ಚನ್ನಪಟ್ಟಣದಲ್ಲಿ ಜೆಡಿಎಸ್ ಬಗ್ಗೆ ಕಟು ಟೀಕೆ ಮಾಡಿದ ಮೋದಿ!
ರಾಮನಗರ, ಏಪ್ರಿಲ್ 30; "ಕಾಂಗ್ರೆಸ್ ಮತ್ತು ಜೆಡಿಎಸ್ ಹೊರಗಿನಿಂದ ನೋಡಲು ಮಾತ್ರ ಬೇರೆ-ಬೇರೆ ಆದರೆ ಆಂತರಿಕವಾಗಿ ಒಂದೇ. ಜೆಡಿಎಸ್ಗೆ ನೀಡುವ ಒಂದೊಂದು ವೋಟು ಸಹ ಕಾಂಗ್ರೆಸ್ಗೆ ಸೇರುತ್ತದೆ. ಜೆಡಿಎಸ್ ಕಾಂಗ್ರೆಸ್ನ ಬಿ ಟೀಂ" ಎಂದು ಪ್ರಧಾನಿ ನರೇಂದ್ರ ಮೋದಿ ಜೆಡಿಎಸ್ ಭದ್ರಕೋಟೆ ಚನ್ನಪಟ್ಟಣದಲ್ಲಿ ಪಕ್ಷದ ವಿರುದ್ಧ ಟೀಕೆಗಳನ್ನು ಮಾಡಿದ್ದಾರೆ.
ಭಾನುವಾರ ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ಸಮಾವೇಶ ಉದ್ದೇಶಿಸಿ ನರೇಂದ್ರ ಮೋದಿ ಮಾತನಾಡಿದರು. ಕರ್ನಾಟಕ ವಿಧಾನಸಭೆ ಚುನಾವಣೆ 2023ಕ್ಕೆ ಪ್ರಚಾರ ನಡೆಸಿದರು. 'ಈ ಬಾರಿಯ ನಿರ್ಧಾರ ಸಂಪೂರ್ಣ ಬಹುಮತದ ಸರ್ಕಾರ' ಎಂದು ಪದೇ ಪದೇ ಕನ್ನಡದಲ್ಲಿಯೇ ಹೇಳುವ ಮೂಲಕ ಬಿಜೆಪಿ ಬೆಂಬಲಿಸಿ ಎಂದು ಕರೆ ನೀಡಿದರು.

ಸಮಾವೇಶದಲ್ಲಿ ಪ್ರಧಾನಿ ಮೋದಿ ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದರು. "ಜೆಡಿಎಸ್ ಪಕ್ಷ 15 ಸೀಟು ಗೆದ್ದರೆ ನಾವೇ ಕಿಂಗ್ ಮೇಕರ್ ಎಂದು ಬಹಿರಂಗವಾಗಿ ಹೇಳಿಕೊಳ್ಳುತ್ತಾರೆ. ಇವರ ಸ್ವಾರ್ಥ ರಾಜಕೀಯದಿಂದ ಒಂದು ಕುಟುಂಬಕ್ಕೆ ಮಾತ್ರ ಲಾಭವಾಗುತ್ತದೆ. ಆದರೆ ರಾಜ್ಯದ ಅನೇಕ ಕುಟುಂಬಗಳಿಗೆ ನಷ್ಟವಾಗುತ್ತದೆ. ಜೆಡಿಎಸ್ ಪಕ್ಷಕ್ಕೆ ಹಾಕುವ ಪ್ರತಿಯೊಂದು ಮತ ಕಾಂಗ್ರೆಸ್ಗೆ ಹೋಗುತ್ತದೆ" ಎಂದು ಆರೋಪಿಸಿದರು.
ಜೆಡಿಎಸ್ ವಿರುದ್ಧ ಮೋದಿ ವಾಗ್ದಾಳಿ
* ಕರ್ನಾಟಕ ರಾಜ್ಯ ಬಹಳ ಕಾಲದಿಂದ ಅಸ್ತಿರ ಸರ್ಕಾರಗಳನ್ನು ನೋಡಿದೆ. ಇಂತಹ ಸರ್ಕಾರಗಳಿಂದ ಲೂಟಿಯಾಗುತ್ತದೆ. ಹೊರತು ಅಭಿವೃದ್ಧಿ ಆಗುವುದಿಲ್ಲ. ಆದ್ದರಿಂದ ನೆನಪಿಡಿ ಈ ಬಾರಿಯ ನಿರ್ಧಾರ ಸಂಪೂರ್ಣ ಬಹುಮತದ ಬಿಜೆಪಿ ಸರ್ಕಾರ ಎಂದು ಮೋದಿ ಕರೆ ನೀಡಿದರು.
* ಕಾಂಗ್ರೆಸ್ ಮತ್ತು ಜೆಡಿಎಸ್ ಹೊರಗಿಂದ ನೋಡಲು ಮಾತ್ರ ಬೇರೆ-ಬೇರೆ. ಆದರೆ ಆಂತರಿಕವಾಗಿ ಇಬ್ಬರೂ ಒಂದೇ. ಎರಡೂ ಪಕ್ಷಗಳದ್ದು ಕುಟುಂಬ ರಾಜಕೀಯ. ದೆಹಲಿಯಲ್ಲಿ ಇಬ್ಬರೂ ಒಂದಾಗಿಯೇ ಇರುತ್ತಾರೆ. ಸಂಸತ್ನಲ್ಲಿ ಒಬ್ಬರಿಗೆ ಇನ್ನೊಬ್ಬರು ಬೆಂಬಲ ನೀಡುತ್ತಾರೆ.

