಿಕಾರ ಕೇಳಬೇಕು ಎಂದು ಮಾಜಿ ಸಿಎಂ ಹೆಚ್.ಡಿ.ಕೆ ಡಿ.ಕೆ.ಶಿವಕುಮಾರ್ಗೆ ಸಲಹೆ ನೀಡಿದರು.
ಡಿಕೆ ಕುಟುಂಬದವರು ಬಂದರೆ ಬರಲಿ
ನನ್ನ ಕಾರ್ಯಕ್ರಮಗಳು ಇದು ಎಂದು ಹೇಳಿ ಅವಕಾಶ ಕೇಳಲಿ ಪರವಾಗಿಲ್ಲ. ಆಗ ಯಾರೋ ಸಿಎಂ ಆಗಿದ್ದರು ಈಗ ನನಗೆ ಅವಕಾಶ ನೀಡಿ ಅಂದರೆ ಹೇಗೆ ಎಂದು ಪ್ರಶ್ನಿಸಿದ್ದಾರೆ. ಜನ ಕೊಡುವ ಅವಕಾಶ ಯಾವುದಕ್ಕೆ ಬಳಕೆ ಆಗುತ್ತದೆ ಹೇಳಬೇಕಲ್ಲ ಎಂದರು. ರಾಮನಗರ ಕ್ಷೇತ್ರದಿಂದ ಡಿ.ಕೆ.ಶಿ ಕುಟುಂಬದ ಸದಸ್ಯರು ಅಭ್ಯರ್ಥಿ ಕಣಕ್ಕಿಳಿಯುತ್ತಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು ರಾಮನಗರದಲ್ಲಿ ಯಾರೇ ಬಂದರೂ ನಮ್ಮನ್ನ ಏನು ಮಾಡಲು ಸಾಧ್ಯವಿಲ್ಲ. ಕಳೆದ ಮೈತ್ರಿ ಸರ್ಕಾರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಇರಲಿಲ್ಲ. ಉಳಿದ ಎಲ್ಲಾ ಚುನಾವಣೆಯಲ್ಲಿ ರಾಮನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧವೇ ನಾವು ಗೆದ್ದಿದ್ದೇವೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ರಾಮನಗರದ ಜನತೆಯ ಆಶೀರ್ವಾದ ಇರುವವರೆಗೂ ನಮ್ಮನ್ನು ಯಾವುದೇ ಸ್ಪರ್ಧಿಗಳು ಏನು ಮಾಡಲು ಆಗುವುದಿಲ್ಲ. ಡಿ.ಕೆ.ಶಿವಕುಮಾರ್ ನನ್ನ ವಿರುದ್ಧ ಸ್ಪರ್ಧೆ ಮಾಡಿ ಕುಮಾರಸ್ವಾಮಿ ಸೋತಿದ್ದ ಎಂದಿದ್ದಾರೆ. ಅವರು ದೇವೇಗೌಡರ ವಿರುದ್ಧ ಸೋತಿದ್ದಾರೆ. ನಾನು ರಾಜಕೀಯವಾಗಿ ಅಂಬೆಗಾಲು ಇಡುವಾಗ ಸೋತಿದ್ದೆ. ಆ ಚುನಾವಣೆಯಲ್ಲಿ ಅವರು ಹೇಗೆ ಗೆದ್ದರು ಎಂಬ ಇತಿಹಾಸ ಇದೆ. ಅದರ ಬಗ್ಗೆ ಒಂದು ಕಥೆಯನ್ನೇ ಬರೆಯಬಹುದು ಎಂದು ಡಿ.ಕೆ.ಶಿ ವಿರುದ್ಧ ವಾಗ್ದಾಳಿ ನಡೆಸಿದರು.ಸಿದ್ದರಾಮಯ್ಯ ಕಾಲದಲ್ಲಿ ಪಿಎಸ್ಐ ಅಕ್ರಮ ನಡೆದಿಲ್ಲವೇ?
ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗ ಉತ್ತಮ ಆಡಳಿತ ನೀಡಿದರು. ಅವರ ಕಾಲದಲ್ಲಿ ಅಭಿವೃದ್ಧಿಯಾಗಿದೆ ಎಂದು ಸಿದ್ದು ಪರ ಬ್ಯಾಟಿಂಗ್ ಹೆಚ್.ಸಿ.ಮಹಾದೇವಪ್ಪ ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ತಿರುಗೇಟು ನೀಡಿದ ಹೆಚ್.ಡಿ.ಕುಮಾರಸ್ವಾಮಿ ಸಿದ್ದರಾಮಯ್ಯ ಅಧಿಕಾರದ ಅವಧಿಯಲ್ಲಿ ಮರಳು ದಂಧೆ ಎಷ್ಟು ನಡೆಯಿತು ಎಂದು ಪ್ರಶ್ನಿಸಿದರು. ಸಿದ್ದರಾಮಯ್ಯನವರ ಕಾಲದಲ್ಲೂ ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ ನಡೆದಿಲ್ಲವೇ? ಈಗೇನು ನಡೆಯುತ್ತಿರುವ ಹಗರಣದ ಹಾಗೆ ಅವರ ಕಾಲದಲ್ಲೂ ಪ್ರಶ್ನೆ ಪತ್ರಿಕೆ ಲೀಕ್ ಮಾಡಿ ಮುಚ್ಚಿಹಾಕಿಕೊಂಡಿದ್ದರು. ಪಿಯುಸಿ ಪ್ರಶ್ನೆ ಪತ್ರಿಕೆ ಲೀಕ್ ದೊಡ್ಡ ಮಟ್ಟದಲ್ಲಿ ನಡೆಯಿತು. ಯಾರ ಮೇಲೆ ಕ್ರಮ ತೆಗೆದುಕೊಂಡರು? ಸಮಾಜ ಕಲ್ಯಾಣ ಇಲಾಖೆಯಲ್ಲಿ ಹಾಸಿಗೆ, ದಿಂಬು ವಿಷಯದಲ್ಲಿ ದುಡ್ಡು ತಿಂದರು. ಇದು ಅವರ ಉತ್ತಮವಾದ ಆಡಳಿತ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಕಿಡಿಕಾರಿದರು.
Recommended Video