* ಚುನಾವಣೆ ಬಂದಾಗ ಇವರು ಸಾಲಮನ್ನಾದ ಘೋಷಣೆ ಮಾಡುತ್ತಾರೆ. ಸಣ್ಣ ರೈತರ ಬಳಿ ಬ್ಯಾಂಕ್ ಖಾತೆಯೇ ಇಲ್ಲ. ನಿಮ್ಮ ಸಾಲ ಮನ್ನಾ ಅವರನ್ನು ತಪುಲುಪುದು ಹೇಗೆ?. ಅವರು ಖಾಸಗಿ ವ್ಯಕ್ತಿಗಳ ಬಳಿ ಸಾಲ ಮಾಡಿರುತ್ತಾರೆ. ನಿನ್ನ ಸಾಲಮನ್ನಾದ ಘೋಷಣೆ ರೈತರ ತನಕ ಹೋಗುವುದಿಲ್ಲ ಎಂದು ಮೋದಿ ವಾಗ್ದಾಳಿ ನಡೆಸಿದರು.
* ಕಾಂಗ್ರೆಸ್ ಪಕ್ಷದ ನೀತಿಗಳೇ ರಿವರ್ಸ್ ಗೇರ್ನಂತಿವೆ. ಕಾಂಗ್ರೆಸ್ ಪಕ್ಷದ ಮಾತುಗಳನ್ನು ಜೆಡಿಎಸ್ ಒಪ್ಪುತ್ತದೆ. ಜೆಡಿಎಸ್ ಕಾಂಗ್ರೆಸ್ನ ಬಿ-ಟೀಂ. ಆದ್ದರಿಂದ ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾರ ಅಧಿಕಾರಕ್ಕೆ ಬರಬೇಕು. ಜನರು ಬಿಜೆಪಿ ಬೆಂಬಲಿಸಬೇಕು ಎಂದು ಮೋದಿ ಕರೆ ನೀಡಿದರು.
* ಕಾಂಗ್ರೆಸ್ ವಿರುದ್ಧವೂ ವಾಗ್ದಾಳಿ ನಡೆಸಿದ ಮೋದಿ, "ಕಾಂಗ್ರೆಸ್ ಮಂದಿ ಈಗಲೂ ಸುಳ್ಳು ಗ್ಯಾರಂಟಿ ಹಿಡಿದು ಓಡಾಡುತ್ತಿದ್ದಾರೆ. ನಿಜವಾದ ಗ್ಯಾರಂಟಿ ಏನು ಗೊತ್ತಾ ಕಿಸಾನ್ ಸಮ್ಮಾನ್ ನಿಧಿಯ 6,000 ಜೊತೆ ರಾಜ್ಯದ ಡಬಲ್ ಎಂಜಿನ್ ಸರ್ಕಾರದ 4 ಸಾವಿರ ಸೇರಿ ರೈತರಿಗೆ ಡಬಲ್ ಲಾಭವಾಗಿದೆ. ಇದು ಚುನಾವಣಾ ನಾಟಕವಲ್ಲ, ಬದಲಾಗಿ ರೈತರಿಗೆ ನಿಜವಾಗಿಯೂ ತಲುಪುತ್ತಿರುವ ಗ್ಯಾರಂಟಿ ಎಂದರು.
* ಬಿಜೆಪಿ ಸರ್ಕಾರದ ಪ್ರತಿ ಅಭಿವೃದ್ಧಿ ಕಾರ್ಯವನ್ನೂ ಕಾಂಗ್ರೆಸ್ ರಿವರ್ಸ್ ಮಾಡಲು ತವಕಿಸುತ್ತಿದೆ. ಜೆಡಿಎಸ್, ಕಾಂಗ್ರೆಸ್ ತಮಗೆ ಬೇಕಾದಂತೆ ಹೆಜ್ಜೆ ಹಾಕುತ್ತದೆ. ಕರ್ನಾಟಕ ರಿವರ್ಸ್ ಗೇರ್ನಲ್ಲಿ ಸಾಗಲು ಸಾಧ್ಯವಿಲ್ಲ. ಬದಲಾಗಿ ಡಬಲ್ ಎಂಜಿನ್ನ ಡಬಲ್ ಶಕ್ತಿಯಲ್ಲಿ ಮುನ್ನಡೆಯಲಿದೆ ಇದಕ್ಕಾಗಿ ಬಿಜೆಪಿ ಬೆಂಬಲಿಸಿ ಎಂದು ಮೋದಿ ಮನವಿ ಮಾಡಿದರು.
ರಾಮನಗರ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಮತ್ತು ಜೆಡಿಎಸ್ ನಾಯಕ, ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ತವರು ಜಿಲ್ಲೆ. ಬಿಜೆಪಿ ಸಮಾವೇಶ ನಡೆದ ಚನ್ನಪಟ್ಟಣ ಎಚ್. ಡಿ. ಕುಮಾರಸ್ವಾಮಿ ಪ್ರತಿನಿಧಿಸುವ ಕ್ಷೇತ್ರ. ಆದ್ದರಿಂದ ನರೇಂದ್ರ ಮೋದಿ ಸಮಾವೇಶವನ್ನು ಚನ್ನಪಟ್ಟಣದಲ್ಲಿ ಆಯೋಜನೆ ಮಾಡಿ ಮತ ಸೆಳೆಯಲು ಬಿಜೆಪಿ ತಂತ್ರ ರೂಪಿಸಿದೆ. ನರೇಂದ್ರ ಮೋದಿ ಸಮಾವೇಶದಲ್ಲಿ ಅಬ್ಬರಿಸಿದ್ದಾರೆ. ಆದರೆ ಎಷ್ಟು ಮತವಾಗಿ ಬದಲಾವಣೆಯಾಗಲಿವೆ? ಎಂದು ಕಾದು ನೋಡಬೇಕಿದೆ.












Click it and Unblock the Notifications